Tuesday, February 28, 2012

ಪಾಲು ಮತ್ತು ಇತರ ಕತೆಗಳು

ಮಾತು
ಸಂತನ ಪ್ರೀತಿಯ ಒಬ್ಬ ಶಿಷ್ಯನಿಗೆ ಬಾಯಿ ಬರುತ್ತಿರಲಿಲ್ಲ.
ಒಂದು ದಿನ ಅವನನ್ನು ಕರೆದು ‘‘ನೀನು ವಿದೇಶಗಳಿಗೆ ತೆರಳಿ ನನ್ನ ಸಂದೇಶವನ್ನು ಹರಡು’’ ಎಂದು ಸಂತ ಹೇಳಿದ.
ಉಳಿದ ಶಿಷ್ಯರಿಗೆ ಅಸೂಯೆ.
‘‘ಗುರುಗಳೇ, ಅವನಿಗೆ ಬಾಯಿ ಬರುವುದಿಲ್ಲ. ವಿದೇಶಿಯರ ಜೊತೆ ಹೇಗೆ ಯಾವ ಭಾಷೆಯಲ್ಲಿ ಮಾತನಾಡಬಲ್ಲ’’
‘ಸಂತ ನಕ್ಕು ಉತ್ತರಿಸಿದ ‘‘ಯಾವ ದೇಶಕ್ಕೆ ಹೋದರೂ, ಕೋಗಿಲೆಯ ಭಾಷೆ ಒಂದೇ. ಯಾವ ದೇಶಕ್ಕೇ ಹೋಗಿ ಗುಬ್ಬಚ್ಚಿಗಳಿಗೆ ಗುಬ್ಬಿಚ್ಚಿಗಳ ಮಾತು ಅರ್ಥವಾಗುತ್ತದೆ. ಅಂತೆಯೇ ಮೂಕ ಮಾತ್ರ ಎಲ್ಲರ ಭಾಷೆಯಲ್ಲಿ ಮಾತನಾಡಬಲ್ಲ’’

ಗೆಳೆತನ
‘‘ಅವನ ಗೆಳೆತನವನ್ನು ಬಿಟ್ಟು ಬಿಡು. ನಿನ್ನ ಪ್ರಾಣಕ್ಕೆ ಅದರಿಂದ ಅಪಾಯವಿದೆ’’ ಅವನು ಸಲಹೆ ನೀಡಿದ.
‘‘ಗೆಳೆತನಕ್ಕಾಗಿ ಪ್ರಾಣ ಕೊಡುವುದರಲ್ಲೇ ಮಜಾ ಇರುವುದು’’ ಇವನು ಉತ್ತರಿಸಿದ.

ಭಯ
ನಿರಪರಾಧಿಯೊಬ್ಬನಿಗೆ ನ್ಯಾಯವಾದಿಗಳ ಕುಯುಕ್ತಿಯಿಂದ ಮರಣದಂಡನೆ ಶಿಕ್ಷೆಯಾಯಿತು.
ಸಹ ಕೈದಿಯೊಬ್ಬ ಕೇಳಿದ ‘‘ಭಯವಾಗುತ್ತಿಲ್ಲವೆ?’’
‘‘ನನಗೇಕೆ ಭಯವಾಗಬೇಕು. ನಾನು ನಿರಪರಾಧಿ. ನನ್ನನ್ನು ಗಲ್ಲಿಗೇರಿಸಲು ಹೊರಟವರು ಭಯಪಡಬೇಕು.’’

ಊರು
‘‘ಗೊತ್ತಿಲ್ಲದ ಊರದು. ಅಲ್ಲಿ ಹೋದರೆ ಎಲ್ಲಿ ಉಳ್ಕೋತೀಯ? ಹೇಗೆ ಬದುಕುತ್ತೀಯ?’’
ಪ್ರಯಾಣ ಹೊರಟ ಅವನನ್ನು ಕೇಳಿದರು.
‘‘ಈ ಭೂಮಿಗೆ ಬರುವಾಗಲೂ ನನಗೆ ಇದು ಅಪರಿಚಿತ ಊರಾಗಿತ್ತು. ಎಲ್ಲಿ ಉಳ್ಕೊಳ್ಳೋದು, ಹೇಗೆ ಬದುಕೋದು ಎನ್ನುವುದೊಂದೂ ಗೊತ್ತಿರಲಿಲ್ಲ. ಆಗಲೇ ಇಲ್ಲದ ಚಿಂತೆ ಈಗ ಯಾಕೆ?’’

