Saturday, December 17, 2016

ಚಿಂದಿ ನೋಟು ಇನ್ನಷ್ಟು

1
ಆತನಿಗೆ ಬೆಂಗಳೂರಿಗೆ ಹೋಗಬೇಕಾಗಿತ್ತು. ಬಸ್ ಚಾರ್ಜಿಗೆ ಅರ್ಜೆಂಟಾಗಿ ದುಡ್ಡು ಬೇಕಾಗಿತ್ತು. ಎಟಿಎಂ ಹುಡುಕುತ್ತಾ ಹೊರಟ. ಎರಡು ಮೂರು ಎಟಿಎಂ ಬರಿದಾಗಿತ್ತು. ಯಾರೋ ಹೇಳಿದರು ಒಂದು ಕಿಲೋ ಮೀಟರ್ ದೂರದಲ್ಲಿರುವ ಎಟಿಎಂ ನಲ್ಲಿ ಈಗಷ್ಟೇ ದುಡ್ಡು ಹಾಕಿದ್ದಾರೆ. ಸರಿ ಅಲ್ಲಿಗೆ ಧಾವಿಸಿದ. ಅಲ್ಲಿ ತಲುಪುವಷ್ಟರಲ್ಲಿ ದುಡ್ಡು ಮುಗಿದಿತ್ತು. ಸ್ವಲ್ಪ ದೂರದಲ್ಲಿ ಮತ್ತೊಂದು ಎಟಿಎಂ ಕಂಡಿತು. ನೋಡಿದರೆ ನೋ ಕ್ಯಾಶ್ ಬೋರ್ಡ್. ಮಗದೊಂದೆಡೆ ಮೈಲುದ್ದದ ಕ್ಯೂ. ಯಾರೋ ಹೇಳಿದರು ಮುಂದೆ ಇನ್ನೊಂದು ಎಟಿಎಂ ಇದೆ. ಸರಿ, ಮುಂದಕ್ಕೆ ಸಾಗಿದ. ಮುಂದಕ್ಕೆ ... ಮುಂದಕ್ಕೆ ... ಮುಂದಕ್ಕೆ ... ಹೀಗೆ ಸಾಗುತ್ತ ಸಾಗುತ್ತ ಸಾಗುತ್ತ ಕೊನೆಗೆ ತಲೆ ಎತ್ತಿ ನೋಡುತ್ತಾನೆ ಮೆಜೆಸ್ಟಿಕ್ ಕಾಣುತ್ತಿದೆ. ಆತ ಬೆಂಗಳೂರು ತಲುಪಿಯೇ ಬಿಟ್ಟಿದ್ದ. ಬಸ್ ಚಾರ್ಜ್ ಉಳಿಯಿತು.
2
ಮೋದಿ ಪ್ಲಾಸ್ಟಿಕ್ ಕಾರ್ಡ್ ಬಳಸಿ ಎಂದು ಕರೆ ಕೊಟ್ಟಿದ್ದು ಕೇಳಿ 
ಇಲ್ಲೊಬ್ಬ ಬಡ ಮಹಿಳೆ ಪ್ಲಾಸ್ಟಿಕ್ ಅಂಗಡಿಗೆ ಹೋಗಿ "ಸ್ವಾಮೀ ಬ್ಯಾಂಕ್ ನಾಗೇ ಅದೇನೋ ಪ್ಲಾಸ್ಟಿಕ್ ಕಾರ್ಡ್ ಬಳಸ್ತಾರಂತೆ. ಅದೊಂದು ಹತ್ತು ಪ್ಲಾಸ್ಟಿಕ್ ಕಾರ್ಡ್ ಕೊಡ್ರಿ" ಎಂದು ಕೇಳಿದಳು. 
ಅಂಗಡಿಯಾತ ಗೋಡೆಯಲ್ಲಿದ್ದ ಮೋದಿ ಫೋಟೋಗೆ ಕೈ ಮುಗಿದ.
ಇಂದು ಕಚೇರಿಗೆ ಬರುತ್ತಿರುವಾಗ ಇನ್ನೊಬ್ಬ ರಿಕ್ಷಾ ಚಾಲಕ ನನ್ನ ಹೆಗಲೇರಿದ್ದ. 
"ಏನ್ ಸಾರ್, ದೇಶದ ಕತೆ ಹೀಗಾಯ್ತಲ್ಲ ?" ಎಂದು ಕೇಳಿದ. 
"ನೋಡಿ, ಸಹನೆ ತೆಗೆದು ಕೊಳ್ಳಿ. ಒಂದು ವಾರ ಮೊದಲು ಇದ್ದ ಕಷ್ಟ ಈಗ ಇದೆಯಾ ? ನಿಧಾನಕ್ಕೆ ಎಲ್ಲ ಸರಿ ಆಗತ್ತೆ" ಎಂದೆ "ಸಾರ್ ನಿಮಗೊಂದು ಕತೆ ಹೇಳುತ್ತೇನೆ, ಕೇಳುತ್ತೀರಾ?" ಅಂದ. "ಹೇಳಿ ಹೇಳಿ" ಎಂದು ಅನುಮತಿ ಕೊಟ್ಟೆ. ರಿಕ್ಷಾ ಮುಂದೆ ಹೋಗುತ್ತಿದ್ದ ಹಾಗೆ ಅವನು ಕತೆ ಹೇಳ ತೊಡಗಿದ. 
"ಒಬ್ಬ ಕ್ರೂರ ಜಮೀನ್ದಾರ ಇದ್ದ. ತನ್ನ ಕೆಲಸದವನಿಗೆ ಚಾಟಿಯಲ್ಲಿ ಹೊಡೆದು ಕೆಲಸ ಮಾಡಿಸುತ್ತಿದ್ದ. ಹೀಗೆ ಇರುವಾಗ ಒಂದು ದಿನ ಆ ದಾರಿಯಲ್ಲಿ ಒಬ್ಬ ಸ್ವಾಮೀಜಿ ಹೋಗುತ್ತಿದ್ದರು. ಅವರು ಜಮೀನ್ದಾರನ ಕ್ರೌರ್ಯ ನೋಡಿದರು. ಜಮೀನ್ದಾರ ಹೋದ ಬಳಿಕ ಕೆಲಸದಾಳುವಿನಲ್ಲಿ ಕೇಳಿದರು "ಅಯ್ಯ ಇಷ್ಟು ಕ್ರೂರವಾಗಿ ಥಳಿಸುತ್ತಿದ್ದರೂ ಸಹನೆಯಿಂದ ಇದ್ದೀಯಲ್ಲ. ಪ್ರತಿಭಟಿಸಲಾಗುದಿಲ್ಲವೇ ?"ಕೆಲಸದಾಳು ವಿನೀತನಾಗಿ ಹೇಳಿದ "ಸ್ವಾಮೀಜಿ, ನನ್ನ ಒಡೆಯ ನಿಧಾನಕ್ಕೆ ಒಳ್ಳೆಯವನಾಗುತ್ತಿದ್ದಾನೆ. ಈ ಹಿಂದೆ ಅತ್ಯಂತ ಜೋರಾಗಿ ಥಳಿಸುತ್ತಿದ್ದ. ಈಗ ಸ್ವಲ್ಪ ಮೆದುವಾಗಿ ಥಳಿಸಲು ಆರಂಭಿಸಿದ್ದಾನೆ. ಮುಂದೆ ಇನ್ನಷ್ಟು ಮೆದುವಾಗಿ ಥಳಿಸಬಹುದು. ನಿಲ್ಲಿಸಲೂ ಬಹುದು"ಕೆಲಸದಾಳುವಿನ ಉತ್ತರಕ್ಕೆ ಸ್ವಾಮೀಜಿ ನಕ್ಕರು "ಎಲವೋ ಮೂರ್ಖ, ನಿನ್ನ ಒಡೆಯ ಮೆದುವಾಗಿ ಥಳಿಸುತ್ತಿಲ್ಲ. ನಿನ್ನ ದೇಹ ನಿಧಾನಕ್ಕೆ ಅದನ್ನು ಸಹಿಸಲು ಕಲಿಯುತ್ತಿದ್ದೆ.ಚಾಟಿ ಏಟಿಗೆ ನಿನ್ನ ದೇಹ ಒಗ್ಗ ತೊಡಗಿದೆ, ಅಷ್ಟೇ ... "
ರಿಕ್ಷಾ ಚಾಲಕ ತನ್ನ ಕತೆ ನಿಲ್ಲಿಸಿ ನನ್ನ ಕಡೆ ತಿರುಗಿ ಹೇಳಿದ
"ಯಾವುದೂ ಸರಿಯಾಗಿಲ್ಲ, ಹಿಂದಿನ ಹಾಗೆಯೇ ಕಷ್ಟ ಇದೆ ಸಾರ್. ಅಭ್ಯಾಸ ಆಗ್ತಾ ಇದೆ... ಅಥವಾ ಅಭ್ಯಾಸ ಮಾಡ್ಕೋ ಬೇಕಾಗಿದೆ ... "

Thursday, December 15, 2016

ನವೆಂಬರ್ ೯

ನಾನು ಕಾರ್ಡ್ ಮೂಲಕ ವ್ಯವಹರಿಸ ಬಲ್ಲೆ 
ಕ್ಯಾಶ್ ಲೆಸ್ ಎಂದು ಮಾಲ್ ಗಳಲ್ಲಿ, ಸೂಪರ್ ಬಜಾರ್ ಗಳಲ್ಲಿ ಕ್ಯೂ ನಿಂತು
ನನ್ನ ದೇಶ ಪ್ರೇಮ ಸಾಬೀತು ಮಾಡ ಬಲ್ಲೆ ... 
ಆದರೆ ಮಾಲ್ ಗಳಲ್ಲಿ ಮೀನು, ತರಕಾರಿ ಖರೀದಿಸಿ 
ಬ್ರಾಂಡಡ್ ಚೀಲಗಳಲ್ಲಿ ತುಂಬಿಸಿ ಬಿಂಕದಿಂದ ಮನೆ ಕಡೆ ಸಾಗುವಾಗ 
ರಸ್ತೆ ಬದಿಯಲ್ಲಿ ಮೀನಿನ ಬುಟ್ಟಿ ಜೊತೆ ಬಿಸಿಲಲ್ಲಿ ಒಣಗುತ್ತಿರುವ ಅಕ್ಕಮ್ಮ
ತರಕಾರಿ ಅಂಗಡಿಯ ಅಣ್ಣಪ್ಪ 
ದಿನಸಿ ಅಂಗಡಿಯ ಶೆಟ್ಟರು, 
ಹಣ್ಣು ಮಾರುವ ಪಿಂಟೋ 
ಕಬ್ಬಿನ ಹಾಲು ಮಾರುವ ಕಿಟ್ಟಪ್ಪ 
ಟೀ ಸ್ಟಾಲ್ ನ ಅಬ್ಬೂ ಕಾಕಾ
ಇವರೆಲ್ಲರ ಕಣ್ಣ ನೋಟಗಳು
ನೇರ ನನ್ನ ಹೃದಯವನ್ನೇ ಇರಿದಂತಾಗುತ್ತದೆ  
ನವೆಂಬರ್ ೯ರಂದು ನನ್ನ ದೇಶದಿಂದ 
ಗಡಿಪಾರು ಮಾಡಲ್ಪಟ್ಟ ಪರದೇಶಿಗಳಂತೆ 
ಇವರು ನನ್ನ ಬೀದಿಗಳಲ್ಲಿ ಧೂಳು ತಿನ್ನುತ್ತಾ 
ತಮ್ಮ ಪ್ರಧಾನಿಯ ಭಾಷಣಗಳಿಂದ ಹೊಟ್ಟೆತುಂಬಿಸಿಕೊಳ್ಳುತ್ತಿದ್ದಾರೆ
ನವೆಂಬರ್ ೯ರಿಂದ ಇವರೆಲ್ಲ ಒಂದು ದೇಶವಾಗಿ ಸಿಡಿದು ನಿಂತಿದ್ದಾರೆ 
ನನಗೆ ಸ್ಪಷ್ಟವಾಗುತ್ತಿದೆ 
ಅದು ನನ್ನ ದೇಶವಂತೂ ಅಲ್ಲವೇ ಅಲ್ಲ... 




Saturday, December 3, 2016

ನೋಟಿನಲ್ಲೂ ಇರುವೆ

1
ವೃದ್ಧಾಶ್ರಮದಲ್ಲಿರುವ 
ಹಳೆ ನೋಟುಗಳಿಗೆ 
ಬಂದಿದೆ ಬೆಲೆ
ಮಗ ಬಂದ 
ಎಂದು ಸಂಭ್ರಮಿಸುತ್ತ 
ಹಣ್ಣೆಲೆ ಕಾರು ಹತ್ತಿತು

ಕಾರಿನಿಂದ ಇಳಿದಾಗ 
ಹಳೆನೋಟಿಗೆ ಹೊಳೆಯಿತು 
ಮನೆಯಂತೂ ಅಲ್ಲ 
ಸಾಲು ಸಾಲು ಸವೆದ ಜೀವಗಳು 
ಪಕ್ಕದಲ್ಲೇ ನಿಂತ
ಮಕ್ಕಳ ಕೈಯಲ್ಲಿ ಹಳೆ ನೋಟುಗಳು 

ತಾಯಿ - ಮಗನ ವಿನಿಮಯ 
ಮುಗಿಯಿತು 
ಹಳೆ ನೋಟು 
ಮತ್ತೆ ವೃದ್ಧಾಶ್ರಮ ಸೇರಿತು
2
ಬಾಕಿ ಇಟ್ಟ ಕೂಲಿಯನ್ನೆಲ್ಲ 
ಧಣಿ ಒಟ್ಟಿಗೇ ಕೊಟ್ಟಾಗ 
ಅವನ ಕರುಣೆಗೆ ಚೋಮ ಕಣ್ಣೀರಾದ 
ದಿನಸಿಗೆಂದು ಅಂಗಡಿಗೆ ಹೋದಾಗ 
ದಣಿಯ ಕರುಣೆಯ ಗುಟ್ಟು ಗೊತ್ತಾಯಿತು 
ನೋಟಿನಲ್ಲಿರುವ ಗಾಂಧಿ ಯಾಕೋ ಅಳುತ್ತಿದ್ದ
3
ಬೆಳ್ಳಬೆಳಗ್ಗೆ ಎದ್ದು ನೋಡುತ್ತೇನೆ 
ಸಾಲು ಸಾಲಾಗಿ ಸಾಗುತ್ತಿವೆ ಇರುವೆಗಳು 
ಬಹುಶಃ ಬ್ಯಾಂಕಿಗೆ ಹೊರಟಿರಬೇಕು
4
೨೦೦೦- ೫೦೦ ರೂಗಳ ನೋಟು 
ನಿಷೇಧದ ಲವಲೇಶ ಆತಂಕವಿಲ್ಲದೆ 
ಇರುವೆ, ಚಿಟ್ಟೆ, ಜಿಂಕೆ, ಹುಲಿ 
ಲಕ್ಷಾಂತರ ಜೀವಚರಗಳು 
ಬದುಕುತ್ತಿರೋದೇ ಮನುಷ್ಯನ ಪಾಲಿಗೆ 
ಇಂದಿನ ಸೋಜಿಗ
5
ಮಗುವಿನ ಕೈಗೆ
ಒಂದು ಸಾವಿರ ರೂ. ನೋಟುಗಳ 
ಕಟ್ಟು ಕೊಟ್ಟ ತಂದೆ 
ಅದರ ಕೈಯಲ್ಲಿದ್ದ ಪಿಗ್ಮಿ ಡಬ್ಬ ಒಡೆದು 
ನಾಣ್ಯ ಎಣಿಸುತ್ತಿದ್ದಾನೆ
6
ಸದಾ ನನ್ನ ಮುಂದೆ 
ಸಾವಿರದ ನೋಟುಗಳನ್ನು ಎಣಿಸುತ್ತಾ 
ಪರೋಕ್ಷವಾಗಿ ಹಂಗಿಸುವ 
ಗೆಳೆಯನ ಮುಂದೆ 
ಇದೇ ಮೊದಲ ಬಾರಿ, 
ನನ್ನಲ್ಲಿರುವ ನೂರರ 
ಆ ಸವೆದ ನೋಟೊಂದನ್ನು
ಹೆಮ್ಮೆಯಿಂದ ಹೊರ ತೆಗೆದೆ.
7
ಮದುವೆ ಖರ್ಚಿಗೆಂದು ತಂದಿಟ್ಟಿದ್ದ 
ಸಾವಿರದ ಕಟ್ಟುಗಳನ್ನು 
ತೋರಣಗಳಿಗೆ ಕಟ್ಟಿ 
ಮದುವೆ ಮನೆಯನ್ನು 
ಶೃಂಗರಿಸಲಾಗಿದೆ
8
ಕಪ್ಪು ಹಣದ ದೊರೆಗಳೆಲ್ಲ 
ನೋಟು ನಿಷೇಧಗಳನ್ನು 
ಸ್ವಾಗತಿಸುತ್ತಿದ್ದಾರೆ 
ಶ್ರೀ ಸಾಮಾನ್ಯ ಬಿಸಿಲಲ್ಲಿ 
ಬ್ಯಾಂಕಿನ ಮುಂದೆ ನಿಂತು 
ಕಪ್ಪಾಗುತ್ತಿದ್ದಾನೆ

