Wednesday, November 14, 2012

ಈ ಮತಾಂತರ ಎಷ್ಟು ಸರಿ?

ಇತ್ತೀಚೆಗೆ ನನ್ನ ಊರಿನಲ್ಲಿರುವ ಬಾಲ್ಯದ ಸಹಪಾಠಿಗೆ ಮದುವೆಯಾಯಿತು. ಸಿಕ್ಕಿದಾಗಲೆಲ್ಲ  "ಮದುವೆಯಾಯಿತಾ" ಎಂದು ಕೇಳಿದರೆ ‘‘ಈ ತೋಟ ಕಾಯುವ ಮಾಣಿಯನ್ನು ಯಾರು ಮದುವೆಯಾಗುತ್ತಾರೆ ಮಾರಾಯ...ಒಳ್ಳೆಯ ಬ್ರಾಹ್ಮಣ ಹುಡುಗಿ ನಿನಗೆ ಗೊತ್ತಿದ್ದರೆ ಹೇಳು...ಮದುವೆಯಾಗುವೆ’’ ಎನ್ನುತ್ತಿದ್ದ. ನಾನೂ ಅದನ್ನು ತಮಾಷೆಯಾಗಿಯೇ ತೆಗೆದುಕೊಳ್ಳುತ್ತಿದ್ದೆ. ‘‘ಲವ್ ಮ್ಯಾರೇಜ್ ಆಗು’’ ಎಂದರೆ, ‘‘ತೋಟ ಕಾಯುವ ಮಾಣಿಯನ್ನು ಯಾರು ಲವ್ ಮಾಡ್ತಾರೆ ಮಾರಾಯ... ನಿನಗಾದರೆ ಪರವಾಗಿಲ್ಲ... ಹುಡುಗಿಯ ಜೊತೆಗೆ ಕೆಜಿಗಟ್ಟಳೆ ಚಿನ್ನವನ್ನೂ ಹಾಕ್ತಾರೆ.... ಅತ್ಲಾಗಿ ಬ್ಯಾರಿಯಾಗಿ ಕನ್ವರ್ಟ್ ಆದ್ರೆ ಹೇಗೆ ಎಂದು ಯೋಚಿಸುತ್ತಿದ್ದೇನೆ...’’ ಎಂದು ನಕ್ಕಿದ್ದ. ಆದರೆ ಅವನ ನಗುವಿನ ಆಳದಲ್ಲೊಂದು ಸಣ್ಣ ವಿಷಾದವೊಂದು ಹೆಪ್ಪುಗಟ್ಟಿರುವುದು ತೀರ ತಡವಾಗಿ ತಿಳಿಯಿತು. 

ಇತ್ತೀಚೆಗೆ ನನ್ನ ಆ ಸಹಪಾಠಿಗೆ ಮದುವೆಯಾಯಿತಂತೆ. ಅಷ್ಟು ಆತ್ಮೀಯನಾಗಿದ್ದ ಅವನು ತನ್ನ ಮದುವೆಯ ವಿಷಯವನ್ನು ನನಗೆ ತಿಳಿಸಿಯೇ ಇರಲಿಲ್ಲ. ಇನ್ಯಾರದೋ ಮೂಲಕ ತಿಳಿಯಿತು. ನನಗೇ  ಅಚ್ಚರಿ ಉಂಟು ಮಾಡುವಂತೆ ಅವನು ಅಂತರ್ಜಾತೀಯ ವಿವಾಹವಾಗಿದ್ದ. ಆದರೆ ಮದುವೆಗೆ ಮುನ್ನ ಹುಡುಗಿಯನ್ನು ಶುದ್ಧೀಕರಣ ಮಾಡಿ ಬ್ರಾಹ್ಮಣಳನ್ನಾಗಿ ಮತಾಂತರ ಮಾಡಲಾಯಿತಂತೆ. ನನಗೆ ಎರಡು ರೀತಿಯಲ್ಲಿ ಖುಷಿಯಾಯಿತು. ಒಂದು, ಕೊನೆಗೂ ನನ್ನ ಸಹಪಾಠಿಗೆ ವಿವಾಹವಾಯಿತು. ಎರಡನೆಯದು, ತೀರಾ ಸಂಪ್ರದಾಯಸ್ಥನಾಗಿದ್ದ ಅವನು ಅಂತರ್ಜಾತಿಯ ವಿವಾಹವಾಗಿದ್ದ. ಎಲ್ಲಕ್ಕಿಂತ ಮುಖ್ಯವಾಗಿ ಕೆಳಜಾತಿಯ ತರುಣಿಯನ್ನು ತನ್ನ ಜಾತಿಯ ಸ್ಥಾನಮಾನಕೊಟ್ಟು ‘ಔದಾರ್ಯ’ ಮೆರೆದಿದ್ದ. ಮದುವೆಯ ಸುದ್ದಿ ತಂದ ಆ ಇನ್ನೊಬ್ಬ ಗೆಳೆಯನಲ್ಲಿ ಪ್ರಶ್ನೆ ಹಾಕಿದೆ ‘‘ಎಂತ, ಲವ್ ಮ್ಯಾರೇಜಾ?’’ 

ಅವನು ಕಿಸಕ್ಕನೆ ನಕ್ಕ ‘‘ಎಂಥ ಲವ್? ಅವನು ಯಾವಾಗ ಲವ್ ಮಾಡ್ಲಿಕ್ಕೆ? ಬ್ರಾಹ್ಮಣರಲ್ಲೀಗ ಸಿಕ್ಕಾಪಟ್ಟೆ ಹುಡುಗಿಯರ ಶಾರ್ಟೇಜು. ಕಲಿತ ಹುಡುಗಿಯರು, ಹಳ್ಳಿಯಲ್ಲಿ ತೋಟ ನೋಡಿಕೊಂಡು ಇರುವ ಹುಡುಗನನ್ನು ಮದುವೆಯಾಗುವುದಕ್ಕೆ ಒಪ್ಪುವುದಿಲ್ಲವಂತೆ. ಅದಕ್ಕೆ ಕೆಳವರ್ಗದ, ಬಡ ಹುಡುಗಿಯನ್ನು ಶುದ್ಧೀಕರಣ ಮಾಡಿ ಮದುವೆಯಾಗಿದ್ದಾನೆ...’’

ಇದು ಗೊತ್ತಿಲ್ಲದ ವಿಷಯವೇನೂ ಆಗಿರಲಿಲ್ಲ. ಹೆಣ್ಣಿನ ಕುರಿತಂತೆ ಗಂಡಿನ ದರ್ಪ, ದುರಹಂಕಾರಕ್ಕೆ ಪ್ರಕೃತಿಯೇ ನೀಡಿದ ಶಾಪದಂತೆ ತರುಣಿಯರ ಸಮಸ್ಯೆ ಹಲವು ಜಾತಿಗಳನ್ನು ಕಾಡುತ್ತಿದೆ. ಒಂದೆಡೆ ತಮ್ಮ ಜಾತಿಯ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು. ಇನ್ನೊಂದೆಡೆ ಮದುವೆಯಾಗಿ ಸಕುಟುಂಬಸ್ಥನಾಗಬೇಕು. ಈ ಸಂಘರ್ಷ ಹಲವು ಜಾತಿಗಳ ಹುಡುಗರನ್ನು  ಕಾಡುತ್ತಿದೆ. ಹೆಣ್ಣಿನ ಕುರಿತಂಥ ತಾತ್ಸಾರ ಹೀಗೆ ಮುಂದುವರಿದರೆ ಇದು ಕೇವಲ ಬ್ರಾಹ್ಮಣ ಸಮಾಜವನ್ನು ಮಾತ್ರವಲ್ಲ, ಇಡೀ ಗಂಡು ಜಾತಿಯನ್ನೇ ಕಾಡಲಿದೆ. ಬ್ರಾಹ್ಮಣ ಸಮುದಾಯದಲ್ಲಿ ಅದರ ಒಂದು ಗ್ರಾಂಡ್ ರಿಹರ್ಸಲ್ ನಡೆಯುತ್ತಿದೆ ಅಷ್ಟೇ. ಬಹುಶಃ ಈ ಸಮಸ್ಯೆ ಬ್ರಾಹ್ಮಣ ತರುಣರಿಗೆ ಒಂದು ಹೊಸ ಅವಕಾಶವನ್ನೂ ತೆರೆದುಕೊಟ್ಟಿದೆ. ಜಾತಿ ಅಸಮಾನತೆಯ ಪಾಪಪ್ರಜ್ಞೆಯಿಂದ ಕಳಚಿಕೊಳ್ಳುವುದಕ್ಕೆ ಪೂರಕವಾಗಿ, ಈ ಅಂತರ್ಜಾತೀಯ ವಿವಾಹವನ್ನು ಬಳಸಿಕೊಳ್ಳಬಹುದಾಗಿದೆ. ನಿಧಾನಕ್ಕೆ ಇದು ಜಾತಿ ಅಸಮಾನತೆಯನ್ನೇ ಅಳಿಸುವುದಕ್ಕೆ ಸಹಾಯ ಮಾಡಬಹುದಾಗಿದೆ. ಆದುದರಿಂದ, ಈ ಕಾರಣಕ್ಕಾಗಿಯಾದರೂ ನನ್ನ ಸ್ನೇಹಿತ ಜಾತಿಯನ್ನು ಮೀರುವಂತಾಯಿತಲ್ಲ ಎಂದು ನನಗೆ ನಾನೇ ಖುಷಿ ಪಟ್ಟುಕೊಂಡಿದ್ದೆ.