ಜೀವ
 ಮಸೀದಿಯ ಸ್ಮಶಾನದಲ್ಲಿ ಗೋರಿಗಳನ್ನು ಮೊದಲೆ ತೋಡಿರುತ್ತಾರೆ. ಆ ಬಾರಿ ತೋಡಿದ ಗೋರಿಗಳು ಹಾಗೆಯೇ ಉಳಿಯಿತು. ಯಾರೂ ಸಾಯಲಿಲ್ಲ. ಮಳೆಗಾಲ. ತೋಡಿದ ಗುಂಡಿ ನೀರು ತುಂಬಿ ವ್ಯರ್ಥವಾಗುವುದು ಬೇಡ ಎಂದು ಅದರಲ್ಲಿ ತೆಂಗಿನ ಗಿಡಗಳನ್ನು ನೆಟ್ಟರು. ಮಳೆಗಾಲ ಮುಗಿಯುವ ಹೊತ್ತಿಗೆ ಗಿಡಗಳು ಜೀವ ಹಿಡಿದು, ಅವುಗಳಲ್ಲಿ ಹೊಸ ತೆಂಗಿನ ಗರಿಗಳು ನಳನಳಿಸುತ್ತಿದ್ದವು.

ಪಾಲು
ತಂದೆ ತೀರಿ ಹೋದ ಒಂದು ತಿಂಗಳಲ್ಲಿ ಮಕ್ಕಳೆಲ್ಲ ಸೇರಿ ಮನೆಯನ್ನು ಪಾಲು ಮಾಡಲು ಹೊರಟರು.
ಎಲ್ಲವನ್ನು ತುಂಡು ಮಾಡಾಯಿತು.
ತಮಗೆ ಬಂದುದನ್ನು ಕಿತ್ತುಕೊಂಡರು.
ಕಟ್ಟ ಕಡೆಯಲ್ಲಿ ತಾಯಿಯೊಬ್ಬಳು ಉಳಿದಳು.
ಮಕ್ಕಳು ಪರಸ್ಪರ ಪಿಸುಗುಟ್ಟಿದರು ‘‘ಅಮ್ಮನನ್ನು ಹೇಗೆ ಪಾಲು ಮಾಡುವುದು?’’
 ತಾಯಿ ನಕ್ಕು ಹೇಳಿದಳು ‘‘ಮಕ್ಕಳೆ, ನನ್ನನ್ನು ಎಂದೋ ನಿಮಗೂ ನಿಮ್ಮ ತಂದೆಗೂ ಪಾಲು ಮಾಡಿ ಹಂಚಿಯಾಗಿದೆ. ಇಲ್ಲಿ ಪಾಲು ಮಾಡುವುದಕ್ಕೆ ಏನೂ ಉಳಿದಿಲ್ಲ. ನಿಮ್ಮ ನಿಮ್ಮ ಪಾಲಿನೊಂದಿಗೆ ನೀವು ಮೊದಲು ಇಲ್ಲಿಂದ ಹೊರಡಿ’’

ಕಿವುಡ
ಅವನೇನೋ ಹೊಸತನ್ನು ಹೇಳುತ್ತಿದ್ದ.
ಅದನ್ನು ಕೇಳಲು ಸಿದ್ಧನಿಲ್ಲದ ಇವನು ತನ್ನೆರಡು ಕಿವಿಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡ. ಕಿವಿ ತೆರೆದಾಗ ಜಗತ್ತಿನ ಪಾಲಿಗೆ ಇವನು ಶಾಶ್ವತ ಕಿವುಡನಾಗಿದ್ದ.

ಕಣ್ಣು
‘‘ಕುರುಡರ ಜಗತ್ತಿನಲ್ಲಿ ಹುಟ್ಟಿದ್ದೀಯ. ಕುರುಡನಂತೆ ನಟಿಸಿ ಬದುಕುವುದಕ್ಕೆ ಕಲಿ’’
ಅವನು ಸಲಹೆ ನೀಡಿದ.
‘‘ಕಣ್ಣಿದ್ದೂ ಕುರುಡನಂತೆ ನಟಿಸಿ ಬದುಕುವುದಕ್ಕಿಂತ ಅವರ ಕಣ್ಣು ತೆರೆಸುವ ಪ್ರಯತ್ನದಲ್ಲಿ ಹುತಾತ್ಮನಾಗಲು ಇಷ್ಟಪಡುವೆ’’
ಇವನು ಉತ್ತರಿಸಿದ.

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

No comments:

Post a Comment