Tuesday, October 30, 2012

ನೀನೊಬ್ಬನಿದ್ದೀಯೆಂದು...

1
ನನ್ನ  ದೊರೆಯೇ
ಧರ್ಮ ಪಂಡಿತರು
ನಿನ್ನ ಆರಾಧನೆಗೆಂದು
ನಮಾಜಿಗೆ ನಿಂತರು
ಇದೀಗ ನಿನ್ನನ್ನು ಮರೆತು
ನಮಾಜನ್ನೆ ಆರಾಧಿಸ ತೊಡಗಿದ್ದಾರೆ
ಹಣ್ಣು ಕೊಯ್ಯಲೆಂದು
ಮರಕ್ಕೆ ಏಣಿ ಇಟ್ಟವರು
ಹಣ್ಣನ್ನು ಮರೆತು
ಏಣಿಯನ್ನೇ ತಬ್ಬಿಕೊಂಡಿದ್ದಾರೆ...!
2
ಧರ್ಮ  ಪಂಡಿತರು
ನಿನ್ನ ನೆನೆದು
ಭಯ ಪೀಡಿತರಾಗಿದ್ದಾರೆ
ನನ್ನ ದೊರೆಯೇ...
ನಾನೋ ಅಜ್ಞಾನಿ,
ನೀನೋಬ್ಬನಿದ್ದೀಯೆಂದು
ನಿರ್ಭಯನಾಗಿದ್ದೇನೆ...
3
ಸೈತಾನನಿಗೆಂದು ಎಸೆದ ಕಲ್ಲು
ಅವನ ಬೆರಳ ಉಗುರನ್ನೂ ನೋಯಿಸಲಿಲ್ಲ...
ಕಳ್ಳ ನಮ್ಮ ಮನೆಯ
ಅಡುಗೆ ಕೋಣೆಯಲ್ಲಿ
ಬಚ್ಚಿಟ್ಟು ಕೊಂಡಿದ್ದಾನೆ
ನಾವೋ ಮನೆಯಂಗಳದಲ್ಲಿ
ಅವನನ್ನು ಹುಡುಕುತ್ತಿದ್ದೇವೆ...

Monday, October 29, 2012

ನಿನ್ನ ಆರಾದಿಸುವ ದಾರಿ ನನಗೆ ತಿಳಿದಿಲ್ಲ....

1 
ಧರ್ಮ ಪಂಡಿತರು
ಕಟ್ಟಿ ಕೊಟ್ಟ ಬುತ್ತಿಯನ್ನು
ಮಾತನ್ನು ಹೊತ್ತುಕೊಂಡು
ನಿನ್ನೆಡೆಗೆ ಪ್ರಯಾಣ ಹೊರೆಟೆ
ನನ್ನ ದೊರೆಯೇ...
ಇದೀಗ ಕಟ್ಟಿಕೊಟ್ಟ ಬುತ್ತಿ..
ಹೇಳಿಕೊಟ್ಟ ಮಾತು
ಅರ್ಧ ದಾರಿಯಲ್ಲೇ ಮುಗಿದು ಹೋಗಿದೆ...
ನಿನ್ನ ತಲುಪಲು ದಿಕ್ಕು ತಿಳಿಯದೆ
ತೊಳಲಾಡುತ್ತಿದ್ದೇನೆ....
2
ನಿನ್ನ ಆರಾದಿಸಲು ನನಗೆ ತಿಳಿಯದು
ನನ್ನ ದೊರೆಯೇ ...
ನೀನು ಹರಡಿದ ಆಕಾಶವೆಂಬ
ನಿಗೂಢವನ್ನು ವಿಸ್ಮಯದಿಂದ ನೋಡಿದೆ..
ಇರುಳ ತುರುಬನ್ನು ಅಲಂಕರಿಸಿದ
ಅಸಂಖ್ಯ ನಕ್ಷತ್ರಗಳಿಗೆ ಸೋತು ಹೋದೆ..
ಉರಿಯುತ್ತಿರುವ ಬೆಂಕಿ ಗೋಲವನ್ನು
ಕಲ್ಪಿಸಲಾಗದೆ ರೆಪ್ಪೆಗಳ ಮುಚ್ಚಿದೆ
ಬೋರ್ಗರೆವ ಕಡಲ ಅಗಾದಕ್ಕೆ ನನ್ನ ಒಪ್ಪಿಸಿದೆ...
ಚಿಟ್ಟೆಯ ರೆಕ್ಕೆಯಲ್ಲಿ ಬಿಡಿಸಿದ ಚಿತ್ರ ನೋಡಿ
ಪುಳಕಿತನಾದೆ...
ಅಷ್ಟೂ ಬಗೆಯ ಪರಿಮಳಗಳ
ಹೂ-ಹಣ್ಣುಗಳಲ್ಲಿಟ್ಟ ಪರಿಗೆ ಗದ್ಗದನಾದೆ
ದಾಳಿಂಬೆ ಮಣಿಗಳ , ಕಿತ್ತಳೆ, ಹಲಸಿನ ತೊಲೆಗಳ
ಜೋಪಾನ ಜೋಡಿಸಿ, ಅದರ ಸುತ್ತ ಕವಚ ಸುತ್ತಿ
ನನಗೆ ಒಪ್ಪಿಸಿದ ಪರಿಗೆ ಕಣ್ಣೀರಾದೆ...
ಇರುವೆಗೂ ಕಣ್ಣಿದೆಯೇ ಎಂದು ಸೋಜಿಗಗೊಂಡೆ...
ಹರಿಯುತ್ತಿರುವ ಹಾವಿನಲ್ಲು ಸೌಂದರ್ಯ ಕಂಡೆ
ಆಗಷ್ಟೇ ಹುಟ್ಟಿದ ಮಗುವಿನ
ಗುಲಾಬಿ ಪಾದವ ನನ್ನ ಕೆನ್ನೆಗೆ ಒತ್ತಿದೆ...
ಇಲ್ಲ ದೊರೆಯೇ ಇಲ್ಲ
ನಿನ್ನ ಆರಾಧಿಸುವೆನೆಂಬ ಅಹಂಕಾರ ಎನಗಿಲ್ಲ...
ನಿನ್ನ ಆರಾದಿಸುವ ದಾರಿ ನನಗೆ ತಿಳಿದಿಲ್ಲ....

Sunday, October 28, 2012

ನನ್ನ ದೊರೆಯ ನೀನೇನು ಬಲ್ಲೆ?

ಭವ್ಯ ಮಸೀದಿಯ ಹೊಳೆವ
ನೆಲದಲ್ಲಿ ಅವನು ಜಪಮಣಿ
ತಿರುಗಿಸುತ್ತಿದ್ದ...

ಮೀನು ಮಾರುವ ಅಬ್ಬು ಕಾಕ
ನನ್ನ ದೊರೆಯ ಜಪಿಸುತ್ತ
ಹಳೆಯ ಸೈಕಲನ್ನು
ಸುಡು ಬಿಸಿಲಲ್ಲಿ ತಿರುಗಿಸುತ್ತಿದ್ದ

ಅದೋ ನೋಡಿ...
ಮಸೀದಿಯಾ ಹೊಳೆವ ನೆಲದಲ್ಲಿ
ಆತನ ಜಪ ಮಣಿ ಸರ ಹರಿದು
ಚೆಲ್ಲಾಪಿಲ್ಲಿಯಾಗಿವೆ...

ಅಬ್ಬೂ ಕಾಕನ
ಜೊತೆಗೆ ಆತನ ಹಳೆಯ ಸೈಕಲು
ನನ್ನ ದೊರೆಯ ಸ್ವರ್ಗದಲ್ಲಿ
ಅತ್ಯುನ್ನತ ಸ್ಥಾನ ಪಡೆದಿದೆ....

2
ವಿದ್ಯುತ್ ಕೈ ಕೊಟ್ಟಿತ್ತು
ಮುಂಜಾನೆಯ ಅಜಾನ್ ಕರೆ
ಮಸೀದಿಯ ನಾಲ್ಕು ಗೋಡೆಯನ್ನು
ದಾಟಲಿಲ್ಲ....
ಹಕ್ಕಿಗಳ ಚಿಲಿಪಿಲಿ ಕರೆ
ನನ್ನನ್ನು ತಟ್ಟಿ ಎಬ್ಬಿಸಿತು

ಎಂದೂ ಇಲ್ಲದ
ಉತ್ಸಾಹದಿಂದ ಅಂದು
ನನ್ನ ದೊರೆಗೆ ಬಾಗಿದೆ!

3
ನನ್ನ ಮುಂದಿದ್ದ ಕಲ್ಲು ವಿಗ್ರಹಗಳನ್ನು
ಎಂದೋ ಮುರಿದು ಮುಂದೆ ಬಂದಿದ್ದೇನೆ
ಆದರೆ ಇದೀಗ...
ಏಕದೇವನ ಮುಂದೆ
ಪಾಲುದಾರಿಕೆಯನ್ನು ಬೇಡುತ್ತಿರುವ
ಶಬ್ದ, ಅಕ್ಷರಗಳ ವಿಗ್ರಹಗಳನ್ನು
ಮುರಿದು ಮುಂದೆ ಹೋಗಬೇಕಾಗಿದೆ
ಅದು ನನ್ನಿಂದ ಸಾಧ್ಯವಿದೆಯೆ?

4
ನಮಾಜಿಗೆ ಮುನ್ನ ಶುದ್ಧಿಯಾಗಲೆಂದು
ಮಸೀದಿಯ ಕೊಳದೆಡೆಗೆ
ನಡೆದೆ...
ಕೊಳದ ನೀರು ನನ್ನ
ನಮಾಜಿನ ಚಾಪೆಯ
ಕೊಳೆಯನ್ನು ಕಳೆಯಲೂ
ಸಾಕಾಗಲಿಲ್ಲ ದೊರೆಯೇ?

ಇನ್ನು ನನ್ನ ಅಶುದ್ಧಿಯನ್ನು
ಯಾವ ಕೊಳದಲ್ಲಿ ತೊಳೆಯಲಿ?
ನಿನ್ನ ನರಕದ ಬೆಂಕಿ ಮಾತ್ರ
ನನ್ನ ಕೊಳೆಯನ್ನು ಸುಟ್ಟು
ನನ್ನನ್ನು ಶುದ್ಧಿಯಾಗಿಸೀತು....

5
ಪಂಡಿತರು ಹೇಳಿದರು
ನಮಾಜಿಗೆ ನಿಂತ ನಿನ್ನ ಮುಖದ
ದಿಕ್ಕು ಕಾಬದೆಡೆಗಿರಲಿ!
ಪಂಡಿತರಿಗೆ ಗೊತ್ತಿರಲಿಲ್ಲ
ನನ್ನ ದೊರೆಯೇ....
ನಿಜವಾದ ಭಕ್ತನೊಬ್ಬ
ಮುಖ ಮಾಡಿದೆಡೆಗೆ
ಕಾಬಾ ತನ್ನ ದಿಕ್ಕನ್ನು
ಬದಲಿಸೂದು...

6
ನೀನು ನೂರಾರು ಪುಸ್ತಕಗಳನ್ನು
ಓದಿದ, ಕುರಾನ್ ಕಂಠ ಪಾಠ
ಮಾಡಿದ ಮಹಾ ಪಂಡಿತ...
ನಾನು ಬಲ್ಲೆ
ಚರ್ಚೆಯಲ್ಲಿ ಬೇರೆ ಬೇರೆ
ಧರ್ಮಗಳ ನೇತಾರರನ್ನು
ಕ್ಷಣ ಮಾತ್ರದಲ್ಲಿ ಸೋಲಿಸಿದೆನೆನ್ನೂದು
ನಿನ್ನ ಹೆಗ್ಗಳಿಕೆ...

ಆದರೆ ನನ್ನ ದೊರೆಯನ್ನು ನೀನೇನು ಬಲ್ಲೆ?
ಪಂಡಿತರಲ್ಲಿ ಮಹಾ ಪಂಡಿತ ಆತ
ಹೇಳು, ನಿನ್ನ ಪಾಂಡಿತ್ಯದಿಂದ
ಆ ದೊರೆಯ ಸೋಲಿಸುವ ಧೈರ್ಯವಿದೆಯೆ?

ಒಂದಕ್ಷರ ಕಲಿಯದ
ಮಂತ್ರದ ಒಂದು ಸಾಲೂ ತಿಳಿಯದ
ಮೀನು ಮಾರಿ ಹೊಟ್ಟೆ ಹೊರೆವ
ಅಬ್ಬೂ ಕಾಕನ ಭಕ್ತಿಗೆ
ನನ್ನ ದೊರೆ
ಕ್ಷಣ ಮಾತ್ರದಲ್ಲಿ ಸೋತ....!!

Wednesday, October 24, 2012

ಕ್ಷಮಿಸಿ ಬಿಡಿ...ನಿಮ್ಮ ತಟ್ಟೆಯನ್ನು ಎಂಜಲಾಗಿಸಿ ಬಿಟ್ಟೆ

ತೀರಾ ಸಣ್ಣವನಾಗಿದ್ದಾಗಿನ ನೆನಪುಗಳು ಇವು. ಆಗೆಲ್ಲ ಹೆಚ್ಚಿನ ಮದುವೆ ಸಮಾರಂಭಗಳಲ್ಲಿ ಅಥವಾ ಮನೆಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ ಗಳಲ್ಲಿ ನಾವು ಉಣ್ಣುತ್ತಿದ್ದ ಕ್ರಮಗಳು ಈಗಲೂ ನನ್ನನ್ನು ತಟ್ಟುತ್ತಿದೆ. ಆಗ ಈಗಿನಂತೆ ಬಾಡಿಗೆ ತಟ್ಟೆಗಳು, ಬಾಡಿಗೆ ಟೇಬಲ್‌ಗಳಿರಲಿಲ್ಲ. ಒಂದು ಮನೆಯಲ್ಲಿ ಸಮಾರಂಭ ನಡೆಯಬೇಕಾದರೆ ಹತ್ತು ಮನೆಯ ತಟ್ಟೆಗಳನ್ನು, ಹತ್ತು ಮನೆಯ ಟೇಬಲ್ ಕುರ್ಚಿಗಳನ್ನು ಸಂಗ್ರಹಿಸಿ ತರಬೇಕಾಗುತ್ತಿತ್ತು. ಅದು ಮದುವೆ ಮನೆಯೇ ಇರಲಿ. ಒಂದು ತಟ್ಟೆಯ ಊಟವನ್ನು ಇಬ್ಬರು ಹಂಚಿಕೊಂಡು ಉಣ್ಣುತ್ತಿ ದ್ದೆವು. ಅಲ್ಲಿ ಎಂಜಲಿನ ಸಮಸ್ಯೆಯೇ ಕಾಡುತ್ತಿರಲಿಲ್ಲ. ಟೇಬಲಿನ ಅಕ್ಕಪಕ್ಕ ಕುರ್ಚಿ ಹಾಕಲಾಗುತ್ತಿತ್ತು. ಯಾರೋ ಪರಿಚಿತ ಅಥವಾ ಅಪರಿಚಿತ. ಸಂಬಂಧಿಕನಾಗಬೇಕಾಗಿಲ್ಲ. ಗುರುತು ಪರಿಚಯವೂ ಇರಬೇಕಾಗಿರಲಿಲ್ಲ. ಇಬ್ಬರಿಗೆ ಒಂದು ತಟ್ಟೆ. ಆ ತಟ್ಟೆಯಲ್ಲಿದ್ದ ಅನ್ನವನ್ನು ಸಾರು ಕಲೆಸಿ ನಾವು ಹಂಚಿ ಉಣ್ಣುತ್ತಿದ್ದೆವು. ಉಣ್ಣುತ್ತಾ ಉಣ್ಣುತ್ತಾ ಪರಸ್ಪರ ಪರಿಚಯ ಮಾಡಿಕೊಳ್ಳುತ್ತಿದ್ದೆವು. ಅನ್ನ ಮುಗಿದಾಗ ನಾವು ಜೊತೆಯಾಗಿಯೇ ಹಾಕಿಸಿ ಕೊಂಡು ಮತ್ತೆ ಅದನ್ನು ಹಂಚಿಕೊಂಡು ತಿಂದು ಏಳುತ್ತಿದ್ದೆವು. ಕೆಲವೊಮ್ಮೆ ನಮ್ಮ ಎದುರಿನ ವ್ಯಕ್ತಿ ಹೊಟ್ಟೆ ಬಾಕನಾಗಿದ್ದರೆ ಹಾಗೂ ನಾವು ಸಂಕೋಚದ ವ್ಯಕ್ತಿಯಾಗಿದ್ದರೆ ಅದು ಇನ್ನಷ್ಟು ತಮಾಷೆಯ ಕತೆಯಾಗುತ್ತಿತ್ತು. ಒಟ್ಟಿನಲ್ಲಿ ಬಾಲ್ಯದ ಎಂಜಲು ಅನ್ನ ನನ್ನನ್ನು ಮನುಷ್ಯನಾಗಿ ಬೆಳೆಯುವಲ್ಲಿ ಒಂದಿಷ್ಟಾದರೂ ತನ್ನ ಕಾಣಿಕೆಯನ್ನು ನೀಡಿದೆ ಎಂದು ಭಾವಿಸಿದ್ದೇನೆ. ನಾನು ಬೆಳೆದಂತೆ ಈ ಕ್ರಮ ಅಳಿದೇ ಹೋಯಿತು. ಈಗೆಲ್ಲ ಬಾಡಿಗೆ ಬಟ್ಟಲು, ಬಫೆ ಪದ್ಧತಿ ಕಡ್ಡಾಯವಾಗಿದೆ. ನನಗೆ ನನ್ನ ಈ ಬಾಲ್ಯದ ಎಂಜಲು ಊಟ ನೆನಪಾಗಿದ್ದು ಇತ್ತೀಚೆಗೆ ಪೇಜಾವರಶ್ರೀಗಳ ಒಂದು ಹೇಳಿಕೆಯಿಂದ. ಅವರು ಮಡೆಸ್ನಾನವನ್ನು ಸಮರ್ಥಿಸುವುದಕ್ಕಾಗಿ ಒಂದೇ ಬಟ್ಟಲಲ್ಲಿ ಉಣ್ಣುವುದನ್ನು ಗುರಾಣಿಯಾಗಿ ಬಳಸಿಕೊಂಡರು. ನನಗೆ ಈ ಹೋಲಿಕೆಯಿಂದ ನೋವಾದರೂ, ಪೇಜಾವರಶ್ರೀಗಳ ಹತಾಶೆಯ ಕುರಿತಂತೆ ಸಣ್ಣದೊಂದು ಅನುಕಂಪ ಹುಟ್ಟಿತು. ಮಡೆಸ್ನಾನ ಮತ್ತು ಈ ಹಂಚಿಕೊಂಡು ಉಣ್ಣುವ ಕ್ರಮದಲ್ಲಿ ಇರುವ ಅಜಗಜಾಂತರವನ್ನು ಅವರು ಅರಿಯಲು ವಿಫಲರಾದರೋ, ಅಥವಾ ಅರಿತೂ ಅಂತಹದೊಂದು ಹೇಳಿಕೊಟ್ಟರೋ ಎಂಬ ಬಗ್ಗೆ ನನಗೆ ಗೊಂದಲವಿದೆ. ಮಡೆಸ್ನಾನ ಪರೋಕ್ಷವಾಗಿ ಒಂದು ಸಮುದಾಯದ ಅಥವಾ ಒಂದು ಜಾತಿಯ ಜನರ ಎಂಜಲನ್ನು ಶ್ರೇಷ್ಠವೆಂದು ಪ್ರತಿಪಾದಿಸುತ್ತದೆ. ಆದರೆ ಒಂದೇ ತಟ್ಟೆಯಲ್ಲಿ ಇಬ್ಬರು ಜೊತೆಯಾಗಿ ಉಣ್ಣುವಾಗ ನಮ್ಮಲ್ಲಿ ಪರಸ್ಪರರ ಎಂಜಲಿನ ಕುರಿತಂತೆ ಮೇಲು-ಕೀಳುಗಳಿರಲಿಲ್ಲ. ಹಸಿವೆ ಅಲ್ಲಿ ಪ್ರಧಾನ ಪಾತ್ರವನ್ನು ವಹಿಸಿತ್ತು. ಹಂಚಿ ಉಣ್ಣು ವುದು ಎರಡನೆಯದು. ಇದನ್ನು ಸಹೋದರತೆ, ಸಮಾನತೆ ಎಂಬಿತ್ಯಾದಿ ಸಾಲುಗಳಿಗೆ ಜೋಡಿಸಲು ಇಷ್ಟಪಡುವುದಿಲ್ಲ. ಈ ಪದಗಳ ಅರಿವೇ ಇಲ್ಲದೆ ನಾವು ಅಂದು ಜೊತೆ ಜೊತೆಯಾಗಿ ಉಣ್ಣುತ್ತಿದ್ದೆವು. ಅದನ್ನು ನೆನೆದಾಗ ಇಂದು ರೋಮಾಂಚನ ವಾಗುತ್ತದೆ. ಕೆಲವೊಮ್ಮೆ ಯಾರೋ ಉಣ್ಣುವಾಗ ಅವರ ತಟ್ಟೆಗೆ ತನ್ನ ಎಂಜಲು ಕೈಯನ್ನು ಹಾಕಿ ಬಿಡಬೇಕು ಎನ್ನುವ ಆಸೆ ಉಕ್ಕಿ ಬರುತ್ತದೆ.