Tuesday, November 29, 2016

ಚಿಂದಿ ನೋಟುಗಳು: ದೇವಲೋಕದ ಬಟ್ಟೆ

ನೋಟು ನಿಷೇಧದ ಬಳಿಕ ನನ್ನ ಎಂದಿನ ತರಕಾರಿ ಅಂಗಡಿಗೆ ಇದೇ ಮೊದಲ ಬಾರಿ ಭೇಟಿ ನೀಡಿದ್ದೆ. ತರಕಾರಿ ಅಂಗಡಿಯವ ನೊಣ ಹೊಡೆಯುತ್ತಿದ್ದ.
‘‘ಸಾರ್, ಎಂತ ವ್ಯಾಪಾರ ಇಲ್ಲವಾ?’’ ಕೇಳಿದೆ.
ಸಿಟ್ಟಿನಿಂದ ಅವನು ಉತ್ತರಿಸಿದ ‘‘ಸ್ವಇಪ್ ಮಾಡ್ಲಿಕ್ಕೆ ಕಾರ್ಡ್ ಉಂಟಾ ಕೇಳ್ತಾರೆ...ನನ್ನಲ್ಲಿ ತೂಕ ಮಾಡ್ಲಿಕ್ಕೆ ಸರಿಯಾದ ತಕ್ಕಡಿಯೇ ಇಲ್ಲ....ಎಲ್ಲರ ಬದುಕೂ ಈ ಕಾರ್ಡ್‌ನ ಹೆಸರಲ್ಲಿ ಎಕ್ಕುಟ್ಟಿ ಹೋಗುವುದು ಖಂಡಿತಾ...’’ 
‘‘ಆದರೂ ಭವಿಷ್ಯಕ್ಕೆ ಈ ಕಾರ್ಡ್ ಒಳ್ಳೆಯದೇ... ಜನ ಎಲ್ಲ ಸಂಭ್ರಮದಲ್ಲಿದ್ದಾರೆ....ಇವತ್ತಿನ ದಿನವನ್ನು ಬಿಜೆಪಿಯೋರು ಸಂಭ್ರಮದ ದಿನ ಅಂತ ಆಚರಿಸುತ್ತಾ ಇದ್ದಾರೆ...ಸಂಭ್ರಮ ಇಲ್ಲದೆ ಸುಮ್ಮಗೆ ಆಚರಿಸ್ತಾರಾ....ರಿಕ್ಷಾದ ಡ್ರೈವರಲ್ಲಿ ನಾನು ಕೇಳಿದೆ...ಅವನೂ ಸಂಭ್ರಮದಲ್ಲೇ ಇದ್ದ....’’ ಸಮಾಧಾನ ಹೇಳಿದೆ 
ತರಕಾರಿ ಅಂಗಡಿಯವ ಅದಕ್ಕೆ ಉತ್ತರಿಸದೆ ಸ್ವಲ್ಪ ಹೊತ್ತು ವೌನವಾಗಿದ್ದ. 
ಬಳಿಕ ಇದ್ದಕ್ಕಿದ್ದಂತೆಯೇ ಕೇಳಿದ ‘‘ವ್ಯಾಪಾರ ಹೇಗೂ ಇಲ್ಲ. ಒಂದು ಕತೆ ಹೇಳ್ತೇನೆ ಕೇಳ್ತೀರಾ?’’ 
ಹೇಳಿದರೆ ಹೇಳಲಿ. ಅದಕ್ಕೇನು ದುಡ್ಡು ಕೊಡಬೇಕಾ?
 ‘ಹೇಳು’ ಎಂದೆ.
ಅವನು ಕತೆ ಹೇಳಲು ಶುರು ಮಾಡಿದ
‘‘ಒಂದು ಊರಲ್ಲಿ ಒಬ್ಬ ಸರ್ವಾಧಿಕಾರಿ ರಾಜನಿದ್ದ. ಪ್ರಜೆಗಳ ಸಂಪತ್ತನ್ನೆಲ್ಲ ದೋಚಿ ಖಜಾನೆಯಲ್ಲಿಟ್ಟಿದ್ದ. ತನ್ನದೇ ವೈಭವದ ಲೋಕದಲ್ಲಿ ಕಾಲ ಕಳೆಯುತ್ತಿದ್ದ. ಜಗತ್ತಿನ ಶ್ರೇಷ್ಠವಾದುದೆಲ್ಲ ತನ್ನ ಅರಮನೆಯಲ್ಲಿ ಇರಬೇಕು, ತನ್ನ ಆಸ್ತಿಯಾಗಬೇಕು ಎನ್ನುವುದು ಅವನ ಆಸೆ. ಹೀಗಿರುವಾಗ ಅವನ ಅರಮನೆಗೆ ಅರೇಬಿಯಾದ ಶ್ರೇಷ್ಠ ಬಟ್ಟೆ ವ್ಯಾಪಾರಿಗಳು ಬಂದರು...’’
   ‘‘...ರಾಜ ಅವರನ್ನು ಕುಳ್ಳಿರಿಸಿ ‘ತನ್ನ ಶ್ರೇಷ್ಠತೆಗೆ ತಕ್ಕ ಬಟ್ಟೆ ನಿಮ್ಮಲ್ಲಿದೆಯೇ?’ ಎಂದು ಕೇಳಿದ. ‘ಹೌದು, ಮಹಾರಾಜರೇ’ ಎಂದು ಆ ಬಟ್ಟೆ ವ್ಯಾಪಾರಿಗಳು ತಮ್ಮ ಪೆಟ್ಟಿಗೆಯಲ್ಲಿದ್ದ ಬಗೆ ಬಗೆಯ ಬಟ್ಟೆಗಳನ್ನು ಬಿಚ್ಚಿ ತೋರಿಸಿದರು. ಯಾವುದೂ ರಾಜನಿಗೆ ಇಷ್ಟವಾಗಲಿಲ್ಲ. ‘ಇದು ನನ್ನ ಸೌಂದರ್ಯ, ಶ್ರೇಷ್ಠತೆಗೆ ತಕ್ಕುದಾಗಿಲ್ಲ’ ಎಂದು ಒಂದೊಂದನ್ನೇ ತಿರಸ್ಕರಿಸುತ್ತಾ ಹೋದ. ವ್ಯಾಪಾರಿಗಳು ತಮ್ಮಲ್ಲಿರುವ ಅತಿ ದುಬಾರಿ, ಶ್ರೇಷ್ಠ ನೂಲುಗಳಿಂದ ತಯಾರಿಸಿದ ಬಟ್ಟೆಯನ್ನು ತೋರಿಸಿದರು. ‘ಇಲ್ಲ, ಇದೂ ನನ್ನ ಶ್ರೇಷ್ಠತೆಗೆ ತಕ್ಕುದಾಗಿಲ್ಲ....’ ಎಂದು ರಾಜ ಅದನ್ನೂ ತಿರಸ್ಕರಿಸಿಯೇ ಬಿಟ್ಟ....’’
‘‘....ಬಟ್ಟೆ ವ್ಯಾಪಾರಿಗಳಿಗೆ ಇದರಿಂದ ತೀವ್ರ ಅವಮಾನವಾಯಿತು. ಈ ರಾಜನಿಗೆ ಒಂದು ಪಾಠ ಕಲಿಸಿಯೇ ತೀರಬೇಕು ಎಂದು ಅವರು ನಿರ್ಧರಿಸಿದರು. ಈಗ ಅವರು ಒಂದು ಸುಂದರ ಬಣ್ಣ ಪೆಟ್ಟಿಗೆಯನ್ನು ರಾಜನ ಮುಂದಿಟ್ಟರು ‘ಮಹಾರಾಜ...ಈ ಪೆಟ್ಟಿಗೆಯಲ್ಲಿರುವ ವಿಶಿಷ್ಟ ಬಟ್ಟೆಯನ್ನು ಈ ಜಗತ್ತಿನ ಸರ್ವಶ್ರೇಷ್ಠ ರಾಜನಿಗೆ ಅರ್ಪಿಸಬೇಕು ಎಂದು ನಾವು ತೆಗೆದಿಟ್ಟುಕೊಂಡಿದ್ದೆವು. ಇದೀಗ ಆ ರಾಜ ನೀವೇ ಎನ್ನುವುದು ನಮಗೆ ಮನವರಿಕೆಯಾಯಿತು. ಆದುದರಿಂದ ನಿಮಗೇ ಅರ್ಪಿಸಬೇಕು ಎಂದಿದ್ದೇವೆ...ಆದರೆ ಇದೊಂದು ವಿಶಿಷ್ಟ ದೇವಲೋಕದ ಬಟ್ಟೆ...ಇದನ್ನು ಉಡುವವನಿಗೆ ಕೆಲವು ಪ್ರಮುಖ ಅರ್ಹತೆಯಿರಬೇಕು....’ ಎಂದರು. ರಾಜನೋ ಕುತೂಹಲಗೊಂಡ ‘ಕೊಡಿ ಕೊಡಿ. ನಾನೇ ಸರ್ವ ಅರ್ಹತೆಯುಳ್ಳ ರಾಜ. ಏನಿದರ ವೈಶಿಷ್ಟ?’ ಅತ್ಯಾತುರದಿಂದ ಕೇಳಿದ. ವ್ಯಾಪಾರಿಗಳು ನುಡಿದರು ‘ಸ್ವಾಮಿ...ಇದು ದೇವಲೋಕದ ಮಾಯದ ಬಟ್ಟೆ. ಈ ಬಟ್ಟೆಯನ್ನು ಬಂಗಾರದ ನೂಲುಗಳಿಂದ ನೇಯಲಾಗಿದೆ. ವಜ್ರದ ಹರಳುಗಳಿಂದ ಅಲಂಕರಿಸಲಾಗಿದೆ. ದೇವಲೋಕದ ವರ್ಣಮಯ ಬಣ್ಣಗಳು ಇದರಲ್ಲಿ ಕಂಗೊಳಿಸುತ್ತಿವೆ...ಆದರೆ ಈ ಬಟ್ಟೆಯ ಸರ್ವ ಗುಣಗಳು ಕಾಣಬೇಕಾದರೆ ನೋಡುವವರಿಗೂ ಅರ್ಹತೆಯಿರಬೇಕಾಗುತ್ತದೆ....’ ರಾಜ ಇನ್ನಷ್ಟು ಕುತೂಹಲಗೊಂಡ ‘ಏನದು ಅರ್ಹತೆ? ಹೇಳಿರಿ...‘ ಬಟ್ಟೆ ವ್ಯಾಪಾರಿಗಳು ಒಳಗೊಳಗೆ ನಗುತ್ತಾ ಹೇಳಿದರು ‘ಈ ಬಟ್ಟೆ ಯಾರ ಕಣ್ಣಿಗಾದರೂ ಕಾಣಬೇಕಾದರೆ ಅವನು ಸತ್ಯಸಂಧನಾಗಿರಬೇಕು. ದೇಶಭಕ್ತನಾಗಿರಬೇಕು. ಯಾವತ್ತೂ ರಾಜದ್ರೋಹಿಯಾಗಿರಬಾರದು. ಸದ್ಗುಣಿಯಾಗಿರಬೇಕು. ಅಂತಹ ಎಲ್ಲರಿಗೂ ಈ ಬಟ್ಟೆ ಕಾಣುತ್ತದೆ. ತಾವಂತೂ ಈ ಎಲ್ಲ ಗುಣಗಳನ್ನು ಹೊಂದಿರುವವರು. ಆದರೆ ನಿಮ್ಮ ಆಸ್ಥಾನದಲ್ಲಿರುವವರಿಗೆ ಈ ಗುಣಗಳು ಇವೆಯೇ ಎನ್ನುವುದು ಮುಖ್ಯವಾಗುತ್ತದೆ....’ ರಾಜ ಆಸ್ಥಾನಿಗರ ಕಡೆಗೆ ನೋಡಿದ. ಅವರೆಲ್ಲರೂ ವ್ಯಾಪಾರಿಗಳಿಗೆ ಒಕ್ಕೊರಲಲ್ಲಿ ಹೇಳಿದರು ‘ಆ ಬಟ್ಟೆಯನ್ನು ತೋರಿಸಿರಿ...’
‘‘....ವ್ಯಾಪಾರಿಗಳು ಈಗ ಆ ವರ್ಣಮಯ ಪೆಟ್ಟಿಗೆಯನ್ನು ತೆರೆದರು. ತೆರೆದಾಕ್ಷಣ ಅವರು ಒಮ್ಮೆಲೆ ಕಣ್ಣು ಮುಚ್ಚಿಕೊಂಡು ಹೇಳಿದರು ‘ಕ್ಷಮಿಸಿ ದೊರೆಗಳೇ...ಇದರ ಬೆಳಕಿಗೆ ಕಣ್ಣು ಕೋರೈಸಿದಂತಾಗುತ್ತದೆ. ಜಗತ್ತಿನ ಅಪರೂಪದ ವಜ್ರಗಳ ಬೆಳಕು ಅದು....’ ಎಂದು ಮೆಲ್ಲನೆ ಪೆಟ್ಟಿಗೆಯಿಂದ ಬಟ್ಟೆಯನ್ನು ಹೊರ ತೆಗೆದಂತೆ ನಟಿಸಿದರು. ಇಬ್ಬರು ವ್ಯಾಪಾರಿಗಳು ಕೈಯಲ್ಲಿ ಬಟ್ಟೆಗಳ ಎರಡು ತುದಿಗಳನ್ನು ಹಿಡಿದಂತೆ ನಟಿಸಿದರೆ, ಉಳಿದ ವ್ಯಾಪಾರಿಗಳು ಅದರ ಅಂಚನ್ನು, ಅದರ ಬಣ್ಣವನ್ನು, ಅದರ ಗುಣಮಟ್ಟವನ್ನು ವರ್ಣಿಸತೊಡಗಿದರು....ರಾಜನಿಗೆ ಅಲ್ಲೇನೂ ಕಾಣಿಸಲಿಲ್ಲ. ಆದರೆ ಆ ಬಟ್ಟೆ ಸತ್ಯಸಂಧರಿಗೆ, ದೇಶಭಕ್ತರಿಗೆ, ಗುಣವಂತರಿಗೆ, ರಾಜಭಕ್ತರಿಗೆ ಮಾತ್ರ ಕಾಣುತ್ತದೆ ಎನ್ನುವ ಅಂಶ ಅವನಿಗೆ ನೆನಪಾಯಿತು. ತಕ್ಷಣ ಅವನು ಆಸ್ಥಾನದ ತನ್ನ ಮಂತ್ರಿಯೆಡೆಗೆ ನೋಡಿದ. ಮಂತ್ರಿಗೆ ಅಲ್ಲೇನೂ ಕಾಣುತ್ತಿರಲಿಲ್ಲ. ಕಾಣುತ್ತಿಲ್ಲ ಎಂದರೆ ರಾಜದ್ರೋಹಿ, ಅಸತ್ಯವಂತನಾಗುತ್ತಾನೆ....ತಕ್ಷಣ ಮಂತ್ರಿ ಬಟ್ಟೆಯನ್ನು ನೋಡಿದಂತೆ ನಟಿಸಿ ರೋಮಾಂಚನಗೊಂಡ ‘‘ಮಹಾರಾಜರೇ...ನಾನು ಇಂತಹ ಬಟ್ಟೆಯನ್ನು ನನ್ನ ಜೀವಮಾನದಲ್ಲಿ ನೋಡಿಲ್ಲ....ಎಂತಹ ಅತ್ಯದ್ಭುತ ಗುಣಗಳುಳ್ಳ ಬಟ್ಟೆಯಿದು...ಆಹಾ ...ಓಹೋ...ಅದರ ಬಣ್ಣವೋ...ಅದರ ಗುಣಮಟ್ಟವೋ...ಅದರ ಬಲಭಾಗದಲ್ಲಿರುವ ನೀಲ ವಜ್ರವಂತೂ ಅಪರೂಪವಾದುದು....’ ಮಂತ್ರಿ ಹೊಗಳಿ ಮುಗಿಸುವಷ್ಟರಲ್ಲಿ ಸೇನಾಪತಿ ಬಾಯಿ ತೆರೆದ ‘ಮಂತ್ರಿಗಳೇ ನೀವು ಅದರ ಅಂಚಿನಲ್ಲಿರುವ ಬಂಗಾರದ ಬಣ್ಣದ ನವಿಲಿನ ಚಿತ್ರದ ಬಗ್ಗೆ ಏನೂ ಹೇಳಲಿಲ್ಲ....ಆ ಚಿತ್ರವನ್ನು ದೇವಲೋಕದ ಕಲಾವಿದನೇ ಹೆಣೆದಿರಬೇಕು....’ ಅಷ್ಟರಲ್ಲಿ ಆಸ್ಥಾನ ಪಂಡಿತ ಬಾಯಿ ತೆರೆದ ‘ಈ ಬಟ್ಟೆಗೆ ರೇಶ್ಮೆಯನ್ನು ಬಳಸಿದ್ದಾರಾದರೂ ಇದು ಈ ಲೋಕದ ರೇಶ್ಮೆಯಂತಿಲ್ಲ...ಹಾಗೆಯೇ...ಮಧ್ಯದಲ್ಲಿರುವ ಹೂವುಗಳೂ ದೇವಲೋಕದ ಹೂವುಗಳಂತಿವೆ...’ ಈಗ ವ್ಯಾಪಾರಿಗಳೇ ಅಚ್ಚರಿ ಪಡುವಂತೆ ಆಸ್ಥಾನದಲ್ಲಿರುವ ಒಬ್ಬೊಬ್ಬರೇ ಬಟ್ಟೆಯ ಒಂದೊಂದು ಹೆಗ್ಗಳಿಕೆಯನ್ನು ರಾಜನಿಗೆ ವರ್ಣಿಸತೊಡಗಿದರು. ರಾಜನೂ ಆ ಬಟ್ಟೆಯ ಸೌಂದರ್ಯವನ್ನು ಆಸ್ವಾದಿಸತೊಡಗಿದ. ವ್ಯಾಪಾರಿಗಳು ಇದೇ ಸುಸಮಯ ಎಂದು ‘ರಾಜರೇ...ನಾವೇ ಈ ಬಟ್ಟೆಯನ್ನು ವಿಶಿಷ್ಟ ರೀತಿಯಲ್ಲಿ ನಿಮಗೆ ಉಡಿಸುತ್ತೇವೆ....’ ಎಂದರು. ಅಂತೆಯೇ ರಾಜ ಒಳಹೋಗಿ ತನ್ನ ಬಟ್ಟೆಯನ್ನೆಲ್ಲ ಕಳಚಿದ. ವ್ಯಾಪಾರಿಗಳು ಈ ಮಾಯದ ಬಟ್ಟೆಯನ್ನು ರಾಜನಿಗೆ ಉಡಿಸಿ, ಅವನನ್ನು ಆಸ್ಥಾನಕ್ಕೆ ಕರೆದುಕೊಂಡು ಬಂದರು. ಬರುವಾಗ ಅವರು ರಾಜನ ಸೌಂದರ್ಯ ಈ ಬಟ್ಟೆಯಿಂದ ಹೇಗೆ ಹೆಚ್ಚಿದೆ ಎನ್ನುವುದನ್ನು ವರ್ಣಿಸುತ್ತಾ ಬರುತ್ತಿದ್ದರು. ಆಸ್ಥಾನಿಗರೆಲ್ಲ ನೋಡುತ್ತಾರೆ....ತಮ್ಮ ಮುಂದೆ ರಾಜ ಬೆತ್ತಲೆಯಾಗಿ ನಿಂತಿದ್ದಾನೆ. ಆದರೆ ಯಾರೂ ಅದನ್ನು ಹೇಳುವಂತಿಲ್ಲ. ಒಬ್ಬೊಬ್ಬರಾಗಿ ಎಲ್ಲರೂ ರಾಜನ ಸೌಂದರ್ಯವನ್ನು ಹೊಗಳತೊಡಗಿದರು. ಬಟ್ಟೆಯ ಮಹಿಮೆಯನ್ನು ವರ್ಣಿಸತೊಡಗಿದರು. ವ್ಯಾಪಾರಿಗಳು ಅಪಾರ ಹಣವನ್ನು, ಚಿನ್ನದ ವರಹಗಳನ್ನು ಹಿಡಿದುಕೊಂಡು ತಮ್ಮ ಉಳಿದ ಅಸಲಿ ಬಟ್ಟೆಗಳೊಂದಿಗೆ ಅಲ್ಲಿಂದ ಪರಾರಿಯಾದರು....’’
‘‘...ಇದೇ ಸಂದರ್ಭದಲ್ಲಿ ಯಾರೋ ಸಲಹೆ ನೀಡಿದರು ‘ರಾಜರು ಈ ಬಟ್ಟೆಯ ಜೊತೆಗೆ ರಾಜಮಾರ್ಗದಲ್ಲಿ ಮೆರವಣಿಗೆ ಹೋಗಿ ತಮ್ಮ ಪ್ರಜೆಗಳನ್ನೂ ಧನ್ಯರಾಗಿಸಬೇಕು...’ ಎಲ್ಲರೂ ಅದೇ ಸರಿಯೆಂದರು. ತಕ್ಷಣ ರಾಜನ ಬಹತ್ ಮೆರವಣಿಗೆ ನಡೆಯಿತು. ಜನರೆಲ್ಲ ದೇವಲೋಕದ ಮಾಯದ ಬಟ್ಟೆ ಧರಿಸಿರುವ ರಾಜನ ಸ್ವಾಗತಕ್ಕೆ ಅಣಿಯಾಗಿ ನಿಂತರು. ಅವರೆಲ್ಲರಿಗೂ ಮೊದಲೇ ಹೇಳಲಾಗಿತ್ತು ‘ಬಟ್ಟೆ ಸತ್ಯಸಂಧರಿಗೆ, ಸದ್ಗುಣಿಗಳಿಗೆ, ದೇಶಭಕ್ತರಿಗೆ, ರಾಜಭಕ್ತರಿಗೆ ಮಾತ್ರ ಕಾಣುತ್ತದೆ...’. ರಾಜ ಆಗಮಿಸಿದ. ನೋಡಿದರೆ ‘ಬೆತ್ತಲೆ ರಾಜ!’ ಆದರೆ ಅವರೆಲ್ಲರೂ ‘ತಮಗೆ ಮಾತ್ರ ಬಟ್ಟೆ ಕಾಣಿಸುತ್ತಿಲ್ಲ, ಉಳಿದವರಿಗೆ ಕಾಣಿಸುತ್ತಿರಬೇಕು...’ ಎಂದು ಭಾವಿಸಿ ರಾಜನ ಬಟ್ಟೆಯನ್ನು ಒಬ್ಬೊಬ್ಬರಾಗಿ ಹೊಗಳತೊಡಗಿದರು. ಆದರೆ ಮನದೊಳಗೆ ರಾಜನನ್ನು ನೋಡಿ ನಗುತ್ತಿದ್ದರು, ಅಸಹ್ಯ ಪಡುತ್ತಿದ್ದರು. ಎಲ್ಲರೂ ರಾಜನ ಬಟ್ಟೆಗೆ ಭೋ ಪರಾಕ್ ಹೇಳುವವರೆ. ಹೀಗಿರುವಾಗ, ಆ ಜನರ ನಡುವೆ ಒಂದು ಪುಟ್ಟ ಮಗು ರಾಜನನ್ನು ನೋಡಿ ಜೋರಾಗಿ ಕೂಗಿ ಹೇಳಿತು ‘‘ಹೇ...ರಾಜ ಬಟ್ಟೆಯೇ ಹಾಕಿಲ್ಲ....’’. ತಕ್ಷಣ ಸೈನಿಕರು ಆ ‘ರಾಜದ್ರೋಹಿ, ದೇಶದ್ರೋಹಿ, ಸುಳ್ಳುಬುರುಕ’ ಮಗುವನ್ನು ಬಂಧಿಸಿ ಜೈಲಿಗೆ ತಳ್ಳಿದರು. ಉಳಿದಂತೆ ರಾಜನೀಗ ಅದೇ ಬಟ್ಟೆಯಲ್ಲಿ ತಿರುಗಾಡುತ್ತಿದ್ದಾನೆ....ಜನರು ರಾಜನನ್ನೂ ಅವನು ಧರಿಸಿದ ಬಟ್ಟೆಯನ್ನು ಹೊಗಳುತ್ತಲೇ ಇದ್ದಾರೆ....’’
ಹೀಗೆ ತನ್ನ ಕತೆ ಮುಗಿಸಿದ ತರಕಾರಿ ಅಂಗಡಿಯವ ಹೇಳಿದ ‘‘ನಿನ್ನೆ ಸಂಭ್ರಮ ಆಚರಿಸಿದ ಜನರಿಗೂ, ಆ ರಾಜನ ಪ್ರಜೆಗಳಿಗೂ ಯಾವುದಾದರೂ ವ್ಯತ್ಯಾಸವಿದೆಯೆ?....ಆದರೆ ಆತ ಬಟ್ಟೆಯನ್ನೇ ಧರಿಸಿಲ್ಲ ಎನ್ನುವುದು ಒಂದಲ್ಲ ಒಂದು ದಿನ ಗೊತ್ತಾಗದೇ ಇರುತ್ತದೆಯೆ?’’ ಎಂದು ನನ್ನನ್ನು ಪ್ರಶ್ನಿಸಿದ.
ನಾನು ಉತ್ತರಿಸಲಿಲ್ಲ. ಅರ್ಧ ಕೆಜಿ ಟೊಮೆಟೋ ಖರೀದಿಸಿ, ಅಳಿದುಳಿದ ಚಿಲ್ಲರೆಯನ್ನು ಆತನಿಗೆ ಕೊಟ್ಟು ಮನೆಯ ದಾರಿ ಹಿಡಿದೆ.

