Tuesday, June 12, 2012

ತೋಟ ಮತ್ತು ಇತರ ಕತೆಗಳು


ತೋಟ
ಒಬ್ಬ ರೈತನಿಗೆ ಸಲಹೆ ನೀಡಿದ ‘‘ಹೀಗೆ ಒಂದು ಗಿಡವನ್ನು ನೆಟ್ಟರೆ ಪ್ರಯೋಜನವಿಲ್ಲ. ದೊಡ್ಡ ತೋಟವನ್ನು ಮಾಡಬೇಕು. ಆಗ ಲಾಭ’’
ರೈತ ಹೇಳಿದ ‘‘ಒಂದು ಬೀಜದೊಳಗೆ ಒಂದು ದೊಡ್ಡ ತೋಟವೇ ಅಡಗಿದೆ’’
ಬೀಜ ಬಿತ್ತಿದ ರೈತ ತೋಟವನ್ನು ಬೆಳೆದ.
ತೋಟದ ಕನಸು ಕಾಣುತ್ತಿದ್ದವ ಒಂದು ಗಿಡವನ್ನೂ ಬೆಳೆಯಲಿಲ್ಲ.

ಮಳೆ
‘‘ಈ ಸಾರಿ ಮಳೆ ಸರಿಯಾದ ಸಮಯಕ್ಕೆ ಬೀಳುತ್ತದೆಯೋ ಇಲ್ಲವೋ...’’ ಅವನು ಆತಂಕದಿಂದ ಪ್ರಶ್ನಿಸಿದ.
‘‘ದೇವರು ಕೋಟಿ ವರ್ಷಗಳಿಂದ ತನ್ನ ಕರ್ತವ್ಯವನ್ನು ಸರಿಯಾಗಿಯೇ ಮಾಡುತ್ತಾ ಬಂದಿದ್ದಾನೆ...ಮೊದಲು ನೀನು ಮಳೆಗಾಲಕ್ಕೆ ಸಿದ್ಧನಾಗಿದ್ದೀಯ ಎನ್ನುವುದನ್ನು ಹೇಳು’’ ಇವನು ಉತ್ತರಿಸಿದ.

ಕಂಬಿಗಳು
ಕಳ್ಳನೊಬ್ಬ ಜೈಲುಕಂಬಿಗಳನ್ನು ಮುರಿಯಲು ನೋಡಿದ.
‘‘ಬಲವಾಗಿದೆ ಕಂಬಿಗಳು’’ ಕಳ್ಳ ಪರಿತಪಿಸಿದ.
‘‘ಹೌದು. ಇದನ್ನು ಮುರಿದು ಬಿಡುಗಡೆ ಪಡೆಯಲು ಕೆಲಸಕ್ಕೆ ಸೇರಿದ ದಿನದಿಂದ ಪ್ರಯತ್ನಿಸುತ್ತಿದ್ದೇನೆ. ಸಾಧ್ಯವಾಗಿಲ್ಲ’’ ಜೈಲು ವಾರ್ಡನ್ ನುಡಿದ.

ಸಂಭ್ರಮ
‘‘ಈ ಬಾರಿಯ ದೀಪಾವಳಿ ಕಳೆದ ಬಾರಿಯಷ್ಟು ಸಂಭ್ರಮವಿಲ್ಲ’’
ಆಕೆ ನಿರಾಸೆಯಿಂದ ಪತಿಗೆ ಹೇಳಿದಳು.
ಅವನು ವೌನವಾಗಿದ್ದ.
ಕಳೆದ ದೀಪಾವಳಿಯಂದು ಪಕ್ಕದ ಮನೆಗೆ ಬೆಂಕಿ ಬಿದ್ದದ್ದು ಅವನಿಗಿನ್ನೂ ನೆನಪಿದೆ.