 ತಾಯಿಯ ಎಂಜಲಿನಿಂದಲೇ ಜೀವಪಡೆದ ನಾವೆಲ್ಲ, ಒಂದಲ್ಲ ಒಂದು ರೀತಿಯಲ್ಲಿ ಇನ್ನೊಬ್ಬರ ಎಂಜಲಿನ ಜೊತೆಗೇ ಬದುಕುತ್ತಿರುವವರು. ಅದು ಸಂಗಾತಿಯ ಎಂಜಲಾಗಿರಬಹುದು. ಆಗಷ್ಟೇ ಹುಟ್ಟಿದ ಹಸುಗೂಸಿನ ಜೇನಿನಂತಹ ಎಂಜಲಾ ಗಿರಬಹುದು. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಎಂಜಲಿಗೆ ಅಂಜಿದ ಸಂದರ್ಭದಲ್ಲಿ ಮನುಷ್ಯನ ನಡುವೆ ಕಂದರಗಳು, ಜಾತಿಗಳು, ಧರ್ಮಗಳು ನಿರ್ಮಾಣವಾಗುತ್ತವೆ. ಬಾಲ್ಯದಲ್ಲಿ (ಅಂದು) ಯಾವ ಅಂಜಿಕೆಯೂ ಇಲ್ಲದೆ ಐಸ್‌ಕ್ಯಾಂಡಿಗಳ ಜೊತೆಗೆ, ಬೊಂಬಾಯಿ ಮಿಠಾಯಿಗಳೊಂದಿಗೆ, ಗೋಲಿ ಸೋಡಾಗಳ ಜೊತೆಗೆ ನಾವು ನಮ್ಮ ಗೆಳೆಯ ರೊಂದಿಗೆ ಎಂಜಲುಗಳನ್ನು ಯಾವ ಅಡ್ಡಿ, ಆತಂಕಗಳಿಲ್ಲದೆ ಹಂಚಿಕೊಳ್ಳುತ್ತಿದ್ದೆವು. ಇಂದು ನೀಟಾಗಿ ಯೂನಿಫಾರಂ ಹಾಕಿಕೊಂಡಿರುವ ಮಕ್ಕಳು ಶಾಲೆಯಲ್ಲಿ ಒಂದೇ ಐಸ್‌ಕ್ಯಾಂಡಿಯನ್ನು ಹಂಚಿಕೊಂಡು ತಿನ್ನುತ್ತಾರೆ ಎನ್ನುವ ಭರವಸೆ ನನಗಿಲ್ಲ. ಯಾಕೆಂದರೆ ಅವರ ಬಾಲ್ಯಕ್ಕೆ ಹಿರಿಯರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಹಿರಿಯರ ಹಸ್ತಕ್ಷೇಪ ವೆಂದರೂ ಒಂದು ರೀತಿಯ ಎಂಜಲೇ ಆಗಿದೆ. ಅವರು ತಮ್ಮ ಬೆನ್ನಲ್ಲಿ ಹೊತ್ತುಕೊಂಡಿರುವ ಜಾತಿ, ಧರ್ಮಗಳನ್ನು ಮಕ್ಕಳ ಮುಗ್ಧ ಬಾಲ್ಯಕ್ಕೆ ಎಂಜಲಾಗಿಸಿದ್ದಾರೆ. ಆದರೂ ಈ ಎಂಜಲು ಎರಡು ಸಂದರ್ಭಗಳಲ್ಲಿ ನನ್ನನ್ನು ಕಾಡಿದ್ದನ್ನು, ನನ್ನಲ್ಲಿ ಪಾಪಪ್ರಜ್ಞೆಯನ್ನು ಬಿತ್ತಿದ್ದನ್ನು, ಇಂದಿಗೂ ತಪ್ಪಿಸ್ಥನಂತೆ ನನ್ನನ್ನು ಕೊರಗುವಂತೆ ಮಾಡಿದ್ದನ್ನು ಇಲ್ಲಿ ಹಂಚಿಕೊಳ್ಳಬೇಕೆನಿಸುತ್ತಿದೆ.

ಮೊದಲನೆಯದು ನಡೆದದ್ದು ಮುಂಬಯಿ ಯಲ್ಲಿ. ನಾನು ಕನ್ನಡ ಎಂ.ಎ. ಕಲಿಯುವುದಕ್ಕಾಗಿ ಮುಂಬೈ ಸೇರಿದ ಸಂದರ್ಭದಲ್ಲಿ ಘಟನೆ ಇದು. ಮುಂಬೈಯಲ್ಲಿ ಒಂದು ಕನ್ನಡ ದೈನಿಕ ನನಗೆ ಆಶ್ರಯ ನೀಡಿತ್ತು. ಬಿಎ ಮುಗಿಸಿದ ನನಗೆ ಕನ್ನಡ ಸಾಹಿತ್ಯದಲ್ಲಿ ಎಂಎ ಮಾಡಬೇಕೆಂಬ ಕನಸನ್ನು ಸಾಧಿಸಲು ಉಳಿದ ಒಂದೇ ದಾರಿಯಾಗಿತ್ತು ಮುಂಬೈ. ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಅಂದಿನ ಮುಖ್ಯಸ್ಥರಾಗಿ ನನ್ನದೇ ಊರಿನ ತಾಳ್ತಜೆ ವಸಂತ ಕುಮಾರ್ ಇದ್ದರು. ನಮ್ಮ ಊರಿನ ಶ್ರೀನಿಧಿ ಯುವಕ ಮಂಡಲದಲ್ಲಿ ಸಕ್ರಿಯರಾಗಿದ್ದ ಚಂದ್ರಶೇಖರ ಪಾಲೆತ್ತಾಡಿ ಯವರು ಮುಂಬೈಯ ಕನ್ನಡ ದೈನಿಕವೊಂದರ ಸಂಪಾದಕರಾಗಿದ್ದರು. ಮುಂಬೈಗೆ ತೆರಳುವಾಗ ನನಗೆ ನೆನಪಾದ ಒಂದೇ ಒಂದು ಹೆಸರು ಪಾಲೆತ್ತಾಡಿಯವರದು. ‘ನಾನು ಬರಲಾ?’ ಎಂದಾಗ ಎರಡು ಮಾತನಾಡದೆ ‘ಬಾ’ ಎಂದರು. ಮುಂದೆ ಆ ಪತ್ರಿಕೆಯಲ್ಲಿ ಆಶ್ರಯ ಪಡೆದು ಸುಮಾರು ಐದು ವರ್ಷ ಬದುಕಿನ ಮಹತ್ವದ ಘಟ್ಟವನ್ನು ಕಳೆದಿದ್ದೇನೆ. ಕಲಿತಿದ್ದೇನೆ. ಎರಡು ವರ್ಷ ಎಂಎ ಮುಗಿದು, ಬಳಿಕ ಸುಮಾರು ಮೂರು ವರ್ಷ ಅದೇ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಕೆಲಸ ನಿರ್ವಹಿಸಿದೆ. ಆ ಸಂದರ್ಭ ದಲ್ಲೇ ನನಗೆ ಟಿಬಿ ಅಟ್ಯಾಕ್ ಆಗಿದ್ದು. ಬಹುಶಃ ಅಂಬಿಗನಿಲ್ಲದ ಒಂದು ಪುಟ್ಟ ದೋಣಿಯೇರಿ, ನನಗೆ ದೋಚಿದ ದಿಕ್ಕಿಗೆ, ನನಗೆ ತೋಚಿದಂತೆ ಉಟ್ಟು ಹಾಕುತ್ತಾ ಮುಂದೆ ಸಾಗುತ್ತಿದ್ದವನ ಮುಂದೆ ಬಿರುಗಾಳಿ ಎರಗಿದಂತಾಗಿತ್ತು. ವಿಚಿತ್ರ ವೆಂದರೆ, ಆ ಟಿಬಿಯನ್ನಿಟ್ಟುಕೊಂಡು ಕವಿತೆಗಳನ್ನು ಬರೆಯುತ್ತಿದ್ದೆ. ಮುಂಬಯಿ ಕರ್ನಾಟಕ ಸಂಘದಲ್ಲಿ ಸಕ್ರಿಯನಾಗಿದ್ದೆ. ನಾಟಕ, ಶಿಬಿರ ಸೇರಿದಂತೆ ಯಾವುದೇ ಕನ್ನಡ ಕಾರ್ಯಕ್ರಮಗಳಿರಲಿ ಸಕ್ರಿಯನಾಗಿ ಓಡಾಡುತ್ತಿದ್ದೆ. ಇದೇ ಸಂದರ್ಭ ದಲ್ಲಿ ನನ್ನ ಮೊತ್ತ ಮೊದಲ ಕವನ ಸಂಕಲನ ‘ಪ್ರವಾದಿಯ ಕನಸು’ನ್ನು ಯಶವಂತ ಚಿತ್ತಾಲರು ಬಿಡುಗಡೆ ಮಾಡಿದರು. ಕನ್ನಡ ಚಟುವಟಿಕೆಗಳ ಜೊತೆಜೊತೆಗೇ ಈ ರೋಗವನ್ನು ಎದುರಿಸುತ್ತಾ ಬಂದೆ. ಸುಮಾರು ಎರಡು ವರ್ಷಗಳ ಹೋರಾಟದಲ್ಲಿ ನಾನು ಗೆದ್ದೆ. ಸಿಡಿಲು ಬಿದ್ದ ಮರದಂತಾಗಿದ್ದ ನಾನು ಮತ್ತೆ ಚಿಗುರಿ ಕೊಳ್ಳತೊಡಗಿದೆ.(ಈಗಂತೂ ದೇಹಗಾತ್ರದಲ್ಲಿ ನಳನಳಿಸುವ ಅಶ್ವತ್ಥ ಮರವನ್ನು ಮೀರಿಸಿದ್ದೇನೆ ಬಿಡಿ). ಇಂತಹ ಸಂದರ್ಭದಲ್ಲೇ ನನ್ನ ಕೈಯಲ್ಲೊಂದು ತಪ್ಪು ನಡೆದು ಹೋಯಿತು.
 
 ನಾವೊಂದಿಷ್ಟು ಜನ ಒಂದೇ ಕೊಠಡಿಯಲ್ಲಿ ಒಟ್ಟಿಗೆ ಊಟವನ್ನು ಮಾಡುತ್ತಿದ್ದೆವು. ಅಡುಗೆ ಯನ್ನು ತಯಾರಿಸುವುದಕ್ಕೂ ಒಬ್ಬರು ಸಿಬ್ಬಂದಿಯಿದ್ದರು. ಒಮ್ಮೆಯೇನಾಯಿತೆಂದರೆ, ನಾವೆಲ್ಲರೂ ಉಣ್ಣುತ್ತಿದ್ದಾಗ ನನ್ನ ಗೆಳೆಯನೊಬ್ಬ ಬಂದ. ಅಲ್ಲಿ ಬೇರೆ ತಟ್ಟೆಯೇ ಇರಲಿಲ್ಲ. ಅಷ್ಟರಲ್ಲಿ ನಾನು ಉಂಡ ನನ್ನ ತಟ್ಟೆಯನ್ನು ತೊಳೆದು ಆತನಿಗೆ ನೀಡಿದೆ. ಆತ ಬೇಡ ಬೇಡ ಎಂದ. ಬಳಿಕ ಇನ್ನೊಬ್ಬನ ತಟ್ಟೆಯನ್ನು ತೊಳೆದು ಅನ್ನ ಹಾಕಿಸಿಕೊಂಡ. ಅದೇನೂ ದೊಡ್ಡ ವಿಷಯ ವಾಗಿರಲಿಲ್ಲ. ಅದೊಂದು ಆಕಸ್ಮಿಕವೂ ಆಗಿರಬಹುದು. ಆದರೆ ಅಂದು ಮಲಗಿದ ಬಳಿಕ ಮಧ್ಯರಾತ್ರಿ ಎಚ್ಚರದಲ್ಲಿ ನನ್ನೊಳಗೆ ಆ ಘಟನೆ ಧಿಗ್ಗನೆ ಮರುಕಳಿಸಿತು. ‘ಆತನೇಕೆ ನನ್ನ ತಟ್ಟೆಯನ್ನು ನಿರಾಕರಿಸಿದ?’ ಎಂಬ ದುಷ್ಟ ತರ್ಕವೊಂದು ನನ್ನಲ್ಲಿ ತಲೆಯೆತ್ತಿತ್ತು. ನನ್ನ ಅನಾರೋಗ್ಯವೇ ತಟ್ಟೆಯನ್ನು ಸ್ವೀಕರಿಸದಂತೆ ಅವನನ್ನು ತಡೆಯಿತು ಎನ್ನುವುದು ನನಗೆ ಆ ಕತ್ತಲಲ್ಲಿ ಹೊಳೆಯಿತು. ಟಿಬಿಯೆನ್ನುವುದು ಸಾಂಕ್ರಾಮಿಕ ರೋಗ. ಅದು ಇನ್ನೊಬ್ಬರಿಗೆ ಹರಡದಂತೆ ಜಾಗರೂಕತೆವಹಿಸುವುದು ಆ ರೋಗ ಬಾಧಿತನ ದೊಡ್ಡ ಕರ್ತವ್ಯ. ಅದನ್ನು ನಾನು ಮರೆತಿದ್ದೆ. ತಟ್ಟೆಯನ್ನು ತೊಳೆದರೂ ಅದು ಸಂಪೂರ್ಣ ಸುರಕ್ಷಿತವೆನ್ನುವಂತಿರಲಿಲ್ಲ. ನಾನು ಭಾರೀ ದೊಡ್ಡ ತಪ್ಪು ಮಾಡಿದ್ದೆ. ಮುಂದೆ ಆ ಕುರಿತಂತೆ ನಾನು ಹೆಚ್ಚು ಜಾಗರೂಕನಾದೆ. ಆದರೂ ಯಾವುದೋ ಮಧ್ಯರಾತ್ರಿಯ ಕನಸಿನಲ್ಲಿ ಆ ತಪ್ಪು ಈಗಲೂ ನನ್ನೊಳಗೆ ಸಣ್ಣಗೆ ಕದಲುತ್ತದೆ. ನೋವು ಕೊಡುತ್ತದೆ. ಇನ್ನೊಂದು ಘಟನೆ ನಾನು ಮುಂಬಯಿ ಯಿಂದ ಆರೋಗ್ಯವಂತನಾಗಿ ಊರಿಗೆ ಮರಳಿ, ಮಂಗಳೂರಿನ ಇನ್ನೊಂದು ರಾಜ್ಯಮಟ್ಟದ ಪತ್ರಿಕೆಯಲ್ಲಿ ಜಿಲ್ಲಾ ವರದಿಗಾರನಾಗಿ, ಹಿರಿಯ ಉಪಸಂಪಾದಕನಾಗಿ ಕೆಲಸ ಮಾಡುವ ಸಂದರ್ಭದಲ್ಲಿ ನಡೆದದ್ದು. ನನ್ನ ಗೆಳೆಯರಲ್ಲಿ, ಆತ್ಮೀಯರಲ್ಲಿ ಹಲವು ಹಿರಿಯರೂ ಇದ್ದಾರೆ. ಅವರಲ್ಲಿ ಒಬ್ಬರು ತುಂಬಾ ಮುಖ್ಯರಾದವರು.. ಅವರು ಅತಿ ಸಾಂಪ್ರದಾಯಿಕ ಕುಟುಂಬವನ್ನು ಹೊಂದಿದವರು ಮತ್ತು ಸಂಪ್ರದಾಯವನ್ನು ಬಲವಾಗಿ ನಂಬಿದವರು ಕೂಡ. ನನ್ನನ್ನು ನಾನು ಮುಸ್ಲಿಂ ಎಂದು ನಂಬಿದ ಹಾಗೆ, ಅವರು ತಮ್ಮ ಜಾತಿಯನ್ನು ‘ಬ್ರಾಹ್ಮಣ’ ಎಂದು ನಂಬಿದವರು. ಆದರೆ ಅವರ ಮನೆಯ ಪ್ರತಿ ದೀಪಾವಳಿ, ಯುಗಾದಿಗಳಿಗೆ ನನಗೆ ಆಹ್ವಾನವಿತ್ತು. ಅವರ ಮನೆಯವರೂ ಸೇರಿದಂತೆ ಎಲ್ಲರೂ ನನ್ನನ್ನು ತುಂಬಾ ಇಷ್ಟಪಡುವರು. ನಾನು ಕೂಡ ಅವರನ್ನು ತುಂಬಾ ಇಷ್ಟ ಪಡುತ್ತಿದ್ದೆ. ಈಗಲೂ ಇಷ್ಟ ಪಡುತ್ತಿದ್ದೇನೆ.

