Thursday, October 31, 2013

ಪಟೇಲರ ತತ್ವಗಳ ಸಮಾಧಿಯ ಮೇಲೆ ಮೋದಿಯ ಪ್ರತಿಮೆ

 ಭಾರತವೆಂದರೆ ಫ್ಯಾಂಟಸಿಗಳ ತವರೂರು. ನಾವು ಇಲ್ಲಿ ವಾಸ್ತವವನ್ನು ಫ್ಯಾಂಟಸಿ ರೂಪದಲ್ಲಿ ಮಾತ್ರ ಇಷ್ಟ ಪಡುತ್ತೇವೆ. ಇರುವವರನ್ನು ಕೊಂದು, ಬಳಿಕ ಅವರನ್ನು ವರ್ಣರಂಜಿತವಾಗಿ ನಮ್ಮ ಮೂಗಿನ ನೇರಕ್ಕೆ ರೂಪಿಸಿಕೊಳ್ಳುವುದರಲ್ಲಿ ಸಿದ್ಧಹಸ್ತರು. ಇಂತಹದೊಂದು ಮನಸ್ಥಿತಿಯಲ್ಲೇ ನಾವು ಪುರಾಣ ಗಳನ್ನು ಸೃಷ್ಟಿಸಿಕೊಂಡಿದ್ದೇವೆ. ನಮ್ಮ ಇತಿಹಾಸವನ್ನು ಗೊಂದಲಗೊಳಿಸಿ, ಅದಕ್ಕೆ ರೋಚಕತೆಯನ್ನು ತುಂಬಿ ನಮಗೆ ನಾವೇ ಮೈಥುನ ಮಾಡಿ ಕೊಳ್ಳುತ್ತಿದ್ದೇವೆ. ನಮ್ಮೆಲ್ಲ ಇತಿಹಾಸ ಪುರುಷರು ನಮ್ಮ ಈ ಮನಸ್ಥಿತಿಗೆ ಬಲಿಯಾಗಿದ್ದಾರೆ. ಅದಕ್ಕೆ ಗಾಂಧಿಯೂ ಹೊರತಲ್ಲ, ಪಟೇಲರೂ ಹೊರತಲ್ಲ. 

ನರೇಂದ್ರ ಮೋದಿ ಆಗಸದೆತ್ತರ ಪಟೇಲರ ಪ್ರತಿಮೆಯೊಂದನ್ನು ತಯಾರಿಸುವುದಕ್ಕೆ ಹೊರಟಿ ದ್ದಾರೆ. ಮತ್ತು ಅದಕ್ಕೆ ಬೇಕಾದ ಕಬ್ಬಿಣಗಳನ್ನು ದೇಶಾದ್ಯಂತ ಸಂಗ್ರಹಿಸುವುದಕ್ಕೆ ಹೊರಟಿದ್ದಾರೆ. 600 ಅಡಿ ಎತ್ತರದ ಅಂದರೆ ಅಮೆರಿಕದ ಲಿಬರ್ಟಿ ಪ್ರತಿಮೆಯ ದುಪ್ಪಟ್ಟು ಎತ್ತರ ಇರುವಂತಹ ಪ್ರತಿಮೆಯನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ ನರೇಂದ್ರ ಮೋದಿ. ಅಂದ ಹಾಗೆ ಇದಕ್ಕೆ ವೆಚ್ಚವಾಗುವ ಹಣ ಎಷ್ಟು ಗೊತ್ತೆ? 2,500 ಕೋಟಿ ರೂಪಾಯಿ! ಈ ಮೂಲಕ ನರೇಂದ್ರ ಮೋದಿ ಏನನ್ನು ಸಾಧಿಸಲು ಹೊರಟಿದ್ದಾರೆ? ಕನಿಷ್ಠ ಪಟೇಲರ ವೌಲ್ಯವನ್ನಾದರೂ ಎತ್ತಿ ಹಿಡಿಯುವ ಪ್ರಯತ್ನ ಇದರ ಹಿಂದೆ ಇದೆಯೆಂದಾಗಿ ದ್ದರೆ 2500 ಕೋಟಿ ರೂ. ಯನ್ನು ದೇಶ ಸಹಿಸಬಹುದಾಗಿತ್ತು. ಒಂದೆಡೆ ಈ ದೇಶ ಶೇ. 50ರಷ್ಟು ಬಡತನ, ಆಹಾರ ಕೊರತೆಯಿಂದ ನರಳುತ್ತಿರು ವಾಗ, ಯಾರನ್ನು ಉದ್ಧರಿ ಸಲು ಇಷ್ಟು ಕೋಟಿಯನ್ನು ವ್ಯಯ ಮಾಡುತ್ತಿದ್ದಾರೆ. ಒಬ್ಬ ಮೋದಿಯನ್ನು ಪ್ರಧಾನಿ ಮಾಡುವುದಕ್ಕಾಗಿ 2,500 ಕೋಟಿ ರೂಪಾಯಿ ಯನ್ನು ವೆಚ್ಚ ಮಾಡಲಾಗುತ್ತದೆ ಎಂದರೆ ಇದು ವಲ್ಲಭಭಾಯಿ ಪಟೇಲರಿಗೆ ಮಾಡುವ ಅವಮಾನ ವಾಗಿದೆ.

