Sunday, August 2, 2015

ವಧಾ ಸ್ಥಾನದ ಮುಂದೆ ನ್ಯಾಯ

ಯಾಕೂಬ್ ಮೆಮನ್‌ಗೆ ಗಲ್ಲು ವಿಧಿಸಿದ ದಿನಗಳಿಂದ ಎರಡು ಅತಿರೇಕಗಳ ನಡುವೆ ನಾವಿದ್ದೇವೆ. ಒಂದು ಕೇಸರಿ ಶಕ್ತಿಗಳ ಅತಿರೇಕ. ಜೊತೆಗೆ ಇವರೊಂದಿಗೆ ಪೂರ್ವಗ್ರಹ ಪೀಡಿತ ಎಲ್ಲ ಬಗೆಯ ಮನಸ್ಥಿತಿಗಳೂ ಕೈ ಜೋಡಿಸಿವೆ. ಕಳೆದೆರಡು ದಿನಗಳಿಂದ ಇವರು ಒಂದು ಸಾವನ್ನು ಸಂಭ್ರಮಿಸುತ್ತಿದ್ದಾರೆ. ಮುಂಬೈ ಸ್ಫೋಟ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಯೇ ಬಿಟ್ಟಿತು, ಉಗ್ರ ಸತ್ತೇ ಹೋದ. ಇನ್ನು ಉಳಿದ ಉಗ್ರರಿಗೆ, ಅದನ್ನು ಬೆಂಬಲಿಸುವವರಿಗೆ ಸರಿಯಾದ ಪಾಠವಾಯಿತು. ಇದನ್ನು ಯಾವ ರೀತಿಯಲ್ಲೂ ಪ್ರಶ್ನಿಸಬಾರದು. ಪ್ರಶ್ನಿಸುವುದು ಉಗ್ರರಿಗೆ ಬೆಂಬಲ ನೀಡಿದಂತೆ, ಸಂತ್ರಸ್ತರಿಗೆ ಅನ್ಯಾಯ ಬಗೆದಂತೆ ಎಂದು ಇವರು ವಾದಿಸುತ್ತಿದ್ದಾರೆ.
 ಇದೇ ಸಂದರ್ಭದಲ್ಲಿ ಇನ್ನೊಂದು ಬಗೆಯ ಅತಿರೇಕವನ್ನು ನಾವು ನೋಡುತ್ತಿದ್ದೇವೆ. ಯಾಕೂಬ್ ಮೆಮನ್ ಗಲ್ಲು ಪ್ರಕರಣವನ್ನು ಮುಂದಿಟ್ಟು, ದೇಶದ ಪ್ರಜಾಸತ್ತೆ, ನ್ಯಾಯವ್ಯವಸ್ಥೆಯ ಮೇಲೆಯೇ ನಂಬಿಕೆಯೇ ಕಳೆದುಕೊಂಡಂತೆ ಬೇಜಾವಾಬ್ದಾರಿಯುತವಾಗಿ ಹೇಳಿಕೆಗಳನ್ನು ನೀಡುವವರು. ಸಂಘಪರಿವಾರ ಅತಿರೇಕಕ್ಕೆ ಪ್ರತಿಕ್ರಿಯೆಯಾಗಿ ಯಾಕೂಬ್ ಮೆಮನ್‌ನನ್ನು ಹುತಾತ್ಮ ಎಂದು ಬಿಂಬಿಸಲು ನೋಡುವವರು. ಯಾಕೂಬ್ ಮೆಮನ್‌ನನ್ನು ವೈಭವೀಕರಿಸುತ್ತಿರುವವರು. ‘ಯಾಕೂಬ್ ಮೆಮನ್‌ನನ್ನು ಒಂದು ಆದರ್ಶ’ ಎಂದು ಬಿಂಬಿಸಲು ಯತ್ನಿಸುವವರು. ಜೊತೆಗೆ, ಮುಂಬೈ ಕೋಮುಗಲಭೆಯನ್ನು ಮುಂದಿಟ್ಟುಕೊಂಡು ಮುಂಬೈ ಸ್ಫೋಟವನ್ನು ಸಮರ್ಥಿಸಲು ಮುಂದಾಗುವವರು. ದೇಶದ ಪ್ರಜಾಸತ್ತೆ, ಸಂವಿಧಾನ, ನ್ಯಾಯವ್ಯವಸ್ಥೆಯ ಕುರಿತಂತೆ ತುಚ್ಛವಾಗಿ ಹೇಳಿಕೆ ನೀಡುವ ಗುಂಪು. 