ಆದರೆ ಇತ್ತೀಚೆಗೆ ಮುಂಬೈಯಿಂದ ಬಂದ ನನ್ನ ಗೆಳೆಯರಾದ ಕೆ. ಕೆ. ಸುವರ್ಣ ಅವರು ಬಿಚ್ಚಿಟ್ಟ ಸಂಗತಿ, ನನ್ನನ್ನು ಒಂದು ಕ್ಷಣ ತಲ್ಲಣಕ್ಕೀಡು ಮಾಡಿತು. ನಾನು ಬ್ರಾಹ್ಮಣ ತರುಣರ ಅಂತರ್ಜಾತೀಯ ವಿವಾಹದ ಕುರಿತಂತೆ ಮಾತಾಡಲು ತೊಡಗಿದಾಗ ಸುವರ್ಣ ಒಮ್ಮೆಲೆ ಸ್ಫೋಟಿಸಿದರು. ‘‘ಯಾರು ಹೇಳಿದ್ದು ಇದು ಅಂತರ್ಜಾತೀಯ ವಿವಾಹ ಅಂತ. ಇದು ಹಣದ ಆಮಿಷವೊಡ್ಡಿ ಕೆಳವರ್ಗದ ತರುಣಿಯರನ್ನು ಬ್ರಾಹ್ಮಣರ ತೊತ್ತಾಗಿಸುವ ಒಂದು ಭಾಗವೇ ಹೊರತು ಇನ್ನೇನು ಅಲ್ಲ...’’ ಎಂದು ಬಿಟ್ಟರು.  ಅವರು ಬಿಚ್ಚಿಟ್ಟ ಸಂಗತಿಯನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಬ್ರಾಹ್ಮಣರೊಳಗೆ ಇತ್ತೀಚೆಗೆ ತರುಣಿಯರ ಕೊರತೆಯಿಂದಾಗಿ, ಮದುವೆ ದಲ್ಲಾಳಿಗಳಿಗೆ ವಿಪರೀತ ಬೆಲೆ ಬಂದು ಬಿಟ್ಟಿದೆ. ಎಲ್ಲಿ, ಯಾವ ಮೂಲದಲ್ಲಿ ಬ್ರಾಹ್ಮಣ ಸಮುದಾಯದ, ಅದರಲ್ಲೂ ತಮ್ಮದೇ ಪಂಗಡದ ಹುಡುಗಿಯಿದ್ದಾರೆಂದು ಹುಡುಕಿ ತೆಗೆದು, ಕೈ ತುಂಬಾ ದುಡ್ಡು ಬಾಚುವ ದಲ್ಲಾಳಿಗಳ ಸಂಖ್ಯೆ ಹೆಚ್ಚುತ್ತಿದೆ. ಉತ್ತರಭಾರತದಿಂದ ಅದರಲ್ಲೂ ಕಾಶ್ಮೀರದಿಂದ ಹುಡುಗಿಯರನ್ನು ಕರಾವಳಿಗೆ ಕರೆತಂದು ಬ್ರಾಹ್ಮಣ ಹುಡುಗರಿಗೆ ಕಟ್ಟುವ ಕೆಲಸವನ್ನೂ ದಲ್ಲಾಳಿಗಳು ಮಾಡುತ್ತಿದ್ದಾರೆ. ಹಲವು ದಲ್ಲಾಳಿಗಳು ಇದನ್ನೇ ಬಳಸಿಕೊಂಡು ಹಲವು ಬ್ರಾಹ್ಮಣ ಕುಟುಂಬಕ್ಕೆ ವಂಚಿಸಿದ್ದಾರೆ.ಅನ್ಯ ಜಾತಿಯ ಹುಡುಗಿಯನ್ನೇ ಬ್ರಾಹ್ಮಣ ಹುಡುಗಿಯೆಂದು ತಲೆಗೆ ಕಟ್ಟಿ, ಅದು ರಾದ್ಧಾಂತವಾಗಿ, ವಿವಾಹವೇ ಮುರಿದ ಪ್ರಸಂಗಗಳಿವೆ. ಕೆಲವು ಕುಟುಂಬಗಳಂತೂ ಮರ್ಯಾದೆಗೆ ಅಂಜಿ ಬಾಯಿ ಮುಚ್ಚಿ ಕುಳಿತಿದ್ದಾರೆ. ಲಕ್ಷಾಂತರ ಹಣ ಪಡೆದು ಬ್ರಾಹ್ಮಣ ಕುಟುಂಬಗಳಿಗೆ ವಂಚಿಸಿದ ಪ್ರಕರಣಗಳಂತೂ ನೂರಾರು ಇವೆ. ಇಂತಹ ಸಂದರ್ಭದಲ್ಲೇ ಅವರು ಒಂದಿಷ್ಟು ಉಸಿರು ಬಿಡುವಂತಾದುದು ‘‘ಶುದ್ಧೀಕರಣ’’ದ ಮೂಲಕ ಕೆಳ ಜಾತಿಯ ತರುಣಿಯರನ್ನು ಮನೆತುಂಬಿಸಿಕೊಳ್ಳುವ ಪದ್ಧತಿ ಸಮಾಜದಲ್ಲಿ ಪ್ರಚಾರ ಪಡೆದ ಮೇಲೆ. ಹಾಗೆಂದು ಬ್ರಾಹ್ಮಣ ತರುಣರು ಕೇಳಿದಾಕ್ಷಣ ಯಾರೂ ತಮ್ಮ ಮನೆಯ ಮಗಳನ್ನು ಇಕೋ ಎಂದು ಕೊಡುವುದಿಲ್ಲ. ಹೆಣ್ಣು ಮಕ್ಕಳು ಹೆಚ್ಚಿರುವ ತೀರಾ ಬಡ ಕುಟುಂಬಕ್ಕೆ ಒಂದಿಷ್ಟು ವಧುದಕ್ಷಿಣೆಯನ್ನು ಕೊಟ್ಟು, ಅವರನ್ನು ಶುದ್ಧೀಕರಣಗೊಳಿಸಿ, ಬ್ರಾಹ್ಮಣ ಕುಟುಂಬದ ಸೊಸೆಯಾಗಿಸಲಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಗೋ ವನಿತಾಶ್ರಮ’ ಎನ್ನುವುದೊಂದಿದೆ. ಇದರ ಮುಖಂಡರು ಬಹಿರಂಗ ಸಭೆಯಲ್ಲೇ ಈ ಕುರಿತಂತೆ ಹೇಳಿಕೆ ನೀಡಿದ್ದರು. ‘‘ನಮ್ಮಲ್ಲಿ ವಿವಿಧ ತಳಿಯ ಅಪರೂಪದ ಗೋವುಗಳನ್ನು ಸಾಕಲಾಗುತ್ತದೆ. ಹಾಗೆಯೇ ಇಲ್ಲಿ, ಬಡ ವನಿತೆಯರಿಗೂ ಆಶ್ರಯ ನೀಡಲಾಗುತ್ತದೆ. ಕೆಳಜಾತಿಯ ತೀರಾ ಬಡ ಕುಟುಂಬದ ಹೆಣ್ಣು ಮಕ್ಕಳು ಇದ್ದರೆ, ನಿಮಗೆ ಸಾಕಲು ಕಷ್ಟವಾಗುತ್ತಿದೆಯಾದರೆ, ಅನಾಥ ಹೆಣ್ಣು ಮಕ್ಕಳು ಇದ್ದರೆ ಈ ಆಶ್ರಮಕ್ಕೆ ಸೇರಿಸಿ. ಈ ವನಿತೆಯರು ಗೋವುಗಳ ಸೇವೆಯನ್ನು ಮಾಡಿದಂತಾಗುತ್ತದೆ. ಹಾಗೆಯೇ ಇವರ ಮದುವೆಯ ವ್ಯವಸ್ಥೆಯನ್ನು ನಾವೇ ಮಾಡುತ್ತೇವೆ. ಈ ಆಶ್ರಮದಲ್ಲಿದ್ದ ಹಲವು ಕೆಳಜಾತಿಯ ಹೆಣ್ಣು ಮಕ್ಕಳನ್ನು ಬ್ರಾಹ್ಮಣರಂತಹ ಮೇಲ್ಜಾತಿಯ ತರುಣರಿಗೆ ಮದುವೆ ಮಾಡಿಕೊಟ್ಟಿದ್ದೇವೆ...’’ ಈ ಮಾತಿನ ರಹಸ್ಯ ಇಷ್ಟೇ. ಈ ಗೋವುಗಳ ಸೇವೆಗೆ ವೇತನವೇ ಇಲ್ಲದೆ ಬಡ ಹೆಣ್ಣು ಮಕ್ಕಳು ದೊರಕುತ್ತಾರೆ. ಅವರಿಗೆ ಒಂದಿಷ್ಟು ವೈದಿಕ ಆಚರಣೆ ಕಳಿಸಿ ಅವರನ್ನು ಶುದ್ಧೀಕರಣಗೊಳಿಸಿ, ಬ್ರಾಹ್ಮಣ ತರುಣರಿಗೆ ಮದುವೆ ಮಾಡಿಕೊಡುವುದಷ್ಟೇ ಅಂತಿಮ ಉದ್ದೇಶ. ತೀರಾ ಅನಾಥ ಹೆಣ್ಣು ಮಕ್ಕಳಾದರೆ ಇದರಿಂದ ಪ್ರಯೋಜನವಿದೆ. ಆದರೆ ಬಡತನದ ಕಾರಣದಿಂದ ಬಂದ ಹೆಣ್ಣು ಮಕ್ಕಳ ಕುಟುಂಬಕ್ಕೆ ಹಣದ ಆಮಿಶ ತೋರಿಸಿ ಅವರನ್ನು ಶುದ್ಧೀಕರಣಗೊಳಿಸಿ, ಆ ಕುಟುಂಬದಿಂದಲೇ ಬೇರ್ಪಡಿಸಿ, ಬ್ರಾಹ್ಮಣರ ತರುಣರಿಗೆ ವರ್ಗಾಯಿಸುವುದನ್ನು ಮದುವೆ ಎಂದು ಕರೆಯಲಾಗುತ್ತದೆಯೆ? ಈ ಪ್ರಶ್ನೆಯನ್ನು ಸುವರ್ಣ ಅವರು ಕೇಳುವುದಕ್ಕೂ ಒಂದು ಕಾರಣವಿತ್ತು. ಅವರ ದೂರದ ಸಂಬಂಧಿಕರ ಹುಡುಗಿಯೊಬ್ಬರನ್ನು ಇದೇ ರೀತಿ ಶುದ್ಧೀಕರಣ ಮಾಡಿ ಬ್ರಾಹ್ಮಣ ಕುಟುಂಬಕ್ಕೆ ಕೊಡಲಾಗಿತ್ತು. ಆನಂತರದ ಬಿಕ್ಕಟ್ಟು, ಅದು ವಧುವಿನ ಮೇಲೆ ಮತ್ತು ಆಕೆಯ ಕುಟುಂಬದ ಮೇಲೆ ಬಿದ್ದ ಪರಿಣಾಮಗಳೇ ಸುವರ್ಣರ ಆಕ್ರೋಶಕ್ಕೆ ಕಾರಣ.