ನಿಜ. ಪಟೇಲರನ್ನು ಮರೆತರೆ ಭಾರತ ಗಣರಾಜ್ಯವನ್ನು ಮರೆತ ಹಾಗೆ. ದೇಶ ಸ್ವಾತಂತ್ರಗೊಂಡ ಬಳಿಕವೂ ಒಂದೆಡೆ ಪೋರ್ಚು ಗೀಸರು, ಮಗದೊಂದೆಡೆ ಹೈದರಾಬಾದ್ ನಿಜಾಮರು ಹಾಗೆಯೇ ಮೈಸೂರು ಅರಸರು ಈ ದೇಶವನ್ನು ತಿಗಣೆಗಳಂತೆ ಕಚ್ಚಿ ಕುಳಿತ್ತಿದ್ದಾಗ ವಿವಿಧ ತಂತ್ರಗಳನ್ನು ಬಳಸಿ ಅವರಿಂದ ದೇಶಕ್ಕೆ ಮುಕ್ತಿ ನೀಡಿದ್ದು ಪಟೇಲರು. ಸ್ವತಂತ್ರ ಭಾರತದ ಅಳಿದುಳಿದ ಬಿರುಕುಗಳನ್ನು ಮುಚ್ಚಿ ಈ ದೇಶವನ್ನು ಅಖಂಡಗೊಳಿಸಿದ್ದು ವಲ್ಲಭಭಾಯಿ ಪಟೇಲ್. ಅವರು ದೇಶವನ್ನು ಒಂದು ಗೂಡಿಸಿದರು. ಆದರೆ ನರೇಂದ್ರ ಮೋದಿ ಮತ್ತು ಅವರ ಆದರ್ಶ ವಾಗಿರುವ ಆರೆಸ್ಸೆಸ್ ಇಂದು ಮಾಡುತ್ತಿರುವುದು ಏನು? ಇವರು ಕಾಲಿಟ್ಟಲ್ಲೆಲ್ಲ ದೇಶ ಒಡೆಯುತ್ತದೆ. ಹಿಂದು-ಮುಸ್ಲಿಮರು ಹೊಡೆದಾಡತೊಡಗುತ್ತಾರೆ. ವಲ್ಲಭಬಾಯಿ ಪಟೇಲ್ ಒಂದುಗೂಡಿಸಿದ ದೇಶ, ಆರೆಸ್ಸೆಸ್‌ನಂತಹ ಸಂಘಟನೆಯಿಂದ ಮತ್ತೆ ಬಿರುಕುಬಿಡುತ್ತಿದೆ. ಇಂತಹ ಸಂಘಟನೆಯ ಆಶೀರ್ವಾದಿಂದ ಅಧಿಕಾರ ಹಿಡಿಯಲು ಹೊರಟಿರುವ ನರೇಂದ್ರಮೋದಿ ಅವರು ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡುತ್ತಾರೆನ್ನುವುದೇ ಒಂದು ಅಸಂಗತ ನಾಟಕ. ನರೇಂದ್ರ ಮೋದಿ ತನ್ನ ಒಡೆಯುವ ರಾಜಕೀಯಕ್ಕೆ ಇಂದು ಪಟೇಲರನ್ನು ಬಳಸಲು ಮುಂದಾಗಿದ್ದಾರೆ. ಆದರೆ ಈ ದೇಶಕ್ಕೆ ಬೇಕಾಗಿರುವುದು ಒಂದುಗೂಡಿಸುವ ಪಟೇಲ್. ಆದರೆ ಮೋದಿ ನಿರ್ಮಿಸಲು ಹೊರಟಿರುವುದು ದೇಶ ಒಡೆಯುವ ಪಟೇಲರನ್ನು.