ಈ ಎರಡು ಅತಿರೇಕಗಳ ನಡುವೆಯೂ ಒಂದು ಗುಂಪಿದೆ. ಪ್ರಶಾಂತ್ ಭೂಷಣ್, ಜೇಠ್ಮಲಾನಿ, ಶ್ರೀಕೃಷ್ಣ, ಮಾರ್ಕಾಂಡೇಯ ಕಟ್ಜು ಮೊದಲಾದ ಹಿರಿಯ ನ್ಯಾಯವಾದಿಗಳು, ಮಾಜಿ ನ್ಯಾಯಾಧೀಶರನ್ನೊಳಗೊಂಡ ಗುಂಪು. ಅವರ ಆತಂಕ ಯಾಕೂಬ್ ಮೆಮನ್ ಅಲ್ಲ. ಬದಲಿಗೆ ಆತನನ್ನು ಗಲ್ಲಿಗೆ ನೀಡುವ ಸಂದರ್ಭದಲ್ಲಿ ನ್ಯಾಯವ್ಯವಸ್ಥೆಯಲ್ಲಿ ಉಂಟಾಗಿರುವ ಬಿರುಕುಗಳು, ನ್ಯಾಯ ಪ್ರಕ್ರಿಯೆಗಳ ಪೂರ್ವಾಗ್ರಹಗಳು, ದೌರ್ಬಲ್ಯಗಳನ್ನು ಮುಂದಿಟ್ಟುಕೊಂಡು ಅವರು ಯಾಕೂಬ್ ಮೆಮನ್‌ನ ಗಲ್ಲಿನ ಕುರಿತಂತೆ ಆತಂಕ ವ್ಯಕ್ತಪಡಿಸಿದರು. ಯಾಕೂಬ್ ಮೆಮನ್ ಅವರ ಗುರಿ ಆಗಿರಲೇ ಇಲ್ಲ. ಅವರ ಗುರಿ ಸದೃಢ, ಪೂರ್ವಾಗ್ರಹ ರಹಿತ ನ್ಯಾಯವ್ಯವಸ್ಥೆಯ ಬಗೆಗಿನದಾಗಿತ್ತು. ಪ್ರಜಾಸತ್ತೆಯ ಮೇಲೆ ನಂಬಿಕೆಯಿಟ್ಟ ಎಲ್ಲರೂ ಆ ಕುರಿತಂತೆ ಆತಂಕ ಪಡುವುದು ಅತ್ಯಗತ್ಯವಾಗಿದೆ. ‘ಗಲ್ಲು ಬೇಕೋ ಬೇಡವೋ’ ಎನ್ನುವುದು ಅನಂತರದ ವಿಷಯ. ಗಲ್ಲಿಗೇರಿಸುವ ಸಂದರ್ಭದಲ್ಲಿ ನ್ಯಾಯ ವ್ಯವಸ್ಥೆ ತನ್ನೆಲ್ಲ ಪ್ರಕ್ರಿಯೆಗಳನ್ನು ಸಮರ್ಥವಾಗಿ ನಿರ್ವಹಿಸಿದೆಯೇ? ಎನ್ನುವುದೇ ಮುಖ್ಯ ವಿಷಯ. ಇತ್ತೀಚಿನ ದಿನಗಳಲ್ಲಿ ನ್ಯಾಯವ್ಯವಸ್ಥೆಯಲ್ಲಿ ಸರಕಾರದ ಹಸ್ತಕ್ಷೇಪ, ಅದರೊಳಗೆ ಕೇಸರಿ ಮನಸ್ಥಿತಿಯ ವ್ಯಕ್ತಿಗಳು ನುಗ್ಗಿರುವುದು ಪದೇ ಪದೇ ಸುದ್ದಿಯಾಗುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಯೂಕೂಬ್ ಮೆಮನ್ ಅಂತಹದೊಂದು ರಾಜಕೀಯ ಸಂಚಿಗೆ ಬಲಿಯಾಗಿದ್ದಾನೆ ಎನ್ನುವ ಆರೋಪಗಳನ್ನು ಕೆಲವರು ಮಾಡಿದರೆ ಅದು ಒಂದು ಧರ್ಮದ ವ್ಯಕ್ತಿಯ ಪರವಾಗಿರುವ ಚರ್ಚೆಯೆಂದು ನಾವು ಅಮುಕಿ ಹಾಕಲು ನೋಡಿದರೆ ಅದರ ನಷ್ಟ ಪ್ರಜಾಸತ್ತೆಗೇ ಆಗಿದೆ. ಈ ದೇಶದಲ್ಲಿ ಖೈರ್ಲಾಂಜಿ, ಕಂಬಾಲಪಲ್ಲಿ ಹತ್ಯಾಕಾಂಡದ ಆರೋಪಿಗಳು ನಿರಪರಾಧಿಗಳೆಂದು ಘೋಷಣೆಯಾದಾಗಲೂ ನ್ಯಾಯ ವ್ಯವಸ್ಥೆಯನ್ನು ಅನುಮಾನಿಸಲಾಗಿದೆ. ಆ ಕುರಿತಂತೆ ಚರ್ಚೆ ನಡೆದಿದೆ. ಒಬ್ಬ ಪಾದ್ರಿ ಮತ್ತು ಆತನ ಕುಟುಂಬವನ್ನು, ಮತಾಂತರ ಮಾಡುತ್ತಿದ್ದಾರೆ ಎಂಬ ಹೆಸರಿನಲ್ಲಿ ಜೀವಂತ ದಹಿಸಿದ ದಾರಾಸಿಂಗ್ ಮರಣದಂಡನೆಯಿಂದ ತಪ್ಪಿಸಿಕೊಂಡಾಗಲೂ ಇದು ಚರ್ಚೆಗೀಡಾಗಿದೆ. ಇದೀಗ ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಿದ ಸಂದರ್ಭದಲ್ಲಿ ಇದು ಚರ್ಚೆಯ ರೂಪ ಪಡೆದಾಗ ಅದಕ್ಕೆ ಧರ್ಮದ ಆರೋಪ ಹೊರಿಸಿ ಬಾಯಿ ಮುಚ್ಚಿಸಲು ಸಂಘಪರಿವಾರೇತರರಾದ ಕೆಲವು ಗೆಳೆಯರೂ ಜೊತೆಗೂಡಿರುವುದು ನಿಜಕ್ಕೂ ವಿಸ್ಮಯಕ್ಕೂ, ಆಘಾತಕ್ಕೂ ಕಾರಣವಾಗಿದೆ. ಈ ಚರ್ಚೆಯನ್ನು ತಿರುಚಿ, ಉಗ್ರರ ಪರವಾಗಿರುವ ವಾದಗಳು ಎಂಬ ಹಣೆಪಟ್ಟಿ ಹಾಕಿ, ‘ಕಲಾಂನ್ನು ಆದರ್ಶವಾಗಿಟ್ಟುಕೊಳ್ಳಿ, ಯಾಕೂಬ್‌ಮೆಮನ್ ಅಲ್ಲ’ ಎನ್ನುವ ಪುಕ್ಕಟೆ ಸಲಹೆಗಳನ್ನೂ, ‘ರೈತರ ಬಗ್ಗೆ ಎಷ್ಟು ಮಾತನಾಡಿದ್ದೀರಿ’ ಎಂಬ ಪ್ರಶ್ನೆಗಳನ್ನು ಚುಚ್ಚಿ, ವ್ಯಂಗ್ಯವಾಡಿ ತಮ್ಮ ತಮ್ಮ ಜಾತ್ಯತೀತತೆಯನ್ನು, ದೇಶಪ್ರೇಮದ ತೂಕವನ್ನು ಹೆಚ್ಚಿಸಿಕೊಂಡವರು ಹಲವರಿದ್ದಾರೆ. ಆದರೆ ಅದೇನೇ ಪ್ರಶ್ನೆ ಬಂದರೂ, ಯಾರೇ ಮೌನವಾಗಿದ್ದರೂ, ಯಾವ ಆರೋಪಗಳು ನಮ್ಮ ಮೇಲೆ ಎರಗಿದರೂ, ಈ ದೇಶದ ಸಂವಿಧಾನ, ನ್ಯಾಯವ್ಯವಸ್ಥೆಯ ಬಗ್ಗೆ ಹೆಚ್ಚು ಕಾಳಜಿ, ಆತಂಕವನ್ನು ವ್ಯಕ್ತಪಡಿಸುವ ಹೊಣೆಗಾರಿಕೆಯಿಂದ ನಾವು ಕಳಚಿಕೊಳ್ಳುವಂತೆಯೇ ಇಲ್ಲ. ಯಾಕೆಂದರೆ ಈ ದೇಶದಲ್ಲಿ ನಮಗೆಲ್ಲರಿಗೂ ಅದೊಂದೇ ಭರವಸೆ. ದುರದೃಷ್ಟವಶಾತ್ ಈ ಎರಡು ಅತಿರೇಕಗಳ ಗದ್ದಲಗಳಲ್ಲಿ, ಮಧ್ಯೆಯಿರುವ ಗುಂಪಿನ ಧ್ವನಿ ಯಾರಿಗೂ ಸ್ಪಷ್ಟವಾಗಿ ಕೇಳಿಸುತ್ತಿಲ್ಲ. ಅಥವಾ ಅತಿರೇಕಿಗಳ ಅಬ್ಬರಕ್ಕೆ ಇವರ ಹೇಳಿಕೆಗಳು ಅಸ್ಪಷ್ಟವಾಗಿ ಕೇಳಿಸುತ್ತಿದೆ. ಗೊಂದಲಕರವಾಗಿ ಕೇಳಿಸುತ್ತಿದೆ. ಅಥವಾ ಉದ್ದೇಶಪೂರ್ವಕವಾಗಿ ಇವರ ಧ್ವನಿಯನ್ನು ಅಸ್ಪಷ್ಟಗೊಳಿಸುವ, ತಿರುಚುವ ಪ್ರಯತ್ನ ನಡೆಯುತ್ತಿದೆ.