Monday, November 28, 2016

ಚಿಂದಿ ನೋಟುಗಳು: ಅಮ್ಮನ ಕತೆ....!

ನೋಟು ನಿಷೇಧದ ಬಳಿಕ ಪ್ರತಿ ದಿನ ಈ ರಿಕ್ಷಾ ಚಾಲಕರ ಗೋಳು ಕೇಳಿ ನಿಜಕ್ಕೂ ಸುಸ್ತಾಗಿ ಹೋಗಿದ್ದೆ. ಆದುದರಿಂದ ಈ ಬಾರಿ ಸಿಟಿ ಬಸ್‌ನಲ್ಲೇ ಕಚೇರಿಗೆ ಹೋಗಲು ನಿರ್ಧರಿಸಿದೆ. ನನ್ನ ಕಚೇರಿಯ ಕಡೆ ಹೋಗುವ ಬಸ್ ಸಿಕ್ಕಿದ್ದೇ ಉಸ್ಸಪ್ಪಾ ಎಂದು ಹತ್ತಿ, ಕಿಟಕಿ ಪಕ್ಕದ ಸೀಟ್ ಹಿಡಿದೆ. ರಿಕ್ಷಾ ಬಾಡಿಗೆಯೂ ಉಳಿಯಿತು. ಈ ರಿಕ್ಷಾ ಚಾಲಕರ ಗೋಳೂ ತಪ್ಪಿತು ಎಂದು ನಿಟ್ಟುಸಿರಿಡುವಷ್ಟರಲ್ಲಿ, ನನ್ನ ಪಕ್ಕದಲ್ಲೇ ಒಬ್ಬ ಬಂದು ಕುಳಿತ. ಕುಳಿತವನು ಸುಮ್ಮನೇ ಕೂತನಾ? ಅದೂ ಇಲ್ಲ. ‘‘ಸಾರ್...ಎರಡು ಸಾವಿರ ರೂಪಾಯಿಯ ಚಿಲ್ಲರೆ ಇದೆಯಾ?’’ ಎಂದು ಕೇಳಿದ. ‘‘ಇಲ್ಲ ಕಣ್ರೀ...ನಾನೇ ಚಿಲ್ಲರೆ ಇಲ್ಲದೆ ಒದ್ದಾಡುತ್ತಿದ್ದೇನೆ....’’ ಎಂದೆ. ಅಷ್ಟೇ...ಅವನು ತನ್ನ ಗೋಳನ್ನು ಹೇಳ ತೊಡಗಿದ. ‘‘ಹೀಗಾದರೆ ನಮ್ಮಂಥವರು ಬದುಕುವುದು ಹೇಗೆ?’’ ಎಂದು ಕೇಳಿದ.
ನಾನು ಎಂದಿನಂತೆ ಮೋದಿಯ ಪರವಾಗಿ ಮಾತನಾಡ ತೊಡಗಿದೆ ‘‘ನೋಡಿ, ಒಂದು ದೊಡ್ಡ ರೋಗಕ್ಕೆ ಮದ್ದು ಕೊಡುವಾಗ ಸಣ್ಣ ಪುಟ್ಟ ಸೈಡ್ ಎಫೆಕ್ಟ್ ಆಗತ್ತೆ...ಸ್ವಲ್ಪ ಸಹಿಸಬೇಕಾಗುತ್ತದೆ...’’ ಸಮಾಧಾನಿಸಿದೆ.
‘‘ನಿಮಗೆ ನನ್ನ ತಾಯಿಯ ಕತೆ ಹೇಳಲಾ?’’ ಅವನು ಒಮ್ಮೆಲೆ ನನ್ನ ಕಡೆ ತಿರುಗಿ ಕೇಳಿದ.
ಬೇಡಾ ಎಂದರೆ ಅವನಿಗೆ ಬೇಜಾರು. ‘‘ಸರಿ ಹೇಳಿ...’’ ಎಂದೆ. ಬಸ್ಸು ಸಾಗುತ್ತಿತ್ತು. ಅವನು ತನ್ನ ತಾಯಿಯ ಕತೆ ಹೇಳ ತೊಡಗಿದ.
‘‘ಅರವತ್ತು ವರ್ಷ ಕಳೆದಿರುವ ನನ್ನ ತಾಯಿ ಆಗಾಗ ಸಣ್ಣ ಪುಟ್ಟ ಬಿಪಿ, ಶುಗರ್ ಕಾಯಿಲೆಯಿಂದ ನರಳುತ್ತಿದ್ದರು. ಆದರೂ ಆರೋಗ್ಯವಾಗಿಯೇ ಇದ್ದರು. ಇದ್ದಕ್ಕಿದ್ದಂತೆಯೇ ಆಕೆಗೆ ಹೊಟ್ಟೆ ನೋವು ಆರಂಭವಾಯಿತು. ಜೊತೆಗೆ ಹಸಿವಿಲ್ಲ. ಹತ್ತಿರದ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿದಾಗ ಗೊತ್ತಾಯಿತು, ಆಕೆಗೆ ಕ್ಯಾನ್ಸರ್ ಎನ್ನುವುದು. ಡಾಕ್ಟರ್ ನೇರವಾಗಿಯೇ ಹೇಳಿದರು ‘‘ಘಟ್ಟ ಅಪಾಯವನ್ನು ತಲುಪಿದೆ. ನಿಮ್ಮ ತಾಯಿ ಹೆಚ್ಚೆಂದರೆ ಇನ್ನು ಮೂರು-ನಾಲ್ಕು ವರ್ಷ ಬದುಕಬಹುದು’’. ನನಗೆ ತಾಯಿಯ ಜೊತೆಗೆ ಇನ್ನಷ್ಟು ವರ್ಷಗಳ ಕಾಲ ಬದುಕುವ ಆಸೆ. ತಾಯಿಯನ್ನು ಉಳಿಸಲೇಬೇಕು ಎಂದು ನಾನು ನಗರದ ಅತಿ ದೊಡ್ಡ ಆಸ್ಪತ್ರೆಗೆ ಆಕೆಯನ್ನು ದಾಖಲಿಸಿದೆ. ಬೃಹತ್ ಆಸ್ಪತ್ರೆ ಅದು. ಆ ಆಸ್ಪತ್ರೆಯ ಗಾತ್ರ ನೋಡಿಯೇ ನನ್ನ ತಾಯಿ ಬದುಕುತ್ತಾಳೆ ಎಂಬ ಭರವಸೆ ಮೂಡಿತು ನನಗೆ...’’
‘‘....ಡಾಕ್ಟರ್ ಪರೀಕ್ಷಿಸಿದ್ದೇ ಘೋಷಿಸಿದರು ‘‘ಕೀಮೋ ಥೆರಪಿ’’ ಆಗಬೇಕು. ನಾನು ಸರಿ ಎಂದೆ. ಡಾಕ್ಟರ್ ಕೀಮೋ ಥೆರಪಿ ಆರಂಭಿಸಿದರು. ಆದರೆ ನನ್ನ ದುರದಷ್ಟ. ಒಂದೆರಡು ದಿನ ಚೆನ್ನಾಗಿಯೇ ಇದ್ದ ತಾಯಿ ನಾಲ್ಕನೆ ದಿನಕ್ಕೆ ಸಂಪೂರ್ಣ ಆರೋಗ್ಯ ಕಳೆದುಕೊಂಡರು. ಕಾಲು ಬಾತತೊಡಗಿತು. ಅರೆಪ್ರಜ್ಞಾವಸ್ಥೆ ತಲುಪಿಸಿದರು. ಪ್ರತಿ ದಿನ ನನ್ನ ತಾಯಿಯನ್ನು ನೋಡಲು ಬರುತ್ತಿದ್ದ ಡಾಕ್ಟರ್ ನಾಲ್ಕನೇ ದಿನ ಒಮ್ಮೆಲೆ ಮುಳುಗಿದರು. ನರ್ಸ್‌ನ ಬಳಿ ವಿಚಾರಿಸಿದರೂ ಡಾಕ್ಟರ್ ರೋಗಿಯನ್ನು ನೋಡಲು ಬರುತ್ತಿಲ್ಲ. ನಾನೇ ಕಿಮೋಥೆರಪಿ ಡಾಕ್ಟರನ್ನು ಹುಡುಕಿಕೊಂಡು ಹೋದೆ. ಅವರು ನನ್ನನ್ನು ಪ್ರಶ್ನಾರ್ಹವಾಗಿ ನೋಡಿದರು. ನಾನು ತಾಯಿಯ ಸ್ಥಿತಿ ವಿವರಿಸಿದೆ. ಡಾಕ್ಟರ್ ನಿರ್ಲಿಪ್ತವಾಗಿ ಹೇಳಿದರು ‘‘ನೋಡಿ, ನಿಮ್ಮ ತಾಯಿಯ ಎರಡೂ ಕಿಡ್ನಿ ಹೋಗಿದೆ. ಮೊದಲು ಅದಕ್ಕೊಂದು ವ್ಯವಸ್ಥೆ ಆಗಬೇಕು. ಈ ವಿಭಾಗದಲ್ಲಿ ಕಿಡ್ನಿ ಡಾಕ್ಟರ್ ಇದ್ದಾರೆ. ಅವರಲ್ಲಿ ಮೊದಲು ಮಾತನಾಡಿ....’’
‘‘....ನಾನು ಕಿಡ್ನಿ ಡಾಕ್ಟರ ಬಳಿಗೆ ಓಡಿದೆ. ಅವರು ಹೇಳಿದರು ‘ನೋಡಿ, ನಿಮ್ಮ ತಾಯಿಗೆ ವಯಸ್ಸಾಗಿತ್ತು. ಜೊತೆಗೆ ಬೇರೆ ಕೆಲವು ರೋಗಗಳಿದ್ದವು. ಕಿಮೋಥೆರಪಿಯನ್ನು ತಾಳಿಕೊಳ್ಳುವ ಶಕ್ತಿ ಅವಳಿಗಿರಲಿಲ್ಲ. ಆದುದರಿಂದಲೇ ಅವಳ ಎರಡೂ ಕಿಡ್ನಿ ನಾಶವಾಗಿದೆ. ಈಗ ಏನೂ ಮಾಡುವ ಹಾಗಿಲ್ಲ...ಡಯಾಲಿಸಿಸ್‌ನ್ನು ತಾಳಿಕೊಳ್ಳುವ ಶಕ್ತಿ ನಿಮ್ಮ ತಾಯಿಯ ದೇಹಕ್ಕಿಲ್ಲ.... ನೀವು ಅವಸರದಿಂದ ಕೀಮೋಥೆರಪಿಯನ್ನು ಮಾಡಿಸಬಾರದಿತ್ತು...’. ನಾನು ಮತ್ತೆ ಕಿಮೋಥೆರಪಿ ಡಾಕ್ಟರಲ್ಲಿ ಹೋಗಿ ಹೇಳಿದೆ. ಅವರು ಸೆಡವಿನಿಂದ ಹೇಳಿದರು ‘‘ನೋಡ್ರಿ...ಕ್ಯಾನ್ಸರ್ ರೋಗಕ್ಕೆ ಬೇಕಾದ ಔಷಧಿಯನ್ನು ನಾವು ಕೊಟ್ಟಿದ್ದೇವೆ. ಅವರ ಕಿಡ್ನಿ ಅದನ್ನು ತಾಳಿಕೊಳ್ಳಲಿಲ್ಲ. ಅದಕ್ಕೆ ನಾವೇನೂ ಮಾಡುವ ಹಾಗಿಲ್ಲ....’’
‘‘....ಆರನೇ ದಿನ ನನ್ನ ತಾಯಿ ಆಸ್ಪತ್ರೆಯಲ್ಲೇ ತೀರಿ ಹೋದರು. ಆಸ್ಪತ್ರೆಯ ಬಿಲ್ ಎರಡೂವರೆ ಲಕ್ಷ ರೂ. ಆಗಿತ್ತು. ನನ್ನ ಮನೆಯಿರುವ ಪುಟ್ಟ ಜಮೀನನ್ನು ಮಾರಿ, ಆಸ್ಪತ್ರೆಯ ಬಿಲ್ ಕಟ್ಟಿ ತಾಯಿಯ ಹೆಣವನ್ನು ಬಿಡಿಸಿಕೊಂಡು ಬಂದೆ....’’ ಎನ್ನುತ್ತಾ ಅವನು ಮೌನವಾದ.
ನಾನು ಅವನ ಮುಖ ನೋಡಿದರೆ ಅವನ ಕಣ್ಣಂಚಲ್ಲಿ ಹನಿಯಿತ್ತು. ಅವನ ಕೈಯನ್ನು ಹಿಸುಕಿ ಸಮಾಧಾನಿಸಿದೆ.
ಇದೀಗ ಅವನು ಬಾಯಿ ತೆರೆದ ‘‘ಮೋದಿ ಮಾಡಿರುವ ಈ ಕೀಮೋಥೆರಪಿಯಲ್ಲಿ ನನ್ನ ಈ ತಾಯಿಯ ಕಿಡ್ನಿ ನಾಶವಾಗದಿದ್ದರೆ ಅಷ್ಟು ಸಾಕಾಗಿದೆ. ಯಾಕೆಂದರೆ, ತಾಯಿಯ ಹೆಣವನ್ನು ಬಿಡಿಸಿಕೊಳ್ಳಲು ನನ್ನಲ್ಲಿ ಮಾರುವುದಕ್ಕೀಗ ಜಮೀನು ಕೂಡ ಇಲ್ಲ....’’
ಅಷ್ಟರಲ್ಲಿ ಕಂಡಕ್ಟರ್ ನಾನು ಇಳಿಯುವ ಸ್ಟಾಪ್‌ನ ಹೆಸರು ಕೂಗುತ್ತಿರುವುದು ಕೇಳಿಸಿತು. ಭಾರವಾದ ಮನಸ್ಸಿನಿಂದ ಎದ್ದು ನಿಂತೆ.