 ಗುಜರಾತಿನಲ್ಲಿ 2,500 ಕೋಟಿ ರೂಪಾಯಿ ವೆಚ್ಚ ಮಾಡುತ್ತಿರುವುದು ಪಟೇಲರನ್ನು ಗೌರವಿಸುವುದಕ್ಕಲ್ಲ, ಅವಮಾನಿಸುವುದಕ್ಕೆ. ಯಾವ ಸಂಘಟನೆಯನ್ನು ಪಟೇಲರು ನಿಷೇಧಿಸಿದ್ದರೋ, ಯಾವ ಸಂಘಟನೆ ಪಟೇಲರನ್ನು ‘ದೇಶವನ್ನು ವಿಭಜಿಸಿದ್ದಾನೆ’ ಎಂದು ಅವಮಾನಿಸಿತ್ತೋ ಅದೇ ಸಂಘಟನೆ ಇದೀಗ ಪಟೇಲರನ್ನು ಬಳಸಿಕೊಂಡು ರಾಜಕೀಯ ನಾಟಕ ಆಡಲು ಹೊರಟಿದೆ. ದಿವಂಗತ ಹೊ.ವೆ.ಶೇಷಾದ್ರಿ ಆರೆಸ್ಸೆಸ್‌ನ ನೇತಾರರಾಗಿ ಕೆಲಸ ಮಾಡಿದವರು. ಅಲ್ಲದೆ ಆರೆಸ್ಸೆಸ್‌ನ ಹಿರಿಯ ಚಿಂತಕರು. ಇವರು ಬರೆದ ಕೃತಿಯೇ ‘ದಿ ಟ್ರಾಜಿಕ್ ಸ್ಟೋರಿ ಆಫ್ ಪಾರ್ಟಿಶನ್’. ಈ ಕೃತಿಯಲ್ಲಿ ಶೇಷಾದ್ರಿಯವರು ಪಟೇಲರ ಮೇಲೆ ‘ದೇಶ ವಿಭಜನೆ’ಯ ನೇರ ಆರೋಪವನ್ನು ಮಾಡುತ್ತಾರೆ. ‘ನೆಹರೂ ಹಾಗೂ ಪಟೇಲ್ ಅನುಮೋದಿಸಿರುವ ಈ ಯೋಜನೆ ಯು, ಭಾರತವನ್ನು ತುಂಡರಿಸುವುದನ್ನು ಹಾಗೂ ಪಾಕಿಸ್ತಾನದ ಸೃಷ್ಟಿಯನ್ನು ಪ್ರತಿಪಾದಿಸಿತು...’ ಎಂದು ಸ್ಪಷ್ಟವಾಗಿ ಬರೆಯುತ್ತಾರೆ. ಆರೆಸ್ಸೆಸ್ ಕಾರ್ಯಾಲಯ ಈ ಕೃತಿಯನ್ನು ಯಾವ ನಾಚಿಕೆಯೂ ಇಲ್ಲದೆ ಮಾರಾಟ ಮಾಡುತ್ತಿದೆ. ಗುಜರಾತಿನ ಮುಖ್ಯ ಕಾರ್ಯಾಲಯದಲ್ಲೂ ಇದು ಮಾರಾಟವಾಗುತ್ತಿರುವುದನ್ನು ಪತ್ರಿಕೆಗಳು ವರದಿ ಮಾಡಿವೆ. ನರೇಂದ್ರ ಮೋದಿ ನಿಜಕ್ಕೂ ಪಟೇಲರ ಮೇಲೆ ಗೌರವವನ್ನು ಹೊಂದಿ ದ್ದಾರಾದರೆ, ಅವರು ಪ್ರತಿಮೆಗೆ ಶಿಲಾನ್ಯಾಸ ನೆರವೇರಿಸುವ ಮುನ್ನ, ಈ ಕೃತಿಯನ್ನು ನಿಷೇಧಿಸಬೇಕಾಗಿತ್ತು. ಯಾಕೆ ಅವರು ಇನ್ನೂ ಈ ಕೃತಿಯನ್ನು ನಿಷೇಧಿಸಿಲ್ಲ? ಈ ಹಿಂದೆ ಜಸ್ವಂತ್ ಸಿಂಗ್ ಅವರು ‘ಜಿನ್ನಾ’ ಕುರಿತಂತೆ ಕೃತಿಯೊಂದನ್ನು ಬರೆದಿದ್ದರು. ಅದರಲ್ಲಿ ಸರ್ದಾರ್ ವಲಭಭಾಯಿ ಪಟೇಲ್ ಬಗ್ಗೆ ಆಕ್ಷೇಪಾರ್ಹ ಸಾಲುಗಳು ಇವೆ ಎಂದು ನರೇಂದ್ರ ಮೋದಿಯವರು ಈ ಕೃತಿಯನ್ನು ಗುಜರಾತ್‌ನಲ್ಲಿ ನಿಷೇಧಿಸಿದ್ದರು. ಆದರೆ ಹೊ. ವೇ. ಶೇಷಾದ್ರಿಯ ಕೃತಿಯ ತಂಟೆಗೆ ಈವರೆಗೆ ಹೋಗಿಲ್ಲ. ಇದರ ಅರ್ಥ ವೇನು? ಈ ದೇಶವನ್ನು ವಿಭಜಿಸಿದವರಲ್ಲಿ ಪಟೇಲರು ಸೇರಿದ್ದಾರೆ ಎನ್ನುವುದನ್ನು ಮೋದಿ ಪರೋಕ್ಷವಾಗಿ ಒಪ್ಪಿಕೊಂಡ ಸೂಚನೆಯೇ ಇದು?
 