 ಮುಂಬೈ ಕೋಮುಗಲಭೆ-ಸರಣಿ ಬಾಂಬ್ ಸ್ಫೋಟ:
 ಮುಂಬೈ ಕೋಮುಗಲಭೆಯ ಬಳಿಕ ಮುಂಬೈ ಸರಣಿ ಸ್ಫೋಟ ನಡೆಯಿತು. ಕೋಮುಗಲಭೆಯ ಬಗ್ಗೆ ಸುದೀರ್ಘ ವರದಿಯೊಂದನ್ನು ನೀಡಿದವರು ನ್ಯಾಯಾಧೀಶರಾಗಿದ್ದ ಬೆಲ್ಲೂರು ನಾರಾಯಣ ಸ್ವಾಮಿ ಕೃಷ್ಣ.. ಕೇರಳ ಹೈಕೋರ್ಟಿನ ಮುಖ್ಯನ್ಯಾಯಾಧೀಶರಾಗಿ, ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿಯೂ ಕೆಲಸ ಮಾಡಿರುವ ಅನುಭವಿಗಳು ಇವರು. ಮುಂಬೈ ಗಲಭೆಯ ಕುರಿತಂತೆ ಇವರು ನೀಡಿರುವ ವರದಿ ಮುಂದೆ ‘ಶ್ರೀ ಕೃಷ್ಣ ಆಯೋಗ ವರದಿ’ ಎಂದೇ ಖ್ಯಾತಿ ಪಡೆಯಿತು. ಮತ್ತು ಅವರು ಅದರಲ್ಲಿ ಯಾರನೆಲ್ಲ ರಾಜಕೀಯ ಅಪರಾಧಿಗಳೆಂದು ಗುರುತಿಸಿದ್ದರೋ ಅವರ್ಯಾರಿಗೂ ಶಿಕ್ಷೆಯಾಗಲೇ ಇಲ್ಲ.ಮುಂಬೈ ಕೋಮುಗಲಭೆಯಲ್ಲಿ ಅಧಿಕೃತ ಅಂಕಿ ಅಂಶಗಳ ಪ್ರಕಾರ 1,500 ಮಂದಿ ಮೃತಪಟ್ಟಿದ್ದಾರೆ. 1829 ಮಂದಿ ಗಾಯಗೊಂಡಿದ್ದಾರೆ. 165 ಮಂದಿ ನಾಪತ್ತೆಯಾಗಿದ್ದಾರೆ. ನಾಶ, ನಷ್ಟಗಳಿಗಂತೂ ಲೆಕ್ಕವೇ ಇಲ್ಲ. ಈ ಮುಂಬೈ ಗಲಭೆಗಳಲ್ಲಿ ಸಂತ್ರಸ್ತರಲ್ಲೊಬ್ಬನಾದ ಟೈಗರ್ ಮೆಮನ್ ಮುಂದೆ ಮುಂಬೈ ಬ್ಲಾಸ್ಟ್ ಎನ್ನುವಂತಹ ಇನ್ನೊಂದು ಬರ್ಬರ ಕೃತ್ಯಕ್ಕೆ ವೇದಿಕೆ ಸಿದ್ಧಪಡಿಸುತ್ತಾನೆ. ಇದನ್ನು ಶ್ರೀಕೃಷ್ಣ ಆಯೋಗದ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗುತ್ತದೆ ‘‘ಮುಂಬೈ ಕೋಮುಗಲಭೆಗಳಲ್ಲಿ ಆದ ಅನ್ಯಾಯ, ಅಕ್ರಮಗಳ ಮಂದುವರಿದ ಭಾಗವಾಗಿದೆ ಮುಂಬೈ ಸ್ಫೋಟ’’. ಈ ಸ್ಫೋಟದಲ್ಲಿ ಸುಮಾರು 300 ಮಂದಿ ಮೃತಪಟ್ಟರು. ದುರದೃಷ್ಟವಶಾತ್ ಶ್ರೀಕೃಷ್ಣ ಆಯೋಗ ವರದಿ ಕೊನೆಗೂ ಜಾರಿಗೆ ಬರದೇ ಕಸದ ಬುಟ್ಟಿ ಸೇರಿತು. ಈ ವರದಿಯನ್ನು ಸರಕಾರ ಸದನದಲ್ಲಿ ಮಂಡಿಸುವುದಕ್ಕೆ ಹಿಂದೇಟು ಹಾಕಿದಾಗ, ಸ್ವತಃ ನ್ಯಾಯಾಧೀಶರಾಗಿದ್ದ ಶ್ರೀ ಕೃಷ್ಣ ಅವರೇ ಸಾರ್ವಜನಿಕರಿಗೆ ಬಿಡುಗಡೆ ಮಾಡುತ್ತಾರೆ.