Sunday, November 27, 2016

ನೋಟಿನ ಚಿಂದಿ ಕತೆಗಳು

1
ರೂಪಾಯಿ ಬರ್ತಾ ಇಲ್ಲ
ಇವತ್ತು ಎಟಿಎಂ ಕ್ಯೂನಲ್ಲಿ ಒಂದು ತಮಾಷೆಯಾಯಿತು
ಒಬ್ಬ ಎಟಿಎಂ ಒಳಗೆ ಹೋಗಿ ಹತ್ತು ನಿಮಿಷದ ಬಳಿಕ ಹೊರಬಂದು ಮುಖ ಬಾಡಿಸಿ ಹೇಳಿದ "ಇಲ್ಲಾರಿ, ಎರಡು ಸಾವಿರ ರೂಪಾಯಿ ಬರ್ತಾ ಇಲ್ಲ"
ನೋಟು ಮುಗಿಯಿತೇನೋ ಎಂದು ನಾನು ಬೆಚ್ಚಿ ಬಿದ್ದೆ. 
ಅಷ್ಟರಲ್ಲಿ ಒಬ್ಬ ಒಳ ಹೋಗಿ ಎರಡು ಸಾವಿರ ನೋಟಿನೊಂದಿಗೆ ಹೊರ ಬಂದ 
"ಅರೆ ನೋಟು ಬರ್ತಾ ಇದೆಯಲ್ಲ?" ನಾನು ಮತ್ತೆ ಆ ವ್ಯಕ್ತಿಯ ಬಳಿ ಕೇಳಿದೆ. 
"ಇಲ್ಲ, ನಾನು ಎರಡೆರಡು ಬಾರಿ ಪ್ರಯತ್ನಿಸಿದೆ" ಹಣೆ ಒರೆಸಿ ಕೊಳ್ಳುತ್ತಾ ಹೇಳಿದ. 
ನಾನು ಅನುಮಾನದಿಂದ ಕೇಳಿದೆ "ನಿಮ್ಮ ಅಕೌಂಟ್ ನಲ್ಲಿ ಹಣ ಇದೆಯೇ ?"
"ನನ್ನ ಎಕೌಂಟ್ ನಲ್ಲಿ ಹಣ ಇಲ್ಲ. ಆದರೆ ಮೋದಿ ಹೇಳಿದ್ದಾರಂತಲ್ಲ, ನವೆಂಬರ್ 10ರಿಂದ ಎಟಿಎಂ ನಲ್ಲಿ 2೦೦೦ ರೂಪಾಯಿ ಬರುತ್ತದೆ ಅಂತ. ಮೋದಿಯವರ ಘೋಷಣೆ ಕೇಳಿ ನಾನು ನನ್ನ 2೦೦೦ ರೂಪಾಯಿ ತೆಗೆದು ಕೊಳ್ಳಲು ಬಂದದ್ದು... ಆದರೆ ನನ್ನ ಎಕೌಂಟಿಗೆ ಎರಡು ಸಾವಿರ ಬೀಳಲೇ ಇಲ್ಲ ... "
ಪಾಪ ಅನ್ನಿಸಿತು. ಸಮಾಧಾನಿಸಿದೆ "ನೋಡಿ ಹಾಗೇನಿಲ್ಲ, ನೀವು ಬ್ಯಾಂಕಿಗೆ ನಾಲ್ಕು ಸಾವಿರ ಹಾಕಿದರೆ ಎರಡು ಸಾವಿರ ರೂಪಾಯಿ ತೆಗೆದು ಕೊಳ್ಳ ಬಹುದು, ಅಷ್ಟೇ ... "
ಅವನು ಅರ್ಥವಾಗದೆ ಏನೋ ಗೊಣಗುತ್ತಾ ಹೋದ. 
ಪಾಪ, ಯಾರೋ ಮೋದಿ ಭಕ್ತ ಈತನನ್ನು ಏಮಾರಿಸಿರಬೇಕು.

2
ಗಂಡನ ಹೊಸ ಬಟ್ಟೆ
ಇವತ್ತು ಕಚೇರಿಗೆ ಹೊರಟಾಗ ಇನ್ನೊಬ್ಬ ರಿಕ್ಷಾ ಚಾಲಕರೊಬ್ಬರ ಜೊತೆ ಮಾತುಕತೆ. 
ಉದ್ದಕ್ಕೂ ನೋಟು ನಿಷೇಧದಿಂದ ತನಗಾಗಿರುವ ಸಮಸ್ಯೆ ಹೇಳುತ್ತಿದ್ದರು. 
ಎಲ್ಲ ಕೇಳಿಸಿಕೊಂಡ ನಾನು ಅವರಿಗೆ ಭರವಸೆ ನೀಡಿದೆ "ತಲೆ ಬಿಸಿ ಮಾಡಬೇಡಿ. ಇನ್ನೊಂದು ಎರಡು ವರ್ಷದಲ್ಲಿ ದೇಶಕ್ಕೆ ಭಾರಿ ಒಳ್ಳೆಯದಾಗುತ್ತೆ. ಸ್ವಲ್ಪ ಸಹನೆ ತೆಗೆದು ಕೊಳ್ಳಿ "
ರಿಕ್ಷಾ ಚಾಲಕ ಮುಖಕ್ಕೆ ಹೊಡೆದಂತೆ ಹೇಳಿದರು "ಇದು, ಗಂಡ ಹೊಸ ಬಟ್ಟೆ ತರ್ತಾನೆ ಎಂದು ನಂಬಿ, ಹೆಂಡತಿ ಇರುವ ಹಳೆ ಬಟ್ಟೆಗೆ ಬೆಂಕಿ ಕೊಟ್ಟು ಬೆತ್ತಲೆಯಾಗಿ ಕಾದು ಕುಳಿತ ಕತೆಯಾಯಿತು"
ಮತ್ತೆ ಅವನ ಮುಖ ನೋಡುವ ಧೈರ್ಯ ನನಗೆ ಬರಲಿಲ್ಲ.

3
ಕೋತಿ ಮತ್ತು ಅದರ ಮುದ್ದಿನ ಮರಿ
ನಿನ್ನೆ ಆಟೋ ರಿಕ್ಷಾ ಒಂದರಲ್ಲಿ ಕಚೇರಿ ಕಡೆ ಸಾಗುತ್ತಿದ್ದಾಗ ಚಾಲಕ ನೋಟು ನಿಷೇಧದಿಂದಾದ ಸಮಸ್ಯೆಯನ್ನು ತೋಡಿ ಕೊಳ್ಳುತ್ತಿದ್ದರು. ಮಾತು ನೋಟು ನಿಷೇಧಕ್ಕಾಗಿ ಮೋದಿಯನ್ನು ಬೆಂಬಲಿಸುತ್ತಿರುವ ಭಕ್ತರ ಕಡೆ ಮಾತು ತಿರುಗಿತು. 
"ಮೋದಿಯ ಅಭಿಮಾನಿಗಳು ನೋಟು ನಿಷೇಧವನ್ನು ಉತ್ತಮ ಕೆಲಸ ಎನ್ನುತ್ತಿದ್ದಾರೆ. ಮೋದಿಯನ್ನು ತಲೆ ಮೇಲೆ ಹೊತ್ತು ತಿರುಗುತ್ತಿದ್ದಾರೆ. ಹಾಗಾದರೆ ನೋಟಿನ ಬಿಸಿ ಅವರಿಗೆ ತಾಗಿಲ್ಲವೇ ? ತಾಗಿದ್ದಿದ್ದರೆ ಈ ವರ್ಗ ಮೋದಿಯನ್ನು ಹೇಗೆ ಹೊತ್ತು ಮೆರೆಯುತ್ತದೆ ?" ರಿಕ್ಷಾ ಚಾಲಕನಲ್ಲಿ ನಾನು ಕೇಳಿದೆ. 
ಆಟೋ ಚಾಲಕ ನಗುತ್ತಾ "ಸಾರ್, ನಾನೊಂದು ಕತೆ ಹೇಳ್ತೇನೆ, ಕೇಳ್ತೀರಾ?" ಎಂದರು. 
ನಾನೂ ಕುತೂಹಲದಿಂದ "ಹೇಳಿ ಹೇಳಿ" ಎಂದೆ. ಆಟೋ ಮುಂದೆ ಸಾಗುತ್ತಿತ್ತು. 
"ಸರ್, ಒಂದು ಖಾಲಿ ಸ್ವಿಮ್ಮಿಂಗ್ ಟ್ಯಾಂಕ್ ನಲ್ಲಿ ಒಂದು ಕೋತಿ ಮತ್ತು ಅದರ ಮುದ್ದಿನ ಮರಿ ಆಡುತ್ತಿತ್ತು. ಅಷ್ಟರಲ್ಲಿ ಸ್ವಿಮ್ಮಿಂಗ್ ಟ್ಯಾಂಕ್ ಗೆ ನೀರು ತುಂಬಿಸ ತೊಡಗಿದರು. ಮೊದಲು ಕೋತಿ ತನ್ನ ಮರಿಯ ಜೊತೆ ಆ ನೀರಲ್ಲಿ ಆಡ ತೊಡಗಿತು. ನೀರಿನ ಮಟ್ಟ ಏರುತ್ತಿದ್ದ ಹಾಗೆ ಕೋತಿ ತನ್ನ ಮರಿಯನ್ನು ಎತ್ತಿ ಸೊಂಟದಲ್ಲಿ ಇಟ್ಟುಕೊಂಡಿತು. ನೀರು ಮತ್ತೆ ಏರತೊಡಗಿತು. ಈಗ ಕೋತಿ ತನ್ನ ಮರಿಯನ್ನು ಹೆಗಲ ಮೇಲೆ ಇಟ್ಟು ರಕ್ಷಿಸಿತು. ನೀರಿನ ಮಟ್ಟ ಮತ್ತೆ ಏರಿತು. ನೀರು ಎದೆಯ ಮಟ್ಟಕ್ಕೆ ಬಂತು. ಈಗ ಕೋತಿ ತನ್ನ ಮರಿಯನ್ನು ತಲೆಯ ಮೇಲೆ ಇಟ್ಟಿತು. ನೀರು ಇನ್ನೂ ಏರ ತೊಡಗಿತು. ಕುತ್ತಿಗೆಗೆ ಬಂತು. ಕೋತಿ ತುದಿಗಾಲಲ್ಲಿ ನಿಂತಿತು. ಈಗ ನೀರು ಕೋತಿಯ ಮೂಗಿನ ಮಟ್ಟಕ್ಕೆ ಬಂತು.... " ಎಂದವನೇ ಚಾಲಕ ನನ್ನ ಮುಖ ನೋಡಿದರು. 
"ಮತ್ತೇನಾಯಿತು ಹೇಳಿ?" ಕುತೂಹಲದಿಂದ ಕೇಳಿದೆ. 
"ಈಗ ಕೋತಿ ತನ್ನ ಮರಿಯನ್ನು ಕಾಲ ಕೆಳಗೆ ತಳ್ಳಿ, ಅದರ ಮೇಲೆ ನಿಂತು, ಟ್ಯಾಂಕ್ ನಿಂದ ಹೊರಗೆ ಹಾರಿತು. ಸರ್, ಸದ್ಯ ನೀರು ಸೊಂಟದವರೆಗಷ್ಟೇ ಬಂದಿದೆ. ನೀರು ಅವರ ಮೂಗಿನವರೆಗೆ ಬರುವವರೆಗೆ ಕಾಯಿರಿ."
ಅಷ್ಟರಲ್ಲಿ ನನ್ನ ಸ್ಟಾಪ್ ಬಂತು. ಇಳಿದೆ. ರಿಕ್ಷಾ ಚಾಲಕ ಹೇಳಿದ ಕತೆ ಈಗಲೂ ನನ್ನ ತಲೆಯಲ್ಲಿ ಬೇರೆ ಬೇರೆ ಆಯಾಮಗಳನ್ನು ಪಡೆದು ಕೊಳ್ಳುತ್ತಾ ಬೆಳೆಯುತ್ತಿದೆ,.

4
ಮಾಯದ ಬಟ್ಟೆ
ಅಂಬಾನಿ ಹೊಲಿದ ಮಾಯದ ಬಟ್ಟೆ ಧರಿಸಿ ಮೋದಿ ಸಂಭ್ರಮಿಸುತ್ತಿದ್ದಾರೆ. ಭಕ್ತರು ಇಲ್ಲದ ಬಟ್ಟೆಯ ವರ್ಣನೆ ಮಾಡುತ್ತಿದ್ದಾರೆ. ಎಳೆ ಮಗುವೊಂದು ಬೆತ್ತಲೆ ರಾಜನ ನೋಡಿ ಕಿಸಕ್ಕನೆ ನಕ್ಕಿದೆ. ಇದೀಗ ಆ ಮಗುವಿನ ಮೇಲೆ ರಾಜ ದ್ರೋಹದ ಆರೋಪ ಹೊರಿಸಲಾಗಿದೆ

5
ನೀನೆಲ್ಲಿದ್ದೀಯ ?
"ದೇಶಕ್ಕಾಗಿ ಇಷ್ಟಾದರೂ ಮಾಡೋಕ್ಕಾಗಲ್ವಾ ಜನರಿಗೆ ? "
"ಅದಿರ್ಲಿ ನೀನೆಲ್ಲಿದ್ದೀಯ ? "
"ನಾನು ಅಮೇರಿಕ ಟೂರಲ್ಲಿದ್ದೇನೆ ... ಎಲ್ಲ ಸರಿಯಾದ ಮೇಲೆ ಬರೋಣ ಅಂತ .... "

6
ನಂಬಿಕೆ 
ಹೊಸ 2000 ನೋಟಿಗೆ ಬೆಂಕಿ ಹಚ್ಚಿದ್ರೆ ಬೆಂಕಿ ಹತ್ತೋದೇ ಇಲ್ಲ ಎಂಬ ಮೋದಿ ಭಕ್ತನ ಮಾತನ್ನು ನಂಬಿ, ಪರೀಕ್ಷಿಸಲು ಹೋಗಿ ಇಲ್ಲೊಬ್ಬ ತನ್ನ ಹೊಸ 2000 ರು ನೋಟನ್ನು ಕಳೆದು ಕೊಂಡಿದ್ದಾನೆ 

7
ಸ್ವಾಗತ 
ಅಂದ ಹಾಗೆ ನಿಮಗೆ ಗೊತ್ತಾ, ನೋಟು ನಿಷೇಧವನ್ನು ಜನಾರ್ದನ ರೆಡ್ಡಿಯವರು ಸ್ವಾಗತಿಸಿದ್ದಾರೆ!!!

8
ಮೋದಿ ಫೋಟೋ 
ಮಂಗಳೂರಿನ ವೇಲೆನ್ಸಿಯಾ ಪಕ್ಕದಲ್ಲಿರುವ ಈತ ಪುಟ್ಟದೊಂದು ಹೋಟೆಲು ಇಟ್ಟಿದ್ದಾನೆ. ಮೋದಿಯ ಅಭಿಮಾನಿ. ಗೋಡೆಯ ಮೇಲೆ ಮೋದಿಯ ಫೋಟೋ ತೂಗು ಹಾಕಿದ್ದ. 
ಯಾವಾಗ ಮೋದಿಯವರು ಕಾರ್ಡ್ ಉಪಯೋಗಿಸಿ ಎಂದು ಕರೆ ಕೊಟ್ಟರೋ, ಅವನ ಗೋಡೆಯಲ್ಲಿರುವ ಮೋದಿ ಫೋಟೋ ಮಾಯವಾಗಿದೆ.

9
ಗೊತ್ತಾ ?
"ಏ .. ಎರಡು ಸಾವಿರ ನೋಟಿನ ಮೇಲೆ ಮೊಬೈಲ್ ಇಟ್ರೆ ಮೋದಿ ಭಾಷಣ ಮಾಡೋದು ಕಾಣಿಸತ್ತೆ, ಗೊತ್ತಾ?"
"ನನಗೆ ಬೇಕಾಗಿರೋದು ಭಾಷಣ ಅಲ್ಲ, ಎರಡು ಸಾವಿರ ರುಪಾಯಿಯ ಚಿಲ್ರೆ ... "

10
ಮತ್ತೆ ಅಮೃತಮತಿ 
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರಿ ನಾಯಕನಿಗಾಗಿ ಹಂಬಲಿಸೋ ಮತದಾರ, ಪತಿ ಯಶೋಧರನನ್ನು ತಿರಸ್ಕರಿಸಿ ಅಷ್ತಾವಕ್ರನ ಹಿಂಸಾರತಿಗಾಗಿ ಹಂಬಲಿಸೋ ಅಮೃತ ಮತಿಯಂತೆ ಭಾಸವಾಗುತ್ತಾನೆ. ಅತ್ಯಂತ ಕ್ರೂರಿಯೂ, ವಿಕಾರಿಯೂ ಆಗಿರುವ ಅಷ್ಟಾವಕ್ರ ಚಾಟಿಯಿಂದ ಬಾರಿಸುವಾಗ, ಅಮೃತಮತಿ ಕಾಮನೆಯಿಂದ ಸುಖಿಸುತ್ತಾ "... ಇನ್ನಷ್ಟು ಹೊಡಿ, ಆದರೆ ನನ್ನನ್ನು ತಿರಸ್ಕರಿಸಬೇಡ" ಎಂದು ದೀನವಾಗಿ ಬೇಡಿಕೊಳ್ಳುವ ಮನಸ್ಥಿತಿ ಮೋದಿಗಾಗಿ ಇನ್ನೂ ಹಪಹಪಿಸುತ್ತಿರುವ ಜನರಲ್ಲಿ ಆಳವಾಗಿ ಬಚ್ಚಿಟ್ಟು ಕೊಂಡಿದೆಯೇ ? ಜನ್ನನ 'ಯಶೋಧರ ಚರಿತೆ'ಯನ್ನು ಓದುತ್ತಿರುವಾಗ ಹೀಗೊಂದು ಆಲೋಚನೆ ಬಂದು ಬಿಟ್ಟಿತು ....

