Tuesday, January 28, 2014

ನೆರವು ಮತ್ತು ಇತರ ಕತೆಗಳು

 ಅಷ್ಟೇ!
‘‘ನಿನ್ನೆದುರು ಯಾರೋ ನೀರಿಗಿಳಿದು ಕೊಚ್ಚಿ ಕೊಂಡು ಹೋಗುತ್ತಿದ್ದಾರೆ...ನೀನೇನು ಮಾಡುತ್ತೀಯ?’’
‘‘ನೀರಿನಲ್ಲಿ ಸುಳಿಯಿದೆ ಎಂದು ಗೊತ್ತಾದಂತಾಯಿತು. ನೀರಿಗೆ ಇಳಿಯುವುದಿಲ್ಲ ಅಷ್ಟೇ....’’

ನೆರವು
ಒಬ್ಬ ಆಳದ ಹೊಂಡಕ್ಕೆ ಬಿದ್ದಿದ್ದ.
ಮೇಲಿನಿಂದ ಇನ್ನೊಬ್ಬ ಅವನಡೆಗೆ ಕೈ ಚಾಚಿ, ಮೇಲೆ ಬರಲು ಕರೆಯುತ್ತಿದ್ದ.
ಮೇಲಿದ್ದವನು ಅದೆಷ್ಟು ಪ್ರಯತ್ನಿಸಿದರೂ ಹೊಂಡದಲ್ಲಿದವನನ್ನು ಮೇಲೆತ್ತಲು ಸಾಧ್ಯವಾಗಲಿಲ್ಲ.
ಯಾಕೆಂದರೆ ಅವನಿಗೆ ಮೇಲೆತ್ತುವ ಮನಸ್ಸೇ ಇರಲಿಲ್ಲ.
ಇದ್ದಿದ್ದರೆ, ತನ್ನ ಪಕ್ಕದಲ್ಲೇ ಹಗ್ಗವನ್ನು ಇಳಿಸಿ ಅವನನ್ನು ಮೇಲೆತ್ತುತ್ತಿದ್ದ.

ಬುದ್ಧ

ಒಬ್ಬ ಬುದ್ಧನ ವಿಗ್ರಹವನ್ನು ಹಲವು ವರ್ಷಗಳಿಂದ ಆರಾಧಿಸುತ್ತಿದ್ದ.
ಆದರೂ ಆತನಿಗೆ ಜ್ಞಾನೋದಯವಾಗಲಿಲ್ಲ.
ಒಂದು ದಿನ ಸಿಟ್ಟಿನಿಂದ ಬುದ್ಧನ ವಿಗ್ರಹವನ್ನು ಸುತ್ತಿಗೆಯಿಂದ ಒಡೆದು ಹಾಕಿದ.
ವಿಗ್ರಹ ಚೂರಾಚೂರಾಗುತ್ತಿದ್ದಂತೆಯೇ ಭಕ್ತನಿಗೆ ಬುದ್ಧ ದರ್ಶನವಾಯಿತು.
ಜ್ಞಾನೋದಯವಾಯಿತು.

ಆಕೆ
ಆಕೆಯನ್ನು ಮನೆಯವರೆಲ್ಲ ಸೇರಿ ಕೋಣೆಯೊಳಗೆ ಕೂಡಿ ಹಾಕುತ್ತಾರೆ.
ಸುಮಾರು 20 ವರ್ಷ ಆಕೆ ಕೋಣೆಯೊಳಗೆ ಒಬ್ಬಂಟಿಯಾಗಿ ಕೂತು, ಗೋಡೆಗಳ ಜೊತೆ ತನ್ನ ಒಳಗಿನ ಮಾತುಗಳನ್ನು ಆಡುತ್ತಾ ಆಕೆ ಬದುಕುತ್ತಿರುತ್ತಾಳೆ.
ಆಕೆಯ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಒಂದು ದಿನ ಗೋಡೆಗಳು ಬಿರುಕು ಬಿಟ್ಟವು.
ಮನೆಯವರು ಬಂದು ನೋಡಿದರೆ ಕಲ್ಲು ಗೋಡೆ ಕುಸಿದು ಬಿದ್ದಿದೆ.
ಕೋಣೆ ಬಯಲಾಗಿತ್ತು. ಆಕೆ ಅಲ್ಲಿರಲಿಲ್ಲ.

ಈಜು
ಸಿದ್ಧ 10 ನೇ ತರಗತಿಯ ಪರೀಕ್ಷೆ ಬರೆಯುತ್ತಿದ್ದ.
ಮೊದಲ ಪ್ರಶ್ನೆಯೇ ‘ಈಜು ಕಲಿತರೆ ಆಗುವ ಪ್ರಯೋಜನ ಏನು?’
ಸಿದ್ಧನಿಗೆ ಉತ್ತರ ಬರೆಯಲು ಸಾಧ್ಯವಾಗಲಿಲ್ಲ.
ಯಾಕೆಂದರೆ, ಹಳ್ಳಿಯಿಂದ ಬಂದ ಸಿದ್ಧನಿಗೆ ಈಜು ಗೊತ್ತಿತ್ತು. ಆದರೆ ಇಂಗ್ಲಿಷ್ ಗೊತ್ತಿರಲಿಲ್ಲ.

ಹೀಗೆ
ಶಿಷ್ಯ ಕೇಳಿದ ‘‘ಗುರುಗಳೇ, ರುಚಿಯಾದ ಮಾವಿನ ಹಣ್ಣು, ಬೇಕೆ?್ಫ’’ ಬೇಕೇ ಎಂದು ಕೇಳಿದ.
ಸಂತ ಆಸೆಯಿಂದ ‘‘ಹಣ್ಣು ಬೇಡ. ಅದರೊಳಗಿರುವ ಮರವನ್ನು ಕೊಡು...’’ ಎಂದ.
‘‘ಹೇಗೆ ಗುರುಗಳೇ?’’ ಶಿಷ್ಯ ಕೇಳಿದ.
‘‘ಹೀಗೆ’’ ಎಂದು ಶಿಷ್ಯ ಹಣ್ಣು ತಿಂದು ಎಸೆದ ಕೊರಟೆಯನ್ನು ಬಿತ್ತಿ ಅದಕ್ಕೆ ನೀರು ಸುರಿದ.

No comments:

Post a Comment