 ಮುಂಬೈ ಕೋಮುಗಲಭೆಯನ್ನು ಮುಂದಿಟ್ಟು ಯಾಕೂಬ್ ಮೆಮನ್‌ನನ್ನು ಸಮರ್ಥಿಸಲು ಮುಂದಾಗುವುದು ನಮಗೆ ನಾವೇ ತೋಡಿಕೊಳ್ಳುವ ಗೋರಿಯಾಗಿದೆ. ಒಂದೂವರೆ ಸಾವಿರ ಜನರ ಹತ್ಯಾಕಾಂಡಕ್ಕೆ ಕಾರಣವಾಗಿರುವ ಮುಂಬೈ ಕೋಮುಗಲಭೆಯಲ್ಲಿ ಸಂತ್ರಸ್ತರಿಗೆ ಸಂಪೂರ್ಣ ಅನ್ಯಾಯವೇ ಆಗಲಿ. ಮೃತಪಟ್ಟ ಒಂದೂವರೆ ಸಾವಿರ ಜನರಿಗಾಗಿ ಯಾವನೇ ಒಬ್ಬನಿಗೆ ಶಿಕ್ಷೆಯಾಗದೇ ಇರಲಿ. ಹೀಗಿದ್ದರೂ ಆ ಕಾರಣಕ್ಕಾಗಿ ನಾವು ಮುಂಬೈ ಸ್ಫೋಟವನ್ನು ಸಮರ್ಥಿಸಿಕೊಳ್ಳುವುದು ಅತಿ ದೊಡ್ಡ ಅಪರಾಧ ಕ್ರೌರ್ಯ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಕೋಮುಗಲಭೆಗಳಲ್ಲಿ ಆದ ಅನ್ಯಾಯಕ್ಕಾಗಿ ನಾವು ಮೊರೆ ಹೋಗಬೇಕಾದುದು ನಮ್ಮ ಸಂವಿಧಾನ, ನ್ಯಾಯವ್ಯವಸ್ಥೆಯ ಜೊತೆಗೇ ಆಗಿರಬೇಕೇ ಹೊರತು ದಾವೂದ್ ಇಬ್ರಾಹಿಂನಂತಹ ಭೂಗತ ದೊರೆಯ ಬಳಿಯಲ್ಲಲ್ಲ. ಈ ದೇಶದ ದುರ್ಬಲ ಸಮುದಾಯಗಳನ್ನು ದೇಶದ ಪ್ರಜಾಸತ್ತೆ ಮತ್ತು ಸಂವಿಧಾನವೇ ಈವರೆಗೆ ಪೊರೆದುಕೊಂಡು ಬಂದಿದೆ. ಕೆಲವೊಮ್ಮೆ ಅದು ಎಡವಿದಾಗಲೂ ನಾವು ಅದಕ್ಕೆ ಮುಖ ತಿರುವದೆ, ಮತ್ತೆ ಅದೇ ತಾಯಿ ಬಳಿಗೆ ತೆರಳುವುದರಲ್ಲೇ ಭದ್ರತೆ ಇದೆ. ಭವಿಷ್ಯವಿದೆ.ಯಾವುದೊ ಭೂಗತ ದೊರೆ ನಡೆಸುವ ಸ್ಫೋಟ ಯಾವ ಕಾರಣಕ್ಕೂ ಮುಂಬೈ ಕೋಮುಗಲಭೆಗಳ ಸಂತ್ರಸ್ತರಿಗೆ ನ್ಯಾಯವನ್ನು ನೀಡಲಾರವು. ಅವು ನಮ್ಮ ನ್ಯಾಯವ್ಯವಸ್ಥೆಯನ್ನು, ಪ್ರಜಾಸತ್ತೆಯನ್ನು ಇನ್ನಷ್ಟು ದುರ್ಬಲಗೊಳಿಸುತ್ತವೆ. ಇದೀಗ ನಮ್ಮ ಮುಂದಿರುವ ಯಾಕೂಬ್ ಮೆಮನ್‌ನ ವಿಷಯದಲ್ಲೂ ಇದೇ ನಿಲುವುದನ್ನು ತಾಳುವುದು ಅತ್ಯಗತ್ಯ. ಆದುದರಿಂದ ಮೊತ್ತ ಮೊದಲು ನಾವು ಯಾವುದನ್ನು ವಿರೋಧಿಸುತ್ತಿದ್ದೇವೆ ಎನ್ನುವುದು ನಮಗೆ ಸ್ಪಷ್ಟವಾಗಿರಬೇಕು. ಮೆಮನ್‌ನ ಗಲ್ಲನ್ನು ನಾವು ಅನುಕಂಪದಿಂದ ನೋಡುವುದು, ಆತ ಹುತಾತ್ಮ ಎನ್ನುವ ನೆಲೆಯಲ್ಲಿ ಅಲ್ಲ. ನ್ಯಾಯವ್ಯವಸ್ಥೆ ಸರಿಯಾದ ದಾರಿಯಲ್ಲಿ ಸಾಗದೆ, ಆತನ್ನು ಅಡ್ಡದಾರಿಯಲ್ಲಿ ಬಲಿಕೊಟ್ಟಿದೆ ಮತ್ತು ನ್ಯಾಯವ್ಯವಸ್ಥೆಯ ಮೇಲೆ ಆತ ಯಾವ ನಂಬಿಕೆ ಇಟ್ಟಿದ್ದನೋ ಆ ನಂಬಿಕೆಯನ್ನು ನ್ಯಾಯಾಲಯ ಹುಸಿಗೊಳಿಸಿದೆ ಎನ್ನುವುದಷ್ಟೇ ನಮ್ಮ ಆತಂಕಕ್ಕೆ ಕಾರಣವಾಗಬೇಕು. ಯಾಕೂಬ್ ಮೆಮನ್ ಈ ದೇಶದ ಮುಸ್ಲಿಮರಿಗೆ ಏನೂ ಅಲ್ಲ. ಒಬ್ಬ ಸಾಮಾನ್ಯ ಅಕೌಂಟೆಂಟ್ ಅವನು. ಮುಸ್ಲಿಮ್ ಹೆಸರಿದ್ದಾಕ್ಷಣ ಅವನಿಗೋಸ್ಕರ ಮಿಡಿಯಬೇಕಾದ ಯಾವ ಅವಶ್ಯಕತೆಯೂ ಈ ದೇಶದ ಮುಸ್ಲಿಮರಿಗೆ ಇಲ್ಲ. ಆದರೆ ಆತನ ಮುಸ್ಲಿಮ್ ಹೆಸರೊಂದೇ ಅವನನ್ನು ಗಲ್ಲಿನ ಕಂಬದೆಡೆಗೆ ಒಯ್ಯಿತು ಎಂದಾಗ ಈ ದೇಶದ ನ್ಯಾಯವ್ಯವಸ್ಥೆಯ ಬಗ್ಗೆ ಮುಸ್ಲಿಮರಲ್ಲಿ ಆತಂಕ, ಅನುಮಾನ ಹುಟ್ಟುವುದು ಸಹಜವಾಗಿದೆ.