ಮದುವೆ ಎಂದರೆ ಒಂದು ಹೆಣ್ಣು ಮತ್ತು ಗಂಡು ಒಂದಾಗುವುದಷ್ಟೇ ಅಲ್ಲ, ಎರಡು ಕುಟುಂಬಗಳು ಜೊತೆಯಾಗುವುದು. ಗಂಡಿಗೆ ಹೆಣ್ಣು ಮಾತ್ರ ದೊರಕುವುದಲ್ಲ, ಅವಳ ಜೊತೆಗೆ ತಾಯಿ ಸಮಾನಳಾದ ಅತ್ತೆ ಮತ್ತು ತಂದೆ ಸಮಾನರಾದ ಮಾವನೂ ದೊರಕುತ್ತಾರೆ. ಹಾಗೆಯೇ ಹೆಣ್ಣಿಗೂ ಕೂಡ. ಆದರೆ ಇಲ್ಲಿ ಹಾಗಲ್ಲ. ಬ್ರಾಹ್ಮಣ ಕುಟುಂಬಕ್ಕೆ ಬೇಕಾಗಿರುವುದು ಬರೇ ಹೆಣ್ಣು ಮಾತ್ರ. ಅವಳ ಕುಟುಂಬ ಅಂದರೆ ಆಕೆಯ ತಂದೆ, ತಾಯಿ ಯಾರೂ ಬೇಕಾಗಿಲ್ಲ. ಒಂದು ರೀತಿಯಲ್ಲಿ ಆಕೆ ತನ್ನ ಕುಟುಂಬದ ಜೊತೆಗೆ ಸಂಬಂಧವನ್ನೇ ಕಡಿದು ಕೊಳ್ಳುತ್ತಾಳೆ. ತನ್ನ ಸಂಸ್ಕೃತಿ, ಆಹಾರ, ಆಚಾರ, ವಿಚಾರ ಎಲ್ಲವನ್ನು ಬಲಿಕೊಟ್ಟು, ಆಕೆ ಬ್ರಾಹ್ಮಣ ಕುಟುಂಬವನ್ನು ಪ್ರವೇಶಿಸಬೇಕಾಗುತ್ತದೆ. ಆಕೆ ಇದೆಲ್ಲವನ್ನು ಮಾಡಬೇಕಾಗಿರುವುದು ಬಡ ಕೆಳಜಾತಿಯ ಕುಟುಂಬದಲ್ಲಿ ಹುಟ್ಟಿದ್ದೇನೆನ್ನುವ ಒಂದೇ ಕಾರಣಕ್ಕಾಗಿ. ಬಡ ಹಿಂದುಳಿದ ವರ್ಗದ ಕುಟುಂಬದ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕಿ, ಹಣದ ಆಮಿಷ ತೋರಿಸಿ ಆ ಹೆಣ್ಣನ್ನು ಶುದ್ಧೀಕರಣದ ಹೆಸರಲ್ಲಿ ಬ್ರಾಹ್ಮಣ ಕುಟುಂಬಕ್ಕೆ ಒಪ್ಪಿಸುವುದು ಅದು ಹೇಗೆ ವಿವಾಹ ಸಮ್ಮತಿಯನ್ನು ಪಡೆದುಕೊಳ್ಳುತ್ತದೆ? ಒಂದು ವೇಳೆ ಅವರಿಗೆ ಹೆಣ್ಣು ಒಪ್ಪಿಗೆಯಾದರೆ, ಆಕೆಯ ಇಡೀ ಕುಟುಂಬವನ್ನೇ ಬ್ರಾಹ್ಮಣ ಜಾತಿಗೆ ಶುದ್ಧೀಕರಣ ಮಾಡಿ ಸೇರಿಸಬಹುದಲ್ಲ? ಆಕೆಯ ತಂದೆ ತಾಯಿ ಬೇಡ. ಆಕೆಯ ಕುಟುಂಬ ಬೇಡ. ಬರೇ ಆಕೆ ಮಾತ್ರ, ಗಂಡಿನ ತೆವಲಿಗೆ, ಮನೆಯ ಚಾಕರಿಗೆ ಬೇಕು. ಇದು ಮದುವೆಯೆ? ಅಥವಾ ದಂಧೆಯೆ? ಎಂದು ಸುವರ್ಣ ಆಕ್ರೋಶ ವ್ಯಕ್ತಪಡಿಸುತ್ತಾರೆ. ಹೆಣ್ಣಿನ ಸಮ್ಮತಿಯನ್ನು ಮೀರಿ, ಬರೇ ದಲ್ಲಾಳಿಗಳ ಹಣದಾಸೆಗೆ ಬಡ ಬಿಲ್ಲವ, ಮೊಗವೀರ ತರುಣಿಯರನ್ನು ಶುದ್ಧೀಕರಣಗೊಳಿಸಿ ಬ್ರಾಹ್ಮಣ ತರುಣರಿಗೆ ಮದುವೆ ಮಾಡಿಕೊಡಲಾಗುತ್ತದೆ. ಅಲ್ಲಾದರೂ ಆಕೆ ಸುಖವಾಗಿರಲು ಹೇಗೆ ಸಾಧ್ಯ? ತನ್ನದಲ್ಲದ ಸಂಸ್ಕೃತಿ. ಆಚರಣೆ. ಹಣತೆತ್ತು ಕೊಂಡುಕೊಂಡ ಹೆಣ್ಣನ್ನು ಗಂಡಾಗಲಿ ಆತನ ತಂದೆತಾಯಿಯಾಗಲಿ ಮಾನಸಿಕವಾಗಿ ಪತ್ನಿ, ಸೊಸೆ ಎಂದು ಒಪ್ಪಿಕೊಳ್ಳಲು ಸಾಧ್ಯವೆ? ಆಕೆ ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಮಾಂಸ ತಿನ್ನಬೇಕು ಎನ್ನುವ ಆಸೆಯಾದರೂ ಅದನ್ನು ಅದುಮಿಟ್ಟುಕೊಳ್ಳಬೇಕು.  ಅನೇಕ ಸಂದರ್ಭದಲ್ಲಿ ಅಪರೂಪಕ್ಕೆ ತವರು ಮನೆಗೆ ಹೋಗುವ ಅವಕಾಶವೂ ಆಕೆಗಿರುವುದಿಲ್ಲ. ಕಾರಣವೆಂದರೆ, ಅಲ್ಲಿ ಆಕೆ ಮೀನು, ಮಾಂಸ ತಿಂದು ಬಂದರೆ? ಮನೆಯ ಆಚರಣೆಯನ್ನು ಕೆಡಿಸಿ ಬಂದರೆ? ಹೆಣ್ಣನ್ನು ಶುದ್ಧೀಕರಣ ಮಾಡಲಾಗಿದೆ. ಆದರೆ ಆಕೆಯ ಕುಟುಂಬವನ್ನು ಶುದ್ಧೀಕರಣ ಮಾಡಲಾಗಿಲ್ಲವಲ್ಲ? ಇಂತಹ ಬಿಕ್ಕಟ್ಟನ್ನು ಎದುರಿಸುತ್ತಾ, ಒಲ್ಲದ ಗಂಡನೊಂದಿಗೆ ಸಂಸಾರ ಮಾಡುವ, ವೈದಿಕೀಕರಣ ಅಥವಾ ಬ್ರಾಹ್ಮಣೀಕರಗೊಂಡ ಹೆಣ್ಣಿನ ಮಾನಸಿಕ ಸ್ಥಿತಿ ಅದೆಷ್ಟು ಭೀಕರವಾಗಿರಬೇಡ?