 ಬಹುಶಃ ಅದು ದೀಪಾವಳಿಯ ಹಬ್ಬವಿರ ಬೇಕು. ನನ್ನನ್ನು ಹಾಗೂ ನನ್ನ ಓರ್ವ ವಿಚಾರವಂತ ಹಿರಿಯ ಗೆಳೆಯರನ್ನೂ ಅವರು ರಾತ್ರಿಯ ಊಟಕ್ಕೆ ಕರೆದಿದ್ದರು. ನನ್ನ ವಿಚಾರವಾದಿ ಗೆಳೆಯರು ಹುಟ್ಟಿದ್ದು ಬ್ರಾಹ್ಮಣ ಕುಟುಂಬದಲ್ಲಾದರೂ ಬ್ರಾಹ್ಮಣ್ಯವನ್ನು ಶತಾಯಗತಾಯ ವಿರೋಧಿಸುವವರು. ನಾವು ಜೊತೆಯಾಗಿಯೇ ಆ ಹಿರಿಯರ ಮನೆಗೆ ಊಟಕ್ಕೆ ತೆರಳಿದೆವು. ಎಂದಿನಂತೆ, ಸಾಹಿತ್ಯ, ವರ್ತಮಾನ ಮಾತುಕತೆಗಳೆಲ್ಲ ಮುಗಿಯುವಷ್ಟರಲ್ಲಿ ನನ್ನ ಹಿರಿಯ ಗೆಳೆಯರ ಪತ್ನಿ ಊಟಕ್ಕೆ ಸಿದ್ಧತೆ ನಡೆಸಿದರು. ನಾವೆಲ್ಲ ಕೈ ಕಾಲು ತೊಳೆದು ಡೈನಿಂಗ್ ಟೇಬಲ್‌ನಲ್ಲಿ ಕುಳಿತೆವು. ಹಿರಿಯ ಗೆಳೆಯರು ಅವರ ಪತ್ನಿ, ಮಕ್ಕಳೂ ಪರಿವಾರದ ಸಹಿತ ಕುಳಿತಿದ್ದರು. ನನ್ನ ಪಕ್ಕದಲ್ಲೇ ನನ್ನ ವಿಚಾರವಾದಿ ಗೆಳೆಯರೂ ಆಸೀನರಾಗಿದ್ದರು. ಡೈನಿಂಗ್ ಟೇಬಲಲ್ಲಿ ಅನ್ನ, ಸಾಂಬಾರು, ಹೋಳಿಗೆ ಇತ್ಯಾದಿ ಇತ್ಯಾದಿಗಳಿದ್ದವು. ನಾವೇ ಸೌಟುಗಳಲ್ಲಿ ಬಡಿಸಿ ತಟ್ಟೆಗೆ ಹಾಕಿಕೊಳ್ಳಬೇಕು. ಅನ್ನವನ್ನು ಬೇಗ ಉಂಡು ಮುಗಿಸಿದ ನಾನು, ಏಕಾಏಕಿ ನನ್ನ ಎಂಜಲು ಕೈಯಲ್ಲೇ ಹೋಳಿಗೆಯಿರುವ ತಟ್ಟೆಗೆ ಕೈ ಹಾಕಿ ಒಂದು ಹೋಳಿಗೆಯನ್ನು ನನ್ನ ತಟ್ಟೆಗೆ ಹಾಕಿಕೊಂಡೆ. ತುಂಬಾ ಚೆನ್ನಾದ ಹೋಳಿಗೆ. ‘‘ತುಂಬಾ ಚೆನ್ನಾಗಿದೆ ಸಾರ್, ಹೋಳಿಗೆ ಹಾಕಿಕೊಳ್ಳಿ...’’ ಎಂದು ನಾನೇ ಆ ಹಿರಿಯ ಗೆಳೆಯರಿಗೂ, ಅವರ ಮನೆಯವರಿಗೂ ಒತ್ತಾಯಿಸಿದೆ. ನನ್ನ ವಿಚಾರವಾದಿ ಗೆಳೆಯರು ತಕ್ಷಣ ಎರಡು ಹೋಳಿಗೆ ಹಾಕಿಕೊಂಡು ಪ್ರತಿಕ್ರಿಯಿಸಿದರು. ಇಡೀ ಊಟ ಮುಗಿದರೂ ಮನೆಯವರಾರೂ ತಮ್ಮ ತಟ್ಟೆಗೆ ಹೋಳಿಗೆ ಹಾಕಿಕೊಳ್ಳಲೇ ಇಲ್ಲ. ನನ್ನ ಗಮನಕ್ಕೂ ಅದು ಬಂದಿರಲಿಲ್ಲ. ಗಮನಿಸಬೇಕಾದ ದೊಡ್ಡ ವಿಷಯವೂ ಅದಾಗಿರಲಿಲ್ಲ.

 ಆದರೆ ಅಂದು ಮಧ್ಯರಾತ್ರಿ ಆ ಘಟನೆಯೂ ಧಿಗ್ಗನೆ ನನ್ನ ನಿದ್ದೆಯ ಮೇಲೆ ಎರಗಿ ಬಿಟ್ಟಿತು. ‘ಅಷ್ಟೂ ಹೋಳಿಗೆ ಅಲ್ಲಿದ್ದರೂ ಅವರೇಕೆ ಒಂದನ್ನೂ ತೆಗೆದುಕೊಳ್ಳಲಿಲ್ಲ? ನಾನು ಅಷ್ಟೂ ಒತ್ತಾಯಿಸಿದರೂ ಅವರೇಕೆ ಪ್ರತಿಕ್ರಿಯಿಸಲಿಲ್ಲ?’ ಯೋಚಿಸುತ್ತಾ ಹೋದಂತೆ ನಾನು ಮಾಡಿದ ತಪ್ಪು ನನಗೆ ಹೊಳೆದು ಬಿಟ್ಟಿತು. ಅದು ನಿಜವಾಗಿರಬಹುದು. ಅಥವಾ ನನ್ನ ದುಷ್ಟ ಕಲ್ಪನೆಯೇ ಆಗಿರಬಹುದು. ಆದರೆ ಅಂದು ರಾತ್ರಿ ಅವರು ಆ ಸಿಹಿ ಊಟವನ್ನು ತ್ಯಜಿಸಿದ್ದು ನನ್ನ ತಪ್ಪಿನಿಂದಲೇ ಇರಬಹುದು ಎಂದು ದುಷ್ಟ ಮನಸ್ಸು ಈವರೆಗೂ ನಂಬಿಕೊಂಡೇ ಇದೆ. ಕೆಲವೊಮ್ಮೆ ನಮ್ಮೆಲ್ಲ ಸ್ನೇಹ, ಆತ್ಮೀಯತೆಯ ಬಲವೂ ಈ ಸಂಪ್ರದಾಯ, ನಂಬಿಕೆಗಳನ್ನು ಮುರಿದು ಮುಂದೆ ಹೋಗಲು ಸಾಕಾಗುವುದಿಲ್ಲ. ದೀಪಾವಳಿಯ ದಿನ ಅವರ ಬಾಯಿಯಿಂದ ಹೋಳಿಗೆಯ ಸಿಹಿಯನ್ನು ಕಸಿದುಕೊಂಡ ನನ್ನ ಅಪರಾಧ, ಬೇಜವಾಬ್ದಾರಿ ಈಗಲೂ ನನ್ನನ್ನು ಕಾಡುತ್ತಿದೆ. ಉಳಿದ ಅಷ್ಟೂ ಹೋಳಿಗೆಗಳನ್ನು ಅವರೇನು ಮಾಡಿರಬಹುದು? ಹೊರಗೆ ಎಸೆದಿರಬಹುದೆ? ಅವರ ಮನೆಯ ನಾಯಿಗೆ ಹಾಕಿರಬಹುದೆ? ಕೆಲಸದಾಳಿಗೆ ಕೊಟ್ಟಿರಬಹುದೆ? ಇಂತಹ ಕೆಟ್ಟ ತರ್ಕಗಳ ಮೂಲಕ ‘ಮಾಡಿದ ತಪಿ’್ಪಗಾಗಿ ನನ್ನನ್ನು ನಾನೇ ಹಲವು ಬಾರಿ ನೋಯಿಸಿಕೊಂಡಿದ್ದೇನೆ. ಈಗಲೂ ನನಗೆ ಪ್ರೀತಿ ಪಾತ್ರರೇ ಆಗಿರುವ ಆ ಹಿರಿಯ ಗೆಳೆಯರ ಸಾತ್ವಿಕ ಮುಖವನ್ನು ನೋಡುತ್ತಾ ನಾನು ಒಮ್ಮಾಮ್ಮೆ ತಲೆತಗ್ಗಿಸಿಕೊಳ್ಳುತ್ತೇನೆ. ಈಗಲೂ ಅವರು ಆಗಾಗ ಊಟಕ್ಕೆ ಕರೆಯುತ್ತಾರೆ. ಆದರೆ ಆ ಅಗ್ನಿಪರೀಕ್ಷೆಯನ್ನು ಗೆಲ್ಲುವ ಧೈರ್ಯಸಾಲದೆ ನಾನು ನಯವಾಗಿ ನಿರಾಕರಿಸುತ್ತೇನೆ.

Saturday, October 20, 2012

ಒಂದು ಮಿನಿ ಕಥೆ: ಮದಿರಂಗಿ ಕನಸು!

ತಾಹಿರಾಳಿಗೆ ಬುಧವಾರ ಮದುವೆ. ಸೋಮವಾರ ಆಕೆಯ ಮದಿರಂಗಿ ರಾತ್ರಿ. ಸೋಮವಾರ ಬೆಳಗ್ಗೆ ಒಂದು ಸಮಸ್ಯೆ ಎದುರಾಯಿತು? ಮದಿರಂಗಿ ಹಚ್ಚುವವರಾರು? ತಾಹಿರಾ ಮತ್ತು ಆಕೆಯ ಗೆಳತಿಯರು ಅದಾಗಲೇ ಮದಿರಂಗಿ ಯಾರು ಹಚ್ಚುವುದು ಎನ್ನುವುದನ್ನು ಮೊದಲೇ ನಿರ್ಧರಿಸಿ ಬಿಟ್ಟಿದ್ದರು. ಆಕೆಯ ಕಾಲೇಜು ಸಹಪಾಠಿ ಸೀಮಾ ಮದಿರಂಗಿ ಹಚ್ಚುವುದು ಎಂದು ಎರಡು ವರ್ಷಗಳ ಹಿಂದೆ, ಅಂತಿಮ ಬಿ. ಎ. ಓದುತ್ತಿದ್ದಾಗಲೇ ಅವರೆಲ್ಲಾ ನಿರ್ಧರಿಸಿ ಬಿಟ್ಟಿದ್ದರು. ಸೀಮಾ ಕಾಲೇಜಲ್ಲೆಲ್ಲ ಮದಿರಂಗಿ ಹಚ್ಚುವುದರಲ್ಲಿ ನಿಸ್ಸೀಮಳಾಗಿದ್ದಳು. ಹುಡುಗರೂ ತಮ್ಮ ಅಂಗೈಯನ್ನು ಬಿಡಿಸಿ, ಆಕೆಯ ಮುಂದೆ ಕುಕ್ಕರಗಾಲಲ್ಲಿ ಕೂರುವಷ್ಟು ಚೆನ್ನಾಗಿ ಮದಿರಂಗಿ ಬಳ್ಳಿಗಳನ್ನು ಬಿಡಿಸುವ ಸೀಮಾ, ‘ಲೇ ನಿನ್ನ ಮದುವೆಗೆ ನಾನು ಎಲ್ಲಿದ್ದರೂ ಬಂದು ಮದಿರಂಗಿ ಹಚ್ಚುವೆ. ನಿನಗೆ ಮಾತ್ರವಲ್ಲ, ನಿನ್ನನ್ನು ಕಟ್ಟಿಕೊಳ್ಳುವ ಆ ಅವನಿದ್ದಾನಲ್ಲ...ಅವನ ಕೈಗೂ ಹಚ್ಚುವೆ...ಪ್ರಾಮಿಸ್’’ ಎಂದಿದ್ದಳು ಸೀಮಾ. ಕಾಲೇಜು ಮುಗಿದ ಬಳಿಕ ಆಕೆ ಕುಟುಂಬದೊಂದಿಗೆ ದಿಲ್ಲಿ ಸೇರಿದ್ದಳು. ಇದೀಗ ಇಂದು ಮುಂಜಾನೆ ಅವಳ ಅನಿರೀಕ್ಷಿತ ಫೋನ್ ಅವರ ಕನಸುಗಳ ಮೇಲೆ ಎರಗಿತ್ತು. ಅವಳ ತಂದೆಗೆ ಹೃದಯಾಘಾತವಾಗಿ, ಐಸಿಯು ಸೇರಿದ್ದ ಹಿನ್ನೆಲೆಯಲ್ಲಿ ಬರಲಾಗುವುದಿಲ್ಲ ಎಂದು ಬಿಟ್ಟಿದ್ದಳು. ತಾಹಿರಾ ಮತ್ತು ಆಕೆಯ ಗೆಳತಿಯರಲ್ಲಿ ಇಲ್ಲದ ಆತಂಕ. ಒಂದು ಗೆಳತಿಯ ತಂದೆಗೆ ಹೃದಯಾಘಾತ. ಇನ್ನೊಂದು ತಾಹಿರಾಳಿಗೆ ಮದಿರಂಗಿ ಹಚ್ಚುವವರಾರು?
ಆಗ ಸಲಹೆಯಿತ್ತವಳು ಜಮೀಳಾ. ‘‘ಲೇ...ನೀನು ಒಪ್ಪುವುದಾದರೆ ಒಬ್ಬ ಅದ್ಭುತವಾಗಿ ಮದಿರಂಗಿ ಹಚ್ಚುವವನನ್ನು ನಾನು ನೋಡಿಟ್ಟಿದ್ದೇನೆ....’’
‘‘ಯಾರೆ ಅವನು? ನಿನ್ನ ಮಿಂಡನ?...’’ ಜುಬ್ಬಿ ಅವಳ ಸೊಂಟಕ್ಕೆ ಚಿವುಟಿದಳು.
‘‘ತಾಹಿರನ ತಂದೆ, ತಾಯಿಗೆ ಗೊತ್ತಾಗಬಾರದು...ಗೆಳತಿಯ ಮನೆಗೆ ಹೋಗಿ ಮದಿರಂಗಿ ಇಡುವುದು ಅಂತ ಹೇಳಬೇಕು...ನಿಮಗೆಲ್ಲ ಓಕೆ ಆದ್ರೆ ಸರಿ...’’
 ಎಲ್ಲರೂ ‘ಓಕೆ’ ಅಂದರು. ಇಂತಹ ಸಾಹಸಗಳೆಂದರೆ ತಾಹಿರಾ ಮತ್ತು ಗೆಳತಿಯರಿಗೆ ತುಂಬಾ ಇಷ್ಟ. ಪ್ರತಿ ಶುಕ್ರವಾರ ಮಧ್ಯಾಹ್ನ ಕ್ಲಾಸಿಗೆ ಚಕ್ಕರ್ ಹಾಕಿ ಆಡ್‌ಲ್ಯಾಬ್ಸ್‌ನಲ್ಲಿ ಪಿಕ್ಚರ್ ನೋಡುವವರು. ಶುಕ್ರವಾರ ಅವರು ಬುರ್ಖಾ ಧರಿಸಿ ಬಂದರು ಎಂದರೆ, ಅವರ ಕ್ಲಾಸ್‌ಮೇಟ್‌ಗಳಾದ ಆಸಿಫ್, ಮಹಮ್ಮದ್ ಇವರಿಗೆಲ್ಲ ಕೂಡಲೇ ಅರ್ಥವಾಗಿ ಬಿಡುತ್ತಿತ್ತು. ಇವರದೇನೋ ವಿಶೇಷ ಕಾರ್ಯಕ್ರಮ ಇದೆ ಎಂದು. ಕಾಲೇಜಿನುದ್ದಕ್ಕೂ ಇಂತಹ ಹತ್ತು ಹಲವು ಸಾಹಸಗಳು ಮಾಡಿ ತಂದೆ ತಾಯಿ, ಗೆಳೆಯರಿಂದ ಬೈಗಳು ತಿನ್ನುತ್ತಾ ಬಂದ ಹುಡುಗಿಯರ ಗುಂಪು ಅದು.