 ಯಾಕೂಬ್ ಮೆಮನ್ ಒಂದು ನೆಪ ಮಾತ್ರ. ಆತನ ಸ್ಥಾನದಲ್ಲಿ ಒಬ್ಬ ದಲಿತನಿರಬಹುದು. ಅಥವಾ ಒಬ್ಬ ಕ್ರಿಶ್ಚಿಯನ್ ಇರಬಹುದು. ಅಥವಾ ಒಬ್ಬ ಆರೆಸ್ಸೆಸ್ ನಾಯಕನೇ ಇರಬಹುದು. ಗಲ್ಲಿನಂತಹ ಶಿಕ್ಷೆಯನ್ನು ವಿಧಿಸುವಾಗ, ನ್ಯಾಯ ಪ್ರಕ್ರಿಯೆಯ ಬಗ್ಗೆ ಯಾರಲ್ಲೂ ಅನುಮಾನಗಳು ಹುಟ್ಟಬಾರದು. ಮೆಮನ್ ವಿಷಯದಲ್ಲಿ ಅದು ನಡೆದಿದೆ. ಮೆಮನ್‌ನನ್ನು ಶರಣಾಗತನಾಗಿ ಮಾಡಿರುವ ರಾ ಅಧಿಕಾರಿ ರಾಮನ್ ಅವರೇ ಇದನ್ನು ತಮ್ಮ ಲೇಖನದಲ್ಲಿ ಹೇಳಿಕೊಂಡಿದ್ದಾರೆ. ಕಟ್ಜುವಿನಂತಹ ಹಿರಿಯ ಮಾಜಿ ನ್ಯಾಯಾಧೀಶರು ಗಲ್ಲು ತೀರ್ಪಿನಲ್ಲಿರುವ ಬಿರುಕುಗಳನ್ನು ಗುರುತಿಸಿ ಅದನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಪ್ರಶಾಂತ್ ಭೂಷನ್, ರಾಮ್‌ಜೇಠ್ಮಲಾನಿಯಂತಹ ಹಿರಿಯ ನ್ಯಾಯವಾದಿಗಳೂ ಅದನ್ನು ಗುರುತಿಸಿದ್ದಾರೆ. ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿರುವ ಕುರಿಯನ್ ತನ್ನ ತೀರ್ಪಿನಲ್ಲಿ ಗಲ್ಲನ್ನು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ ಸ್ವತಃ ಯಾಕೂಬ್ ಮೆಮನ್ ಹೇಳಿಕೊಂಡಿದ್ದಾನೆ ‘‘ಈ ಗಲ್ಲು ತಾನು ಟೈಗರ್‌ಮೆಮನ್‌ನ ತಮ್ಮ ಎನ್ನುವ ಕಾರಣಕ್ಕೆ ನೀಡುವುದಾದರೆ ಅದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಮುಂಬೈ ಸ್ಫೋಟದ ಆರೋಪಿಗೆ ನೀಡುವ ಗಲ್ಲು ಎಂದಾಗಿದ್ದರೆ ಅದನ್ನು ನಿರಾಕರಿಸುತ್ತೇನೆ’’.