ಯಾವುದೇ ಧರ್ಮಕ್ಕೆ ಸ್ವ ಒಪ್ಪಿಗೆಯಿಂದ, ಯಾವ ಕಾರಣಕ್ಕೆ ಇರಲಿ ಮತಾಂತರವಾಗುವುದನ್ನು ನಾನು ಒಪ್ಪುತ್ತೇನೆ. ಹಣಕ್ಕಾಗಿ ಒಬ್ಬ ತಂದೆ ತಾನು ಶುದ್ಧೀಕರಣಗೊಂಡು ಬ್ರಾಹ್ಮಣನಾಗಲಿ, ಕ್ರೈಸ್ತನಾಗಲಿ, ಮುಸ್ಲಿಮನಾಗಲಿ. ಅದಕ್ಕೆ ಸಮಾಜದ ಅಭ್ಯಂತರವಿಲ್ಲ. ಆದರೆ ಹಣಪಡೆದು, ತನ್ನ ಮಗಳನ್ನು ಒಬ್ಬ ಇನ್ನೊಂದು ಧರ್ಮದ ಅಥವಾ ಜಾತಿಯ ಗಂಡಿಗೆ ಒಪ್ಪಿಸಿ ಕೈತೊಳೆದುಕೊಳ್ಳುವುದನ್ನು ಮದುವೆ ಎಂದು ಕರೆಯಲಾಗುವುದಿಲ್ಲ. ಶುದ್ಧೀಕರಣ ಎಂದು ಕರೆಯಲೂ ಆಗುವುದಿಲ್ಲ. ಜಾತಿಯನ್ನು ಮೀರಲು ಸಾಧ್ಯವಿಲ್ಲವೆಂದಾದರೆ ಬ್ರಾಹ್ಮಣ ತರುಣರು ಅನ್ಯ ಜಾತಿಯ ತರುಣಿಯರನ್ನು ಮರೆತು ತಮ್ಮ ತಮ್ಮ ಜಾತಿಯಲ್ಲೇ ಹುಡುಗಿಯನ್ನು ಹುಡುಕುವುದು ಹೆಚ್ಚು ಶೋಭೆ ತರುವ ವಿಷಯ. ಜಾತಿಯನ್ನು ಮೀರುವ ಎದೆಗಾರಿಕೆಯಿದ್ದರೆ, ಕೆಳಜಾತಿಯ ಕುಟುಂಬವನ್ನು ಮೇಲ್‌ಜಾತಿಗೆ ತರುವುದು ಮಾತ್ರವಲ್ಲ, ತಾನು ತನ್ನ ಮೇಲ್‌ಜಾತಿಯಿಂದ ಕೆಳಜಾತಿಗಿಳಿಯಲು ಸಿದ್ಧನಾಗಿರಬೇಕು. ಆಕೆಯ ತಂದೆತಾಯಿಯನ್ನು ಮಾವ, ಅತ್ತೆ ಎಂದು ಸ್ವಾಗತಿಸಲೂ ಸಿದ್ಧನಾಗಿರಬೇಕು. ಇಲ್ಲವಾದರೆ ಅದು ನಾಗರಿಕ ವ್ಯವಸ್ಥೆಯಲ್ಲಿ ಅಮಾನವೀಯವಾಗುತ್ತದೆ. ಹಾಗೆಯೇ ಕೈಯಲ್ಲಿ ಹಣದ ಕಟ್ಟು ಹಿಡಿದುಕೊಂಡು ಬ್ರಾಹ್ಮಣ ಹುಡುಗರಿಗಾಗಿ ಬಿಲ್ಲವ, ಮೊಗವೀರ, ಬಂಟ ಮೊದಲಾದ ಕೆಳಜಾತಿಯ ಬಡಹುಡುಗಿಯರನ್ನು ಹುಡುಕುತ್ತಾ ಓಡಾಡುವ ದಲ್ಲಾಳಿಗಳನ್ನು ಮದುವೆ ದಲ್ಲಾಳಿಗಳು ಎಂದು ಕರೆಯಲಾಗುವುದಿಲ್ಲ. ಅವರಿಗೆ ಬೇರೆ ಬೇರೆ ಹೆಸರುಗಳನ್ನು ಸಮಾಜ ನೀಡುತ್ತವೆ. ಆದುದರಿಂದ ವಿವಿಧ ಜಾತಿ ಸಂಘಟನೆಗಳು ಇಂತಹ ಸಮಾಜ ಬಾಹಿರ ದಲ್ಲಾಳಿಗಳಿಗೆ, ಇವರು ನಡೆಸುವ ದಂಧೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಬಡ ಹೆಣ್ಣು ಮಕ್ಕಳನ್ನು ಹಣಕ್ಕಾಗಿ ಪರೋಕ್ಷವಾಗಿ ಮಾರಾಟ ಮಾಡುವ ಈ ವ್ಯವಸ್ಥೆಗೂ ಕಡಿವಾಣ ಹಾಕಬೇಕಾಗಿದೆ. ಹಾಗೆಯೇ ಬಲವಂತದ ಮತಾಂತರದ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಪೇಜಾವರಶ್ರೀ ಗಳೂ ಈ ವಿಷಯದವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕಾಗಿದೆ. ಹಣಕೊಟ್ಟು ಬಡ ಹೆಣ್ಣು ಮಕ್ಕಳನ್ನು ಬಲವಂತವಾಗಿ ಬ್ರಾಹ್ಮಣೀಕರಿಸಿ, ಮನೆ ಚಾಕರಿಗೆ ಬಳಸಿಕೊಳ್ಳುವ ಕೃತ್ಯ ತಪ್ಪು ಎಂದು ಸ್ಪಷ್ಟವಾಗಿ ಹೇಳಬೇಕಾಗಿದೆ. ಅವರು ಅದನ್ನು ಹೇಳುತ್ತಾರೆ ಎಂದು ನಾವೆಲ್ಲ ಬಯಸೋಣ. ಆದರೆ ಅವರು ಅಂತಹ ಹೇಳಿಕೆಯನ್ನು ನೀಡುತ್ತಾರೆ ಎಂಬ ಬಗ್ಗೆ ಸುವರ್ಣ ಅವರಿಗೆ ಯಾವ ನಂಬಿಕೆಯೂ ಇಲ್ಲ.

