Saturday, January 26, 2013

ಹೃದಯದಲ್ಲಿ ಗಾಯವಿಟ್ಟುಕೊಂಡೇ ವಿಧಿವಶರಾದರು

ಜ್ಯೋತಿ ಪುನ್ವಾನಿ
ಕೃಪೆ: ದ ಹಿಂದೂ


ಮೌಲಾನ ಹುಸೈನ್ ಉಮರ್‌ಜೀ ರವಿವಾರ ಮೆದುಳಿನ ರಕ್ತಸ್ರಾವದಿಂದಾಗಿ ಮೃತಪಟ್ಟರು. ಎಲ್ಲಾ ಆರೋಪಗಳಿಂದ ಮುಕ್ತರಾಗಿದ್ದರೂ ಕಳಂಕಿತರಾಗಿಯೇ ಇಹಲೋಕ ತ್ಯಜಿಸಿದರು.“ತನ್ನ ಪ್ರತಿಷ್ಠೆಗೆ ಉಂಟಾದ ಕಳಂಕದಿಂದ ಮುಕ್ತವಾಗಲು ಅವರ ಮನಸ್ಸಿಗೆ ಸಾಧ್ಯವಾಗಲಿಲ್ಲ. ಅವರು ಆರೋಪ ಮುಕ್ತಗೊಂಡರೂ ಮಾಧ್ಯಮಗಳು ಕೇಳುತ್ತಲೇ ಇದ್ದವು: “ರೂವಾರಿ ಹೇಗೆ ತಪ್ಪಿಸಿಕೊಂಡ” ಎಂದು ಅವರ ಮಗ ಸಯೀದ್ ಹೇಳುತ್ತಾರೆ.

2002 ಫೆಬ್ರವರಿ 27ರಂದು ಸಾಬರ್‌ಮತಿ ಎಕ್ಸ್‌ಪ್ರೆಸ್‌ನ ಎಸ್ 6 ಕೋಚ್ ಉರಿಯುವವರೆಗೆ ಮೌಲಾನ ಉಮರ್‌ಜೀ ಯಾರೆಂದು ಗೋಧ್ರಾದ ಹೊರಗೆ ಯಾರಿಗೂ ಗೊತ್ತಿರಲಿಲ್ಲ. ಆ ದುರಂತ ದಲ್ಲಿ 59 ಪ್ರಯಾಣಿಕರು ಸುಟ್ಟು ಹೋಗಿದ್ದರು. ಅವರ ಪೈಕಿ ಹೆಚ್ಚಿನವರು ವಿಶ್ವ ಹಿಂದೂ ಪರಿಷತ್‌ಗೆ ಸೇರಿದವರು.ಬಳಿಕ ಗುಜರಾತ್‌ನಾದ್ಯಂತ ಮುಸ್ಲಿಮರ ವಿರುದ್ಧ ನಡೆದ ಹಿಂಸಾಚಾರದಲ್ಲಿ ಸಾವಿರಾರು ಮಂದಿ ಮೃತಪಟ್ಟರು, ಗಾಯಗೊಂಡರು, ಅತ್ಯಾಚಾರಕ್ಕೊಳಗಾದರು, ಅನಾಥರಾದರು ಹಾಗೂ ಗಂಡಂದಿರನ್ನು ಕಳೆದುಕೊಂಡರು. ಅವರೆಲ್ಲರೂ ಸಮೀಪದ ಹಳ್ಳಿಗಳಿಂದ ಗೋಧ್ರಾಗೆ ವಲಸೆ ಬಂದರು. ಅಲ್ಲಿ ಅವರಿಗಾಗಿ ಶಿಬಿರಗಳನ್ನು ಏರ್ಪಡಿಸಲಾಯಿತು.

