Tuesday, August 5, 2014

ನೀರಿನ ಬೇರು

 ಕೊಳವೆ ಬಾವಿಯೊಳಗೆ ಬಿದ್ದ
ಮಗುವೊಂದನ್ನು
ಹೊರ ತೆಗೆಯಲಾಗದೆ 

ಯಂತ್ರಗಳೆಲ್ಲ ಕಣ್ಣೀರು ಸುರಿಸುತ್ತಿದ್ದವು 

ತಂದೆ ಹೇಳಿದ, ಅಗೆದದ್ದು ಸಾಕು
ಇನ್ನಷ್ಟು ಬಗೆದರೆ ನನ್ನ ಜಮೀನು
ಸರ್ವನಾಶ ವಾಗತ್ತೆ

ಕೊಳವೆ ಬಾವಿಗೆ ಚಪ್ಪಡಿ ಕಲ್ಲು ಮುಚ್ಚಿ
ಹುಡುಗನನ್ನು ಅಲ್ಲೇ
ದಫನ ಮಾಡಲಾಯಿತು


ಘಟನೆ ನಡೆದು ಅದೆಷ್ಟೋ ದಿನಗಳಾಗಿವೆ
ಈಗೀಗ ಒಮ್ಮೊಮ್ಮೆ ಆ ಚಪ್ಪಡಿ ಕಲ್ಲನ್ನು
ಯಾರೋ ಅಲುಗಾಡಿಸಿದಂತೆ,
ಒಳಗಿಂದ ಮೊರೆಯಿಟ್ಟಂತೆ
ಊರಿನ ಜನರ ಅನುಭವ !


ಜಮೀನು, ತೋಟಗಳೆಲ್ಲ
ಹನಿ ನೀರಿನ ಪಸೆಯೂ ಇಲ್ಲದೆ
ಸುಟ್ಟು ಬೂದಿಯಾಗಿವೆ
ಹುಡುಗ ಆ ಕೊಳವೆಯ ಮೂಲಕ
ದಾರಿ ಮಾಡುತ್ತಾ ಸಾಗಿದ್ದಾನೆ
ಅಂತರ್ಜಲ ಅರಸುತ್ತಾ...
ಒಂದಲ್ಲ ಒಂದು ದಿನ ಅವನು
ಮರಳಿ ಬರುವನೆಂದು
ತನ್ನೂರಿಗೆ ನೀರಿನ ಬೇರು ತರುವನೆಂದು
ಊರು ಅವನ ನಿರೀಕ್ಷೆಯಲ್ಲಿದೆ 


ಭೂಮಿಗೊಮ್ಮೆ ಕಿವಿ ಹಚ್ಚಿ ನೋಡಿ
ಅದರ ನಾಭಿಯಿಂದ
ಹೊರಡುತ್ತಿರುವ ಅವನ ಹೆಜ್ಜೆ ಸಪ್ಪಳ
ನಿಮ್ಮ ಎದೆಯೊಳಗೂ ಪ್ರತಿಧ್ವನಿಸೂದು !

No comments:

Post a Comment