ಆರೆಸ್ಸೆಸ್ ಪಟೇಲರಿಗೆ ವಂಚಿಸಿದ ಕತೆ ಇತಿಹಾಸ. ಗಾಂಧಿ ಹತ್ಯೆಯ ಬಳಿಕ ಆರೆಸ್ಸೆಸ್ಸನ್ನು ನಿಷೇಧಿಸಲು ಶಿಫಾರಸು ಮಾಡಿರುವುದೇ ವಲ್ಲಭಭಾಯಿ ಪಟೇಲ್. ಗಾಂಧಿ ಹತ್ಯೆಗೆ ಆರೆಸ್ಸೆಸ್ ಚಿಂತನೆಗಳೇ ಕಾರಣ ಎಂದು ಪಟೇಲ್ ನಂಬಿದ್ದರು. 1948ರಲ್ಲಿ ಆರೆಸ್ಸೆಸ್ಸನ್ನು ನಿಷೇಧಿಸುವ ಸಂದರ್ಭದಲ್ಲಿ ಪಟೇಲರು ಹೊರಡಿಸಿದ ನೋಟಿಫಿಕೇಶನ್‌ನಲ್ಲಿ ‘‘ಆರೆಸ್ಸೆಸ್ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿದೆ. ದ್ವೇಷವನ್ನು ಬಿತ್ತಿದೆ. ಗಲಭೆಗಳನ್ನು ನಡೆಸಲು ಪ್ರೇರಣೆ ನೀಡಿದೆ’’ ಎಂದು ತಿಳಿಸಿದ್ದರು. ಅಷ್ಟೇ ಅಲ್ಲ, ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿ ‘‘ಆರೆಸ್ಸೆಸ್ ದೇಶ ವಿರೋಧಿ ಲಕ್ಷಣಗಳನ್ನು ಹೊಂದಿದೆ’’ ಎಂದಿದ್ದರು. ಆರೆಸ್ಸೆಸ್‌ನ ಮುಖಂಡ ಶ್ಯಾಮ್ ಪ್ರಸಾದ್ ಮುಖರ್ಜಿ ಯವರಿಗೆ ಬರೆದ ಪತ್ರದಲ್ಲೂ ಆರೆಸ್ಸೆಸ್‌ನ ದೇಶ ವಿರೋಧಿ ಚಟುವಟಿಕೆಗಳನ್ನು ಉಲ್ಲೇಖಿಸಿದ್ದರು. ಹಾಗೆಯೇ ಗೋಳ್ವಾಲ್ಕರ್‌ಗೆ ಬರೆದ ಪತ್ರದಲ್ಲಿ, ಆರೆಸ್ಸೆಸ್ ಚಿಂತನೆಯೇ ಗಾಂಧೀಜಿಯನ್ನು ಬಲಿತೆಗೆದು ಕೊಂಡಿತು ಎಂದು ಬರೆಯು ತ್ತಾರೆ. ಇಷ್ಟೆಲ್ಲ ಆದರೂ ವಲಭಭಾಯಿ ಪಟೇಲ್ ಆರೆಸ್ಸೆಸ್‌ನ ಮೇಲಿನ ನಿಷೇಧವನ್ನು ಹಿಂದೆಗೆಯುತ್ತಾರೆ. ಅದಕ್ಕೆ ಕಾರಣ, ಆರೆಸ್ಸೆಸ್ ಅವರಿಗೆ ನೀಡಿದ ವಾಗ್ದಾನ. 1949ರಲ್ಲಿ ಆರೆಸ್ಸೆಸ್ ಪಟೇಲ್ ಅವರಿಗೆ ಕೆಲವು ವಾಗ್ದಾನ ವನ್ನು ನೀಡಿತು. ಒಂದು, ಅದು ತನ್ನ ಸಂವಿಧಾನ ವನ್ನು ಪುನರ್ ರಚಿಸಿತು. ಮತ್ತು ರಾಜಕೀಯ ದಲ್ಲಿ ಯಾವತ್ತೂ ಪ್ರವೇಶಿಸುವುದಿಲ್ಲ ಹಾಗೂ ಕೇವಲ ಸಾಂಸ್ಕೃತಿಕ ಚಟುವಟಿಕೆಗಳಿಗೆ ತನ್ನನ್ನು ಸೀಮಿತಗೊಳಿಸುತ್ತೇನೆ ಎಂದು ಸ್ಪಷ್ಟವಾಗಿ ತಿಳಿಸಿತು. ಆ ವಾಗ್ದಾನವನ್ನು ನಂಬಿ ಪಟೇಲರು ಆರೆಸ್ಸೆಸ್‌ನ ಮೇಲಿನ ನಿಷೇಧವನ್ನು ಹಿಂದೆಗೆಯಲು ಕಾರಣರಾದರು. ಆದರೆ ಇಂದು ಆರೆಸ್ಸೆಸ್ ತನ್ನ ಆ ವಾಗ್ದಾನವನ್ನು ಉಳಿಸಿ ಕೊಂಡಿದೆಯೆ? ತಾನು ನೀಡಿದ ವಾಗ್ದಾನವನ್ನೇ ಮರೆತ ಆರೆಸ್ಸೆಸ್ ಮತ್ತು ಅದರ ಪ್ರೀತಿಯ ಕುವರ ನರೇಂದ್ರ ಮೋದಿ ಇಂದು ಅತ್ಯಂತ ಎತ್ತರದ ಪಟೇಲರ ಪ್ರತಿಮೆಯನ್ನು ನಿಲ್ಲಿಸಲು ಹೊರಟಿ ದ್ದಾರೆ. ಇದು ಪಟೇಲರ ತತ್ವಗಳ ಸಮಾಧಿಯ ಮೇಲೆ ನಿಲ್ಲಿಸುವ ಪ್ರತಿಮೆಯಲ್ಲದೆ ಇನ್ನೇನು?