ಕೊನೆಗೂ ಮದಿರಂಗಿ ವಿಷಯದಲ್ಲಿ ಎಲ್ಲರೂ ಜಮೀಳಾ ಮಾತಿಗೆ ಒಪ್ಪಿದರು. ತಾಹಿರಾ ತನ್ನ ತಾಯಿಯ ಒಪ್ಪಿಗೆಯನ್ನು ಪಡೆದಳು. ಕಾರು ಚಲಾಯಿಸುವುದು ಜಮೀಳಾ ಎಂದಾಯಿತು. ತಾಹಿರಾ, ಜುಬ್ಬಿ ಹಿಂದಿನ ಸೀಟು ಏರಿದರು. ಕಾರು ನೇರವಾಗಿ, ಸಿಟಿಸೆಂಟರ್ ಮಾಲ್ ಮುಂದೆ ನಿಂತಿತು. ಜಮೀಳಾ, ಜುಬ್ಬಿ, ತಾಹಿರಾ ಮೂವರು ಮಾಲ್‌ನ ಗ್ರೌಂಡ್ ಫ್ಲೋರ್‌ಗೆ ಬಂದರು. ನೋಡಿದರೆ ಅಲ್ಲೇ ಒಂದು ಮೂಲೆಯಲ್ಲಿ ಒಬ್ಬ ತರುಣ ಕೂತಿದ್ದ. ಮೂವರು ಆ ಕಡೆಗೆ ಜರಗಿದರು. ಮೊದಲು ಅವನನ್ನು ನೋಡಿದ್ದು ತಾಹಿರಾ. ಬಲಿಷ್ಠ ಮೈಕಟ್ಟಾದರೂ ಮುಖದಲ್ಲೊಂದು ಮುಗ್ಧ ಕಳೆ. ಚಿಟ್ಟೆಯ ರೆಕ್ಕೆಯಂತೆ ಪಟಪಟಿಸುವ ರೆಪ್ಪೆಗಳ ಮರೆಯಲ್ಲಿರುವ ಅವನ ವಿಶಾಲ ಕಣ್ಣಿನ ಆಳ ಅವಳನ್ನು ಅವಳನ್ನು ಸೆಳೆದಂತಾಯಿತು. ಚಿಗುರು ಮೀಸೆ, ಮತ್ತು ಚಿಗುರು ಗಡ್ಡ! ಅವನು ಪ್ರಶ್ನಾರ್ಥಕವಾಗಿ ಅವರೆಡೆಗೆ ನೋಡಿದ್ದೇ ಜಮೀಳಾ ಅವನೆಡೆಗೆ ಮುಗುಳ್ನಗೆ ಚೆಲ್ಲಿದಳು. ಅವನು ತನ್ನ ಮುಂದೆ ಬಣ್ಣ ಬಣ್ಣದ ಮಂದಿರಂಗಿ ವಿನ್ಯಾಸಗಳನ್ನು ಹರಡಿ ಕುಳಿತಿದ್ದ. ಜಮೀಳಾ ಆ ವಿನ್ಯಾಸದ ಕಡೆಗೆ ಕಣ್ಣಾಯಿಸಿದಳು. ತಾಹಿರಾ ಅವನನ್ನು ಇದೀಗ ಇನ್ನಷ್ಟು ಹತ್ತಿರದಲ್ಲಿ ನೋಡುತ್ತಿದ್ದಳು. ಬಲಿಷ್ಟ ತೋಳುಗಳು. ಅದಕ್ಕೆ ಪೂರಕವಾಗಿ ನೀಲಿ ಜೀನ್ಸ್ ಮತ್ತು ಬೂದು ಟೀಶರ್ಟ್ ಧರಿಸಿದ್ದ. ಅವಳು ಅವನ ಮುಂದಿರುವ ಮಣೆಯಲ್ಲಿ ಕುಳಿತಳು. ಅಕ್ಕಪಕ್ಕ ಜುಬ್ಬಿ, ಜಮೀಳಾ ಕೂತರು. ತಾಹಿರಾ ಕೈ ಚಾಚಿದಳು. ಅವನು ತನ್ನ ವಿಶಾಲ ಕೈಗಳಿಂದ ಅವಳ ಕೈಗಳನ್ನು ತೆಗೆದುಕೊಂಡ. ಅವಳ ಬರಿಗೈಯನ್ನು ಮೆಲ್ಲಗೆ ಸವರಿದ. ಅವಳಿಗೆ ಒಂದು ಸಣ್ಣ ಮುಜುಗರ. ಯಾಕೋ ಕೈಯನ್ನು ಹಿಂದೆಗೆಯಲು ಪ್ರಯತ್ನಿಸಿದಳು. ಆದರೆ ಅವನು ಅದನ್ನು ಬಿಗಿಯಾಗಿ ಹಿಡಿದಿದ್ದ. ನಿಧಾನಕ್ಕೆ ಅವನು ಅವಳ ಕೈಯನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡ. ಅವಳಿಗೆ ಮೈಯೆಲ್ಲ ಸಣ್ಣಗೆ ಕಂಪಿಸಿದ ಅನುಭವ. ಆದರೆ ಅವನು ಇದನ್ನೆಲ್ಲ ಗಮನಿಸಿದಂತಿಲ್ಲ. ಮದಿರಂಗಿಯ ಟ್ಯೂಬನ್ನು ತೆಗೆದುಕೊಂಡ. ನೋಡನೋಡುತ್ತಿದ್ದಂತೆ ಮರಗಿಡ, ಬಳ್ಳಿ, ಹೂವುಗಳು ಅವಳ ಅಂಗೈಯಲ್ಲಿ ಅರಳತೊಡಗಿದವು. ಮೂವರು ಹುಡುಗಿಯರು ಅದನ್ನು ಅಚ್ಚರಿಗಣ್ಣಲ್ಲಿ ನೋಡುತ್ತಿದ್ದರು. ಗದ್ದಲಗಳಿಂದ ತುಂಬಿದ ಆ ಮಾಲ್‌ನಲ್ಲಿ ಆ ಮದಿರಂಗಿ ಹಚ್ಚುವ ಅಷ್ಟೂ ಸಮಯ ಗಾಢವಾದ ವೌನ ಕವಿದು ಬಿಟ್ಟಿತ್ತು. 

ಇದ್ದಕ್ಕಿದ್ದಂತೆಯೇ ಅವನು ‘‘ಸರಿ, ಆಯ್ತು’’ ಎಂದಾಗ ಒಮ್ಮೆಲೆ ಯಾವುದೋ ಲೋಕದಿಂದ ಎಸೆಯಲ್ಪಟ್ಟವರಂತೆ ಆ ಮೂವರು ಹುಡುಗಿಯರು ಬೆಚ್ಚಿದರು. ಆಮೇಲೆ ಯಾರಲ್ಲೂ ಮಾತುಗಳಿಲ್ಲ. ತಾಹಿರಾಳ ಹಣೆ ತುಂಬಾ ಬೆವರು. ಅವನ ತೊಡೆ ಮೇಲಿದ್ದ ಕೈಯನ್ನು ಎತ್ತಲು ಹೋದರೆ ಅದು ಅಲ್ಲಿಗೇ ಅಂಟಿದಂತಿತ್ತು. ಜುಬ್ಬಿ ಮೆಲ್ಲಗೆ ಆ ಕೈಯನ್ನು ಎತ್ತಿ ತನ್ನ ಕೈಗೆ ತೆಗೆದುಕೊಂಡಳು. ಮದಿರಂಗಿಯ ಜೊತೆ ಜೊತೆಗೇ ಅವಳು ಮದುಮಗಳಂತೆ ನಾಚಿಕೊಂಡಳು. ಅವಳ ಮುಖವಿಡೀ ಕೆಂಪಾಗಿತ್ತು. ಜಮೀಳಾ ಕಾರು ಕೀ ಯೊಂದಿಗೆ ಮುಂದೆ ಹೊರಟಳು. ಜುಬ್ಬಿ ಮತ್ತು ತಾಹಿರಾ ನಿಧಾನಕ್ಕೆ ಹೊರಡಲು ಸಿದ್ಧರಾದರು. ಮದಿರಂಗಿ ಹಚ್ಚಿದ ಎರಡೂ ಕೈಗಳನ್ನೂ ತಾಹಿರಾ ಜೋಪಾನ ಮಾಡಿದಳು. ಸುಮಾರು ಅರ್ಧ ಗಂಟೆ ಕೂತಿದ್ದರಿಂದಲೋ ಏನೋ, ತಾಹಿರಾಳ ಕಾಲು ಜುಮುಗುಡುತ್ತಿತ್ತು. ಅವನ ತೊಡೆಯ ಬಿಸಿ ಅಂಗೈಯ ಹಿಂದೆ ಇನ್ನೂ ಉಳಿದು ಬಿಟ್ಟಿದೆ ಅನ್ನಿಸಿತು. ಇನ್ನೇನು ಸಿಟಿಸೆಂಟರ್ ಮಾಲ್‌ನಿಂದ ಹೊರಗೆ ಹೆಜ್ಜೆಯಿಡಬೇಕು ಎನ್ನುವಷ್ಟರಲ್ಲಿ, ತಾಹಿರಾ ಕೇಳಿದಳು ‘‘ಅವನು ನನ್ನೆಡೆಗೆ ನೋಡುತ್ತಿದ್ದಾನೆಯೇ...?’’ ತಪ್ಪಿ ಅವಳ ಬಾಯಿಯಿಂದ ಮಾತು ಉದುರಿ ಬಿಟ್ಟಿತ್ತು.
‘‘ಯಾರೆ?’’ ಜುಬ್ಬಿ ಕೇಳಿದಳು.
ಉತ್ತರಕ್ಕೆ ಕಾಯದೆ ತಾಹಿರಾ ತಿರುಗಿ ನೋಡಿದಳು. ದೂರದಲ್ಲಿ ಅವನು, ಹೌದು ಅದು ಅವನೇ...ಬಾಗಿ, ಅದು ಯಾವುದೋ ಹುಡುಗಿಗೆ ಮದಿರಂಗಿ ಹಚ್ಚುವುದರಲ್ಲಿ ತನ್ಮಯವಾಗಿದ್ದ.
ಒಮ್ಮೆಲೆ ಗೊಂದಲಗೊಂಡ ತಾಹಿರಾ ಜುಬ್ಬಿಯ ಕಡೆಗೆ ನೋಡಿದಳು. ಅವಳ ದೃಷ್ಟಿ ಇನ್ನೆಲ್ಲೋ ಇತ್ತು. ತಾಹಿರಳಿಗೇಕೋ ಅಳು ಉಮ್ಮಳಿಸಿ ಬಂದಂತಾಯಿತು. ಜುಬ್ಬಿಗೆ ಗೊತ್ತಾಗಿ ಬಿಡಬಹುದು ಎಂದು ಅದನ್ನೇ ಅಲ್ಲಿಗೇ ನುಂಗಿಕೊಂಡಳು. ಅಷ್ಟರಲ್ಲಿ ಜಮೀಳಾ ಓಡೋಡಿಕೊಂಡು ಬಂದಳು.
‘‘ಲೇ...ನಿನ್ನ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆಯಂತೆ....ನಿನ್ನ ಭಾವಿ ಗಂಡ ಲೈನಲ್ಲಿದ್ದಾನೆ...ತೆಗೆದುಕೊ’’ ಏದುಸಿರು ಬಿಡುತ್ತಾ ನುಡಿದಳು. ಆದರೆ ಮದಿರಂಗಿ ಹಚ್ಚಿದ ಎರಡೂ ಕೈಗಳು ಆ ಮೊಬೈಲ್ ಎತ್ತುವುದಕ್ಕೆ ಅಸೃಶ್ಯವಾಗಿವೆ. ಜುಬ್ಬಿ ಮೊಬೈಲ್‌ನ್ನು ತಾಹಿರಾಳ ಕಿವಿಗಿಟ್ಟಳು.
‘‘ಹಲೋ...ಅಸ್ಸಲಾಂ ಅಲೈಕುಂ...’’ ಎಂದು ಹೇಳುವುದಕ್ಕೆ ಪ್ರಯತ್ನಿಸಿದಳು ತಾಹಿರಾ. ಯಾಕೋ ಧ್ವನಿಯೇ ಹೊರಡುತ್ತಿಲ್ಲ. ‘‘ಯಾಕೆ ಆರೋಗ್ಯ ಸರಿಯಿಲ್ವಾ...’’ ಆ ಕಡೆಯಿಂದ ಭಾವೀ ಪತಿಯ ಮೃದು ಮಾತು ಕೇಳಿದ್ದೇ ತಾಹಿರಾ ಗಳಗಳನೆ ಅಳ ತೊಡಗಿದಳು.

Thursday, October 18, 2012

ಅರ್ಪಿಸುವುದಕ್ಕೆ ಮಡೋನ್ನಾಳ ಬಳಿ ಹಾಡುಗಳಿಲ್ಲ............!



ನಿನ್ನೆ ಕನಸಿನಲ್ಲಿ ಮಿಲಿಟರಿ ಹೆಲಿಕಾಪ್ಟರ್‌ಗಳು ಮತ್ತು ತಾಲಿಬಾನಿಗಳು ಬಂದಿದ್ದರು. ನಮ್ಮ ಸ್ವಾತ್ ಜಿಲ್ಲೆಯಲ್ಲಿ ಸೈನಿಕ ಕಾರ್ಯಾಚರಣೆ ಶುರುವಾದಂದಿನಿಂದ ಈ ರೀತಿಯ ದುಃಸ್ವಪ್ನಗಳು ಮಾಮೂಲಾಗಿವೆ.
-ಮಲಾಲಾ ಯೂಸುಫ್ ಝಾಯಿ ಡೈರಿಯಲ್ಲಿ ಬರೆದ ಸಾಲುಗಳು.
***
‘‘ಈ ಘಟನೆ ನನಗೆ ಅಳು ತರಿಸಿತು’’
-ಪಾಪ್ ತಾರೆ ಮಡೋನ್ನಾ, ಮಲಾಲಾ ಮೇಲೆ ನಡೆದ ಹಲ್ಲೆಗೆ ಪ್ರತಿಕ್ರಿಯಿಸುತ್ತಾ.
***
‘‘ಹೌದು, ಇದನ್ನು ನಾವು ಸಮರ್ಥನೀಯ ಎಂದೇ ಭಾವಿಸಿದ್ದೇವೆ’’
-ಮೆಡಲಿನ್ ಆಲ್‌ಬ್ರೈಟ್, ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ, ವಿಶ್ವ ನ್ಯಾಯ ಯೋಜನೆಯ ಗೌರವಾಧ್ಯಕ್ಷೆ (ಇರಾಕ್‌ನಲ್ಲಿ ದಿಗ್ಬಂಧನದಿಂದಾಗಿ ಲಕ್ಷಾಂತರ ಮಕ್ಕಳು ಸತ್ತಾಗ, ಪ್ರತಿಕ್ರಿಯೆ)
***
14 ವರ್ಷದ ಒಂದು ಹೆಣ್ಣು ಮಗುವಿನ ಮೇಲೆ ಗುಂಡಿನ ದಾಳಿಯನ್ನು ಯಾರೇ ಮಾಡಿರಲಿ, ಯಾವ ಕಾರಣಕ್ಕೇ ಮಾಡಿರಲಿ ಅದು ಬರ್ಬರ, ಅಮಾನವೀಯ. ಅದನ್ನು ಬರ್ಬರ ಎಂದು ಕರೆಯುವುದಕ್ಕೆ ಹಿಂದೆ ಮುಂದೆ ನೋಡುವ ಸಮಾಜವನ್ನು ನಾಗರಿಕ ಸಮಾಜ ಅಥವಾ ಮನುಷ್ಯರಿರುವ ಸಮಾಜ ಎಂದು ಕರೆಯುವುದು ಅಸಾಧ್ಯ. ಪಾಕಿಸ್ತಾನದಲ್ಲಿ ಮಲಾಲಾ ಎಂಬ ಪುಟ್ಟ ಮಗುವಿನ ಮೇಲೆ ದುಷ್ಕರ್ಮಿಗಳು ಗುಂಡೆಸೆದಿದ್ದಾರೆ. ಜಗತ್ತಿನಾದ್ಯಂತ ಸಹಜವಾಗಿಯೇ ಖಂಡನೆ, ಆಕ್ರೋಶಗಳು ವ್ಯಕ್ತವಾಗುತ್ತಿವೆ. ಗುಂಡೆಸೆದವರು ಯಾವ ಕಾರಣಕ್ಕೆ ಗುಂಡೆಸೆದರು, ಅವರು ಯಾವ ಸಂಘಟನೆಯವರು ಇತ್ಯಾದಿಗಳೆಲ್ಲ ಅನಂತರದ ವಿಷಯ. ಮೊತ್ತ ಮೊದಲು ನಾವು ಆ ದಾಳಿಯನ್ನು ಖಂಡಿಸಬೇಕಾಗುತ್ತದೆ. ಯಾಕೆಂದರೆ ನಮ್ಮನ್ನು ನಾವು ಮನುಷ್ಯರು ಎಂದು ಈ ಜಗತ್ತಿನಲ್ಲಿ ಕರೆದುಕೊಳ್ಳುತ್ತಿದ್ದೇವೆ.