ಗೆದ್ದವರು ಯಾರು?:
ಟೈಗರ್ ಮೆಮನ್ ಈ ದೇಶದ ನ್ಯಾಯ ವ್ಯವಸ್ಥೆಯನ್ನು ನುಚ್ಚು ನೂರು ಮಾಡಿದ. ಅದೇ ಸಂದರ್ಭದಲ್ಲಿ, ಆತನ ತಮ್ಮನಾಗಿರುವ ಯಾಕೂಬ್ ಮೆಮನ್ ಈ ದೇಶದ ನ್ಯಾಯ ವ್ಯವಸ್ಥೆಯ ಮೇಲೆ ನಂಬಿಕೆಯಿಟ್ಟು, ಮುಂಬಯಿ ಸ್ಫೋಟಕ್ಕೆ ಸಂಬಂಧಪಟ್ಟ ದಾಖಲೆಗಳ ಸಹಿತ, ತನ್ನ ಕುಟುಂಬದ ಮಹಿಳೆಯರ ಸಹಿತ ರಾ ಅಧಿಕಾರಿಯ ನೆರವಿನಿಂದ ಶರಣಾಗತನಾದ. ಉಗ್ರ ಅಣ್ಣನ ಮಾತನ್ನು ದಿಕ್ಕರಿಸಿ ಭಾರತಕ್ಕೆ ಕಾಲಿಟ್ಟ ಯಾಕೂಬ್ ಮೆಮನ್‌ಗೆ ಈ ದೇಶದ ನ್ಯಾಯವ್ಯವಸ್ಥೆ ಗಲ್ಲನ್ನು ನೀಡುವ ಮೂಲಕ, ಪರೋಕ್ಷವಾಗಿ ಟೈಗರ್ ಮೆಮನ್‌ನನ್ನು ಗೆಲ್ಲಿಸಿತು. ಅಷ್ಟೇ ಅಲ್ಲ, ಮುಂಬಯಿ ಸ್ಫೋಟಕ್ಕೆ ಸಂಬಂಧಪಟ್ಟು ಇನ್ನಷ್ಟು ಆರೋಪಿಗಳನ್ನು ಬಂಧಿಸುವ ಎಲ್ಲ ಬಾಗಿಲುಗಳನ್ನು ಮುಚ್ಚಿ ಹಾಕಿತು. ಅಷ್ಟೇ ಅಲ್ಲ, ಐಎಸ್‌ಐಯಂತಹ ಪಾಕಿಸ್ತಾನಿ ಸಂಘಟನೆಗಳಿಗೆ ಈ ತೀರ್ಪಿನ ಲಾಭವನ್ನು ಒದಗಿಸಿಕೊಟ್ಟಿತು. ಜನರ ಅನುಮಾನ, ಅಭದ್ರತೆ, ಆತಂಕ, ಆಕ್ರೋಶ ಇವುಗಳನ್ನು ಇಂತಹ ಸಂಘಟನೆಗಳು ಹೇಗೆ ಬಳಸಿಕೊಳ್ಳುತ್ತವೆ ಎನ್ನುವದಕ್ಕೆ ನಮಗೆ ‘ಮುಂಬಯಿ ಸರಣಿ ಸ್ಫೋಟ’ದಲ್ಲೇ ಪಾಠಗಳಿವೆ. 
ನಮ್ಮ ನ್ಯಾಯಾಂಗ ಕಳಂಕಗೊಂಡಿದೆ ಮತ್ತು ಸಂಘಪರಿವಾರ ಹಿತಾಸಕ್ತಿಗಳು ಅದರಲ್ಲಿ ಕೈಯಾಡಿಸುತ್ತಿದ್ದಾರೆ ಎನ್ನುವ ಹೇಳಿಕೆಗಳನ್ನು ಹಲವರು ಹಲವು ಬಾರಿ ಬಹಿರಂಗಪಡಿಸಿದ್ದಾರೆ. ಕೇಸರಿ ಉಗ್ರರನ್ನು ಬಿಡುಗಡೆಗೊಳಿಸಲು ಹೇಗೆ, ರಾಷ್ಟ್ರೀಯ ತನಿಖಾ ಸಂಸ್ಥೆಯನ್ನೇ ಬಳಸಿಕೊಂಡು ಸಂಚು ನಡೆಸಲಾಗಿತ್ತು, ತನ್ನ ಮೇಲೆ ಯಾವೆಲ್ಲ ಒತ್ತಡವನ್ನು ಹೇರಲಾಗಿತ್ತು ಎನ್ನುವುದನ್ನು ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ಇತ್ತೀಚೆಗೆ ಬಹಿರಂಗಪಡಿಸಿದ್ದರು. ನ್ಯಾಯಾಧೀಶರ ನೇಮಕದಲ್ಲಿ ಕೈಯಾಡಿಸುವುದಕ್ಕೆ ಸರಕಾರ ಅತ್ಯಾತುರದಲ್ಲಿದೆ. ಇವೆಲ್ಲವುಗಳ ನಡುವೆ ಗುಜರಾತ್ ಹತ್ಯಾಕಾಂಡದ ಆರೋಪಿಗಳು ಒಬ್ಬೊಬ್ಬರಾಗಿ ಬಿಡುಗಡೆಗೊಳ್ಳುತ್ತಿದ್ದಾರೆ. ಮಾಲೆಗಾಂವ್ ಸ್ಫೋಟ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಸ್ವತಃ ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್, ಸ್ಫೋಟಗಳಲ್ಲಿ ಭಾಗಿಯಾಗಿರುವ ಆರೋವಿದೆ. ಆತ, ‘ಯಾಕೂಬ್ ಮೆಮನ್‌ನ ಗಲ್ಲನ್ನು ಆಸ್ವಾದಿಸಿದೆ’ ಎಂಬ ಹೇಳಿಕೆಯನ್ನು ಮಾಧ್ಯಮಗಳಿಗೆ ನೀಡುತ್ತಾನೆ. ಈ ಎಲ್ಲ ಬೆಳವಣಿಗೆಗಳು ನ್ಯಾಯವ್ಯವಸ್ಥೆ ಎಂತಹ ವಿಪತ್ತಿನಲ್ಲಿದೆ ಎನ್ನುವುದರ ಸೂಚನೆಯಾಗಿದೆ. ಮತ್ತು ಈ ಕಾರಣಕ್ಕೆ, ಈ ಕುರಿತಂತೆ ರಾಷ್ಟ್ರಮಟ್ಟದ ಚರ್ಚೆಯೊಂದು ಹುಟ್ಟುವುದಕ್ಕೆ ಇದು ಸಕಾಲವಾಗಿದೆ. ಚರ್ಚೆ ಗಲ್ಲು ಶಿಕ್ಷೆಯ ಬಗ್ಗೆ ಅಲ್ಲ. ನ್ಯಾಯ ವ್ಯವಸ್ಥೆ ದುರ್ಬಲಗೊಳ್ಳುತ್ತಿರುವ ಬಗ್ಗೆ. 