ಇಂದು ಆರೆಸ್ಸೆಸ್ ಮತ್ತು ಮೋದಿ ನಿಜವಾದ ಪಟೇಲರನ್ನು ಅಳಿಸಿ ಅಲ್ಲಿ ಆರೆಸ್ಸೆಸ್ ಪಟೇಲರನ್ನು ನಿಲ್ಲಿಸಲು ಹೊರಟಿದ್ದಾರೆ. ಪಟೇಲರ ನಿಜವಾದ ವ್ಯಕ್ತಿತ್ವವನ್ನು ಅಳಿಸಿ ಹಾಕಿ ತಮ್ಮ ರಾಜಕೀಯ ಪೂರಕವಾದ ಪಟೇಲರನ್ನು ಅಂದರೆ ನೆಹರು ವಿರೋಧಿ ಪಟೇಲರನ್ನು ಪ್ರತಿಷ್ಠಾಪಿಸುವ ಉದ್ದೇಶ ನರೇಂದ್ರ ಮೋದಿ ಮತ್ತು ಬಳಗದ್ದಾಗಿದೆ. ಆದರೆ ನರೇಂದ್ರ ಮೋದಿಯ ಪಟೇಲರ ಪ್ರತಿಮೆ ಅದೆಷ್ಟೇ ಎತ್ತರವಿರಲಿ, ನಿಜವಾದ ಪಟೇಲರ ವ್ಯಕ್ತಿತ್ವದ ಎತ್ತರವನ್ನು ಆ ಪಟೇಲರ ಪ್ರತಿಮೆ ಸರಿಗಟ್ಟಲಾರದು. ಇದನ್ನು ಮೋದಿ ಬಳಗ ನೆನಪಿನಲ್ಲಿಡಬೇಕಾಗಿದೆ.