ಮಲಾಲಾ ಯೂಸುಫ್ ಝಾಯಿ ಶಾಲೆ ಕಲಿಯುವುದಕ್ಕೆ ಬಯಸಿದ್ದಳು. ಮತ್ತು ಆಕೆ ತನ್ನ ಭಾವನೆಗಳನ್ನು ಡೈರಿಯಲ್ಲಿ ತೆರೆದಿಟ್ಟಳು. ಅದು ಮಾಧ್ಯಮದ ಮೂಲಕ ಕಾವ್ಯನಾಮದಲ್ಲಿ ಪ್ರಕಟವಾಯಿತು. ಬಳಿಕ ಆಕೆ ಪಾಕಿಸ್ತಾನಾದ್ಯಂತ ಸುದ್ದಿಯಾದಳು. ತನಗೆ ಎಂತಹ ಪಾಕಿಸ್ತಾನ ಬೇಕು ಎನ್ನುವುದರ ಕುರಿತಂತೆ ತನ್ನ ಕನಸುಗಳನ್ನು ಆಕೆ ತೆರೆದಿಟ್ಟಳು. ಅಷ್ಟೇ ಅಲ್ಲ, ವಯಸ್ಸಿಗೆ ಮೀರಿದ ಗೌರವವನ್ನು ಮಾಧ್ಯಮಗಳು ಮತ್ತು ಪಾಶ್ಚಿಮಾತ್ಯ ಸಂಘಸಂಸ್ಥೆಗಳು ನೀಡಿದವು. ಹತ್ತು ಹಲವು ಪ್ರಶಸ್ತಿಗಳು ಆಕೆಯನ್ನು ಅರಸಿಬಂದವು.ಇದೀಗ ಏಕಾಏಕಿ ಈಕೆಯ ಮೇಲೆ ಗುಂಡಿನ ದಾಳಿ ನಡೆದಿದ್ದು ಇಡೀ ವಿಶ್ವವೇ ಈ ಹೇಯ ಘಟನೆಗೆ ಮರುಗಿದೆ. ಈ ದಾಳಿಯನ್ನು ತಾಲಿಬಾನಿಗಳು ನಡೆಸಿದರು ಎನ್ನುವುದು ಸದ್ಯಕ್ಕೆ ನಾವು ತಿಳಿದುಕೊಂಡಿರುವ ಮಾಹಿತಿ. ಅದು ನಿಜವಾದರೂ, ಸುಳ್ಳಾದರೂ, ದಾಳಿಯಂತೂ ಬರ್ಬರವೆ. ಪಾಶ್ಚಿಮಾತ್ಯ ದೇಶಗಳೂ ಸೇರಿದಂತೆ ವಿಶ್ವದ ಎಲ್ಲ ಮಾನವ ಹಕ್ಕು ಹೋರಾಟಗಾರರು ಮೊದಲ ಬಾರಿಗೆ ದೊಡ್ಡ ದನಿಯಲ್ಲಿ ಬಾಲಕಿಯೊಬ್ಬಳ ಸಾವಿನ ಕುರಿತಂತೆ ಮರುಕ ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ಅಭಿನಂದನೀಯ. ತನ್ನ ಸಂಗೀತ ಜಗತ್ತಿನಲ್ಲಿ ತೇಲಾಡುತ್ತಿರುವ ಮಡೋನ್ನಾ ಮೊದಲ ಬಾರಿಗೆ ಭೂಮಿಗಿಳಿದು ಮಲಾಲಾಳಿಗಾಗಿ ಕಣ್ಣೀರನ್ನು ಹನಿಸಿದ್ದಾರೆ.ಅಷ್ಟೇ ಅಲ್ಲ, ತನ್ನ ಹಾಡೊಂದನ್ನು ಮಲಾಲಾಳಿಗಾಗಿ ಅರ್ಪಿಸಿದ್ದಾರೆ. ‘‘ಈ ಘಟನೆ ನನ್ನಲ್ಲಿ ಅಳು ತರಿಸಿತು. ಶಾಲೆಗೆ ಹೋಗುವ ಕುರಿತಂತೆ 14 ವರ್ಷದ ಶಾಲಾ ಬಾಲಕಿ ಬ್ಲಾಗ್ ಬರೆದಳು. ಬಾಲಕಿಯ ಬಸ್ಸನ್ನು ತಡೆದು ತಾಲಿಬಾನ್ ಆಕೆಗೆ ಗುಂಡು ಹಾರಿಸಿತು. ಇದು ಎಷ್ಟೊಂದು ಹೀನಾಯ ಎಂಬುದು ನಿಮಗೆ ಗೊತ್ತೆ?’’ ಮಡೋನಾ ಹೇಳದಿದ್ದರೂ ಅದು ಹೀನಾಯವೆ.

ಆದರೆ ಮಡೋನ್ನಾಳಂಥವರು ಕಣ್ಣೀರು ಸುರಿಸಬೇಕಾದರೆ, ತಮ್ಮ ಹಾಡುಗಳನ್ನು ಅರ್ಪಿಸಬೇಕಾದರೆ ಮಲಾಲಾಳಂತಹ ಪುಟಾಣಿಗಳು ಕೇವಲ ಗುಂಡಿನ ದಾಳಿಗೀಡಾದರಷ್ಟೇ ಸಾಕಾಗುವುದಿಲ್ಲ. ಆ ದಾಳಿಯನ್ನು ಯಾರು ಎಸಗಿದರು ಎಂಬುದೂ ಮುಖ್ಯವಾಗುತ್ತದೆ. ಯಾರಿಂದ ಆಕೆ ದಾಳಿಗೊಳಗಾದಳು ಎನ್ನುವುದು ಪಾಶ್ಚಿಮಾತ್ಯರ ಕಣ್ಣೀರನ್ನು, ದುಃಖವನ್ನು ಖಂಡನೆಯನ್ನು ನಿರ್ಧರಿಸುತ್ತದೆ.ಯಾಕೆಂದರೆ ಪಾಕಿಸ್ತಾನದಲ್ಲಿ ಮತ್ತು ಅಫ್ಘಾನಿಸ್ತಾನದಲ್ಲಿ ಮಲಾಲಾಳ ಮೇಲೆ ಗುಂಡಿನ ದಾಳಿ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಅಫ್ಘಾನಿಸ್ತಾನದಲ್ಲಿ ಮತ್ತು ಪಾಕಿಸ್ತಾನದಲ್ಲಿ ಅಮೆರಿಕ ನಡೆಸುತ್ತಿರುವ ಡ್ರೋನ್ ದಾಳಿಯಲ್ಲಿ ನೂರಾರು ನಾಗರಿಕರು ಸಾಯುತ್ತಿದ್ದಾರೆ. ಅವರಲ್ಲಿ ಮಲಾಲಾಳಂತಹ ಶಾಲೆಗೆ ಹೋಗುವ ನೂರಾರು ಮಕ್ಕಳೂ ಸೇರಿದ್ದಾರೆ. ಇದು ಪಾಕಿಸ್ತಾನಕ್ಕೆ ಮಾತ್ರವಲ್ಲ, ಮಲಾಲಾಳಿಗಾಗಿ ಮರುಗಿದ ಯುನಿಸೆಫ್‌ಗೂಗೊತ್ತಿದೆ. ‘‘ಇಂದು ನಮ್ಮ ಯೋಚನೆಗಳು 14 ವರ್ಷದ ಬಾಲಕಿಯರ ಹಕ್ಕುಗಳ ಹೋರಾಟಗಾರ್ತಿಯರ ಜೊತೆಗಿದೆ’’ ಎಂದು ವಿಶ್ವಸಂಸ್ಥೆಯ ಅಂಗವಾದ ಯುನಿಸೆಫ್ ಹೇಳಿದೆ.ಅದು ನಿಜವೇ ಆಗಿದ್ದರೆ, ಪಾಕಿಸ್ತಾನದಲ್ಲಿ ಈವರೆಗೆ ಗುಂಡಿನ ದಾಳಿ ನಡೆದಿರುವುದು ಒಬ್ಬಳೇ ಒಬ್ಬಳು ಮಲಾಲಾಳ ಮೇಲೆಯೆ? ಅಂದರೆ ಈವರೆಗೆ ಪಾಕಿಸ್ತಾನದ, ಅಫ್ಘಾನಿಸ್ತಾನದಲ್ಲಿ ಡ್ರೋನ್ ದಾಳಿಗೆ ಮೃತಪಟ್ಟ ಮಕ್ಕಳ ಬರ್ಬರ ಸಾವನ್ನು ಯುನಿಸೆಫ್ ಸಮರ್ಥನೀಯ ಎಂದು ಹೇಳುತ್ತಿದ್ದೆಯೆ? ಈ ಸಾವಿನ ಕುರಿತಂತೆ ಮೌನ ವಹಿಸಿದ ಯುನಿಸೆಫ್‌ಗೆ ಮಲಾಲಾಳ ಸಾವಿನ ಕುರಿತಂತೆ ಹೇಳಿಕೆ ನೀಡುವ ನೈತಿಕತೆಯಿದೆಯೆ? ಇರಾಕ್‌ನಲ್ಲಿ ಇಂತಹ ಸಾವಿರಾರು ಮಲಾಲಾರು ಬರ್ಬರವಾಗಿ ಹತ್ಯೆಗೀಡಾದರು. ಮಗುವೊಂದು ಶಾಲೆಗೆ ಹೋಗಲು ಸಿದ್ಧವಾಗುತ್ತಿದ್ದ ಹಾಗೆಯೇ ನ್ಯಾಟೋ ಬಾಂಬುಗಳ ಮನೆಯ ಮುಂದೆರಗಿ, ಆ ವಿದ್ಯಾರ್ಥಿಯೂ ಸೇರಿದಂತೆ ಇಡೀ ಕುಟುಂಬ ಸರ್ವನಾಶವಾಯಿತು.

ಇರಾನ್ ಮತ್ತು ಇರಾಕ್‌ನ ಮೇಲಿನ ದಿಗ್ಬಂಧನದಿಂದ ಅತಿ ಹೆಚ್ಚು ಮರಣ ಸಂಭವಿಸಿದ್ದು ಎಳೆ ಮಕ್ಕಳದ್ದು. ಅವರಲ್ಲಿ ಹೆಣ್ಣು ಮಕ್ಕಳೂ ಇದ್ದರು. ಇರಾಕ್ ಯುದ್ಧದಲ್ಲಿ ಅಮೆರಿಕ ದಾಳಿಯಿಂದ ಸತ್ತದ್ದು ಸದ್ದಾಂ ಮತ್ತು ಆತನ ಹಿಂಬಾಲಕರಲ್ಲ. ಸುಮಾರು 2 ಲಕ್ಷಕ್ಕೂ ಅಧಿಕ ನಾಗರಿಕರು. ಸಹಸ್ರಾರು ಮಕ್ಕಳ ಶಾಲೆಯ ಕನಸುಗಳೂ ಆ ದಾಳಿಯಲ್ಲಿ ಸರ್ವನಾಶವಾದವು. ಆ ಅಷ್ಟು ಮಕ್ಕಳಿಗೆ ಅರ್ಪಿಸಲು ಬೇಕಾಗುವಷ್ಟು ಹಾಡುಗಳು ಮಡೋನ್ನಾ ಬಳಿ ಇದೆಯೆ? ಅಫ್ಘಾನಿಸ್ತಾನದ ಕಾಬೂಲಿನಲ್ಲಿ ಅಡುಗೆಗಾಗಿ ಕಟ್ಟಿಗೆಗಳನ್ನು ಸಂಗ್ರಹಿಸುತ್ತಿದ್ದ ಒಂಬತ್ತು ಮಂದಿ ಹುಡುಗರನ್ನು ನ್ಯಾಟೋ ಪಡೆಗಳು ಕ್ಷಿಪಣಿ ದಾಳಿಯ ಮೂಲಕ ಕೊಂದು ಹಾಕಿದವು. ಇದನ್ನು ನ್ಯಾಟೋ ಪಡೆ ಒಪ್ಪಿಕೊಂಡಿತು ಕೂಡ.ಇದಾಗಿ ಒಂದು ವರ್ಷವಾಗಿದೆ. ಈ ಅವಧಿಯಲ್ಲಿ ಡ್ರೋನ್ ದಾಳಿಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಸಾವಿರಾರು ನಾಗರಿಕರು ಮೃತಪಟ್ಟಿದ್ದಾರೆ. ಅವರಲ್ಲಿ ಮಕ್ಕಳೂ ಸೇರಿದ್ದಾರೆ. ಈ ಘಟನೆಯನ್ನು ತಾಲಿಬಾನ್ ಮಾಡಿದ್ದಿದ್ದರೆ ಅದು ಕಣ್ಣೀರಿಡುವ ವಸ್ತುವಾಗುತ್ತಿತ್ತು. ಚರ್ಚೆಗೆ, ಖಂಡನೆಗೆ ಅರ್ಹವಾಗುತ್ತಿತ್ತು. ಆದರೆ ಇದನ್ನು ಮಾಡಿರುವುದು ನಾಗರಿಕನೆಂದು ಕರೆಸಿಕೊಂಡಿ ರುವ ಅಮೆರಿಕ. ಇರಾಕ್‌ನಲ್ಲಿ ಯುದ್ಧದಿಂದ ಲಕ್ಷಾಂತರ ಮಕ್ಕಳು ಮೃತಪಟ್ಟಾಗ ‘‘ಹೌದು, ಇದನ್ನು ನಾವು ಸಮರ್ಥನೀಯ ಎಂದೇ ಭಾವಿಸಿದ್ದೇವೆ’’ ಎಂದು ಅಂದಿನ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೆಡಲಿನ್ ಹೇಳಿಕೆ ನೀಡಿದರು. ಈ ಹೇಳಿಕೆಯನ್ನು ನೀಡುವ ಧೈರ್ಯ ತೋರಿಸಿದ್ದಕ್ಕಾಗಿಯೇ ಆಕೆಯನ್ನು ವಿಶ್ವ ನ್ಯಾಯ ಯೋಜನೆಯ ಗೌರವಾಧ್ಯಕ್ಷೆಯಾಗಿ ಗೌರವಿಸಲಾಯಿತು. ಅಮೆರಿಕ ಮಿತ್ರ ಪಡೆ ಇರಾಕ್‌ನಲ್ಲಿ ನಡೆಸಿದ ಯುದ್ಧಕ್ಕೆ ಬಲಿಯಾದ ಎರಡು ಲಕ್ಷಕ್ಕೂ ಅಧಿಕ ನಾಗರಿಕರಲ್ಲಿ ಶೇ. 46ರಷ್ಟು ಮಹಿಳೆಯರು. ಮತ್ತು ಶೇ. 39ರಷ್ಟು ಮಕ್ಕಳು ಎಂದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನ ವರದಿ ತಿಳಿಸುತ್ತದೆ. ಇರಾಕ್ ಬಾಡಿ ಕೌಂಟ್‌ನ ಅಧಿಕೃತ ವರದಿಯ ಪ್ರಕಾರ ಮೃತ ನಾಗರಿಕರಲ್ಲಿ, 3,911 ಮಂದಿ 18 ವರ್ಷ ಕ್ಕಿಂತ ಕೆಳಗಿನವರು. ಅಮೆರಿಕ ಹಿತಾಸಕ್ತಿಯನ್ನಷ್ಟೇ ಮುಂದಿಟ್ಟುಕೊಂಡು ಇರಾನ್‌ನ ಮೇಲೆ ವಿಧಿಸಿದ ದಿಗ್ಬಂಧನದ ಮೊದಲ ಬಲಿಪಶುಗಳಾಗುತ್ತಿರುವವರೇ ಮಕ್ಕಳು. ಇವರಲ್ಲಿ ನಮಗೆ ಮಲಾಲಾಗಳನ್ನು ಗುರುತಿಸಲು ಯಾಕೆ ಸಾಧ್ಯವಾಗುತ್ತಿಲ್ಲ?