11
ಅಂಬಿಗ ಮತ್ತು ಅವನ ಮಗ 
ಇದೂ ರಿಕ್ಷಾ ಚಾಲಕನೇ ಹೇಳಿದ ಕತೆ. ಕಚೇರಿ ಕಡೆ ರಿಕ್ಷಾದಲ್ಲಿ ಸಾಗುತ್ತಿರುವಾಗ  "ಮೋದಿಯ ನೋಟು ನಿಷೇಧದ ಅವಾಂತರಗಳ" ಬಗ್ಗೆ ಈ ಚಾಲಕ ಗೊಣಗುತ್ತಿದ್ದ. ಚಾಲಕ ವಯಸ್ಸಲ್ಲಿ ತುಂಬಾ ಹಿರಿಯ. ಜೊತೆಗೆ ತುಂಬಾ ತಿಳುವಳಿಕೆ ಉಳ್ಳವರಂತೆಯೂ ಕಾಣುತ್ತಿದ್ದರು. 
"ಸ್ವಾಮೀ, ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂತಹದೇ ಸ್ಥಿತಿ ಇತ್ತು ಗೊತ್ತಾ ? ಒಮ್ಮೊಮ್ಮೆ ಹಾಗೆ ಆಗ್ತದೆ" ನಾನು ಚಾಲಕನನ್ನು ಸಮಾಧಾನಿಸಿದೆ. 
ಚಾಲಕ ನಿಟ್ಟುಸಿರಿಟ್ಟು ಹೇಳಿದ "ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ಸಂದರ್ಭ ನನಗೆ ಇಪ್ಪತ್ತು ವರ್ಷ. ನೀವಾಗ ಹುಟ್ಟಿರಲಿಕ್ಕೆ ಇಲ್ಲ. ಆಗ ದುಡಿಯುವ ಜನ ಹೀಗೆ ಬೀದಿಗೆ ಬಿದ್ದಿರಲಿಲ್ಲ.... ದೊಡ್ಡವರನ್ನೆಲ್ಲ ಹಿಡಿದು ಜೈಲಿಗೆ ಹಾಕಿದಳು ಆಕೆ ... ನಿಮಗೆ ದೋಣಿಯವನ ಕತೆ ಗೊತ್ತಾ? " ಎಂದು ಕೇಳಿದರು 
"ಗೊತ್ತಿಲ್ಲ ಹೇಳಿ ... " ಎಂದೆ. 
ಅವನು ಕತೆ ಹೇಳ ತೊಡಗಿದ. 
"ಒಂದು ಊರು. ನದಿ ದಾಟಿಯೇ ಆ ಊರಿಗೆ ಹೋಗಬೇಕು. ಆ ಊರಿಗೆ ಒಂದೇ ದೋಣಿ. ಒಬ್ಬನೇ ಅಂಬಿಗ. ಹೆಂಗಸರ ವಿಷಯದಲ್ಲಿ ಈ ಅಂಬಿಗನ ವರ್ತನೆ ಅಷ್ಟು ಸರಿ ಇರಲಿಲ್ಲ ... ದೋಣಿಯನ್ನು ಆತ ಪೂರ್ತಿ ದಡದ ಸಮೀಪ ನಿಲ್ಲಿಸುತ್ತಿರಲಿಲ್ಲ. ಮೊಣಕಾಲಿಗಿಂತ ಜಾಸ್ತಿ ನೀರು ಇರುವಲ್ಲಿ ದೋಣಿ ನಿಲ್ಲಿಸುತ್ತಿದ್ದ. ಇದರಿಂದ ಮಹಿಳೆಯರು ತಮ್ಮ ಸೀರೆಯನ್ನು ಮೊಣಕಾಲಿಗಿಂತ ಮೇಲೆ ಮಾಡಿ ದಡ ಸೇರಬೇಕಾಗಿತ್ತು. ಈ ಮೂಲಕ ಅಂಬಿಗನಿಗೆ ಹೆಂಗಸರ ಕಾಲು ನೋಡುವ ಚಪಲ. ಹೆಂಗಸರು ಅಂಬಿಗನಿಗೆ ಶಾಪ ಹಾಕುತ್ತ, ಸೀರೆ ಮೇಲೆತ್ತಿ ದಡ ಸೇರುತ್ತಿದ್ದರು. ಇದು ಹೀಗೆ ನಡೆಯುತ್ತಲೇ ಇತ್ತು. ಸದಾ ಹೆಂಗಸರಿಗೆ ಅಂಬಿಗನನ್ನು ಬೈಯೋದೆ ಕೆಲಸ ... "
"... ಹೀಗಿರುವಾಗ ಅಂಬಿಗನಿಗೆ ವಯಸ್ಸಾಯಿತು. ಸಾಯುವ ಸಮಯವಾಯಿತು. ಆಗ ಮಗನಿಗೆ ದೋಣಿ ಬಿಡುವ ಹೊಣೆಗಾರಿಕೆ ಕೊಟ್ಟು ಹೇಳಿದ 'ಮಗನೆ ನಿನ್ನ ತಂದೆಯ ಹೆಸರು ಉಳಿಸಬೇಕು. ಊರವರೆಲ್ಲ ನಿನ್ನಿಂದಾಗಿ ನನ್ನನ್ನು ಹೊಗಳುವಂತಾಗಬೇಕು'
ಮಗ ಮಾತು ಕೊಟ್ಟ. ಸರಿ, ತಂದೆಯ ಹೆಸರು ಉಳಿಸೋದು ಹೇಗೆ ? ಒಂದು ಉಪಾಯ ಮಾಡಿದ. 
ತಂದೆ ಮೊಣಕಾಲು ನೀರಿನಲ್ಲಿ ದೋಣಿ ನಿಲ್ಲಿಸೋದು ಅವನಿಗೆ ಗೊತ್ತಿತ್ತು. ಇದೀಗ ಮಗನೋ ಸೊಂಟದವರೆಗೆ ನೀರಿನಲ್ಲಿ ದೋಣಿ ನಿಲ್ಲಿಸ ತೊಡಗಿದ. ಮಹಿಳೆಯರಿಗೆ ಮತ್ತಷ್ಟು ಪೀಕಲಾಟ. ಈಗ ಸೀರೆಯನ್ನು ಇನ್ನಷ್ಟು ಮೇಲಕ್ಕೆತ್ತಬೇಕಾಗಿತ್ತು. 'ಇವನಿಗಿಂತ ಇವನ ತಂದೆ ಎಷ್ಟೋ ಒಳ್ಳೆಯವನು. ಇವನಿಗಿಂತ ಅವನೇ ಆಗಬಹುದು' ಎಂದು ಹಳೆಯ ಅಂಬಿಗನನ್ನು ಜನರು ಹೊಗಳ ತೊಡಗಿದರು. ಹೀಗೆ ಮಗ ತಂದೆಯ ಹೆಸರನ್ನು ಉಳಿಸಿದ......"
ಹೀಗೆ ತನ್ನ ಕತೆಯನ್ನು ಮುಗಿಸಿದ ರಿಕ್ಷಾ ಚಾಲಕ ಹೇಳಿದರು "ಮೋದಿಯಿಂದಾಗಿ ಇಂದಿರಾಗಾಂಧಿಯ ಹೆಸರು ಉಳಿಯಿತು ನೋಡಿ ... "
ಅಷ್ಟರಲ್ಲಿ ನಾನು ಇಳಿಯುವ ಸ್ಟಾಪ್ ಬಂತು. 

Friday, September 23, 2016

ನನ್ನದೇ ಧ್ವನಿಯಲ್ಲಿ .... ಹನಿಗಳು

"ನನ್ನ ಮಸೀದಿ ಧ್ವಂಸಗೈದವರಿಗೆ ಕೃತಜ್ಞ-ಸೂಫಿಯ ಕಣ್ಣಲ್ಲಿ ಹನಿಗಳು" ಕೃತಿಯ ಕೆಲವು ಹನಿಗಳು, ನನ್ನದೇ ಕಣ್ಣಲ್ಲಿ- ನನ್ನದೇ ಧ್ವನಿಯಲ್ಲಿ ....

Friday, September 16, 2016

ಮಿನಿ ಕತೆ: ಆದೇಶ

ವಿಶ್ವ ವಿದ್ಯಾಲಯದ ಮಹಿಳಾ ಶೌಚಾಲಯದಲ್ಲಿ ಕ್ಯಾಮರ ಪತ್ತೆಯಾಯಿತು. 
ಯಾರು? ಏನು? ಹೇಗೆ? ಗುಲ್ಲೆ ಗುಲ್ಲು. 
ಕೊನೆಗೂ ಜನರ ಆಕ್ರೋಶಕ್ಕೆ ಮಣಿದು ನಿಜವಾದ ಆರೋಪಿಯನ್ನು ಪತ್ತೆ ಮಾಡಲಾಯಿತು.
ಆದರೆ ಬಂಧಿಸಿದ ಸಂಜೆಯೇ ಆರೋಪಿಗೆ ಜಾಮೀನು ನೀಡಲಾಯಿತು.
ಜಾಮೀನಿಗಾಗಿ ಮಂಡಿಸಿದ ಕಾರಣಗಳು ಕೆಳಗಿನಂತಿದ್ದವು.
೧. ಮಾಂಸಾಹಾರ ಮಾತ್ರ ತಾಮಸ ಗುಣಗಳನ್ನು ಸೃಷ್ಟಿಸುತ್ತವೆ. ಈ ಕುರಿತು ಪೇಜಾವರರ ಪ್ರಮಾಣ ಪತ್ರವೂ ಇದೆ. ಹುಡುಗ ಹುಟ್ಟಿನಿಂದಲೇ ಸಸ್ಯಾಹಾರಿ ಆದುದರಿಂದ ಅವನಲ್ಲಿ ತಾಮಸ ಗುಣಗಳು ಇರುವ ಸಾಧ್ಯತೆ ಇಲ್ಲ. ಆದುದರಿಂದ ಅವನು ಕ್ಯಾಮರ ಇಟ್ಟಿರೋದು ಹುಡುಗಾಟಿಕೆಗೆ ಎನ್ನೋದು ಗೊತ್ತಾಗುತ್ತದೆ
೨. ಹುಡುಗ ಗೋಮಾಂಸ ವಿರೋಧಿಯಾಗಿದ್ದಾನೆ. ಆದುದರಿಂದ ಅವನಲ್ಲಿ ರಾಕ್ಷಸ ಗುಣ ಇಲ್ಲ ಎನ್ನೋದು ರಾಘವೇಶ್ವರ ಶ್ರೀ ಗಳ ಪ್ರಮಾಣ ಪತ್ರದಿಂದ ತಿಳಿದು ಬಂದಿದೆ. ಮಹಿಳೆಯರ ವಿಷಯದಲ್ಲಿ ಹುಡುಗ ರಾಘವೇಶ್ವರ ಶ್ರೀಗಳಷ್ಟೇ ಅಮಾಯಕನಾಗಿದ್ದಾನೆ.
೩. ಆರೋಪಿಗೆ ಆರೆಸ್ಸೆಸ್ ಹಿನ್ನೆಲೆ ಇರೋದರಿಂದ, ಹಿಂದೂ ಮಾತೆಯರ ರಕ್ಷಣೆಗಾಗಿ ಆ ಕ್ಯಾಮರಾ ವನ್ನು ಶೌಚಾಲಯದಲ್ಲಿ ಇಟ್ಟಿದ್ದಾನೆ ಎಂದೂ ಪರಿಗಣಿಸ ಬಹುದು.
ಮೇಲಿನೆಲ್ಲ ಸಾಕ್ಷ್ಯಾಧಾರಗಳನ್ನ ಪರಿಗಣಿಸಿದ ನ್ಯಾಯಾಧೀಶರು ಇಂತೆಂದು ತೀರ್ಪು ನೀಡಿದರು;
"ಆರೋಪಿಗೆ ತಕ್ಷಣ ನ್ಯಾಯಾಲಯ ಜಾಮೀನು ನೀಡಿದೆ. ಹಾಗು ಪೊಲೀಸರು ನ್ಯಾಯಯುತವಾದ ತನಿಖೆ ನಡೆಸಿ ತಕ್ಷಣ ಗೋಮಾಂಸಾಹಾರಿಯೊಬ್ಬನನ್ನು ಬಂಧಿಸಿ, ಅವನ ಮೇಲೆ ಗಂಭೀರ ಪ್ರಕರಣಗಳನ್ನು ದಾಖಲಿಸಿ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ನ್ಯಾಯ ನೀಡಬೇಕು ಎಂದು ಆದೇಶಿಸುತ್ತದೆ"

Sunday, September 11, 2016

ಹನಿ ಕತೆಗಳು: ಗೋಮಾಂಸ ಮತ್ತು ರಕ್ತ

1
ಗೋರಕ್ಷಕರು
ಆ ಮನೆಯಲ್ಲಿ  50 ವರ್ಷಗಳಿಂದ ಗೋವು ಸಾಕುತ್ತಿದ್ದರು. 
ಒಂದು ಗುಂಪು ಮನೆಗೆ ನುಗ್ಗಿತು 
"ನೀವು ನಿಮ್ಮ ಗೋವನ್ನು ಮಾರಿದ್ದೀರಾ?''
"ಹೌದು" ಮನೆ ಮಾಲಕ ಉತ್ತರಿಸಿದ. 
ಮನೆಯ ಮೇಲೆ ಗುಂಪು ದಾಳಿ ಮಾಡಿತು. ಮನೆ ಮಾಲಕನನ್ನು ಸಾಯುವಂತೆ ಬಡಿಯಲಾಯಿತು. 
ಮಹಿಳೆಯರನ್ನು ಅರೆ ಬೆತ್ತಲೆ ಮಾಡಲಾಯಿತು. 
ಹಟ್ಟಿಯಲ್ಲಿದ್ದ ದನಗಳನ್ನೆಲ್ಲ ಎಳೆದೊಯ್ಯಲಾಯಿತು. 
ಯಾರೋ ಗುಂಪಿನ ಜೊತೆ ಕೇಳಿದರು "ಯಾರು ನೀವು ?"
ಗುಂಪು ಜೋರಾಗಿ ಹೇಳಿತು "ನಾವು ಗೋರಕ್ಷಕರು''

2
ವೆಜಿಟೇರಿಯನ್ ರಕ್ತ
ಗೆಳೆಯನೊಬ್ಬನಿಂದ ದೂರವಾಣಿ ಕರೆ "ನನ್ನ ತಂದೆಯ ಜೀವ ಅಪಾಯದಲ್ಲಿದೆ. ತುರ್ತಾಗಿ ಬಿ ನೆಗೆಟಿವ್ ರಕ್ತ ಬೇಕಾಗಿದೆ. ವೆಜಿಟೇರಿಯನ್ ರಕ್ತ ಆಗಿದ್ದರೆ ತುಂಬಾ ಉಪಕಾರ. ದಯವಿಟ್ಟು ಪ್ರಯತ್ನಿಸಿ"

3
ಪರೀಕ್ಷೆ
ಬೀಫ್ ಪರೀಕ್ಷೆಯಲ್ಲಿ ವಿಫಲ:
ಭಾರತೀಯ ಒಲಿಂಪಿಕ್ಸ್ ಆಟಗಾರ ನಾಲ್ಕು ವರ್ಷ ಅಮಾನತು
ಪೋಲೀಸರ ವಶಕ್ಕೆ ಆಟಗಾರ

4
ಫಲಕ
ಆಸ್ಪತ್ರೆಯೊಂದರ ಬ್ಲಡ್ ಬ್ಯಾಂಕ್ ನಲ್ಲಿ ಹೀಗೊಂದು ಸೂಚನಾ ಫಲಕ: 
ಬೀಫ್ ತಿಂದವರ ರಕ್ತವನ್ನು ಸ್ವೀಕರಿಸಲಾಗೂದಿಲ್ಲ 
ನಿಮ್ಮ ರಕ್ತದಲ್ಲಿ ಬೀಫ್ ಅಂಶ ಪತ್ತೆಯಾದರೆ ನಿಮ್ಮನ್ನು ಪೊಲೀಸರಿಗೆ ಒಪ್ಪಿಸಲಾಗೂದು.

5
ಚರ್ಚೆ
ಬೀಫ್ ತಿಂದರೆಂದು ಆ ಮನೆಯ ಯಜಮಾನನ ಕೊಂದು ಮಹಿಳೆಯರ ಮೇಲೆ ಗುಂಪು ಅತ್ಯಾಚಾರವೆಸಗಿತು. 
ಮಾಧ್ಯಮಗಳಲ್ಲಿ ಈಗ ದಿನ ಪೂರ್ತಿ ಚರ್ಚೆ. 
"ತಿಂದದ್ದು ಬೀಫ್ ಹೌದೋ? ಅಲ್ಲವೋ?"

6
ಭರವಸೆ
ಇದೀಗ ಬಂದ ಸುದ್ದಿ:
ರೋಗಿಗೆ ನೀಡಿದ ರಕ್ತದಲ್ಲಿ ಗೋಮಾಂಸದ ಅಂಶ ಪತ್ತೆ. 
ರಕ್ತ ದಾನದ ಸಂದರ್ಭದಲ್ಲಿ ಆದ ಎಡವಟ್ಟು. 
ಬ್ಲಡ್ ಬ್ಯಾಂಕಿನ ಪರವಾನಿಗೆ ವಜಾ. 
ಆಸ್ಪತ್ರೆ ಸಿಬ್ಬಂದಿಗಳ ಬಂಧನ. 
ಇನ್ನೆರಡು ದಿನಗಳಲ್ಲಿ ರಕ್ತ ದಾನ ಮಾಡಿದ ವ್ಯಕ್ತಿಯನ್ನು ಬಂಧಿಸುತ್ತೇವೆ : ಪೋಲೀಸರ ಭರವಸೆ

Sunday, September 4, 2016

ದೇಶ ಕಟ್ಟುವುದಕ್ಕೆ ರಿಲಯನ್ಸ್ ಸಿಮೆಂಟ್...!