ಮರ
ಕಟುಕನ ಕೊಡಲಿಗೆ ಉರುಳುತ್ತಿದ್ದ ಮರ ಹೇಳಿತು
‘‘ಕಬ್ಬಿಣದ ಕೊಡಲಿಯೇ, ನೀನು ನನ್ನನ್ನು ಕತ್ತರಿಸುವುದಕ್ಕೆ ನನಗೆ ನೋವಿಲ್ಲ. ನಿನಗೆ ಹಿಡಿಯ ರೂಪದಲ್ಲಿ ಸಹಕರಿಸುತ್ತಿದೆಯಲ್ಲ ಮತ್ತೊಂದು ಮರ, ಅದಕ್ಕಾಗಿ ನಾನು ನೊಂದಿದ್ದೇನೆ...’’

ಆಟದ ಖುಷಿ
ಅವನೊಬ್ಬ ವೃತ್ತಿಪರ ಆಟಗಾರ.
ಒಬ್ಬ ಹುಡುಗ ಕೇಳಿದ ‘‘ನೀವು ಯಾವಾಗಲೂ ಆಡುತ್ತೀರಲ್ಲ, ಕೆಲಸ ಯಾವಾಗ ಮಾಡುತ್ತೀರಿ?’’
‘‘ಆಡುವುದೇ ನನ್ನ ಕೆಲಸ’’ ಆಟಗಾರ ಹೇಳಿದ.
‘‘ಆಡುವುದು ಒಂದು ಕೆಲಸವೆ?’’ ಹುಡುಗ ಕೇಳಿದ.
‘‘ಹೌದು. ಅದಕ್ಕಾಗಿಯೇ ನನಗೆ ಕೋಟಿ ಕೋಟಿ ರೂ. ಕೊಡುತ್ತಾರೆ’’
‘‘ಆಡುವುದು ಕೆಲಸವಾದರೆ, ಅದರಿಂದ ಆಡುವ ಖುಷಿ ಸಿಗುವುದು ಹೇಗೆ?’’ ಹುಡುಗ ವಿಚಿತ್ರ ಪ್ರಶ್ನೆ ಕೇಳಿದ.

ರೋಗ
ಆ ಊರಲ್ಲಿ ವೈದ್ಯರೇ ಇರಲಿಲ್ಲ.
ಆದುದರಿಂದ ಅಲ್ಲಿ ರೋಗಗಳೂ ಇರಲಿಲ್ಲ.
ವೈದ್ಯನೊಬ್ಬ ಬಂದು ಅಲ್ಲಿ ಆಸ್ಪತ್ರೆ ತೆರೆದ.
ಅಂದಿನಿಂದ ಆ ಊರಲ್ಲಿ ಯಾರಾದರೊಬ್ಬರಿಗೆ ಹೊಟ್ಟೆನೋವು, ತಲೆನೋವು.

ಕೃಷಿ
‘‘ಈ ಬಾರಿಯ ಮಳೆಗಾಲಕ್ಕೆ ಸರಕಾರ ಸಂಪೂರ್ಣ ಸಿದ್ಧವಾಗಿದೆ’’ ಮುಖ್ಯಮಂತ್ರಿ ನುಡಿದರು.
ಹೌದು.
ಕಳೆದ ಬಾರಿಯಂತೆ ಈ ಬಾರಿ ಬೀಜ, ಗೊಬ್ಬರಕ್ಕಾಗಿ ರೈತರು ಆಕ್ರೋಶ ವ್ಯಕ್ತ ಪಡಿಸಲಾರರು.
ಯಾಕೆಂದರೆ ಬೀದಿ ಬೀದಿಯಲ್ಲಿ ಪೊಲೀಸ್ ಪಡೆಗಳು ಕೋವಿ ಹಿಡಿದು ಸಿದ್ಧವಾಗಿ ನಿಂತಿವೆ.

3 comments:

  1. nice chotu chotu stories Basheer bhai!!
    malathi S

    ReplyDelete
  2. Superb Nano stories sir, thanks..i loved reading your blog

    ReplyDelete
  3. all r too nice..this made me to read again n again..:-)

    ReplyDelete