ಈ ಎಲ್ಲ ಕಾರಣದಿಂದಲೇ ಮಲಾಲಾ ಕುರಿತ ಅಮೆರಿಕ ಸಹಿತ ಪಾಶ್ಚಿಮಾತ್ಯ ದೇಶಗಳ ಕಣ್ಣೀರು ಮೊಸಳೆ ಕಣ್ಣೀರಾಗಿ ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಜೊತೆ ಎಡೆಬಿಡದ ಯುದ್ಧದಿಂದ ಬಳಲಿ ಹೋಗಿರುವ ಅಮೆರಿಕ ಮತ್ತು ಅದರ ಬಳಗ, ಯಾರನ್ನೂ ತನ್ನ ಯುದ್ಧಕ್ಕೆ ಗುರಾಣಿಯಾಗಿ ಬಳಸಲು ಹೇಸುವುದಿಲ್ಲ. ಈ ಕಾರಣದಿಂದ ಮಲಾಲಾಳನ್ನು ಪಾಶ್ಚಿಮಾತ್ಯ ದೇಶಗಳು ರಾಜಕೀಯ ಕಾರಣಗಳಿಗೆ ಬಳಸಲು ಮುಂದಾಯಿತೆ? ಎಂಬ ಪ್ರಶ್ನೆ ಎದ್ದಿದೆ. ಅಮೆರಿಕ ತಾಲಿಬಾನ್ ವಿರುದ್ಧ ಮಲಾಲಾಳನ್ನೂ ಒಂದು ಅಸ್ತ್ರವಾಗಿ ಪ್ರಯೋಗಿಸುತ್ತಿದೆಯೆ? ಆಕೆಯ ಡೈರಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿ, ಆ ಮುಗ್ಧ ಬಾಲಕಿಯನ್ನು ಸಾರ್ವಜನಿಕ ವ್ಯಕ್ತಿಯಾಗಿ, ಹೋರಾಟ ಗಾರ್ತಿಯಾಗಿ ಬಿಂಬಿಸಿ, ಅವಳ ಮೇಲಿನ ದಾಳಿಗೆ ಪರೋಕ್ಷವಾಗಿ ಮಾಧ್ಯಮಗಳೂ ಕಾರಣವಾದವೆ? ಏನೂ ಅರಿಯದ ಬಾಲಕಿಯನ್ನು ವಿಶ್ವದ ಕೇಂದ್ರ ಬಿಂದುವಾಗಿ ಮಾರ್ಪಡಿಸಿ, ದುಷ್ಕರ್ಮಿಗಳಿಗೆ ಅಮೆರಿಕವೇ ಬಲಿಕೊಟ್ಟಿತೆ? ಸದ್ಯದ ಅಮೆರಿಕದ ‘ಭಯೋತ್ಪಾದಕರ ವಿರುದ್ಧದ ಹೋರಾಟ’ಕ್ಕೆ ಆಕೆಯೂ ಒಂದು ಸಮಿತ್ತಾದಳೆ? ಯಾವಾಗ ಮಾಧ್ಯಮಗಳು ಆಕೆಯನ್ನು ಸಾರ್ವಜನಿಕವಾಗಿ ತಂದು ನಿಲ್ಲಿಸಿದವೋ ಆಗಲೇ ಆಕೆಗೆ ರಕ್ಷಣೆ ನೀಡಬೇಕಾದುದು ಪಾಕಿಸ್ತಾನ ಸರಕಾರವೂ ಸೇರಿದಂತೆ ಪಾಶ್ಚಿಮಾತ್ಯ ಮಾಧ್ಯಮಗಳ ಕರ್ತವ್ಯವಾಗಿತ್ತು? ಬಹುಶಃ ಅಮೆರಿಕಕ್ಕೆ ತನ್ನ ಹೋರಾಟಕ್ಕಾಗಿ ಒಂದು ಪುಟಾಣಿಯ ಬಲಿ ಬೇಕಾಗಿತ್ತೆ? ಅಥವಾ ತಮ್ಮ ದಾಳಿಯಿಂದಾಗಿ ಬಲಿಯಾಗುತ್ತಿರುವ ನೂರಾರು ಅಮಾಯಕ ಮಕ್ಕಳ ಸಾವುಗಳನ್ನು ಮಲಾಲಾಳಿಗಾಗಿ ಕಣ್ಣೀರು ಸುರಿಸುವ ಮೂಲಕ ಸರಿದೂಗಿಸುತ್ತಿದ್ದಾರೆಯೆ? ನಾವು ತೀರಾ ಭಾವುಕವಾಗಿ ಆಲೋಚಿಸುವ ಮೊದಲು ಈ ಪ್ರಶ್ನೆಗಳಿಗೆಲ್ಲಾ ಉತ್ತರ ಕಂಡುಕೊಳ್ಳಬೇಕಾಗಿದೆ.

 ಮಲಾಲಾ ಪ್ರಕರಣ ಬರೇ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಮಾತ್ರ ನಡೆಯಬೇಕಾಗಿಲ್ಲ. ಅಂತಹದ್ದು ಭಾರತದಲ್ಲೂ, ಕರಾವಳಿಯ ಮಂಗಳೂರಿನಲ್ಲೂ ನಡೆಯಬಹುದು ಎಂದು ನಾನು ಭಾವಿಸಿದ್ದೇನೆ. ಒಂದು ಸಂದರ್ಭದಲ್ಲಿ ಮಂಗಳೂರಿನಂತಹ ಬುದ್ಧಿವಂತರ ಜಿಲ್ಲೆಯಲ್ಲೇ ಮುಸ್ಲಿಮ್ ಹೆಣ್ಣು ಮಕ್ಕಳು ವಿದ್ಯೆ ಕಲಿಯುವುದು ಕಷ್ಟವೆನ್ನುವಂತಹ ವಾತಾವರಣವಿತ್ತು. ಇದೀಗ ಈ ಪ್ರದೇಶದಲ್ಲಿ ಮುಸ್ಲಿಮ್ ಬಾಲಕಿಯರು ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ ಮಾತ್ರವಲ್ಲ, ರ್ಯಾಂಕ್‌ಗಳನ್ನೂ ಗಳಿಸುತ್ತಿದ್ದಾರೆ. ಇದನ್ನೊಂದು ಅಭಿನಂದನೀಯ ಬೆಳವಣಿಗೆ ಎಂದು ಸಮಾಜ ಸ್ವಾಗತಿಸಬೇಕಾಗಿತ್ತು. ಆದರೆ, ಇಂದು ಇದೇ ಬಾಲಕಿಯರನ್ನು ಸ್ಕಾರ್ಫ್‌ನ ಹೆಸರಲ್ಲಿ ಶಾಲೆಯಿಂದ ಹೊರಗೆ ಹಾಕುವಂತಹ ಸನ್ನಿವೇಶ ನಿರ್ಮಾಣವಾಗಿದೆ. ರಾಮಕುಂಜ, ಸುಬ್ರಹ್ಮಣ್ಯ, ಬಂಟ್ವಾಳ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಸ್ಕಾರ್ಫ್ ಧರಿಸಿದ ಹೆಣ್ಣು ಮಕ್ಕಳು ವಿದ್ಯೆ ಕಲಿಯಲು ಅನರ್ಹರು ಎಂದು ತೀರ್ಮಾನಿಸಿರುವುದು ವಿದ್ಯೆ ಕಲಿತ ಶಿಕ್ಷಕರೇ ಆಗಿದ್ದಾರೆ. ಇವರು ಯಾರೂ ತಾಲಿಬಾನ್ ಸಂಘಟನೆಯಿಂದ ಹೊರಬಂದವರಲ್ಲ. ಮನೆಯಲ್ಲಿ ತಂದೆತಾಯಿಗಳನ್ನು ಮನವೊಲಿಸಿ ಶಾಲೆಕಲಿಯಬೇಕು ಎಂಬ ಆಸೆಯಿಂದ ಶಾಲೆಯ ವಠಾರಕ್ಕೆ ಕಾಲಿಟ್ಟರೆ ಅವರನ್ನು ಸ್ಕಾರ್ಫ್ ಹೆಸರಿನಲ್ಲಿ ಶಾಲೆಯಿಂದ ಹೊರಗೆ ಹಾಕುವ ಉಪಾಧ್ಯಾಯರು, ಶಾಲಾ ಸಂಘಟಕರೂ ಉಗ್ರವಾದಿಗಳೇ ಅಲ್ಲವೆ? ಮಲಾಲಾ ಮೇಲೆ ಯಾವ ಕಾರಣಕ್ಕೆ ಹಲ್ಲೆಯಾಯಿತೋ ಅದೇ ಕಾರಣಕ್ಕೆ ಇಲ್ಲೂ ಹಲ್ಲೆಯಾಗುತ್ತಿದೆ.

ನಾವು ಕಣ್ಣೀರಿಡುವುದಕ್ಕೆ, ಹೋರಾಟ ಮಾಡುವುದಕ್ಕೆ ಸಾವಿರಾರು ಮಲಾಲಾಗಳು ನಮ್ಮ ನೆಲದಲ್ಲೇ ಇದ್ದಾರೆ. ತಾಲಿಬಾನ್ ಸಂಘಟನೆಯಿಂದ ದಾಳಿ ನಡೆದರೆ ಮಾತ್ರ ಅವರ ಪರವಾಗಿ ಧ್ವನಿಯೆತ್ತಬೇಕು ಎಂಬ ಪೂರ್ವಾಗ್ರಹ ಪೀಡಿತ ಮನಸ್ಥಿತಿಯಿಂದ ಹೊರಬಂದು, ನಮ್ಮ ನಡುವಿರುವ ಮಲಾಲಾರ ಕುರಿತಂತೆಯೂ ಮಾತನಾಡುವ ಆರೋಗ್ಯಕರ ಮನಸ್ಸನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ. ಮಲಾಲಾ ಆದಷ್ಟು ಬೇಗ ಗುಣಮುಖಳಾಗಿ ಮತ್ತೆ ಶಾಲೆಗೆ ಸೇರುವಂತಾಗಲಿ. ಮಲಾಲಾ ಆರೋಗ್ಯ ಒಂದು ರೂಪಕವಾಗಿದೆ. ಅದನ್ನು ರಾಜಕೀಯಗೊಳಿಸದೆ, ಮಾನವೀಯ ದೃಷ್ಟಿಯಿಂದ ನೋಡುತ್ತಾ, ನಮ್ಮ ನಮ್ಮ ಸಮಾಜಕ್ಕೆ ಅನ್ವಯಗೊಳಿಸಬೇಕಾಗಿದೆ.

Tuesday, October 16, 2012

ಬಟ್ಟೆ ಮತ್ತು ಇತರ ಕತೆಗಳು

ಹಸಿವೆ
ಆ ಊರು ಬರಗಾಲದಿಂದ ತತ್ತರಿಸುತ್ತಿತ್ತು.
ಆಹಾರವಿಲ್ಲದೆ ಗತಿಗೆಟ್ಟ ಕುಟುಂಬ ಕಟ್ಟಕಡೆಗೆ ತನ್ನ ಮಗುವನ್ನು ಒಂದು ಕಿಲೋ ಅಕ್ಕಿಗೆ ಮಾರಿ, ಪೊಲೀಸರಿಂದ ಬಂಧನಕ್ಕೊಳಗಾಯಿತು.
ಅಭಿವೃದ್ಧಿ ತುಂಬಿ ತುಳುಕುವ ನಗರ ಅದು.
ಒಬ್ಬ ತಾಯಿ ತನ್ನ ಮಗುವನ್ನು ಮಾರಿ, ಅದಾಗಲೇ ಮಾರುಕಟ್ಟೆಗೆ ಬಂದ ಹೊಸ ಮೊಬೈಲ್ ಕೊಂಡುಕೊಂಡಳು.

ಆದೇಶ
ಸರಕಾರ ಆದೇಶ ನೀಡಿತು ‘‘ಇನ್ನು ಮುಂದೆ ರೈತರು ಗದ್ದೆ ತೋಟಗಳಿಗೆ ನದಿಯ ನೀರನ್ನು ಬಳಸುವಂತಿಲ್ಲ’’
ಹಾಗೆಂದು ಆದೇಶ ನೀಡಿದ ಜಿಲ್ಲಾಧಿಕಾರಿಯ ಮನೆ ಮುಂದಿನ ಉದ್ಯಾನವನಕ್ಕೆ ಒಂದು ದಿನ ನೀರು ಹನಿಸದ ಕಾರಣಕ್ಕೆ ಮಾಲಿ ಕೆಲಸ ಕಳೆದುಕೊಂಡ.

ಮಂಗಳ
‘‘ಅಪ್ಪಾ ಮಂಗಳನಲ್ಲಿ ನೀರಿದೆ ಅಂತಾರೆ. ಒಂದು ವೇಳೆ ಮಂಗಳ ಗ್ರಹದಲ್ಲಿ ನಿಜಕ್ಕೂ ನೀರಿದ್ರೆ ಅದು ಯಾರಿಗೆ ಸೇರತ್ತೆ....ಅಮೆರಿಕಕ್ಕೋ...ನಮ್ಮೆಲ್ಲರಿಗೋ...’’
ಮಗ ಮುಗ್ಧವಾಗಿ ಕೇಳಿದ.
‘‘ಅದನ್ನು ಮತ್ತೊಂದು ಯುದ್ಧ ನಿರ್ಧರಿಸುತ್ತೆ ಮಗ...’’ ಅಪ್ಪ ನಿರ್ಲಿಪ್ತವಾಗಿ ಉತ್ತರಿಸಿದ.
‘‘ಹಾಗಾದರೆ ಅದನ್ನು ನಾವು ಅಮಂಗಳ ಗ್ರಹ ಎಂದೇ ಕರೆಯುವುದು ಒಳ್ಳೆಯದಲ್ವ ಅಪ್ಪಾ...’’ ಮಗ ಆತಂಕದಿಂದ ಕೇಳಿದ.

ದಾರಿ
ಸಂತ ಪ್ರಯಾಣ ಹೋರಟಿದ್ದ.
ಶಿಷ್ಯ ಹೇಳಿದ ‘‘ದಾರಿಯಲ್ಲಿ ಒಂದು ಮರವೂ ಇಲ್ಲ...ಬರೇ ಬಿಸಿಲು...ಪ್ರಯಾಣ ಕ್ಷಷ್ಟ...’’
ಸಂತ ಹೇಳಿದ ‘‘ಸರಿ ಪ್ರಯಾಣದುದ್ದಕ್ಕೂ ನಾವು ದಾರಿಯ ಇಕ್ಕೆಡೆಗಳಲ್ಲಿ ಸಸಿಗಳನ್ನು ನೆಡುತ್ತಾ ಮುಂದೆ ಸಾಗುವ...’’
ಮುಂದೆ ಆ ಗಿಡಗಳೆಲ್ಲ ಬೆಳೆದು ಮರವಾದವು. ನೆರಳಿನ ಕಾರಣಕ್ಕಾಗಿ ಸಂತ ನಡೆದ ದಾರಿಯಲ್ಲಿ ಈಗ ನೂರಾರು ಜನರು ನಡೆಯುತ್ತಿದ್ದಾರೆ.

ನಕ್ಷೆ
ಸಂತ ಪ್ರಯಾಣ ಹೊರಟ.
ಶಿಷ್ಯ ಹೇಳಿದ ‘‘ಗುರುಗಳೇ...ನೀವು ಹೋಗುವ ಊರಿನ ನಕ್ಷೆ ಇಟ್ಕೊಂಡಿದ್ದೀರಾ?’’
ಸಂತ ನಕ್ಕ ‘‘ನಾನು ಪ್ರಯಾಣ ಹೊರಟ ದಾರಿಯೇ ನಕ್ಷೆಯ ರೂಪ ಪಡೆಯತ್ತೆ’’ ಹೊರಗೆ ಹೆಜ್ಜೆಯಿಟ್ಟ.

ಅಪಘಾತ
ಅಪಘಾತವಾಗಿತ್ತು. ಆತ ವಿಲವಿಲನೆ ಒದ್ದಾಡುತ್ತಿದ್ದ.
ಯಾರೋ ಆತನನ್ನು ಆಸ್ಪತ್ರೆಗೆ ಒಯ್ಯಲು ಯತ್ನಿಸುತ್ತಿದ್ದರು.
ಅಷ್ಟರಲ್ಲಿ ಅಲ್ಲಿಗೆ ಬಂದ ಚಾನೆಲ್ ವರದಿಗಾರ ಹೇಳಿದ ‘‘ಸ್ವಲ್ಪ ನಿಲ್ಲಿ. ಇನ್ನೊಂದು ಐದು ನಿಮಿಷದಲ್ಲಿ ನಮ್ಮ ಕ್ಯಾಮರಾಮೆನ್ ಬರ್ತಾನೆ’’

ಕಳ್ಳ
ಒಬ್ಬ ಕಳ್ಳ ಜೈಲಿನಿಂದ ತಪ್ಪಿಸಿಕೊಂಡು ಬಂದು ಸಂತನ ಆಶ್ರಮದಲ್ಲಿ ಅವಿತುಕೊಂಡ.
ಕೆಲ ದಿನ ಅಲ್ಲೇ ಇದ್ದು, ಅಲ್ಲಿನ ವಾತಾವರಣ ಅವನ ಮನಸ್ಸನ್ನು ಬದಲಿಸಿತು. ಕಳ್ಳ ಸಂತನಿಂದ ಶಿಷ್ಯತ್ವ ಸ್ವೀಕರಿಸಿದ.
ಒಂದು ದಿನ ಕಳ್ಳ ಆಶ್ರಮದಲ್ಲಿರುವುದು ಪೊಲೀಸರಿಗೆ ತಿಳಿಯಿತು. ಪೊಲೀಸರು ಆಶ್ರಮಕ್ಕೆ ಬಂದು, ಸಂತನಲ್ಲಿ ಕೇಳಿದರು ‘‘ಇಲ್ಲೊಬ್ಬ ಕಳ್ಳ ಇದ್ದಾನೆಯೆ?’’
‘‘ಹೌದು ಇದ್ದಾನೆ’’ ಸಂತ ಹೇಳಿದ.
‘‘ಎಲ್ಲಿದ್ದಾನೆ?’’ ಪೊಲೀಸರು ಕೇಳಿದರು.
‘‘ನಾನೇ ಕಳ್ಳ. ಒಬ್ಬ ಕಳ್ಳನ ಮನಸ್ಸನ್ನು ಕದ್ದ ದೊಡ್ಡ ಕಳ್ಳ’’ ಸಂತ ಹೇಳಿದ.

ಬಟ್ಟೆ
‘‘ಈ ಹೊಸ ಬಟ್ಟೆಯಲ್ಲಿ ನಾನು ಹೇಗೆ ಕಾಣುತ್ತೇನೆ...’’ ಅವಳು ಕೇಳಿದಳು.
‘‘ನಿನ್ನಿಂದಾಗಿ ಈ ಹೊಸ ಬಟ್ಟೆ ಚೆಂದ ಕಾಣುತ್ತಿದೆ’’ ಜಾಣ ಹುಡುಗ ಉತ್ತರಿಸಿದ.
ಹುಡುಗಿ ಅರಳಿದಳು.