ಮೋದಿ ವಿಶ್ವಕ್ಕೇ ಮೋಡೆಲ್ ಪ್ರಧಾನಿಯಾಗುತ್ತಾರೆ ಎಂದು ಸಂಘಪರಿವಾರ ಸಹಿತ ಮೋದಿ ಭಕ್ತರು ಹೇಳಿಕೆ ನೀಡುತ್ತಲೇ ಇದ್ದರು. ಇದೀಗ ಅದನ್ನು ಸಾಬೀತು ಪಡಿಸುವಂತೆ ಅವರು ಮೋಡೆಲ್ ಆಗಿಯೇ ಬಿಟ್ಟಿರುವುದು ನೋಡಿ ಪತ್ರಕರ್ತ ಎಂಜಲು ಕಾಸಿ ರೋಮಾಂಚನಗೊಂಡು ನೇರವಾಗಿ ಅನಿಲ್ ಅಂಬಾನಿಯವರ ಮನೆಯ ಬಾಗಿಲು ತಟ್ಟಿದ. 
‘‘ಯಾರು ಬೇಕಾಗಿತ್ತು?’’ ವಾಚ್‌ಮೆನ್ ಕೇಳಿದ.
‘‘ನರೇಂದ್ರ ಮೋದಿಯವರು ಬೇಕಾಗಿತ್ತು’’ ಕಾಸಿ ಹೇಳಿ ಹಲ್ಲು ಕಿರಿದ.
‘‘ಅದಕ್ಕೆ ನರೇಂದ್ರ ಮೋದಿಯವರ ಮನೆಗೆ ಹೋಗಬೇಕಾಗಿತ್ತು...’’ ವಾಚ್‌ಮೆನ್ ಹೇಳಿದ.
‘‘ಅಲ್ಲಿ ಹೋದ್ರೆ ಅನಿಲ್ ಅಂಬಾನಿ ಮನೆಯಲ್ಲಿದ್ದಾರೆ ಎಂದು ಹೇಳಿದರು. ಅದಕ್ಕೆ ಇಲ್ಲಿಗೆ ಬಂದೆ...’’
‘‘ಆದ್ರೆ ಅವರು ಸ್ಟುಡಿಯೋದಲ್ಲಿ ಶೂಟಿಂಗ್‌ನಲ್ಲಿದ್ದಾರೆ...’’ ವಾಚ್‌ಮೆನ್ ಮುಖಕ್ಕೆ ಹೊಡೆದಂತೆ ಹೇಳಿದ. ‘‘ಸಿನೆಮಾದಲ್ಲಿ ನಟಿಸುತ್ತಿದ್ದಾರಾ ಸಾರ್?’’ ಕಾಸಿ ಕುತೂಹಲದಿಂದ ಕೇಳಿದ.
‘‘ಇಲ್ಲಾರಿ. ಈಗ ಅವರು ವಿಶ್ವಕ್ಕೇ ಮೋಡೆಲ್ ಆಗಲು ಹೊರಟಿದ್ದಾರೆ...’’ ವಾಚ್‌ಮೆನ್ ಹೇಳಿದ.
‘‘ಅದಕ್ಕೆ ಇಲ್ಲೇನು ಮಾಡುತ್ತಿದ್ದಾರೆ ?’’
‘‘ಅದೇರಿ. ಅನಿಲ್ ಅಂಬಾನಿ ಪ್ರಾಡಕ್ಟ್‌ಗಳಿಗೆ ವಿಶ್ವದ ಎಲ್ಲ ದೇಶಗಳಿಗೂ ಇವರೇ ಮೋಡೆಲ್ ಆಗಲಿದ್ದಾರೆ’’ ವಾಚ್‌ಮೆನ್ ಹೇಳಿದ.
‘‘ಸಾರ್...ಅವರ ಒಂದು ಇಂಟರ್ಯೂ ಬೇಕಾಗಿತ್ತು’’ ಕಾಸಿ ಮನವಿ ಮಾಡಿದ. ‘‘ಅವರು ದೇಶ ಕಟ್ಟುವಲ್ಲಿ ಬಿಜಿಯಾಗಿದ್ದಾರೆ ಕಣ್ರೀ...ಈಗ ವಿಶ್ವಕ್ಕೇ ಮೋಡೆಲ್ ಬೇರೆ. ಬೇಕಾದ್ರೆ ನನ್ನದೇ ಇಂಟರ್ಯೂ ತೆಗೆದುಕೊಳ್ಳಿ...’’
‘‘ಅಂದರೆ ದೇಶ ಕಟ್ಟುವುದಕ್ಕೂ ಅಂಬಾನಿಗೂ ಏನು ಸಂಬಂಧ?’’ ಕಾಸಿ ಅರ್ಥವಾಗದೆ ಕೇಳಿದ.
‘‘ದೇಶ ಕಟ್ಟಬೇಕಾದರೆ ಅದಕ್ಕೆ ಭಾರೀ ಪ್ರಮಾಣದಲ್ಲಿ ಸಿಮೆಂಟ್ ಬೇಕಲ್ವಾ...ಈ ನಿಟ್ಟಿನಲ್ಲಿ ರಿಲಯನ್ಸ್ ಸಿಮೆಂಟಿನಿಂದಲೇ ದೇಶ ಕಟ್ಟುವ ಬಗ್ಗೆ ಅವರು ಯೋಚಿಸುತ್ತಿದ್ದಾರೆ. ಈ ಬಗ್ಗೆ ಮಾತುಕತೆಯೂ ನಡೆಯುತ್ತಿದೆ....ಮೋದಿಯ ದೇಶ ನಿರ್ಮಾಣದಲ್ಲಿ ರಿಲಯನ್ಸ್ ಸಿಮೆಂಟಿನ ಮಹತ್ವದ ಬಗ್ಗೆ ಈಗಾಗಲೇ ಸಂಘಪರಿವಾರ ನಾಯಕರೆಲ್ಲ ತಮ್ಮ ತಮ್ಮ ಶಾಖೆಗಳಲ್ಲಿ ಭಾಷಣ ಮಾಡುತ್ತಿದ್ದಾರೆ. ನಿಮಗೆ ಗೊತ್ತಿಲ್ಲವೆ?’’ ವಾಚ್‌ಮೆನ್ ಪ್ರಶ್ನಿಸಿದ.
‘‘ಸಿಮೆಂಟು ರಿಲಯನ್ಸಿನದ್ದಾದರೆ ಮರಳು ಯಾವ ಕಂಪೆನಿಯಿಂದ ಬಳಸುತ್ತಾರೆ ಸಾರ್....’’ ಕಾಸಿ ವಾಚ್‌ಮೆನ್‌ಗೆ ತುಸು ಮರ್ಯಾದೆ ನೀಡಿದ.
‘‘ಮರಳು ಮಾಫಿಯಾದವರಿಗೆ ಪೂರ್ಣ ಸ್ವಾತಂತ್ರವನ್ನು ನೀಡಲಾಗಿದೆ. ದೇಶಕಟ್ಟುವುದಕ್ಕಾಗಿ ಎಷ್ಟು ಬೇಕಾದರೂ ಅಕ್ರಮವಾಗಿ ಮರಳನ್ನು ನದಿಯಿಂದ ಎತ್ತಿರಿ ಎಂದು ಈಗಾಗಲೇ ಮೋದಿ ಸೂಚನೆ ನೀಡಿದ್ದಾರೆ. ರಿಲಯನ್ಸ್ ಸಿಮೆಂಟಿಗೆ ಅಕ್ರಮ ಮರಳು ಸೇರಿಸಿ ದೇಶವನ್ನು ಅತಿ ಬೇಗನೇ ಕಟ್ಟಲಾಗುತ್ತದೆ...’’ ವಾಚ್‌ಮೆನ್ ವಿವರಗಳನ್ನು ನೀಡಿದ.
‘‘ರಿಲಯನ್ಸ್‌ನ ಡಾಟಾಗಳು ಅಗ್ಗವಾಗಿವೆ...ಆದರೆ ಜನರ ರೇಶನ್‌ಗಳ ಬೆಲೆ ಏರುತ್ತಿದೆಯಲ್ಲ...ಇದರ ಬಗ್ಗೆ ಏನು ಹೇಳುತ್ತಾರೆ ಮೋದಿಯವರು?’’ ಕಾಸಿ ಅತ್ಯಾಸಕ್ತಿಯಿಂದ ಕೇಳಿದ.
 ‘‘ರೇಷನ್ ಅಂಗಡಿಯಲ್ಲಿ ಇನ್ನು ಮುಂದೆ ರಿಲಯನ್ಸ್ ಡಾಟಾಗಳು ಬಿಪಿಎಲ್, ಎಪಿಎಲ್ ಕಾರ್ಡ್‌ಗಳಿಗೆ ವಿತರಿಸುವ ಯೋಜನೆಯೊಂದು ನಡೆಯುತ್ತಿದೆ. ರಿಲಯನ್ಸ್‌ನವರಿಗೆ ಸಬ್ಸಿಡಿಯನ್ನು ನೀಡಿ ಅಗ್ಗವಾಗಿ ಡಾಟಾಗಳನ್ನು ಜನರಿಗೆ ರೇಷನ್ ಅಂಗಡಿಯಲ್ಲೇ ಪ್ರತಿ ತಿಂಗಳು ವಿತರಿಸಲಾಗುತ್ತದೆ. ಇದರ ಹೊರೆ ಸರಕಾರಕ್ಕೆ ಬೀಳುವುದರಿಂದ ವಿಶೇಷ ಡಾಟಾ ತೆರಿಗೆಯನ್ನು ಜನರ ಮೇಲೆ ವಿಧಿಸಲಾಗುತ್ತದೆ...’’ ವಾಚ್‌ಮೆನ್ ಇನ್ನಷ್ಟು ವಿವರಗಳನ್ನು ನೀಡಿದ.
‘‘ಆದರೆ ಜನರಿಗೆ ಆಹಾರಕ್ಕೆ ಏನು ಮಾಡುವುದು?’’ ಕಾಸಿ ಆತಂಕದಿಂದ ಕೇಳಿದ.
‘‘ನೋಡ್ರಿ....ಮೊಬೈಲ್‌ಗಳಲ್ಲೇ ವಿವಿಧ ಬಗೆಯ ಆಹಾರಗಳನ್ನು ಶೇರ್ ಮಾಡಿ ಹಂಚುವ ವ್ಯವಸ್ಥೆಯನ್ನು ಮಾಡಲಾಗುತ್ತದೆ...ಎಲ್ಲ ಬಡವರಿಗೆ ಬಿರಿಯಾನಿ(ಕಡ್ಡಾಯವಾಗಿ ಚಿಕನ್ ಮಾತ್ರ) ಇನ್ನಿತರ ಆಹಾರಗಳನ್ನು ಮೊಬೈಲ್ ಮೂಲಕವೇ ರಿಲಯನ್ಸ್ ಡಾಟಾಗಳಲ್ಲಿ ದೇಶಾದ್ಯಂತ ವಿತರಿಸಲಾಗುತ್ತದೆ’’ ವಾಚ್‌ಮೆನ್ ಹೇಳಿದ.
‘‘ರಿಲಯನ್ಸ್ ಮೊಬೈಲ್‌ಗಳ ಮುಖಾಂತರ ಆಹಾರ ವಿತರಣೆಯೇ...’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಹೌದ್ರೀ....ಡಾಟಾಗಳಿಗಷ್ಟೇ ಚಾರ್ಜಾಗತ್ತೆ. ಆದರೆ ಆಹಾರ ಮಾತ್ರ ಪುಕ್ಕಟೆಯಾಗಿ ವಿತರಣೆಯಾಗುತ್ತೆ...’’ ವಾಚ್‌ಮೆನ್ ಹೇಳಿದ.
‘‘ಅಂದರೆ...’’ ಕಾಸಿಗೆ ಅರ್ಥವಾಗಲಿಲ್ಲ.
‘‘ಅದೇರಿ...ಮೊಬೈಲ್‌ನಲ್ಲೇ ವಾಟ್ಸ್‌ಆ್ಯಪ್ ಮೂಲಕ ಬಗೆ ಬಗೆಯ ಆಹಾರಗಳನ್ನು ಶೇರ್ ಮಾಡಲಾಗುತ್ತೆ. ಮೊಬೈಲ್‌ಗಳಲ್ಲೇ ಬೇರೆ ಬೇರೆ ಆಹಾರಗಳನ್ನು ಡೌನ್‌ಲೋಡ್ ಮಾಡಬಹುದು...ಇದರಿಂದಾಗಿ ಆಹಾರ ಬೇಯಿಸುವ ಸಮಸ್ಯೆಯೇ ಇರುವುದಿಲ್ಲ. ಸಬ್ಸಿಡಿ ಸಿಲಿಂಡರ್‌ಗಳನ್ನೆಲ್ಲ ರದ್ದು ಮಾಡಲಾಗುತ್ತದೆ’’ ವಾಚ್‌ಮೆನ್ ಹೇಳಿದ.
‘‘ಅಲ್ಲಾರಿ...ಮೊಬೈಲ್‌ಗಳಲ್ಲಿ ಆಹಾರಗಳ ಚಿತ್ರಗಳನ್ನ ಡೌನ್‌ಲೋಡ್ ಮಾಡಿ ಅದನ್ನು ತಿನ್ನೋಕ್ಕಾಗತ್ತ?’’ ಕಾಸಿ ಅಚ್ಚರಿಯಿಂದ ಕೇಳಿದ.
 ‘‘ಏನ್ರೀ...ಮೋದಿ ಸರಕಾರ ಯಾವ ಯೋಜನೆಗಳನ್ನು ಹಾಕಿದರೂ ಅದನ್ನು ಟೀಕೆ ಮಾಡುವುದೇ ನಿಮಗೆ ಅಭ್ಯಾಸವಾಗಿ ಹೋಗಿದೆ. ಪೌಷ್ಟಿಕ ಆಹಾರಗಳನ್ನು ರಿಲಯನ್ಸ್ ಮೊಬೈಲ್‌ಗಳ ಮೂಲಕವೇ ನಾವು ಸುಲಭವಾಗಿ, ಉಚಿತವಾಗಿ ತಲುಪಿಸಲು ಯತ್ನಿಸಿದರೆ ನೀವು ಅದಕ್ಕೂ ಅಡ್ಡಗಾಲು ಹಾಕುತ್ತಿದ್ದೀರಲ್ಲ...ನಮ್ಮದು ಇ ಸರಕಾರ. ಆದುದರಿಂದ ಮೊಬೈಲ್‌ಗಳ ಮೂಲಕವೇ ಆಹಾರವನ್ನು ವಿತರಿಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅತ್ಯಗತ್ಯ ವಸ್ತುಗಳನ್ನು ಅಂದರೆ ಬೇಳೆ, ಟೊಮೆಟೊ, ಇವೆಲ್ಲವನ್ನೂ ಮೊಬೈಲ್‌ಗಳಲ್ಲೇ ಡೌನ್‌ಲೋಡ್ ಮಾಡುವ ಮೂಲಕ ಜನರಿಗೆ ತಲುಪಿಸಲಿದ್ದೇವೆ’’ ವಾಚ್‌ಮೆನ್ ತನ್ನ ಜೇಬಿನೊಳಗಿರುವ ಐಫೋನ್ ತೆಗೆದು ಡೌನ್‌ಲೋಡ್ ಮಾಡಿ ತೋರಿಸಿದ.
‘‘ಹಾಗಾದರೆ ಮುಂದಿನ ದಿನಗಳಲ್ಲಿ ನೀರಾವರಿ ವ್ಯವಸ್ಥೆಯನ್ನು ಮೊಬೈಲ್ ಮೂಲಕವೇ ಮಾಡಬಹುದಲ್ಲ?’’ ಕಾಸಿಯೂ ಸಲಹೆ ನೀಡಿದ.
ವಾಚ್‌ಮೆನ್ ಗಂಭೀರವಾಗಿ ತಲೆಯಾಡಿಸಿದ ‘‘ಹೌದು. ಅದಕ್ಕಾಗಿ ರಿಲಯನ್ಸ್ ಇನ್ನೊಂದು ವಿಶೇಷ ಡಾಟಾವನ್ನು ಹೊರ ತರುತ್ತಿದೆ. ಇದರಿಂದಾಗಿ ಜನರು ನೀರು ಬೇಕಾದಾಗೆಲ್ಲ ಮೊಬೈಲ್‌ನಿಂದಲೇ ಡೌನ್‌ಲೋಡ್ ಮಾಡಬಹುದು. ವಿಶ್ವದ ಎಲ್ಲ ನದಿಗಳನ್ನೂ ಈ ಮೊಬೈಲ್ ಮೂಲಕ ನಮ್ಮ ದೇಶದ ಹಳ್ಳಿ ಹಳ್ಳಿಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈ ಕಾರಣದಿಂದಲೇ ಹಳ್ಳಿಹಳ್ಳಿಗಳಲ್ಲಿ ರಿಲಯನ್ಸ್ ಟವರ್‌ಗಳು ತಲೆಯೆತ್ತಲು ವಿಶೇಷ ಯೋಜನೆಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಪಶ್ಚಿಮಘಟ್ಟದಲ್ಲಿರುವ ಬೃಹತ್ ಮರಗಳನ್ನೆಲ್ಲ ಕಡಿದು ಅಲ್ಲಿ ಟವರ್‌ಗಳನ್ನು ನೆಡುವ ಯೋಜನೆಗಳಿಗೂ ನಾವು ಚಾಲನೆ ನೀಡಲಿದ್ದೇವೆ...’’ 
ಕಾಸಿ ಆತಂಕದಿಂದ ಕೇಳಿದ ‘‘ಮರಗಳು ಕಡಿದರೆ ಮಳೆ ಬರುವುದಿಲ್ಲ ಎಂದು ಹೇಳುತ್ತಾರಲ್ಲ...’’
ವಾಚ್‌ಮೆನ್ ನಕ್ಕ ‘‘ಹೇ...ಎಂತದ್ರೀ ನೀವು. ತಲೆಯಲ್ಲಿ ಮೆದುಳು ಇಲ್ಲವೆ....ಮಳೆಯನ್ನೂ ನಾವು ಮೊಬೈಲ್ ಮೂಲಕವೇ ಡೌನ್‌ಲೋಡ್ ಮಾಡಬಹುದು. ಮಳೆಗಾಗಿ ಮಳೆಗಾಲಕ್ಕೆ ಕಾಯಬೇಕಾಗಿಲ್ಲ. ವಿಶೇಷ ಮೊಬೈಲ್ ಫೋನ್‌ಗಳನ್ನು ಸಬ್ಸಿಡಿಯಲ್ಲಿ ವಿತರಿಸುವ ಯೋಜನೆಯನ್ನೂ ಹಮ್ಮಿಕೊಂಡಿದ್ದೇವೆ....’’
ಕಾಸಿಗೆ ಸಮಾಧಾನವಾಯಿತು. ‘‘ಸಾರ್....ಸೈನಿಕರಿಗೆ ಒಂದೊಂದು ರೂಪಾಯಿ ಕೊಡಿ ಎಂದು ಜನರನ್ನು ಕೇಳಿದ್ದಾರಲ್ಲ...ಸರಿಯಾ ಸಾರ್?’’ ಮತ್ತೆ ಕೇಳಿದ ಕಾಸಿ.
‘‘ದೇಶಕಾಯುವ ಸೈನಿಕರಿಗೆ ಒಂದೊಂದು ರೂಪಾಯಿ ಕೊಡಲು ಸಾಧ್ಯವಿಲ್ಲದವರು ದೇಶದ್ರೋಹಿಗಳು...’’ ವಾಚ್‌ಮೆನ್ ಘೋಷಿಸಿದ.
‘‘ಅಲ್ಲ ಸಾರ್...ತೆರಿಗೆ ಕಟ್ಟುತ್ತೇವೆ...ಅದರಲ್ಲಿ ಬರುವ ಹಣ....’’ ತಡವರಿಸಿ ಕೇಳಿದ.
 ‘‘ನೋಡ್ರೀ...ನಿಮಗೆ ಪುಕ್ಕಟೆ ಆಹಾರ, ಪುಕ್ಕಟೆ ನೀರು, ಪುಕ್ಕಟೆ ಮಳೆ ಎಲ್ಲವನ್ನೂ ಒದಗಿಸಿ ಕೊಟ್ಟ ರಿಲಯನ್ಸ್‌ನವರಿಗೆ ಏನಾದರೂ ಕೊಡಬೇಡವೇ? ಮುಂದಿನ ದಿನಗಳಲ್ಲಿ ಪೊಲೀಸರಿಗಾಗಿ ಎರಡು ರೂಪಾಯಿ, ಗೋರಕ್ಷಕರನ್ನು ಸಾಕಲು ಐದು ರೂಪಾಯಿ, ಆರೆಸ್ಸೆಸ್‌ನ ಪ್ಯಾಂಟ್‌ಗಾಗಿ ಎಂಟಾನೆ, ಇವೆಲ್ಲವನ್ನೂ ಸಂಗ್ರಹಿಸಲು ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ದೇಶದ ಭಿಕ್ಷುಕರನ್ನೆಲ್ಲ ಜೈಲಿಗೆ ತಳ್ಳಿ, ನಮ್ಮ ಸರಕಾರ ಭಿಕ್ಷೆ ಬೇಡುವುದಕ್ಕಾಗಿಯೇ ವಿಶೇಷ ಕಚೇರಿ, ಸಚಿವಾಲಯ, ಸಿಬ್ಬಂದಿಯನ್ನು ನೇಮಕ ಮಾಡುತ್ತದೆ. ಭಿಕ್ಷೆ ಬೇಡುವ ತಟ್ಟೆಗಳಿಗಾಗಿ ತಲಾ ನಾಲ್ಕಾನೆಯನ್ನು ಜನರಿಂದಲೇ ಸಂಗ್ರಹಿಸಲಾಗುತ್ತದೆ....’’
ಕಾಸಿಗೆ ತಲೆ ಧಿಂ ಎಂದಿತು.
ಅಷ್ಟರಲ್ಲಿ ಒಳಗಿನಿಂದ ಅಂಬಾನಿಯವರ ಕೂಗು ‘‘ರೀ...ಅಮಿತ್ ಶಾ ಅವರೇ...ಒಮ್ಮೆ ಇಲ್ಲಿಗೆ ಬನ್ನಿ. ಮೋದಿಯವರ ಮೇಕಪ್ ಹೇಗಾಗಿದೆ ನೋಡಿ...’’
‘‘ಇಗೋ ಬಂದೆ ಸಾರ್...’’ ಎಂದವನೇ ವಾಚ್‌ಮೆನ್ ಒಳಗೆ ಓಡಿದ.