ಪಟ್ಟಣದ ಘಾಂಚಿ ಸಮುದಾಯದ ಮುಖ್ಯಸ್ಥ ಮೌಲಾನ ಉಮರ್‌ಜೀ ಮೂರು ಶಿಬಿರಗಳನ್ನು ನಡೆಸಿದರು ಹಾಗೂ ಆ ಮೂಲಕ ಪ್ರಸಿದ್ಧಿಗೆ ಬಂದರು. ಇದುವೇ ಅವರಿಗೆ ಮುಳುವಾಯಿತು.ಘಟನೆ ನಡೆದ ವರ್ಷದ ಬಳಿಕ ರೈಲು ದಹನ ಘಟನೆಯ ರೂವಾರಿ ಎಂಬ ಆರೋಪ ಹೊರಿಸಿ ಅವರನ್ನು ಬಂಧಿಸಲಾಯಿತು. “ಸಮಾಜ ಸೇವೆ ಮಾಡಿದುದಕ್ಕಾಗಿ ಇದು ನಮಗೆ ದೊರಕಿದ ಪ್ರತಿಫಲವಾದರೆ, ಈ ದೇಶವನ್ನು ದೇವರೇ ಕಾಪಾಡಬೇಕು” ಎಂದು ಸಯೀದ್ ಉಮರ್‌ಜೀ ಹೇಳುತ್ತಾರೆ.

ಖುಲಾಸೆ

2002ರ ಆ ಹಿಂಸಾತ್ಮಕ ತಿಂಗಳುಗಳಲ್ಲಿ ಸಯೀದ್‌ರ ತಂದೆ ಕೇವಲ ಸಮಾಜ ಸೇವೆಯನ್ನಷ್ಟೆ ಮಾಡಲಿಲ್ಲ. ಯಾವುದೇ ಹೆಚ್ಚಿನ ಸಹಾಯವಿಲ್ಲದೆ ಶಿಬಿರಗಳನ್ನು ನಡೆಸುವುದು ಕಷ್ಟದ ಕೆಲಸವೇ ಹೌದು. ಆದರೆ, ಅದನ್ನು ಯಾರು ಬೇಕಾದರೂ ಮಾಡಬಹುದಿತ್ತು. ಮುಖ್ಯವಾದ ವಿಚಾರವೆಂದರೆ ಅವರು ಅಂದು ತನ್ನ ಸಮುದಾಯದವರನ್ನು ತನ್ನ ನಿಯಂತ್ರಣದಲ್ಲಿಟ್ಟು ಕೊಂಡರು. ತಮ್ಮ ಧರ್ಮಕ್ಕೆ ಚೂರೇ ಚೂರು ಚ್ಯುತಿಯಾದರೂ ಗೋಧ್ರಾದ ಘಾಂಚಿ ಮುಸ್ಲಿಮರು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಎಲ್ಲರಿಗೂ ಗೊತ್ತು. ಗೋಧ್ರಾದ ಪಕ್ಕದ ಹಳ್ಳಿಗಳಿಂದ ಶಿಬಿರಕ್ಕೆ ಬಂದವರಿಂದ ದೌರ್ಜನ್ಯದ ಕತೆಗಳನ್ನು ಕೇಳಿ ಗೋಧ್ರಾ ಮುಸ್ಲಿಮರು ಆಕ್ರೋಶಗೊಂಡಿದ್ದರು.

ತಮ್ಮದಲ್ಲದ ತಪ್ಪಿಗೆ ತಮಗೆ ಶಿಕ್ಷೆ ನೀಡಲಾಗಿತ್ತು ಎಂಬ ನಿರಾಶ್ರಿತರ ಮಾತುಗಳನ್ನು ಕೇಳಿ ಅವರು ಕುದಿದು ಹೋಗಿದ್ದರು. ಅದೂ ಅಲ್ಲದೆ, ಆಗ ರಾತ್ರಿ ಕರ್ಫ್ಯೂ ಜಾರಿಯಲ್ಲಿತ್ತು. ಪೊಲೀಸರು ಘಾಂಚಿ ಪ್ರದೇಶಗಳಿಗೆ ರಾತ್ರಿ ಹೊತ್ತು ದಾಳಿ ನಡೆಸಿ ರೈಲು ಸುಟ್ಟವರಿಗಾಗಿ ಹುಡುಕುತ್ತಿದ್ದರು ಹಾಗೂ ಸಿಕ್ಕಿದವರನ್ನು ಎತ್ತಿ ಕೊಂಡು ಹೋಗುತ್ತಿದ್ದರು.  (94 ಆರೋಪಿಗಳ ಪೈಕಿ 63 ಮಂದಿಯನ್ನು ದೋಷಮುಕ್ತ ಗೊಳಿಸಲಾಗಿದೆ).

ಇಂಥ ಸ್ಫೋಟಕ ಪರಿಸ್ಥಿತಿಯಲ್ಲಿ ಪೊಲೀಸರು ಮತ್ತು ತನ್ನವರ ನಡುವೆ ಭಾರೀ ಹಿಂಸೆಯೊಂದು ಸ್ಫೋಟಿಸುವುದನ್ನು ತಡೆಯುವಲ್ಲಿ ಮೌಲಾನ ಉಮರ್‌ಜೀ ಯಶಸ್ವಿಯಾಗಿದ್ದರು. ಅವರ ಸಾಧನೆ ಅಷ್ಟೇ ಅಲ್ಲ. ಸಾಬರ್‌ಮತಿ ಕೋಚ್‌ನ್ನು ಸುಟ್ಟಿರುವುದಕ್ಕಾಗಿ ತನ್ನ ಸಮುದಾಯದ ಪರವಾಗಿ ಕ್ಷಮೆ ಯಾಚಿಸಿದ ಮೊದಲಿಗರಾಗಿದ್ದರು ಅವರು. ಗೋಧ್ರಾಕ್ಕೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಸೋನಿಯಾ ಗಾಂಧಿ ಬಂದಾಗಲೂ ಅವರು ಕ್ಷಮೆ ಯಾಚಿಸಿದ್ದರು. ಆದರೆ, ಅವರ ಕ್ಷಮೆ ಯಾಚನೆಗಳು ಪತ್ರಿಕೆಗಳಲ್ಲಿ ವರದಿಯಾಗಲಿಲ್ಲ. ಘಟನೆಯ ಕುರಿತು ಅವರು ವ್ಯಕ್ತಪಡಿಸಿದ ಖಂಡನೆಯೂ ಪ್ರಕಟವಾಗಲಿಲ್ಲ.

ಇಂಥ ವ್ಯಕ್ತಿಯನ್ನು ಕಸ್ಟಡಿಯಲ್ಲಿದ್ದ ಕ್ರಿಮಿನಲ್ ಒಬ್ಬನ ಹೇಳಿಕೆಯ ಆಧಾರದಲ್ಲಿ ರೈಲು ದಹನ ಘಟನೆಯ ರೂವಾರಿ ಎಂಬುದಾಗಿ ಬಂಧಿಸಲಾಯಿತು. ಹೇಳಿಕೆ ನೀಡಿದ ವ್ಯಕ್ತಿ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಹಾಜರಾದ ಕೂಡಲೇ ತನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದ.

63ವರ್ಷ ಪ್ರಾಯದ ತಮ್ಮ ಆಧ್ಯಾತ್ಮಿಕ ನಾಯಕನನ್ನು ಮುಂಜಾನೆ ಅವರ ಮನೆಯಿಂದ ಕನ್ನಡಕ ಮತ್ತು ನಡೆಯುವ ಕೋಲು ಇಲ್ಲದೆಯೇ ಪೊಲೀಸರು ಕರೆದುಕೊಂಡು ಹೋಗುತ್ತಿರುವುದನ್ನು ಗೋಧ್ರಾದ ಪ್ರಮುಖ ಮುಸ್ಲಿಂ ಪ್ರದೇಶ ಪೋಲನ್ ಬಝಾರ್‌ನ ಎಲ್ಲರೂ ನೋಡಿದರು. ಇಷ್ಟೇ ಸಾಕಾಯಿತು. ಮರುದಿನದ ಪತ್ರಿಕೆಗಳಲ್ಲಿ ಲಂಗು ಲಗಾಮಿಲ್ಲದ ವರದಿಗಳು ಬಂದವು- ಅವರಿಗೆ ಪಾಕಿಸ್ತಾನದ ಐಎಸ್‌ಐ, ಅಫ್ಘಾನಿಸ್ತಾನದ ಮುಲ್ಲಾ ಉಮರ್‌ನೊಂದಿಗೆ ಸಂಪರ್ಕವಿದೆ, ಉಗ್ರ ಭಾಷಣಗಳು, ಹುದುಗಿಸಿಟ್ಟ ನಿಧಿಗಳು ಹಾಗೆ ಹೀಗೆ ಎಂಬುದಾಗಿ.