ಕರೆ

ಶಿಷ್ಯ ಸಂತನಲ್ಲಿ ಬಂದು ಕೇಳಿದ ‘‘ಕರೆದಿರಾ?’’
‘‘ಇಲ್ಲವಲ್ಲ’’ ಸಂತ ಹೇಳಿದ.
‘‘ನೀವು ಕರೆದಂತಾಯಿತು...’’ ಶಿಷ್ಯ ಹೇಳಿದ.
‘‘ಹಾಗಾದರೆ ನಾನು ಕರೆದಿರಲೂ ಸಾಕು’’ ಸಂತ ಉತ್ತರಿಸಿದ.

Sunday, October 7, 2012

ಇಂಗ್ಲಿಷ್ ವಿಂಗ್ಲಿಷ್: ಹೃದಯಸ್ಪರ್ಶಿ ಶ್ರೀದೇವಿ ಚಿತ್ರ

ಇಂಗ್ಲಿಷ್ ಇಂದು ಪ್ರತಿ ಮನೆಯನ್ನು ಪ್ರವೇಶಿಸಿದೆ. ತಂದೆ ಮಕ್ಕಳ ನಡುವೆ, ತಾಯಿ ಕುಟುಂಬದ ನಡುವೆ ಅದು ಗೋಡೆಗಳನ್ನು ಕಟ್ಟುತ್ತಿವೆ. ಸಂವಹನನದಲ್ಲೇ ಕೆಲವು ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ಈ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತಲೇ, ಒಬ್ಬ ಗೃಹಿಣಿ ಇಂಗ್ಲಿಷ್ ಸವಾಲುಗಳನ್ನು ಎದುರಿಸಿ, ಮನೆಯನ್ನು ಸಮಾಜವನ್ನು ತನ್ನದನ್ನಾಗಿ ಮಾಡಿಕೊಳ್ಳುವ ಕತೆಯೇ ಶ್ರೀದೇವಿ ಕತಾನಾಯಕಿಯಾಗಿ ನಟಿಸಿರುವ ಚಿತ್ರ ‘ಇಂಗ್ಲಿಷ್ ವಿಂಗ್ಲಿಷ್’.

ಶಶಿ ಗೋಡ್‌ಬೋಲೆ ಸಾಮಾನ್ಯ ಮೇಲ್ಮಧ್ಯಮ ವರ್ಗಕ್ಕೆ ಸೇರಿದ ಎರಡು ಮಕ್ಕಳ ತಾಯಿ. ಅವರು ಲಾಡು ಮಾಡುವುದರಲ್ಲಿ ಪರಿಣತರು. ಲಾಡು ತಯಾರಿಕೆಯಲ್ಲಿ ಅವರು ಎಷ್ಟು ಪರಿಣತರೆಂದರೆ ಅದರ ವ್ಯಾಪಾರವನ್ನೂ ಮಾಡುತ್ತಾರೆ.ಆದರೆ ಅವರಲ್ಲಿ ಇಲ್ಲದಿರುವ ಒಂದು ಪರಿಣತಿಯೆಂದರೆ ಇಂಗ್ಲಿಷ್ ಮಾತನಾಡುವುದು. ಇದರಿಂದಾಗಿ ಆಕೆ ಸ್ವತಃ ಗಂಡ, ಮಕ್ಕಳ ಪಾಲಿಗೇ ತಮಾಷೆಯ ವಸ್ತುವಾಗುತ್ತಾಳೆ. ಗಂಡ (ಆದಿಲ್ ಹುಸೇನ್) ಮತ್ತು ಹದಿ ಹರಯದ ಮಗಳ (ನವಿಕಾ ಕೋಟಿಯ) ಜೊತೆಗೆ ಸಂಘರ್ಷಕ್ಕೂ ಕಾರಣವಾಗುತ್ತದೆ. ಇಂಗ್ಲಿಷ್ ಶ್ರೇಷ್ಠತೆಯ ಭ್ರಮೆ ಮತ್ತು ಅದರಲ್ಲಿ ಸಿಕ್ಕಿ ನಲುಗಾಡುವ ಭಾರತೀಯ ಮಹಿಳೆಯ ಹೃದಯ ಹಿಂಡುವ ಕತೆಯನ್ನು ಅತ್ಯಂತ ತಮಾಷೆಯಾಗಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಶ್ರೀದೇವಿಗಾಗಿ ಈ ಚಿತ್ರವೋ, ಅಥವಾ ಈ ಚಿತ್ರಕ್ಕಾಗಿ ಶ್ರೀದೇವಿಯೋ ಎಂಬಂತೆ ಅವಿನಾಭಾವವಾಗಿ ಗೃಹಿಣಿ ಪಾತ್ರದಲ್ಲಿ ಕರಗಿ ಹೋಗಿದ್ದಾರೆ ಶ್ರೀದೇವಿ.

ಅನಿರೀಕ್ಷಿತವಾಗಿ ಅಮೆರಿಕಕ್ಕೆ ಹೋಗುವ ಅವಕಾಶವನ್ನು ಪಡೆದ ಶಶಿ ಗೋಡ್‌ಬೋಲೆ, ಅಲ್ಲಿ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್‌ಗೆ ಸೇರುವ ಮೂಲಕ ನಿಜವಾದ ಕತೆ ತೆರೆದುಕೊಳ್ಳುತ್ತದೆ. ಅಲ್ಲಿ ಸ್ಪಾನಿಶ್ ಅಜ್ಜಿ ಇವಾ (ರುತ್ ಅಗ್ವಿಲರ್), ತಮಿಳು ಸಾಫ್ಟ್‌ವೇರ್ ಎಂಜಿನಿಯರ್ ರಾಮ (ರಾಜೀವ್ ರವೀಂದ್ರನಾಥನ್), ಚೀನೀ ಸೌಂದರ್ಯ ತಜ್ಞೆ ಯೂ ಸನ್ (ಮರಿಯಾ ರೊಮಾನೊ), ಫ್ರೆಂಚ್ ಅಡುಗೆಯವ ಲಾರಂಟ್ (ಮೆಹದಿ ನೆಬೂ), ಪಾಕಿಸ್ತಾನಿ ಕ್ಯಾಬ್ ಚಾಲಕ ಸಲ್ಮಾನ್ ಖಾನ್ (ಸುಮೀತ್ ವ್ಯಾಸ್) ಮತ್ತು ಆಫ್ರಿಕನ್ ಡ್ಯಾನ್ಸರ್ ಉಡುಂಬ್ಕೆ ಮುಂತಾದವರು ಶಶಿ ಗೋಡ್‌ಬೋಲೆಯ ಸಂಕಟದಲ್ಲಿ ಜೊತೆಯಾಗುತ್ತಾರೆ. ಇಂಗ್ಲಿಷ್ ಶಿಕ್ಷಕ ಡೇವಿಡ್ (ಕೋರಿ ಹಿಬ್ಸ್) ಮೂಲಕ ತಮ್ಮ ದೌರ್ಬಲ್ಯಗಳನ್ನು ಮೀರಿ ನಿಲ್ಲಲು ಹವಣಿಸುತ್ತಾರೆ. ಒಂದು ರೀತಿಯಲ್ಲಿ ಈ ಪಾತ್ರ, ತನ್ನ ಅಸ್ತಿತ್ವವನ್ನು ಹೊಸದಾಗಿ ಹುಡುಕಿಕೊಳ್ಳುವ ಪ್ರಯತ್ನವೂ ಆಗಿದೆ. ಗೃಹಿಣಿಯಾಗಿ ಸಂತೃಪ್ತಮನೋಭಾವದಲ್ಲಿ ಮುಗಿದು ಹೋಗಿರುವ ಪಾತ್ರ, ಇಂಗ್ಲಿಷ್ ಮೂಲಕ ಮರು ಜೀವ ಪಡೆಯುತ್ತದೆ. ಮಗಳೊಂದಿಗಿನ ಸಂಬಂಧವನ್ನು ಮತ್ತೆ ಗಟ್ಟಿಗೊಳಿಸುವುದಕ್ಕೂ ಇದು ಸಹಾಯ ಮಾಡುತ್ತದೆ. ಉಳಿದ ಪಾತ್ರಗಳ ಮೂಲಕ ತನ್ನನ್ನು ತಾನು ಗಟ್ಟಿಗೊಳಿಸುತ್ತಾ ಹೋಗುತ್ತಾಳೆ ಶಶಿ. ಇದೊಂದು ರೀತಿಯಲ್ಲಿ ಎನ್‌ಆರ್‌ಐ ಕನಸುಗಳ ನಡುವೆ ಒದ್ದಾಡುವ ಪ್ರತಿ ಭಾರತೀಯ ಮಹಿಳೆಯ ಕತೆಯೂ ಹೌದು. ಬಹುಶಃ ಇದು ಸ್ತ್ರೀ ಸಂವೇದನೆ, ಮಹಿಳಾ ಸಬಲೀಕರಣದ ಉದ್ದೇಶ ಹೊಂದಿರುವ ಇತ್ತೀಚೆಗೆ ಬಂದ ಅತ್ಯುತ್ತಮ ಚಿತ್ರ ಎನ್ನುವುದರಲ್ಲಿ ಯಾವುದೇ ಅನುಮಾನವಲ್ಲ.

ಇದು ಗೌರಿ ಶಿಂದೆ ನಿರ್ದೇಶನದ ಮೊದಲ ಚಿತ್ರ. ಈವರೆಗೆ ಜಾಹೀರಾತು ಚಿತ್ರಗಳನ್ನು ನಿರ್ಮಿಸುತ್ತಿದ್ದ ಗೌರಿ ಈಗ ಸಿನೇಮಾ ಕತೆಗಾರ್ತಿ ಹಾಗೂ ನಿರ್ದೇಶಕಿಯಾಗಿಯೂ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅದರ ಫಲಿತಾಂಶವೇ ಸುಂದರ, ಸೂಕ್ಷ್ಮ ಮತ್ತು ಅತ್ಯುತ್ತಮ ಈ ಚಿತ್ರ. ಈ ಚಿತ್ರ ನಿಮ್ಮನ್ನು ನಗಿಸುತ್ತದೆ, ಅಳಿಸುತ್ತದೆ ಮತ್ತು ಚಿಂತಿಸುವಂತೆಯೂ ಮಾಡುತ್ತದೆ. ಇಲ್ಲಿನ ಯಾವ ಪಾತ್ರಗಳೂ ಕೃತಕವಾಗಿಲ್ಲ. ತೀರಾ ಸಹಜವಾಗಿ, ಮನಮುಟ್ಟುವಂತಿದೆ.

ಅಮಿತ್ ತ್ರಿವೇದಿಯ ಸಂಗೀತ ಪ್ರೇಕ್ಷಕರನ್ನು ಮತ್ತೆ ಮತ್ತೆ ಗುನುಗುಟ್ಟುವಂತೆ ಮಾಡುತ್ತದೆ. ಸಂಗೀತ ಸಹಜವಾಗಿ ಹರಿಯುತ್ತದೆ.
ಶ್ರೀದೇವಿ ಚಿತ್ರದ ಆಧಾರಸ್ತಂಭ. ಕಾತರತೆ, ಕೋಪ, ಅಹಂಕಾರ, ದುಃಖ, ಆಕರ್ಷಣೆ ಯಾವುದೇ ಇರಲಿ, ನಟಿ ಮಾತುಗಳಿಂದ ಅಥವಾ ಮಾತುಗಳಿಲ್ಲದೆಯೂ ಭಾವನೆಗಳನ್ನು ಲೀಲಾಜಾಲವಾಗಿ ಹರಿಯಬಿಡುತ್ತಾರೆ. 15 ವರ್ಷಗಳ ಬಿಡುವಿನ ಬಳಿಕ ಬೆಳ್ಳಿ ತೆರೆಗೆ ಬಂದಿರುವ ಶ್ರೀದೇವಿಯ ನಟನೆ ಇಲ್ಲಿ ಅದ್ಭುತವಾಗಿದೆ. ಎಷ್ಟೆಂದರೆ ಚಿತ್ರ ಮುಗಿದ ತುಂಬಾ ಹೊತ್ತಿನ ಬಳಿಕವೂ ನೀವು ಅದೇ ಗುಂಗಿನಲ್ಲಿರುತ್ತೀರಿ.

Thursday, October 4, 2012

"ಓ ಮೈ ಗಾಡ್!": ಕಲಕಿದ ಚಿತ್ರ

 
 "ಓ ಮೈ ಗಾಡ್!" ಹಿಂದಿ ಚಿತ್ರ ನೋಡಿದೆ. ಒಂದು ಹಾಸ್ಯ ಚಿತ್ರವೆಂದು ಭಾವಿಸಿ ಒಳ ಹೊಕ್ಕ ನನ್ನ ಮನದ ಆಳವನ್ನು ಹಾಸ್ಯದ ಗರುಡ ಪಾತಾಳ ಹಾಕಿ ಕಲಕಿದ ಚಿತ್ರ ಇದು. ಆಸ್ತಿಕರು, ನಾಸ್ತಿಕರು ಜೊತೆಯಾಗಿ ಕೂತು ನೋಡಬೇಕಾದ ಚಿತ್ರ. ದೇವರ ನಂಬಿಕೆಯನ್ನು ಛಿದ್ರಗೊಳಿಸುತ್ತ ನಿಮ್ಮ ಎದೆಯಲ್ಲಿ ನಿಜವಾದ ದೇವರೊಂದನ್ನು ಈ ಚಿತ್ರ ಪ್ರತಿಷ್ಟ್ಹಾಪಿಸುತ್ತದೆ. ಪರೇಶ್ ರಾವೆಲ್ ನಿಜಕ್ಕೂ ಪರೇಶ್ ರಾವೆಲ್ ಥರವೇ ನಟಿಸಿದ್ದಾರೆ. ಅಕ್ಷಯ್ ಕುಮಾರ್, ದೇವರೇ ಕೃಷ್ಣನ ರೂಪದಲ್ಲಿ ಧರೆಗಿಳಿದು ಬಂದಂತೆ...ಹಿತವಾಗಿ, ಹದವಾಗಿ, ಎಲ್ಲೂ ಪಾತ್ರದ ಗಾಂಭೀರ್ಯ ಕೆಡದಂತೆ ನಟಿಸಿದ್ದಾರೆ. ಹಾಂ...ಹೇಳಲು ಮರೆತೇ....ಇಡೀ ಚಿತ್ರದಲ್ಲಿ ರವಿಶಂಕರ್ ಗುರೂಜಿಯನ್ನು ಹೋಲುವ ಪಾತ್ರದಲ್ಲಿ ನಟಿಸಿದ ಮಿಥುನ್ ಚಕ್ರವರ್ತಿ ಪ್ರೇಕ್ಷಕರಿಗೊಂದು ಬೋನಸ್. ಗುರೂಜಿಯನ್ನು ಪ್ರತಿ ಹೆಜ್ಜೆಯಲ್ಲೂ ಅವರು ಅನುಭವಿಸಿ ನಟಿಸಿದ್ದಾರೆ. ನಗುತ್ತ ನಗುತ್ತ ನಿಮ್ಮ ಕಣ್ಣಿಂದ ಎರಡು ಹನಿ ಕಣ್ಣೀರು ದೇವರ ಹೆಸರಲ್ಲಿ ಉದುರದಿದ್ದರೆ ಮತ್ತೆ ಹೇಳಿ. ಅಂದ ಹಾಗೆ...ಈ ಚಿತ್ರ ಗುಜರಾತಿ ನಾಟಕ "ಕಾಂಜಿ ವರ್ಸಸ್ ಕಾಂಜಿ" ನಾಟಕವನ್ನು ಆಧರಿಸಿದೆ.

Wednesday, October 3, 2012

ಗಾಂಧಿಗೊಂದು ಗುಡಿಯ ಕಟ್ಟಿ...


ಈ ಲೇಖನ ನಾನು ಸೆಪ್ಟಂಬರ್ 12, 2008 ರಲ್ಲಿ ಬರೆದಿರುದು. ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಮತ್ತೆ ಗುಜರಿ ಅಂಗಡಿಗೆ ಹಾಕಿದ್ದೇನೆ.