ಚೇಳಯ್ಯ
ಕೃಪೆ-ವಾರ್ತಾ ಭಾರತಿ  

Sunday, August 14, 2016

ಭಾರತದ ವರ್ತಮಾನದ ದುರಂತಕ್ಕೆ ಕನ್ನಡಿ; ‘ಮೊಹೆಂಜೋದಾರೋ’


ಅಶುತೋಶ್ ಗೋವಾರಿಕರ್ ಸದಾ ವಿಭಿನ್ನವಾಗಿ ಯೋಚಿಸುವ ನಿರ್ದೇಶಕ. ಜನಪ್ರಿಯ ಆದರ್ಶಗಳನ್ನು ಸರಳ ನಿರೂಪಣೆಯ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಕಲೆ ಇವರಿಗೆ ಸಿದ್ಧಿಸಿದೆ. ಈ ಹಿನ್ನೆಲೆಯಲ್ಲಿ, ಇವರು ಯಾವುದೇ ಚಿತ್ರದಲ್ಲಿ ತೊಡಗಿದರೂ ಅದರ ಕುರಿತಂತೆ ಜನರು ಬಹು ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ. ಆಮಿರ್ ಖಾನ್ ಅವರು ನಟಿಸಿದ ಲಗಾನ್ ಚಿತ್ರ ಇವರ ದೆಸೆಯನ್ನೇ ಬದಲಿಸಿತು. ಅದು ಬಾಲಿವುಡ್‌ನಲ್ಲಿ ಮಾಡಿದ ದಾಖಲೆಗಳೇ, ಗೋವಾರಿಕರ್ ಪಾಲಿಗೆ ಮುಳುವಾಯಿತೇನೋ? ಆ ಬಳಿಕ ಅವರ ಪ್ರತಿ ಚಿತ್ರಗಳ ಕುರಿತಂತೆಯೂ ಜನರ ನಿರೀಕ್ಷೆ ಹಿರಿದಾಯಿತು. ಈ ನಿರೀಕ್ಷೆಗಳು ಹುಸಿಯಾದಾಗಲೆಲ್ಲ ಗೋವಾರಿಕರ್ ಚಿತ್ರಗಳು ಮುಗ್ಗರಿಸತೊಡದವು. ಲಗಾನ್‌ನ ಕನವರಿಕೆಯಲ್ಲಿದ್ದ ಪ್ರೇಕ್ಷಕರಿಗೆ ಶಾರುಕ್‌ಖಾನ್ ನಟಿಸಿದ ‘ಸ್ವದೇಶ್’ ಚಿತ್ರ ಇಷ್ಟವಾಗಲಿಲ್ಲ. ಸರಳ ಕತೆಯನ್ನು ಹೊಂದಿರುವ ದೇಶಪ್ರೇಮದ ಕುರಿತ ಅಪ್ಪಟ ಸದಭಿರುಚಿಯ ಚಿತ್ರವಾಗಿತ್ತು ಸ್ವದೇಶ್. ಆದರೆ ಕ್ರಿಕೆಟ್ ಮೂಲಕವೇ ದೇಶಪ್ರೇಮವನ್ನು ಅರ್ಥಮಾಡಿಕೊಳ್ಳುವ ಮಂದಿಗೆ ‘ಸ್ವದೇಶ್’ ಪ್ರತಿಪಾದಿಸುವ ಹಳ್ಳಿ, ನೀರು, ವಿದ್ಯುತ್‌ನ ದೇಶಪ್ರೇಮ ನೀರಸ ಎನಿಸಿತು.  ‘ಜೋಧಾ ಅಕ್ಬರ್’ ಕೂಡ ಒಳ್ಳೆಯ ಸಂದೇಶವನ್ನು ವಸ್ತುವಾಗಿಟ್ಟುಕೊಂಡು ಮಾಡಿದ ಐತಿಹಾಸಿಕ ಚಿತ್ರ. ಆದರೆ ಲಗಾನ್ ಚಿತ್ರವನ್ನು ತಲುಪಲು ಸಾಧ್ಯವಾಗಲಿಲ್ಲ. ಹೃತಿಕ್ ರೋಷನ್ ಮತ್ತು ಐಶ್ವರ್ಯ ರೈ ಅವರ ಅಭಿನಯ ಈ ಚಿತ್ರವನ್ನು ಎತ್ತರಕ್ಕೇರಿಸಿತ್ತು. ಸಂಗೀತವೂ ಎಲ್ಲರ ಎದೆಯೊಳಗೆ ಹೊಸ ಅಲೆಯನ್ನು ಎಬ್ಬಿಸಿತ್ತು. ಆದರೆ ಬಾಕ್ಸ್‌ಆಫೀಸ್‌ನಲ್ಲಿ ಅಕ್ಬರ್ ಸೋಲಬೇಕಾಯಿತು. ಈ ಕಾರಣದಿಂದಲೋ ಏನೋ, ತನ್ನ ಇಮೇಜನ್ನೇ ಬದಲಿಸುವ ಉದ್ದೇಶದಿಂದ ‘ವಾಟ್ ಇಸ್ ಯುವರ್ ರಾಶಿ’ ಚಿತ್ರವನ್ನು ನಿರ್ದೇಶಿದರು. ಇದು ಹಾಸ್ಯ ಚಿತ್ರವಾಗಿತ್ತು. ಆದರೆ ಈ ಅಪ್ಪಟ ಸದಭಿರುಚಿಯ ಚಿತ್ರದಲ್ಲೂ ಅವರು ಯಶಸ್ವಿಯಾಗಲಿಲ್ಲ. ಖೇಲೇ ಹಮ್ ಜೀ ಜಾನೇ ಸೇ ಮತ್ತೆ ದೇಶಭಕ್ತಿಯನ್ನೊಳಗೊಂಡ ಚಿತ್ರವಾಗಿತ್ತು. ಆದರೆ ಅದು ವಿಫಲವಾಯಿತು. ಆದರೆ ಅವರ ಪ್ರತಿ ಚಿತ್ರಗಳು ಈ ನೆಲಕ್ಕೆ ಬದ್ಧವಾದವುಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಚಿತ್ರಗಳು ಸದಭಿರುಚಿಯಿಂದ ಕೂಡಿರುತ್ತವೆ. ಹಾಗೆಯೇ ಜೀವಪರವಾದ ಆಶಯವನ್ನು ಹೊಂದಿರುತ್ತದೆ.

 ‘ಮೊಹೆಂಜೋದಾರೋ’ ಚಿತ್ರದ ಹೆಸರೇ ವಿಭಿನ್ನ ಮತ್ತು ವಿಶಿಷ್ಟವಾದುದು. ಸಿಂಧೂ ದಡದ ನಾಗರಿಕತೆಯನ್ನು ಹಿನ್ನೆಲೆಯಾಗಿಟ್ಟು ಗೋವಾರಿಕರ್‌ರಂತಹ ಅತ್ಯುತ್ತಮ ನಿರ್ದೇಶಕ ಚಿತ್ರ ಮಾಡುತ್ತಾರೆಂದರೆ ನಿರೀಕ್ಷೆಗಳು ಹುಟ್ಟುವುದು ಸಹಜ ಕೂಡ. ಗೋವಾರಿಕರ್ ಜೊತೆಗೆ ಎರಡನೆ ಬಾರಿಗೆ ಹೃತಿಕ್ ರೋಷನ್ ಕೈ ಜೋಡಿಸುತ್ತಾರೆ ಎಂದರೆ ಅದು ಪ್ರೇಕ್ಷಕ ವಲಯವನ್ನು ಇನ್ನಷ್ಟು ವಿಸ್ತರಿಸಿಕೊಳ್ಳುತ್ತದೆ. ‘ಮೊಹೆಂಜೋದಾರೋ’ ಇತಿಹಾಸಕ್ಕೆ ಬದ್ಧವಾಗಿರಬೇಕು ಎಂದು ನಾವು ಗೋವಾರಿಕರ್ ಮೂಲಕ ನಿರೀಕ್ಷಿಸುವುದು ದುಬಾರಿಯಾಗುತ್ತದೆ. ಸಿಂಧೂ ನಾಗರಿಕತೆಯ ಕುರಿತಂತೆ ಚರ್ಚೆಗಳು ಬಹಳಷ್ಟು ನಡೆದಿವೆ. ಈ ದೇಶಕ್ಕೆ ಮಧ್ಯ ಪ್ರಾಚ್ಯದಿಂದ ಆರ್ಯನ್ನರು ಕಾಲಿಡುವ ಮೊದಲೇ ಹೇಗೆ ನಾಗರಿಕತೆಯೊಂದು ಸಿಂಧೂ ನದೀ ತಟದಲ್ಲಿ ಹರಡಿತ್ತು ಎನ್ನುವುದನ್ನು ಇತಿಹಾಸ ನಮಗೆ ತಿಳಿಸಿಕೊಡುತ್ತದೆ. ಆದರೆ ಇತಿಹಾಸದ ಚರ್ಚೆ, ಶೋಧನೆಗಳನ್ನು ಒಂದು ಜನಪ್ರಿಯ ಚಿತ್ರದಲ್ಲಿ ನಿರೀಕ್ಷಿಸುವುದೇ ತಪ್ಪು. ತನ್ನ ಮಿತಿಯಲ್ಲಿ ಗೋವಾರಿಕರ್ ‘ಮೊಹೆಂಜೋದಾರೋ’ ಚಿತ್ರವನ್ನು ಎಷ್ಟರಮಟ್ಟಿಗೆ ಪ್ರೇಕ್ಷಕರಿಗೆ ಪರಿಣಾಮಕಾರಿಯಾಗಿ ತಲುಪಿಸಿದ್ದಾರೆ ಎನ್ನುವುದಷ್ಟೇ ಇಲ್ಲಿ ಮುಖ್ಯವಾಗುತ್ತದೆ. ಕನಿಷ್ಟ ಮನರಂಜನೆಗಾದರೂ ಈ ಚಿತ್ರ ಬದ್ಧವಾಗಿದೆಯೇ ಎನ್ನುವ ದೃಷ್ಟಿಕೋನವನ್ನು ಇಟ್ಟುಕೊಂಡು ನೋಡಬೇಕಾಗುತ್ತದೆ. ಈ ನೆಲೆಯಲ್ಲಿ ನಾವು ನೋಡಿದರೂ, ಗೋವಾರಿಕರ್ ಅದರಲ್ಲಿ ಭಾಗಶಃ ವಿಫಲರಾಗಿದ್ದಾರೆ. ಒಂದು ಒಳ್ಳೆಯ ಆಶಯವನ್ನು ಚಿತ್ರ ಪ್ರತಿಪಾದಿಸುತ್ತದೆಯಾದರೂ, ದುರ್ಬಲ ಕತೆಯಿಂದಾಗಿ ಚಿತ್ರ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಲುಪುವುದಿಲ್ಲ. 

ಚಿತ್ರದ ಕತೆ 2016 ಬಿಸಿ(ಬಿಫೋರ್ ಕ್ರೈಸ್ಟ್) ಕಾಲದ್ದಾಗಿದ್ದರೂ, ಅದರ ನಾಯಕನ ಕತೆ ಮಾತ್ರ 70 ದಶಕದ ಬಾಲಿವುಡ್‌ನ ಹಳಸಲು ವಸ್ತು. ತಂದೆಯ ಕೊಲೆ. ಬೇರೆಯಾಗುವ ಮಗ. ಮತ್ತೆ ಅರಿಯದೇ ತನ್ನ ತಂದೆ ಆಳುತ್ತಿದ್ದ ನಾಡಿಗೆ ವಾಪಾಸಾಗುವುದು, ಅಲ್ಲಿ ತನ್ನ ತಂದೆ ಕೊಲೆಯಾಗಿರುವುದು ಅವನ ಅರಿವಿಗೆ ಬರುವುದು. ಮತ್ತು ಶತ್ರುವಿನ ವಿರುದ್ಧ ಸೇಡು ತೀರಿಸುವುದು. ಈ ಕತೆ ಬಾಲಿವುಡ್‌ನಲ್ಲಿ ಅದೆಷ್ಟೋ ಬಾರಿ ಬಂದು ಹೋಗಿದೆ. ಇಂತಹದೊಂದು ಬಬಲ್‌ಗಮ್‌ನ್ನು ಜಗಿಯಲು ಮೊಹೆಂಜೋದಾರೋ ಎನ್ನುವ 2016 ಕಾಲಘಟ್ಟವನ್ನು ಬಳಸುವ ಅಗತ್ಯವಿತ್ತೆ? ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಏಳುವುದು ಸಹಜ. ಅಂತೆಯೇ ರಾಜಮೌಳಿಯ ‘ಬಾಹುಬಲಿ’ ಮತ್ತು ಹಾಲಿವುಡ್‌ನ ಖ್ಯಾತ ಚಿತ್ರ ‘ಗ್ಲಾಡಿಯೇಟರ್’ ಎರಡರ ಕಲಬೆರಕೆಯ ವಾಸನೆ ನಿಮ್ಮ ಮೂಗಿಗೆ ಬಡಿದರೆ ಅದರಲ್ಲಿ ನಿಮ್ಮ ತಪ್ಪೇನೂ ಇಲ್ಲ. ಚಿತ್ರದ ಮೊದಲರ್ಧ ಬಾಹುಬಲಿ ಚಿತ್ರಕ್ಕೆ ಹೋಲಿಕೆಯಾದರೆ ಇನ್ನರ್ಧ ‘ಗ್ಲಾಡಿಯೇಟರ್’ನ್ನು ಹೋಲುತ್ತದೆ. ಇದೇ ಸಂದರ್ಭದಲ್ಲಿ ಬಾಹುಬಲಿ ಒಂದು ಚಂದಮಾಮ ಕತೆ. ಅದಕ್ಕೆ ಯಾವುದೇ ಗುರಿ, ಆಶಯ ಇದ್ದಿರಲಿಲ್ಲ. ಆದರೆ ಗೋವಾರಿಕರ್ ಅವರ ‘ಮೊಹೆಂಜೋದಾರೋ’ ನಾಯಕನ ಕತೆಯನ್ನು ಹೇಳುತ್ತಲೇ ಇನ್ನೊಂದು ದುರಂತವನ್ನೂ ಹೇಳುವ ಸಣ್ಣ ಪ್ರಯತ್ನ ಮಾಡುತ್ತದೆ. ಆ ಆಶಯವೇ ಈ ಚಿತ್ರದ ಹೆಗ್ಗಳಿಕೆ. ಅದನ್ನೇ ಮುಖ್ಯ ವಸ್ತುವಾಗಿಟ್ಟುಕೊಂಡು ಚಿತ್ರ ಮಾಡಿದ್ದರೂ ಗೋವಾರಿಕರ್ ಯಶಸ್ವಿಯಾಗುತ್ತಿದ್ದರು.

 ಹರಪ್ಪ ನಾಗರಿಕತೆಯ ಮೇಲೆ ದಾಳಿ ಮಾಡಿ, ಅದರ ತಳಹದಿಯ ಮೇಲೆ ಮೊಹೆಂಜೋದಾರೋ ನಗರ ನಾಗರಿಕತೆ ತಲೆಯೆತ್ತಿತ್ತು ಎಂದು ನಿರ್ದೇಶಕರು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡುತ್ತಾರೆ. ಲಾಲಸೆ, ಲೋಭ, ಸ್ವಾರ್ಥ ತುಂಬಿದ ನಗರ ಲಾಲಸೆಯ ತಳಹದಿಯ ಮೇಲೆ ಮೊಹೆಂಜೋದಾರೋ ನಿಂತಿದೆ. ಸಿಂಧೂ ನದಿಯನ್ನು ಅವಲಂಬಿಸಿದ ಈ ನೆಲದ ಕಷಿಕರ ಹಿತಾಸಕ್ತಿಯನ್ನು ಬಲಿಕೊಟ್ಟು ಮೊಹೆಂಜೋದಾರೋ ನಗರವನ್ನು ಇನ್ನಷ್ಟು ವಿಸ್ತರಿಸುವ ಭಾರೀ ಕನಸನ್ನು ಅದರ ಪ್ರಧಾನ ಮಾಹಂ(ಕಬೀರ್ ಬೇಡಿ) ಕಾಣುತ್ತಾನೆ. ಸಿಂಧೂನದಿಗೆ ಬಹತ್ ಅಣೆಕಟ್ಟು ಕಟ್ಟಿ, ಅದರಲ್ಲಿ ಹರಿದು ಬರುವ ಚಿನ್ನದ ಗಟ್ಟಿಗಳನ್ನು ತಡೆದು, ಅಪಾರ ಸಂಪತ್ತನ್ನು ಸಂಗ್ರಹಿಸುವ ದುರಾಸೆ ಅವನದು. ಇದನ್ನು ವಿರೋಧಿಸಿದವರನ್ನೆಲ್ಲ ಸದೆಬಡಿಯುತ್ತಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯ ಭಾಗವಾಗಿರುವ ‘ವಿರಾಟ್’ನ್ನು ತನ್ನ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಾನೆ. ಅದಕ್ಕೆ ಬಲಿಯಾದವನಲ್ಲಿ ನಾಯಕ ಶರ್ಮನ್(ಹೃತಿಕ್ ರೋಷನ್)ನ ತಂದೆ ಸುರ್ಜನ್ ಕೂಡ ಒಬ್ಬ. ಈತ ಮೊಹೆಂಜೋದಾರೋದ ಪ್ರಧಾನನಾಗಿದ್ದ. ಆದರೆ ಮಾಹಂನ ಲೋಭದ ಮಾತುಗಳಿಗೆ ಮರುಳಾಗುವ ವಿರಾಟ್ ಸದಸ್ಯರೆಲ್ಲ ಮಾಹಂ ಪರವಾಗುತ್ತಾರೆ. ಅಣೆಕಟ್ಟನ್ನು ತಡೆಯಲು ಕಟ್ಟಕಡೆಯವರೆಗೆ ಪ್ರಯತ್ನಿಸುವ ಸುರ್ಜನ್ ಅಂತಿಮವಾಗಿ ಮಾಹಂನ ಮೋಸಕ್ಕೆ ಬಲಿಯಾಗಿ ಮರಣದಂಡನೆ ಶಿಕ್ಷೆ ಎದುರಿಸುತ್ತಾನೆ.