ಸಾಯೋ ಆಟ:
 ಮೆಮನ್ ಗಲ್ಲು, ದ.ರಾ. ಬೇಂದ್ರೆಯವರ ಸಾಯೋ ಆಟದ ಅಸಂಗತ ದೃಶ್ಯಗಳನ್ನು ನನಗೆ ನೆನಪಿಸಿತು. ಅವನಲ್ಲದಿದ್ದರೆ ಇವನು. ಒಟ್ಟಾರೆ, ಓರ್ವ ಸಾಯುವುದು ಸದ್ಯದ ಅಗತ್ಯ. ‘ಕಳ್ಳ ಮನೆಯೊಂದಕ್ಕೆ ಕನ್ನ ಹಾಕುವಾಗ ಗೋಡೆ ಬಿದ್ದು ಸಾಯುತ್ತಾನೆ. ಕಳ್ಳನ ಹೆಂಡತಿ, ಮನೆಯೊಡೆಯನ ವಿರುದ್ಧ ದೂರು ನೀಡುತ್ತಾಳೆ. ಆತನ ದುರ್ಬಲ ಗೋಡೆಯಿಂದಾಗಿ ತನ್ನ ಪತಿ ಸತ್ತ ಎನ್ನುತ್ತಾಳೆ. ಮನೆಯೊಡೆಯನಿಗೆ ರಾಜ ಗಲ್ಲು ವಿಧಿಸುತ್ತಾನೆ. ಮನೆಯೊಡೆಯ ಹೆದರಿ, ಗೋಡೆ ಕಟ್ಟಿದ ಮೇಸ್ತ್ರಿಯ ಕಡೆಗೆ ಕೈ ತೋರಿಸುತ್ತಾನೆ. ರಾಜ ಗಲ್ಲು ಶಿಕ್ಷೆಯನ್ನು ಮೇಸ್ತ್ರಿಗೆ ವರ್ಗಾಯಿಸುತ್ತಾನೆ.....ಸಾಯುವ ಆಟ ಮುಂದುವರಿಯುತ್ತದೆ. ನ್ಯಾಯ ವ್ಯವಸ್ಥೆ ಇಂತಹ ಮೂರ್ಖರ ಕೈಯಲ್ಲಿ, ಗುಪ್ತ ಅಜೆಂಡಾಗಳನ್ನು ಹೊಂದಿರುವ ಕೋಮೂವಾದಿ, ಮೂಲಭೂತವಾದಿಗಳ ಕೈಯಲ್ಲಿದ್ದಾಗ ಸಾವಿನ ಆಟ ಮುಂದುವರಿಯಲೇ ಬೇಕು. ಇಂದು ಯಾಕೂಬ್ ಮೆಮನ್ ಆಗಿದ್ದರೆ ನಾಳೆ ಇನ್ನಾವುದೋ ಒಂದು ದುರ್ಬಲ ಸಮುದಾಯದ ವ್ಯಕ್ತಿ. ಒಟ್ಟಿನಲ್ಲಿ ಈ ಸಾಯುವ ಆಟ ನಮ್ಮ ಪಾದ ಬುಡಕ್ಕೆ ಬರುವವರೆಗೂ ಅದು ನಮಗೊಂದು ಆಟ, ಸಂಭ್ರಮ ರೂಪದಲ್ಲೇ ಇರುತ್ತದೆ.

2 comments:

  1. bahalavagi kaadida baraha.... nimmannu poornavagi oppadidddaroo nimma barahagala aala chinthanegalannu istapattiddene.
    meman na vishayakke sambandhisida utthama baraha odide anistide. thank u sir

    ReplyDelete
  2. ಸಹನೆಯಿಂದ ಓದಿದ ನಿಮಗೂ ವಂದನೆಗಳು

    ReplyDelete