ಎಲ್ಲ ಸುದ್ದಿಗಳಲ್ಲೂ ಅವರ ಕ್ಲೋಸ್ ಅಪ್ ಫೋಟೊಗಳು ಇದ್ದವು. ಇಂಥ ವರದಿಗಾರಿಕೆಯ ಪ್ರಭಾವ ಎಷ್ಟಿತ್ತೆಂದರೆ, ಎಂಟು ವರ್ಷಗಳ ಬಳಿಕ ಅವರ ಬಿಡುಗಡೆಯಾದಾಗ ಗುಜರಾತ್‌ನಾದ್ಯಂತದ ಹಿಂದೂಗಳು ‘ರೂವಾರಿ’ಯನ್ನು ಬಿಟ್ಟಿದ್ದಕ್ಕೆ ಪೊಲೀಸರಿಗೆ ಶಪಿಸಿದರು.

ಮೌಲಾನರ ಪಾಲಿಗೆ ಇದಕ್ಕಿಂತ ಹೇಯ ಆರೋಪ ಬೇರೆ ಇರಲಿಲ್ಲ. 2002ರ ಎಪ್ರಿಲ್‌ನಲ್ಲಿ ಅವರು ಈ ವರದಿಗಾರನಿಗೆ ಹೀಗೆ ಹೇಳಿದ್ದರು: “ಸಮಾಧಾನದಿಂದ ಇರಲು ಮುಸ್ಲಿಮರಿಗೆ ಕಲಿಸಲಾಗುತ್ತಿದೆ. ಹಾಗಾಗಿ, ಈ ಹಿಂಸಾಚಾರವನ್ನು ಅವರು ಅನುಭವಿಸಲೇ ಬೇಕು. ಆದರೆ, ಅವರು ನಮ್ಮ ದೇಶಭಕ್ತಿಯನ್ನು ಪ್ರಶ್ನಿಸುವಾಗ ಕೋಪ ಬರುತ್ತದೆ. ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ 14,000 ಉಲೆಮಾಗಳನ್ನು ದಿಲ್ಲಿಯ ಮರಗಳಿಂದ ನೇತು ಹಾಕಿದ ವಿಷಯ ಅವರಿಗೆ ತಿಳಿದಿಲ್ಲವೇ? ನನ್ನ ಸ್ವಂತ ಗುರು ಆರು ವರ್ಷಗಳ ಕಾಲ ಮಾಲ್ಟದ ಜೈಲಿನಲ್ಲಿದ್ದರು. ಗಾಂಧೀಜಿಯ ಸಂಗವನ್ನು ತೊರೆದರೆ ಬಿಡುಗಡೆ ಮಾಡುವ ಆಶ್ವಾಸನೆಯನ್ನು ಬ್ರಿಟಿಶರು ನೀಡಿದ್ದರು. ಆದರೆ, ಅವರು ಅದನ್ನು ತಿರಸ್ಕರಿಸಿದರು”.

ಮೌಲಾನ ಉಮರ್‌ಜೀಗೆ ಜಾಮೀನು ಸಿಗಲಿಲ್ಲ. ಅವರ ವಿರುದ್ಧದ ಭಯೋತ್ಪಾದನೆ ಆರೋಪಗಳನ್ನು 2009ರಲ್ಲಿ ಹಿಂದಕ್ಕೆ ಪಡೆದ ಬಳಿಕವೂ ಸಿಗಲಿಲ್ಲ. ಅವರು ಜೈಲಿನಲ್ಲಿರುವಾಗ ಅವರ ಆರು ಮಕ್ಕಳಿಗೆ ಮದುವೆಯಾಯಿತು. ಅಂತಿಮವಾಗಿ 2011 ಫೆಬ್ರವರಿಯಲ್ಲಿ ಅವರನ್ನು ಖಲಾಸೆಗೊಳಿಸಲಾಯಿತು. ಮೋದಿ ಸರಕಾರ ಮತ್ತು ಮಾಧ್ಯಮಗಳು ಹಚ್ಚಿದ ಕಳಂಕವನ್ನು ತೊಡೆದು ಹಾಕುವಲ್ಲಿ  ಹೆಚ್ಚಿನ ಪ್ರಯತ್ನಗಳು ನಡೆಯಲಿಲ್ಲ. ಬಿಡುಗಡೆಗೊಂಡ ಬಳಿಕ ಅವರು ಎರಡು ವರ್ಷವಷ್ಟೆ ಬದುಕಿದರು.

No comments:

Post a Comment