6 comments:

  1. ಅದ್ಯಾಕೆ ಸ್ವಾಮಿ ಯಾವಾಗ್ಲೂ ಜಾತಿ ಧರ್ಮ ಅಂತ ಬರೀತಿರ್ತೀರಿ. ಬೇರೆ ವಿಷಯಗಳು ಕಾಣೋದೇ ಇಲ್ವೇ? ಇದೆಲ್ಲಾ ಮೀರಿ ಹೊರಬನ್ನಿ.

    ReplyDelete
  2. gujari angadiyalli sigode intha kolaku sarakugalu, avaranna melethoke ondastu tiraboki buddijeevigalu

    ReplyDelete
  3. ಮಾನ್ಯ ಬಷೀರ್ ಅವರೇ ,

    ನೀವು ಪ್ರಸ್ತಾಪಿಸಿರುವ ವಿಷಯ ನಿಜ, ಒಪ್ಪುತ್ತೇನೆ. ಬ್ರಾಹ್ಮಣರಲ್ಲಿ ಹುಡುಗಿಯರ ಕೊರತೆಯಿದೆ ಅದಕ್ಕಾಗಿ ಬೇರೆ ಜಾತಿಯವರನ್ನು ಮದುವೆಯಾಗುತ್ತಿದ್ದಾರೆ. ಶುದ್ದೀಕರಣವೋ , ಜಾತ್ಯಾನ್ತರವೋ ಯಾವುದೋ ಒಂದಾಗಿ ಮದುವೆಯಾಗುತ್ತಿದ್ದಾರೆ. ಒಪ್ಪೋಣ, ಈ ದುಡ್ಡು ಕೊಟ್ಟು ಮದುವೆಯಾಗುತ್ತಾರೆ ಎಂಬುದೂ ಕೂಡ ಒಂದಿಷ್ಟು ಮಟ್ಟಿಗೆ ಸತ್ಯ. ಆದರೆ ನಿಮ್ಮ ವಿರೋಧವನ್ನು ಅರ್ಥ ಮಾಡಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಕಾರಣಗಳು,