2 comments:

  1. ಉತ್ತರಪ್ರದೇಶದ ತುಂಬಾ ತುಂಬಿರುವ ಮಾಯಾವತಿ ಮತ್ತು ಭಾರತದ ತುಂಬಾ ತುಂಬಿರುವ ನೆಹರು ಕುಟುಂಬದವರ ಮೂರ್ತಿಗಳು ನಿಮ್ಮನ್ನು ಕಾಡುವುದಿಲ್ಲ ಆದರೆ ಪಟೇಲರ ಮೂರ್ತಿ ಸ್ತಾಪಿಸುವುದಕ್ಕೆ ನಿಮ್ಮ ಅಭ್ಯಂತರವಿದೆ.

    ReplyDelete
  2. ಮಿ. ಭಾಷಿರ್, ನೀವು ಯಾವ ಉದ್ದೇಶವನ್ನು ಇಟ್ಟುಕೊಂಡು ಈ ಲೇಖನವನ್ನು ಬರೆದಿರಿ? ಅರ್. ಎಸ್. ಎಸ್. ಒಂದು ಸಾಮಾಜಿಕ ಕಳಕಳಿ ಹೊಂದಿರುವ ಸಂಸ್ಥೆ. ಇದು ಅದೆಷ್ಟೋ ಸಾಮಾಜಿಕ ಕಾರ್ಯಗಳನ್ನು ಮಾಡಿದೆ ಹಾಗೂ ಮಾಡುತ್ತಲೂ ಇದೆ. ಈಗ ಗಾಂಧೀಜಿ ಪುತ್ಟಳಿ ನಿರ್ಮಾಣವಾದರೆ ಅದಕ್ಕೆ ಅನುಸರಿಸಿ ನಡೆಯುವವರು ತುಂಬಾ ಜನ. ಹಾಗೆ ಪಟೇಲರ ಪುತ್ತಳಿ ನಿರ್ಮಾಣವಾದರೆ ಅವರನ್ನು ಅನುಸರಿಸುವವರು ಇದ್ದಾರೆ. ಆ ಕಾರಣಕ್ಕಾಗಿ ಮೋದಿ ಇದರ ನಿರ್ಮಾಣಕ್ಕೆ ಮುಂದಗಿರಬಹುದು. ಅದನ್ನು ಬೆಂಬಲಿಸೋಣ. ಶುಭವಾಗಲಿ

    ReplyDelete