ಕಳೆದ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ವಿವಿಧ ಮಾಧ್ಯಮಗಳಲ್ಲಿ ವರದಿಯ ರೂಪದಲ್ಲಿ ವಿಚಿತ್ರವೊಂದು ಪ್ರಸಾರಗೊಂಡಿತು. ಅದೇನೆಂದರೆ, ದಾವಣಗೆರೆ, ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ಊರುಗಳಲ್ಲಿ ಗಾಂಧೀಜಿಯ ದೇವಸ್ಥಾನಗಳು ತೆರೆದಿರುವುದು. ಈ ದೇವಸ್ಥಾನಗಳಲ್ಲಿ ಗಾಂಧೀಜಿಯನ್ನು ದೇವರಂತೆ ಪ್ರತಿಷ್ಠಾಪಿಸಲಾಗಿದ್ದು, ಪೂಜೆ, ಆರತಿ, ಮಂಗಳಾರತಿ ಇತ್ಯಾದಿ ವೈದಿಕ ಆಚರಣೆಗಳು ಎಲ್ಲ ದೇವಸ್ಥಾನಗಳಲ್ಲಿ ನಡೆಯುವಂತೆ ನಡೆಯುತ್ತಿದ್ದವು. ಮಾಧ್ಯಮಗಳಲ್ಲಿ ಈ ದೇವಸ್ಥಾನಗಳನ್ನು ವೈಭವೀಕರಿಸಲಾಗುತ್ತಿತ್ತು. ಒಂದು ಚಾನೆಲ್‌ನಲ್ಲಂತೂ ರಾಜ್ಯದ ವಿವಿಧೆಡೆಗಳಲ್ಲಿರುವ ಗಾಂಧೀ ದೇವಸ್ಥಾನಗಳು, ಅವುಗಳ ದಿನಚರಿಯ ಕುರಿತು ಸ್ವಾತಂತ್ರೋತ್ಸವದ ವಿಶೇಷ ಎನ್ನುವ ರೀತಿಯಲ್ಲಿ ತೋರಿಸಲಾಗುತ್ತಿತ್ತು. ‘ಹೇಗೆ ಗ್ರಾಮೀಣ ಪ್ರದೇಶದ ಜನರು ಗಾಂಧಿಯಿಂದ ಪ್ರಭಾವಿತರಾಗಿದ್ದಾರೆ?’ ಎನ್ನುವುದನ್ನು ಹೇಳುವ ಪ್ರಯತ್ನವೂ ಇಲ್ಲಿ ನಡೆಯುತ್ತಿತ್ತು. ನಿಜಕ್ಕೂ ಇಲ್ಲಿ ಗಾಂಧಿಯನ್ನು ಗೌರವಿಸಲಾಗುತ್ತಿದೆಯೇ? ಈ ಗಾಂಧಿಗೆ ಗುಡಿಯನ್ನು ಕಟ್ಟಿದವರು ನಿಜಕ್ಕೂ ಗಾಂಧೀಜಿಯ ಹಿಂಬಾಲಕರೇ? ಗಾಂಧಿಗೆ ಮಂಗಳಾರತಿ ಎತ್ತುತ್ತಿರುವ ಪೂಜಾರಿಗೆ ಗಾಂಧೀಜಿಯ ಬಗ್ಗೆ ಏನಾದರೂ ಗೊತ್ತಿದೆಯೇ? ಈ ಗುಡಿಯ ಅಂತಿಮ ಉದ್ದೇಶವಾದರೂ ಏನು? ಸ್ವಾತಂತ್ರದ ದಿನ ನನ್ನ ತಲೆ ಕೊರೆಯತೊಡಗಿತು.

ಗಾಂಧೀಜಿ ಶ್ರೀರಾಮಚಂದ್ರನ ಪರಮ ಭಕ್ತ. ಅವರಿಗೆ ಶ್ರೀರಾಮ ಒಂದು ನೆಪ. ಅದೊಂದು ಸಂಕೇತವೇ ಹೊರತು, ಅವರ ಪಾಲಿಗೆ ಯಾವತ್ತೂ ಸ್ಥಾವರವಾಗಿರಲಿಲ್ಲ. ಆತನ ವೌಲ್ಯ, ಆದರ್ಶಗಳನ್ನು ಗೌರವಿಸುತ್ತಿದ್ದವರು. ಆದರೆ ಯಾವತ್ತೂ ಅವರು ‘ಅಯೋಧ್ಯೆಯಲ್ಲಿ ರಾಮನ ದೇವಸ್ಥಾನವಾಗಬೇಕು’ ಎಂದವರಲ್ಲ. ಅಷ್ಟೇ ಏಕೆ, ಪರಮಶ್ರೇಷ್ಠ ಹಿಂದೂ ಆಗಿರುವ ಮಹಾತ್ಮಾ ಗಾಂಧೀಜಿ ತನ್ನ ಜೀವನಾವಧಿಯಲ್ಲಿ ಒಂದೇ ಒಂದು ಗುಡಿಯನ್ನು ಕಟ್ಟಿದವರೂ ಅಲ್ಲ. ಗಾಂಧೀಜಿಯ ಬದುಕಿನಲ್ಲಿ ಅವರು ಇಂತಹಾ ದೇವಸ್ಥಾನದ ಆರಾಧಕರು ಎಂದೂ ಎಲ್ಲೂ ಉಲ್ಲೇಖವಾಗಿಲ್ಲ. ಆರಾಧನೆಯು ಅವರಿಗೆ ಜನರನ್ನು ಒಂದೆಡೆ ಸೇರಿಸುವ ಒಂದು ದಾರಿಯಾಗಿತ್ತು. ಆದುದರಿಂದಲೇ ಅವರು ‘ಈಶ್ವರ ಅಲ್ಲಾ ತೇರೇ ನಾಮ್’ ಎಂದರು. ಯಾವತ್ತೂ ಅವರು ಪೂಜೆಗಾಗಿ ಗುಡಿಗೆ ತೆರಳಿದವರಲ್ಲ. ತನ್ನ ಆಶ್ರಮದಲ್ಲಿ ರಾಮಭಜನೆಯನ್ನು ಏರ್ಪಡಿಸುತ್ತಿದ್ದರು. ಎಲ್ಲ ಧರ್ಮೀಯರ ಜೊತೆ ಒಂದಾಗಿ ಅದನ್ನು ನೆರವೇರಿಸುತ್ತಿದ್ದರು. ಅವರಿಗೆ ರಾಮ ವಿಗ್ರಹ ಆಗಿರಲಿಲ್ಲ. ಸತ್ಯ, ವಚನ ಪರಿಪಾಲನೆ ಮೊದಲಾದ ಆದರ್ಶಗಳಿಗೆ ಅವರು ರಾಮನ ಹೆಸರನ್ನು ಕೊಟ್ಟಿದ್ದರು. ಅದು ಬರೇ ಹೆಸರು ಅಷ್ಟೇ. ಆ ಹೆಸರನ್ನು ಈಶ್ವರ, ಅಲ್ಲಾ ಎಂದು ವ್ಯತ್ಯಾಸಗೊಳಿಸಿದರೂ ಅವರಿಗೆ ಅದರಲ್ಲೇನೂ ವ್ಯತ್ಯಾಸ ಕಾಣುತ್ತಿರಲಿಲ್ಲ. ಸತ್ಯದಲ್ಲಿ ಅವರು ದೇವರನ್ನು ಕಾಣುವ ಪ್ರಯತ್ನ ಮಾಡುತ್ತಿದ್ದರು. ಯಾವತ್ತೂ ತನ್ನ ಪೂಜೆಗಾಗಿ ಅವರು ವೈದಿಕ ಬ್ರಾಹ್ಮಣರನ್ನು ಆಶ್ರಮದೊಳಗೆ ಬಿಟ್ಟುಕೊಟ್ಟ ಉದಾಹರಣೆಯಿಲ್ಲ. ವೈದಿಕ ಆಚರಣೆಯಲ್ಲಿ ನಂಬಿಕೆ ಇದ್ದವರು ಗಾಂಧೀಜಿಯನ್ನು ಗೌರವಿಸುವ ಉದಾಹರಣೆಯೂ ಇತಿಹಾಸದಲ್ಲಿಲ್ಲ. ಗಾಂಧೀಜಿ ಒಮ್ಮೆ ದೇಶದ ಎಲ್ಲಾ ದೇವಸ್ಥಾನಗಳನ್ನು ಸಂದರ್ಶಿಸಿದ್ದರು. ಆದರೆ ಅಲ್ಲಿರುವ ಜಾತೀಯತೆ ಮತ್ತು ಪರಿಸರ ಮಾಲಿನ್ಯವನ್ನು ಕಂಡ ಗಾಂಧೀಜಿ, ಆ ದೇವಸ್ಥಾನಗಳ ಮೇಲೆ, ಪುಣ್ಯಕ್ಷೇತ್ರಗಳ ಮೇಲೆ ರೋಸಿ ಮಾತನಾಡಿದ್ದರು. ಅದೇ ಕೊನೆ. ಮತ್ತೆಂದಿಗೂ ಅವರು ದೇವಸ್ಥಾನಗಳನ್ನು, ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುವ ಸಾಹಸವನ್ನು ಮಾಡಲಿಲ್ಲ. ಗಾಂಧೀಜಿಯನ್ನು ಕೊಂದವರು ಯಾರು ಎನ್ನುವುದನ್ನು ನಾವು ಒಂದು ಕ್ಷಣ ನೆನೆಯೋಣ. ಇಂದು ರಾಮನಿಗಾಗಿ ಗುಡಿಯನ್ನು ಕಟ್ಟಲು ಹೋರಾಡುತ್ತಿರುವವರೇ ಈ ದೇಶದ ಶ್ರೇಷ್ಠ ರಾಮಭಕ್ತನನ್ನು ಗುಂಡಿಟ್ಟು ಕೊಂದರು. ಗಾಂಧೀಜಿ ರಾಮನ ಕುರಿತಂತೆ ಮಾತನಾಡುತ್ತಿದ್ದರು. ಗಾಂಧಿಯನ್ನು ಕೊಂದವರು ರಾಮನ ಕುರಿತಂತೆಯೇ ಮಾತನಾಡುತ್ತಾರೆ. ಗಾಂಧಿ ಸದಾ ರಾಮನ ಕುರಿತಂತೆ, ಆತನ ವೌಲ್ಯಗಳ ಕುರಿತಂತೆ ಮಾತನಾಡುತ್ತಿದ್ದರು. ಆದರೆ ರಾಮನಿಗೆ ಗುಡಿ ಕಟ್ಟುವ ಕುರಿತಂತೆ ಯಾವತ್ತೂ ಮಾತನಾಡಿರಲಿಲ್ಲ. ರಾಮನ ಕುರಿತಂತೆ ಗಾಂಧಿ ಮಾತನಾಡುತ್ತಿದ್ದಾಗ ಅವರ ಅಕ್ಕಪಕ್ಕದಲ್ಲೇ ಅಬುಲ್ ಕಲಾಂ ಆಝಾದ್, ಖಾನ್ ಅಬ್ದುಲ್ ಗಫಾರ್ ಖಾನ್‌ರಂತಹಾ ಮುಸ್ಲಿಂ ವಿದ್ವಾಂಸರು ತಲೆದೂಗುತ್ತಿದ್ದರು. ಆದರೆ ಸದ್ಯದ ದಿನಗಳಲ್ಲಿ ಕೆಲವರಿಗೆ ರಾಮನ ಬಗ್ಗೆ ಮಾತನಾಡುವುದೆಂದರೆ, ಈ ದೇಶದ ಹಿಂದೂಗಳನ್ನು ಮುಸ್ಲಿಮರ ಮೇಲೆ ಎತ್ತಿ ಕಟ್ಟುವುದು ಎಂದರ್ಥ. ಸಂಘ ಪರಿವಾರ ರಾಮನಿಗೆ ಗುಡಿಯನ್ನು ಕಟ್ಟ ಹೊರಟಿದ್ದರೆ, ಗಾಂಧೀಜಿ ರಾಮನನ್ನು ಗುಡಿಯಿಂದ ಬಿಡುಗಡೆ ಮಾಡಲು ಬಯಸಿದ್ದರು. ಗುಡಿಯ ಹೊರಗಿರುವ ರಾಮ ಬೇರೆ, ಒಳಗಿರುವ ರಾಮ ಬೇರೆ. ಒಳಗಿರುವ ರಾಮನಿಗೆ ವಾರಸುದಾರರಿರುತ್ತಾರೆ. ಆ ಗುಡಿಯ ಒಡೆಯರು, ಆ ಗುಡಿಯ ಪೂಜಾರಿಗಳು, ಆ ಗುಡಿಯನ್ನು ಸುತ್ತುವರಿದಿರುವ ಜಾತಿ, ಧರ್ಮ ಇವೆಲ್ಲವುಗಳಿಂದ ರಾಮ ಬಂಧಿತನಾಗಿರುತ್ತಾನೆ. ಒಂದು ರೀತಿಯಲ್ಲಿ ಅಲ್ಲಿ ರಾಮನಿರುವುದೇ ಇಲ್ಲ. ಬರೇ ರಾಮನ ವಿಗ್ರಹ ಮಾತ್ರವಿರುತ್ತದೆ. ಇದು ರಾಮನ ಕುರಿತಂತೆ ಗಾಂಧಿಯ ತಿಳುವಳಿಕೆಯಾಗಿತ್ತು. ರಾಮ ಹುಟ್ಟಿದುದು ಅಯೋಧ್ಯೆಯಲ್ಲಲ್ಲ, ಗೋಡ್ಸೆಯ ಗುಂಡೇಟಿಗೆ ಉರುಳಿಬಿದ್ದ ಗಾಂಧಿಯ ಉದ್ಗಾರದಲ್ಲಿ ರಾಮ ಹುಟ್ಟಿದ ಎನ್ನುವುದು ಈ ಕಾರಣಕ್ಕೆ.
ಇಂತಹ ಗಾಂಧಿಯನ್ನು ಸಂಪೂರ್ಣ ಇಲ್ಲವಾಗಿಸುವ ಪ್ರಯತ್ನವಾಗಿ, ಗಾಂಧೀಜಿಗಾಗಿಯೇ ಗುಡಿಯನ್ನು ಕಟ್ಟುವ ಪ್ರಯತ್ನ ನಡೆಯುತ್ತಿದೆ. ಗೋಡ್ಸೆಯ ಗುಂಡಿನಿಂದ ಸಾಯದ ಗಾಂಧಿಯನ್ನು ಗುಡಿಯ ಕಲ್ಲುಗಳಿಂದ ಸಮಾಧಿ ಮಾಡುವ ಪ್ರಯತ್ನ ಇದಾಗಿದೆ. ಗಾಂಧೀಜಿಗೆ ದೇವಸ್ಥಾನವನ್ನು ಕಟ್ಟಿ, ಪೂಜೆ ಸಲ್ಲಿಸುವುದನ್ನು ನಾವು ಈ ಕಾರಣಕ್ಕಾಗಿ ಕಟುವಾಗಿ ವಿರೋಧಿಸಬೇಕಾಗಿದೆ. ಟಿವಿ ಚಾನೆಲ್‌ಗಳಲ್ಲಿ ಪೂಜಾರಿಯೊಬ್ಬ ಗಾಂಧೀಜಿಯ ವಿಗ್ರಹ ಮುಂದೆ ಆರತಿ ಎತ್ತಿ, ಗಂಟೆ ಆಡಿಸುತ್ತಿದ್ದ. ಕೆಳಜಾತಿಯವರನ್ನು ಕಂಡರೆ ಮೈಲು ದೂರ ಹಾರುವ ಇವರಿಂದ ಗಾಂಧೀಜಿಯನ್ನು ಆರಾಧಿಸಲು, ಪೂಜಿಸಲು ಸಾಧ್ಯವೇ? ನಾಳೆ ಈ ಗುಡಿ ದೊಡ್ಡ ದೇವಸ್ಥಾನವಾಗಿ ಗಾಂಧೀಜಿಯ ಅಕ್ಕಪಕ್ಕದಲ್ಲಿ ರಾಮ, ಕೃಷ್ಣರು ನೆಲೆಯಾಗಬಹುದು. ಯಾವುದಾದರೂ ಒಂದು ಮಠ ಇದರ ಉಸ್ತುವಾರಿ ನೋಡಿಕೊಳ್ಳಲು ಮುಂದಾಗಬಹುದು. ಬಳಿಕ, ಎಲ್ಲಾ ದೇವಸ್ಥಾನಗಳಿಗೂ ಅಮರಿಕೊಂಡಂತೆ, ಈ ಗಾಂಧಿಯ ದೇವಸ್ಥಾನಕ್ಕೂ ಸಂಘ ಪರಿವಾರ ಅಮರಿಕೊಳ್ಳಬಹುದು. ಈ ದೇವಸ್ಥಾನದ ಆವರಣದಲ್ಲೆ ಗೋಡ್ಸೆಯ ಹಿಂಬಾಲಕರು ತಮ್ಮ ಬೈಠಕ್‌ಗಳನ್ನು ನಡೆಸಬಹುದು. ಗಾಂಧೀಜಿಯನ್ನು ಕೊಲ್ಲುವುದಕ್ಕೆ ಹುಡುಕಿರುವ ಹೊಸ ದಾರಿ ಇದು.

ಈ ದೇಶದಲ್ಲಿ ದೇವರಿಗಳಿಗೇನೂ ಬರವಿಲ್ಲ. ಅವುಗಳ ಸಾಲಿನಲ್ಲಿ ಗಾಂಧೀಜಿ ನಿಲ್ಲುವುದು ಬೇಡ. ಗಾಂಧೀಜಿ ನಮ್ಮ ಮುಂದೆ ಒಬ್ಬ ಸಾಮಾನ್ಯ ಮನುಷ್ಯನಾಗಿ ಶಾಶ್ವತವಾಗಿ ಇರಲಿ. ಒಬ್ಬ ಮನುಷ್ಯನಾಗಿ ಎಷ್ಟು ಎತ್ತರಕ್ಕೆ ಏರಬಹುದು ಎನ್ನುವುದಕ್ಕೆ ಗಾಂಧೀಜಿ ನಮ್ಮ ಮುಂದಿದ್ದಾರೆ, ಸಕಲ ಮನುಷ್ಯರಿಗೂ ಒಂದು ಭರವಸೆಯಾಗಿ. ಆ ಭರವಸೆಯನ್ನು ನಾವು ಇಲ್ಲವಾಗಿಸುವುದು ಬೇಡ. ಗಾಂಧೀಜಿಯ ಹೆಸರಿನಲ್ಲಿ ಕಟ್ಟಿರುವ ಗುಡಿಗಳು ಗಾಂಧೀಜಿಗೆ ಮಾಡಿರುವ ಅವಮಾನ. ಗಾಂಧೀಜಿಯ ಹೆಸರಲ್ಲಿ ಗ್ರಂಥಾಲಯಗಳು, ಶಾಲೆಗಳು ತೆರೆಯಲಿ. ಯಾವ ಕಾರಣಕ್ಕೂ ಗಾಂಧೀಜಿಗೆ ಗುಡಿಯ ಹೆಸರಿನಲ್ಲಿ ಸಮಾಧಿ ಕಟ್ಟುವುದು ಬೇಡ.
ಸೆಪ್ಟಂಬರ್ 12, 2008