    ವರದಕ್ಷಿಣೆ ಎಂಬ ಪೀಡೆ ಭಾರತದಲ್ಲಿ ಮೊದಲಿನಿಂದಲೂ ಇದೆ (ಧರ್ಮಾತೀತವಾಗಿ) , ವರದಕ್ಷಿಣೆ ತೆಗೆದುಕೊಂದ ಗಂಡಿಗೆ ಯಾವ ಮನಸ್ಥಿತಿ ಇರಬಹುದೋ ಅದೇ ಮನಸ್ತಿತಿ ಹೀಗೆ ದುಡ್ಡು ತೆಗೆದುಕೊಂಡು ಮದುವೆಯಾದ ಹುದುಗಿಗಿ ಇರಬಹುದು. ಎರಡೂ ಪ್ರಕ್ರೀಯೇಗಳಲ್ಲಿ ದುಡ್ಡು ತೆಗೆದುಕೊಂಡವರು ತಮ್ಮನ್ನು ಮಾರಿಕೊಳ್ಳುತ್ತಾರೆ ಎಂಬುದು ನನ್ನ ಭಾವನೆ. ಸ್ವತಃ ತಮ್ಮ ಬ್ಯಾರಿಯವರಲ್ಲೇ ಇದು ಇರುವುದರಿಂದ ಬ್ರಾಹ್ಮಣರ ಬಗ್ಗೆ ಹರಿಹಾಯುವ ಮೊದಲು ನಿಮ್ಮ ಬಗ್ಗೆ ಒಮ್ಮೆ ವಿಶ್ಲೆಷಿಸಿಕೊಳ್ಳಿ.
    ಮದುವೆಯ ಹೆಸರಿನಲ್ಲಿ ಧರ್ಮಂತರ /ಜಾತ್ಯಾನ್ತರ ಅತಿ ಹೆಚ್ಚಾಗಿ ಆಗುತ್ತಿರುವುದು ಯಾವ ಕೋಮಿಗೆ ಎಂಬುದು ಭಾರತೀಯ ಸಮಾಜದ ಬಗ್ಗೆ ಕನಿಷ್ಠ ಜ್ಞಾನ ಇರುವವರಿಗೂ ಸರಿಯಾಗಿ ತಿಳಿದಿದೆ. ಆದ್ದರಿಂದ ದಯವಿಟ್ಟು ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಬರೆಯುವಾಗ/ಪ್ರಕಟಿಸುವಾಗ ಎರಡು ಕಡೆಯಿಂದಲೂ ಯೋಚಿಸಿ ನೋಡಿ . (ನಿಮಗೆ ಸಲಹೆ ಕೊಡುವಷ್ಟು ದೊಡ್ಡವ ನಾನಲ್ಲ, ಆದರೆ ನನಗೇಕೋ ಇಷ್ಟನ್ನೂ ಹೇಳಬೇಕೆನ್ನಿಸಿತು.)

    ವಿ. ಸೂ. : ನಿಮಗೆ ನನ್ನದು ಅಧಿಕ ಪ್ರಸಂಗಿತನ ಎಂದು ಕಂಡುಬಂದರೆ ಪ್ರಕಟಿಸದೇ ಕೂಡ ಇರಬಹುದು. ಆದರೆ ಇಷ್ಟಕ್ಕೆ ಉತ್ತರ ಹೇಳಿ ಬರೆಯಿರಿ.

    ReplyDelete
  4. ಬಷೀರ್ ಅವರೇ,
    ಅನ್ಯ ಧರ್ಮದವರನ್ನು ಅದರಲ್ಲೂ ವಿಶೇಷವಾಗಿ ಹಿಂದೂ, ಜೈನ, ಸಿಖ್ ಅಂದರೆ ಭಾರತೀಯ ಮೂಲದ ಧರ್ಮಕ್ಕೆ ಸೇರಿದ ಹೆಣ್ಣುಮಕ್ಕಳನ್ನು ಲವ್-ಜಿಹಾದ್ ಹೆಸರಿನಲ್ಲಿ ಪ್ರೀತಿಸಿ ತದನಂತರ ಅವರನ್ನು ಮತಾಂತರಗೊಳಿಸುವುದು ಎಷ್ಟು ಸಮಂಜಸ. ಅದರ ಬಗ್ಗೆ ಸ್ವಲ್ಪ ಆಲೋಚಿಸಿ; ಮೊದಲು ನಿಮ್ಮ ಧರ್ಮದಲ್ಲಿರುವ ಹುಳುಕುಗಳನ್ನು ತಿದ್ದಿಕೊಳ್ಳಿ ಆಮೇಲೆ ಹಿಂದೂ ಧರ್ಮವನ್ನು ಶುದ್ಧಗೊಳಿಸುವಿರಂತೆ. ಇಷ್ಟಕ್ಕೂ ನಿಮಗೆ ಅನ್ಯ ಧರ್ಮೀಯರನ್ನು ಟೀಕಿಸಲು ಯಾವ ನೈತಿಕ ಹಕ್ಕಿದೆ? ಕೆಳವರ್ಗದವರನ್ನು ದೇವಸ್ಥಾನಗಳೊಳಕ್ಕೆ ಬಿಡಲಿಲ್ಲ ಎನ್ನುವ ನೀವು ಅಂಬೇಡ್ಕರ್ ಅವರನ್ನು ಗುಡಿಯೊಳಗೆ ಬಿಡದೆ ತನ್ನ ತಾತ ತಪ್ಪು ಮಾಡಿದ ಎಂದು ಅವರ ಮೊಮ್ಮಗ ಪ್ರಾಯಶ್ಚಿತ್ತ ಮಾಡಿಕೊಂಡು ಎಲ್ಲಾ ದಲಿತರಿಗೂ ಆ ದೇವಸ್ಥಾನದಲ್ಲಿ ಮುಕ್ತ ಪ್ರವೇಶವಿರುವಂತೆ ಮಾಡಿರುವುದು ನಿಮ್ಮ ಕಣ್ಣಿಗೆ ಕಾಣುವುದಿಲ್ಲ. ಇಷ್ಟಕ್ಕೂ ಮುಸಲ್ಮಾನರೆಂದು ಗುರುತಿಸಿಕೊಳ್ಳುವ ನಡಾಫ್/ಪಿಂಜಾರ ಜನಾಂಗದವರನ್ನು ನಿಮ್ಮ ಮಸೀದಗಳೊಳಗೆ ಬಿಟ್ಟುಕೊಳ್ಳುತ್ತೀರ? ಖಂಡಿತವಾಗಿಯೂ ಇಲ್ಲ ಮತ್ತು ಅವರೊಡನೆ ಇತರೇ ಮುಸ್ಲಿಮರು ಸಂಭಂದವನ್ನು ಬೆಳೆಸಿಕೊಳ್ಳುವುದಿಲ್ಲ. ಇದರ ಬಗ್ಗೆಯೂ ಬರೆದು ನಿಮ್ಮ ಮುಕ್ತ ಚಿಂತನೆಯನ್ನು ಬಹಿರಂಗ ಪಡಿಸಿ.