  ಅಣೆಕಟ್ಟಿನ ಪರಿಣಾಮವಾಗಿ ಸಿಂಧೂ ನದಿ ತನ್ನ ದಿಕ್ಕನ್ನು ಬದಲಿಸಿಕೊಳ್ಳುತ್ತದೆ. ಪರಿಣಾಮವಾಗಿ ಕೃಷಿಕರು ಭಾರೀ ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಆದರೆ ಕೃಷಿಗಿಂತ ಚಿನ್ನ ಮುಖ್ಯ ಎಂದು ಮಾಹಂ ಪ್ರತಿಪಾದಿಸುತ್ತಾನೆ. ಅದರಿಂದ ಇಡೀ ಮೊಹೆಂಜೋದಾರೋ ಅತ್ಯಾಧುನಿಕವಾಗುತ್ತದೆ, ಜನರೆಲ್ಲ ಈ ನಗರದ ಕಡೆಗೆ ಆಗಮಿಸುತ್ತಾರೆ, ಸಂಪತ್ತು ಅಧಿಕವಾಗುತ್ತದೆ ಎನ್ನುತ್ತಾನೆ. ಆದರೆ ರೈತರ ಕಷ್ಟಗಳು ಅಧಿಕವಾಗುತ್ತದೆ. ಸಿಂಧೂನದಿಯ ಅಣೆಕಟ್ಟಿನಿಂದ ರಾಜನಿಗೆ ಚಿನ್ನ ದೊರಕುತ್ತದೆ. ಆದರೆ ಜನರ ಸಮಸ್ಯೆ ಅದರಲ್ಲೂ ರೈತರ ಸಮಸ್ಯೆ ಭೀಕರವಾಗುತ್ತದೆ. ಇಂತಹ ಸಂದರ್ಭದಲ್ಲೇ ಮಳೆಗಾಲದಲ್ಲಿ ಸಿಂಧೂನದಿ ತುಂಬಿ ಹರಿದು, ಇಡೀ ಅಣೆಕಟ್ಟು ಒಡೆದು ಮೊಹೆಂಜೋದಾರೋ ನಗರವನ್ನು ಸರ್ವನಾಶ ಮಾಡುತ್ತದೆ. ನಾಯಕನ ಪ್ರವೇಶ, ಇಲ್ಲಿನ ರೈತರನ್ನು ಬದುಕಿಸುತ್ತದೆ. ನಾಶವಾದ ಮೊಹೆಂಜೋದಾರೋವನ್ನು ಬಿಟ್ಟು ಇವರು ಗಂಗಾ ನದಿಯ ಕಡೆಗೆ ವಲಸೆ ಬರುವುದರೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ.

ಮೊಹೆಂಜೋದಾರೋ ನಾಶದ ಕತೆಯನ್ನು ಹೇಳುವ ಮೂಲಕ ಗೋವಾರಿಕರ್ ವರ್ತಮಾನದ ಭಾರತಕ್ಕೆ ಕನ್ನಡಿ ಹಿಡಿದಿದ್ದಾರೆ. ಅಭಿವದ್ಧಿಯ ಕುರಿತಂತೆ ಕನಸು ಕಾಣುವ, ಲಾಲಸೆ, ಲೋಭಕ್ಕೆ ಸಿಲುಕಿ ಮೊಹೆಂಜೋದಾರೋವನ್ನು ಬಲಿಕೊಟ್ಟ ಮಾಹಂ ಮತ್ತು ಕಾರ್ಪೊರೇಟ್ ಹಿಡಿತಕ್ಕೆ ಸಿಲುಕಿ ಇಡೀ ದೇಶವನ್ನು ತನ್ನ ಸ್ವಾರ್ಥ, ಲಾಲಸೆ, ಲೋಭಗಳ ಸಂತೃಪ್ತಿಗಾಗಿ ದುರಂತಕ್ಕೆ ತಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯ ಸಮೀಕರಣವೊಂದು ಚಿತ್ರದಲ್ಲಿ ನಡೆಯುತ್ತದೆ. ಮೊಹೆಂಜೋದಾರೋ ದುರಂತ ಮತ್ತು ಇಂದಿನ ದುರಂತಗಳ ಸಾಮ್ಯತೆಯನ್ನು ಸೂಕ್ಷ್ಮವಾಗಿ ತಿಳಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸಬೇಕು.





Saturday, July 16, 2016

ಕಾಡಂಕಲ್ಲ್ ಮನೆ

ಈ ವರ್ಷ ನನ್ನ "ಇರುವೆ ಪ್ರಕಾಶನ''ದಿಂದ ನನ್ನದೇ ಕಾದಂಬರಿ "ಯುದ್ಧ" ಪ್ರಕಟಿಸ ಬೇಕು ಎಂದು ಯೋಜನೆ ರೂಪಿಸಿದ್ದೆ. 
ಆದರೆ ಇನ್ನೂ ಶೇಕಡಾ ೨೫ರಷ್ಟು ಬರೆಯುವ ಕೆಲಸ ಉಳಿದು ಬಿಟ್ಟಿದೆ. ಕಾದಂಬರಿ ಪೂರ್ತಿ ಮಾಡಿ ಮತ್ತೊಮ್ಮೆ ಅದನ್ನು ತಿದ್ದಿ ತೀಡುವಷ್ಟರಲ್ಲಿ ಈ ವರ್ಷ ಮುಗಿದೇ ಹೋಗಿ ಬಿಡಬಹುದು ಎನ್ನುವ ಭಯ ಇದೆ.

ಆದುದರಿಂದ ಈ ವರ್ಷ ನನ್ನ ಆತ್ಮೀಯರು, ಹಿರಿಯ ಕತೆಗಾರರು ಆಗಿರುವ ಮುಹಮ್ಮದ್ ಕುಳಾಯಿ ಅವರ "ಕಾಡಂಕಲ್ಲ್ ಮನೆ" ಕಾದಂಬರಿಯನ್ನು "ಇರುವೆ ಪ್ರಕಾಶನ''ದಿಂದ ಹೊರ ತರುವ ಆಲೋಚನೆ ಇದೆ. ಎಣಿಸಿದಂತೆ ಆದರೆ ನವೆಂಬರ್ ಹೊತ್ತಿನಲ್ಲಿ ಮುಹಮ್ಮದ್ ಕುಳಾಯಿ ಅವರ "ಕಾಡಂಕಲ್ ಮನೆ''ಯೊಳಗೆ ನೀವಿರುತ್ತೀರಿ. 
***
ಇರುವೆ ಪ್ರಕಾಶನದಿಂದ ಈಗಾಗಲೇ ಹೊರ ಬಂದಿರುವ ಎರಡು ಕೃತಿಗಳು
1. ಅಮ್ಮ ಹಚ್ಚಿದ ಒಲೆ-ಕವನ ಸಂಕಲನ- 100 ರೂ.
2. ನನ್ನ ಮಸೀದಿಯ ಧ್ವಂಸಗೈದವರಿಗೆ ಕೃತಜ್ಞ-ಸೂಫಿಯ ಕಣ್ಣಲ್ಲಿ ಹನಿಗಳು -75 ರೂ.

ಎಂದಿನಂತೆ ನಿಮ್ಮ ಪ್ರೀತಿ, ವಿಶ್ವಾಸವನ್ನು ನಿರೀಕ್ಷಿಸುವೆ.

ಸಹೃದಯರು ಈ ಕೆಳಗಿನ ವಿಳಾಸಕ್ಕೆ ಎಂ ಓ ಮಾಡಿ ಪುಸ್ತಕ ತರಿಸಿ ಕೊಳ್ಳ ಬಹುದು.ತಮ್ಮ ವಿಳಾಸವನ್ನು ಕೆಳಗಿನ ಇಮೇಲ್ iruveprakashana@gmail.com ಅಥವಾ ಮೊಬೈಲ್ ಗೆ ಮೆಸ್ಸೇಜ್ ಮಾಡಬಹುದು.ಕೊರಿಯರ್‌ನಲ್ಲಿ ಪುಸ್ತಕವನ್ನು ತಲುಪಿಸಲಾಗುತ್ತದೆ. ಅಂಚೆ ವೆಚ್ಚ ಉಚಿತ.

B.M. BASHEER
MARVEL APARTMENT,
FLAT NO. 301,
1ST CROSS, SHIVA NAGARA,
OPP. SHRINIVAS COLLAGE,
PANDESHWARA,
MANGALORE-575 001
MOBILE- 944 8835 621
*****
ಅಥವಾ ......
B.M. BASHEER
A/C-NO-3 0 9 2 8 2 4 1 6 9 9
STATE BANK OF INDIA
PORT ROAD, MANGALORE BRANCH
IFSC CODE-SBIN 0 0 0 0 8 7 1
MOBILE-944 8835 621
iruveprakashana@gmail.com

ಈ ಅಕೌಂಟಿಗೆ ಪುಸ್ತಕ ಹಣವನ್ನು ಜಮಾಗೊಳಿಸಿ, ತಮ್ಮ ವಿಳಾಸವನ್ನು ಈ ಮೇಲ್ ಮೂಲಕ ಅಥವಾ ಮೊಬೈಲ್ ಮೆಸೇಜ್ ಮೂಲಕ ನೀಡಿದರೆ, ಕೊರಿಯರ್‌ನಲ್ಲಿ ಪುಸ್ತಕವನ್ನು ತಲುಪಿಸಲಾಗುತ್ತದೆ. ಅಂಚೆ ವೆಚ್ಚ ಉಚಿತ.

‘ಇರುವೆ ಪ್ರಕಾಶನ’ ನನ್ನ ಹೊಸ ಕನಸು!
ಕವನ ಸಂಕಲನಗಳು ನನ್ನ ವಿಶೇಷ ಮಕ್ಕಳು!!
ಇವೆರಡೂ ನಿಮ್ಮಿಂದ ವಿಶೇಷ ಪ್ರೀತಿಯನ್ನು ಬೇಡುತ್ತಿವೆ.

Wednesday, July 13, 2016

ಝಾಕಿರ್ ನಾಯ್ಕ್ ನಿಷೇಧ ಯಾಕೆ ಬೇಡ?

ಝಾಕಿರ್ ನಾಯ್ಕ್  ಪ್ರಕಾರ ನಾನು ನರಕಕ್ಕೆ ಅರ್ಹ ವ್ಯಕ್ತಿ. ಇರಲಿ. ಝಾಕಿರ್ ನಾಯ್ಕ್ರಂಥವರು ಇರುವ ಸ್ವರ್ಗ ನನಗೆ ಬೇಕಾಗಿಲ್ಲ. ಆದರೂ ನಾನು ಝಾಕಿರ್ ನಾಯ್ಕ್ರನ್ನು ನಿಷೇಧಿಸಬೇಕು ಎಂದು ಒತ್ತಾಯಿಸೋದಿಲ್ಲ. ಯಾಕೆಂದರೆ, ನಾನು ನರಕಕ್ಕೆ ಅರ್ಹ ವ್ಯಕ್ತಿ ಎಂದು ಹೇಳುತ್ತಿರುವವರು ಕೇವಲ ಝಾಕಿರ್ ನಾಯ್ಕ್ ಮಾತ್ರವೇ ಅಲ್ಲ. ಎಲ್ಲ ಧರ್ಮಗಳೂ ಹೇಳುವುದು "ನಾನೇ ನಿಜ. ಉಳಿದವರು ಸುಳ್ಳು. ನಾನೇ ಶ್ರೇಷ್ಟ. ಆದುದರಿಂದ ನಮ್ಮನ್ನು ಸೇರಿಸಿಕೊಳ್ಳಿ" ಎಂದೇ ಆಗಿದೆ. "ಬೌದ್ಧ ಧರ್ಮವೇ ಜನರಿಗೆ ಇರುವ ಪರಿಹಾರ" ಎಂದು ನನ್ನ ಗೆಳೆಯರು ಹೇಳುವಾಗ ನನಗೆ ಅದರಲ್ಲಿರುವ ಧನಾತ್ಮಕ ಅಂಶ ನೆನಪಾಗುತ್ತದೆಯೇ ಹೊರತು, ಶ್ರೀಲಂಕಾ, ರೊಹಿಂಗ್ಯಾದಲ್ಲಿ ಹಿಂಸಾಚಾರ ನಡೆಸುತ್ತಿರುವ ಬೌದ್ಧ ಬಿಕ್ಕುಗಳು ನೆನಪಾಗುವುದಿಲ್ಲ. ಅದೆಷ್ಟೋ ಕ್ರಿಶ್ಚಿಯನ್ ಧಾರ್ಮಿಕ ಚಾನೆಲ್‌ಗಳು ಪ್ರತಿ ದಿನ ತನ್ನ ತನ್ನ ದೇವರ ಶ್ರೇಷ್ಠತೆಗಳನ್ನು, ಪವಾಡಗಳನ್ನು ಘೋಷಿಸುತ್ತಿರುತ್ತವೆ. ಅವೆಲ್ಲ ಪಕ್ಕಕ್ಕಿರಲಿ. ನಾವು ಬಾಲ್ಯದಲ್ಲೇ ಓದಿ ಹಾಡಿದ, ಪುರಂಧರ ದಾಸರೇ ಹೇಳುತ್ತಾರೆ ‘‘ಹರಿಯನ್ನು ಜಪಿಸದೇ ಮೋಕ್ಷ ಇಲ್ಲ’’ ಎಂದು. ಆದರೂ ನಾನು ಪುರಂಧರ ದಾಸರ ಹಾಡುಗಳನ್ನು ಇಷ್ಟ ಪಡುತ್ತೇನೆ. ಮಧ್ವಚಾರ್ಯರಂತೂ ಶೂದ್ರರನ್ನು ‘ನಿತ್ಯ ನಾರಕಿಗಳು’ ಎಂದು ಕರೆಯುತ್ತಾರೆ. ಇದರ ಅರ್ಥ, ಶೂದ್ರರಿಗೆ ಸ್ವರ್ಗಕ್ಕೆ ಹೋಗಲು ಯಾವ ದಾರಿಯೂ ಇಲ್ಲ. ಇನ್ನು ನನ್ನಂತಹ ಮ್ಲೇಚ್ಛನ ಬಗ್ಗೆ ಮಧ್ವರ ಅಭಿಪ್ರಾಯ ಹೇಗಿರಬಹುದು ಎಂದು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಝಾಕಿರ್ ನಾಯ್ಕ್ನ ಪ್ರಕಾರ, ಅವರ ಚಿಂತನೆಗಳನ್ನು ನಾವು ಅಳವಡಿಸಿಕೊಂಡರೆ ನಮಗೆ ಸ್ವರ್ಗ ಸಿಗುತ್ತದೆ. ಮಧ್ವರಲ್ಲಿ ಆ ಅವಕಾಶವೂ ನಮಗಿಲ್ಲ. ಈ ಜಗತ್ತಿನಲ್ಲಿ ಎಲ್ಲ ಧರ್ಮಗಳು ನಮ್ಮದು ಶ್ರೇಷ್ಟ, ನಮ್ಮನ್ನು ಸೇರಿಕೊಳ್ಳಿ ಎಂದರೆ ಬ್ರಾಹ್ಮಣ ಧರ್ಮ ಮಾತ್ರ, ನಾವೇ ಶ್ರೇಷ್ಠ, ನಮ್ಮಿಂದ ದೂರ ಇರಿ ಎಂದು ಹೇಳುತ್ತದೆ. ಇಂತಹ ಬ್ರಾಹ್ಮಣ ಧರ್ಮವನ್ನೇ ನಾವು ಒಪ್ಪಿಕೊಳ್ಳುತ್ತಿರುವಾಗ, ಅದನ್ನು ಪ್ರಸಾರಿಸಲು ನೂರಾರು ಟಿವಿ ಚಾನೆಲ್‌ಗಳು ಇರುವಾಗ, ಝಾಕಿರ್ ನಾಯ್ಕ್ ಅವರನ್ನು, ಅವರ ಚಾನೆಲ್‌ಗಳನ್ನು ನಿಷೇಧಿಸಬೇಕು ಎನ್ನುವುದು ಸಂವಿಧಾನ ವಿರೋಧಿಯಾಗುತ್ತದೆ. ಈ ದೇಶದಲ್ಲಿ ರಾಮ್‌ದೇವ್, ರವಿಶಂಕರ್ ಸಹಿತ ನೂರಾರು ಸತ್ಸಂಗಿಗಳಿಗೆ ತಮ್ಮ ತಮ್ಮ ಟಿವಿ ಚಾನೆಲ್‌ಗಳಲ್ಲಿ ತಮ್ಮ ತಮ್ಮ ಧರ್ಮದ ಶ್ರೇಷ್ಟತೆಯನ್ನು ಬೋಧಿಸುವುದಕ್ಕೆ ಅವಕಾಶವಿದೆ ಎಂದಾದರೆ, ಝಾಕಿರ್ ನಾಯ್ಕ್ಗೂ ಇದೆ. ಝಾಕಿರ್ ನಾಯ್ಕ್ ತನ್ನನ್ನು ದೇವರು ಎಂದು ಘೋಷಿಸಿಲ್ಲ. ಅದೆಷ್ಟೋ ದೇವಮಾನವರು, ಅಂದರೆ ತಮ್ಮನ್ನು ತಾವು ದೇವರ ಅವತಾರ ಎಂದು ಘೋಷಿಸಿಕೊಂಡು ಲೂಟಿ ಮಾಡುವವರಿಗೆ, ಜನರನ್ನು ಮೋಸ ಗೊಳಿಸುವವರಿಗೆ ಇಲ್ಲಿ ಅವಕಾಶವಿದೆ ಎಂದ ಮೇಲೆ ಝಾಕಿರ್ ನಾಯ್ಕ್ಗೂ ