Saturday, August 24, 2013

ದಿನಕ್ಕೊಂದು ಪುಸ್ತಕ-ಮೌನದ ಕೌದಿಯಲ್ಲಿ ಸುತ್ತಿಟ್ಟ ಸಾಲುಗಳು: ದೀಪದ ಗಿಡ


ಬಸವರಾಜ ಸೂಳಿಭಾವಿ ಕನ್ನಡ ಲೋಕಕ್ಕೆ ಹಲವು ಕಾರಣಗಳಿಗಾಗಿ ಚಿರಪರಿಚಿತರು. ಹೋರಾಟಚಳವಳಿಯಲ್ಲಿ ಒಮ್ಮೆ ಸಕ್ರಿಯರಾಗಿದ್ದ ಬಸು ಅವರು ಇದೀಗ ಪುಸ್ತಕಕಗಳ ಹಣತೆಗಳ ಮೂಲಕ ಕನ್ನಡದ ಕತ್ತಲನ್ನು ಗುಡಿಸುತ್ತಿರುವವರು. ಇವರ ಇನ್ನೊಂದು ಶಕ್ತಿ ಕಾವ್ಯ. ಅಥವಾ ಇವರ ನಿಜವಾದ ಶಕ್ತಿಯೇ ಕಾವ್ಯವೇನೋ? ‘ದೀಪದ ಗಿಡ’ ಓದುತ್ತಾ ಹೋದ ಹಾಗೆ, ಅದು ನಮ್ಮಾಳಗೆ ಬೆಳಕಾಗಿ ಹರಡಿಕೊಳ್ಳುವ ಪರಿಗೆ, ನಮ್ಮ ಕಣ್ಣ ಹಣತೆಯ ಕುಡಿ ತುಳುಕದೇ ಇರುವುದಿಲ್ಲ. ಅಲ್ಲಮನ ಅನುಭಾವ, ಬುದ್ಧನ ಕೆನ್ನೆಯ ಬಿಸುಪು, ಬಾಗಿದ ತೆನೆಯ ಕಂಪು, ಕುದಿವ ಅನ್ನದ ಪರಿಮಳ ಈ ಕಾವ್ಯದ ಮುಖ್ಯ ಗುಣಗಳು. ಒಂದು ಕಾಲದಲ್ಲಿ ಜನಸಂಘಟನೆಯಲ್ಲಿ ಸಕ್ರಿಯರಾಗಿದ್ದ ಬಸು ಅವರು ತನ್ನ ವೌನದ ಕೌದಿಯಲ್ಲಿ ಸುತ್ತಿಟ್ಟ ಸಾಲುಗಳು ಇವು. ಘಜಲ್‌ನ ಗುಣವುಳ್ಳ ಇಲ್ಲಿರುವ ಸಾಲುಗಳು ಉರಿದು ಮುಗಿದು ಹೋಗುವಂತಹದಲ್ಲ. ನಮ್ಮಿಳಗೆ ಬೆಳಕಿನ ಗಿಡವಾಗಿ ಸಹಸ್ರ ದೀಪಗಳನ್ನು ಹಚ್ಚುತ್ತವೆ. ವೌನ, ವಿಷಾದ, ಸಾವು, ನೆನಪು, ಬದುಕು ಇವೇ ಇಲ್ಲಿರುವ ಕವಿತೆಗಳ ಪ್ರಧಾನ ವಸ್ತುಗಳು.
‘‘ಎಷ್ಟು ಸಲ ತೊಳೆದರೂ ಕನ್ನಡಿಯನ್ನ
ಮುಖದ ಮೇಲಿನ ಕಲೆ ಹಾಗೇ ಉಳಿಯಿತು’’ ಇಂತಹ ಆತ್ಮವಿಮರ್ಶೆಯ ಸಾಲು ಅಲ್ಲಲ್ಲಿ ನಮ್ಮನ್ನು ಥಕ್ಕೆಂದು ಆವರಿಸಿಕೊಳ್ಳುತ್ತದೆ.
‘‘ಹೆಣಗಳಿಗೆ ಮಾತಿಲ್ಲ ಅಂದವರ್ಯಾರು?
ದಾರಿಯಲ್ಲಿ ಎದುರಾದ ಹೆಣಗಳೆಲ್ಲ ಬದುಕ ಎಚ್ಚರಿಸುತ್ತಾ ನಡೆದಿದ್ದವು’’ ಅಧ್ಯಾತದ್ಮ ಹೊಳಹುಗಳು ಹೊಳೆಯಿಸುವ ಇಂತಹ ಸಾಲುಗಳೂ ಇಲ್ಲಿ ಸಾಕಷ್ಟಿವೆ. ಬದುಕನ್ನು ತೀವ್ರವಾಗಿ ಪ್ರೀತಿಸುವ, ಹಚ್ಚಿಕೊಂಡಿರುವ ಕವಿಯಿಂದಷ್ಟೇ ಇಂತಹದೊಂದು ದೀಪದ ಗಿಡವನ್ನು ನೆಡಲು ಸಾಧ್ಯ. ಕನ್ನಡದ ಕಾವ್ಯಪ್ರಕಾರಕ್ಕೆ ಹೊಸ ಚೈತನ್ಯವನ್ನು, ಹೊಸ ಹೊಳಪನ್ನು ಈ ಸಾಲುಗಳು ನೀಡಿವೆ. ಕವಿತೆಗಳನ್ನು ಜನರ ಎದೆಯ ಬಳಿಗೆ ಕೊಂಡೊಯ್ಯುವ ಕವಿಯ ಪ್ರಯತ್ನ, ಮುಂದೆ ಹೊಸ ಪರಂಪರೆಯಾಗಿ ಮುಂದುವರಿಯುವ ಸಾಧ್ಯತೆಯಿದೆ.
 ಕವಿ ಪ್ರಕಾಶನ ಹೊನ್ನಾವರ(ದೂರವಾಣಿ: 9480211320) ಇವರು ಕೃತಿಯನ್ನು ಹೊರ ತಂದಿದ್ದಾರೆ. ಕೃತಿಯ ಮುಖಬೆಲೆ 150 ರೂ.

No comments:

Post a Comment