    ReplyDelete
  5. ಇದು ಇನ್ನು ಸ್ವಲ್ಪ ದಿನ ನಡೆಯಬಹುದು ಅಷ್ಟೇ. ಆಮೇಲೆ ಕೆಳ ಜಾತಿಯ ಹುಡುಗರಿಗೇ ತಮ್ಮ ಜಾತಿಯಲ್ಲಿ ಹುಡುಗಿಯರು ಸಿಗುವುದು ಕಡಿಮೆಯಾಗುತ್ತಾ ಹೋಗುತ್ತದೆ. ಆಗ ಈ ತಂತ್ರ ನಡೆಯದು ಅಂದುಕೊಳ್ಳುತ್ತೇನೆ.

    ReplyDelete
  6. ಬ್ರಾಹ್ಮಣ ರು ಅನ್ಯ ಜಾತಿ ಅಂದರೆ ಹಿಂದೂ ಧರ್ಮದ ಇತರ ಪಂಗಡದ ಹುಡುಗಿಯರನ್ನು ನಿಮ್ಮ ಹಾಗೆ ಮತಾಂತರ ಮಾಡುದಿಲ್ಲ ಎಂಬ ಅಂಶವನ್ನು ನೀವು ತಿಳಿದುಕೊಳ್ಳಬೇಕು. ಇತರ ಪಂಗಡದ ಹುಡುಗಿಯನ್ನು ಒಂದು ಬ್ರಾಹ್ಮಣ ದಂಪತಿ ದತ್ತು ಪಡೆದು ಅವರು ಆ ಹುಡುಗಿಯ ತಂದೆ ತಾಯಿಯ ಸ್ತಾನ ದಲ್ಲಿ ನಿಂತು ಮದುವೆ ಮಾಡಿಸುವ ಪಧತಿ ಈಗ ಎಲ್ಲಾ ಕಡೆ ನಡಿಯುತ್ತಾ ಬಂದಿದೆ. ಮದುವೆ ಎಂಬುವುದು ನಮ್ಮ ಧರ್ಮ ದಲ್ಲಿ ಒಂದು ಪವಿತ್ರ ಬಂಧನ ನಿಮ್ಮ ಮತದ ಹಾಗೆ ಕೆಜಿ ಕೆಜಿ ಜಿನ್ನದ ವ್ಯಾಪಾರ ವಲ್ಲ! ಅದರಲ್ಲೂ ಬ್ರಾಹ್ಮಣ ರಲ್ಲಿ ಮದುವೆ ಎಂದರೆ ಕನ್ಯಾ ಧಾನ ಎಂಬ ವಿವರಣೆ ಕುಡಾ ಉಂಟು. ನಮ್ಮ ಮದುವೆಯ ಕ್ರಮ ವನ್ನು ತಿಳಿದವ ನಿಮ್ಮ ಹಾಗೆ ಬಾಲಿಶ ವಾಗಿ ಮಾತನಾಡಲು ಸಾಧ್ಯವಿಲ್ಲ! ಮತ್ತೆ ದಲ್ಲಾಳಿ ಎಂಬ ವರ ಕೆಲಸವೇ ದುಡ್ಡು ಮಾಡುವುದು ಆದುದರಿಂದ ಅವರಿಂದ ಮೋಸ ಹೊಂದಿದರೆ ಅದಕ್ಕೆ ಬ್ರಾಹ್ಮಣ ರು ಹೇಗೆ ಕಾರಣ ವಾಗುತ್ತಾರೆ ? ಇಂದಿನ ಕಾಲದಲ್ಲಿ ಮದುವೆ ಯ ವಿಚಾರದಲ್ಲಿ ಗಂಡಿಗೆ ಎಷ್ಟು ಸ್ವತಂತ್ರ ವಿದೆಯೋ ಅಷ್ಟೇ ಸ್ವತಂತ್ರ ಹೆಣ್ಣಿಗೆ ಇದೆ! ಹೆಣ್ಣು ಒಪ್ಪದೇ ಇಂದಿನ ಯುಗದಲ್ಲಿ ಮದುವೆ ನಡೆಯಲು ಸಾದ್ಯವಿಲ್ಲ. ನಿಮ್ಮಲ್ಲಿ ಹಾಗೆ ನಡೆದರೂ ನಡೆಯ ಬಹುದು ಯಾಕೆಂದರೆ ನಿಮ್ಮಮತದಲ್ಲಿ ೧೮ ಹಾಗುವ ಮುಂಚೆಯೇ ಮದುವೆಗೆ ಹೆಣ್ಣಿನ ಮನೆಯವರು ಹಾತ್ತೊರಿಯುತ್ತಾರೆ. ಮತ್ತೆ ನಿಮ್ಮವರ ಲವ್ ಜಿಹಾದ್ ನಂತಹ ಮತಾಂತರವನ್ನು ನಾವು ಕಟು ವಾಗಿ ವಿರೋಧಿಸುತ್ತೇವೆ! ನಿಮ್ಮ ಲೇಖನದಲ್ಲಿ ನೀವು ಪರೋಕ್ಷವಾಗಿ ಲವ್ ಜಿಹಾದ್ಗೆ ಬೆಂಬಲ ವ್ಯಕ್ತ ಪಡಿಸಿದ್ದು ನಿಮ್ಮ ಮತಾಂಧತೆಯನ್ನು ಬಿಂಬಿಸುತ್ತದೆ!

    ReplyDelete