Saturday, June 1, 2013

ಗದ್ದೆ ಮತ್ತು ಇತರ ಕತೆಗಳು

 ಹಬ್ಬ
ಇಬ್ಬರು ಪುಟಾಣಿಗಳು ಶಾಲೆಗೆ ಹೋಗುತ್ತಾ ಮಾತನಾಡಿಕೊಳ್ಳುತ್ತಿದ್ದವು.
‘‘ನಮ್ಮ ಮನೆಯಲ್ಲಿ ಇವತ್ತು ಹಬ್ಬ’’
‘‘ಏನು ಅಡುಗೆ ಮಾಡಿದ್ರು...’’
‘‘ಗಂಜಿ ಮತ್ತು ಚಟ್ನಿ...’’
‘‘ಹಬ್ಬ ಅಂದೆ...’’
‘‘ಹೌದು...ಮನೆಯಲ್ಲಿ ಗಂಜಿ ಮಾಡಿದ ದಿನ ನಮಗೆ ಹಬ್ಬ’’

ಸೂರ್ಯ
ಮಗ ಕೇಳಿದ ‘‘ಸೂರ್ಯನೇಕೆ ಅಷ್ಟು ದೂರದಲ್ಲಿದ್ದಾನೆ?’’
‘‘ಹತ್ತಿರದಲ್ಲಿದ್ದರೆ ಮನುಷ್ಯ ಅದಕ್ಕೇನಾದರೂ ಕೇಡು ಮಾಡಿಯಾನು ಎಂಬ ಭಯದಲ್ಲಿ ದೇವರು ಅಷ್ಟು ದೂರದಲ್ಲಿಟ್ಟಿದ್ದಾನೆ ಮಗಾ’’ ತಂದೆ ಹೇಳಿದ. 


ಯುವಕ
ಯುವಕನೊಬ್ಬ ರಸ್ತೆ ದಾಟುವುದಕ್ಕೆ ಹೆದರುತ್ತಿದ್ದ.
ಅಲ್ಲಿಗೆ ಬಂದ ತುಸು ಪ್ರಾಯದ ಮುದುಕನೊಬ್ಬ ಅವನನ್ನು ಕೈ ಹಿಡಿದು ರಸ್ತೆ ದಾಟಿಸಿದ.
ಯಾರೋ ಯುವಕನ ಬೆನ್ನು ತಟ್ಟಿದರು ‘‘ಮುದುಕನನ್ನು ರಸ್ತೆ ದಾಟಿಸಿದ ನಿನ್ನದು ಒಳ್ಳೆಯ ಮನಸ್ಸು’’

ಬರ
ಬರಗಾಲ.
ಆದರೂ ರೈತ ಉಳುತ್ತಿದ್ದ.
ಯಾರೋ ಕೇಳಿದರು ‘‘ಭೂಮಿ ಆಕಾಶ ಬತ್ತಿ ಹೋಗಿದೆ....ಹೊಲ ಉಳುತ್ತಿದ್ದೀಯಲ್ಲ...’’
‘‘ಆದರೆ ಎದೆಯಲ್ಲಿ ಒಂದಿಷ್ಟು ಜಲ ಬತ್ತದೇ ಉಳಿದಿದೆ. ಅಲ್ಲಿಯವರೆಗೆ ಉಳುತ್ತೇನೆ’’ ರೈತ ಹೇಳಿದ.


ಗದ್ದೆ
ಹಸಿರಾಗಿ ಹರಡಿಕೊಂಡಿತ್ತು ರೈತನ ಗದ್ದೆ.
ಕೈಗಾರಿಕಾ ಉದ್ಯಮಿ ಅದನ್ನು ನೋಡಿ ಹೇಳಿದ ‘‘ಛೇ...ಅದೆಷ್ಟು ಜಾಗ ವ್ಯರ್ಥವಾಗಿ ಬಿದ್ದುಕೊಂಡಿದೆ’’

ಕನಸು
ರೈಲಿನಲ್ಲಿ ಪ್ರತಿ ದಿನ ನನ್ನ ಎದುರುಗಡೆ ಬಂದು ಕೂರುತ್ತಿದ್ದ ಹುಡುಗಿ.
ಸಮಯ ಕಳೆಯುವುದಕ್ಕೆಂದು ಅದೇನೋ ಹೆಣೆಯುತ್ತಿದ್ದಳು.
ಸ್ವೆಟರ್ ಆಗಿರಬಹುದು. ಅಥವಾ ಕುಲಾವಿ....
ಪ್ರತಿ ದಿನ ನಡೆಯುತ್ತಲೇ ಇತ್ತು. ಒಂದು ದಿನ ಹಾಗೇ ಹೆಣೆಯುತ್ತಿದ್ದವಳು, ತನ್ನ ಕೆಲಸ ಮುಗಿಸಿದ್ದೇ ಎದ್ದು ನಿಂತಳು.
ನನ್ನಡೆಗೆ ಬಾಗಿ ಹೇಳಿದಳು ‘‘ಇದು ನಿಮಗಾಗಿ ನಾನು ಹೆಣೆದ ನನ್ನ ಕನಸು. ಅಳತೆ ಸರಿಯಾಗಿದೆಯೋ ನೋಡಿ...’’

ಹಸಿವು
ಆತನಿಗೆ ತುಂಬಾ ಹಸಿವಾಗುತ್ತಿತ್ತು.
ಮನೆಯಲ್ಲೇನೂ ಇಲ್ಲ.
ಸೀದಾ ಗೆಳೆಯನ ಮನೆಗೆ ಹೋದರೆ ಹೇಗೆ? ಯೋಚಿಸದವನೇ ಅಲ್ಲಿಗೆ ನಡೆದ.
ಗೆಳೆಯ ಆಗಷ್ಟೇ ಉಂಡು ಕೈ ತೊಳೆಯುತ್ತಿದ್ದ. ಬಂದ ಗೆಳೆಯನನ್ನು ನೋಡಿದ್ದೇ ‘‘ಏನೋ...ಊಟ ಆಯ್ತ?’’ ಕೇಳಿ ಬಿಟ್ಟ.
ಗೆಳೆಯ ಮರಳಿದ.

ನೀರು ಕುಡಿದು ಮಲಗಿದ.

1 comment:

  1. ಕನಸು ಕತೆ ಇಷ್ಟ ಆಯ್ತು
    ಮಾಲತಿ ಎಸ್.

    ReplyDelete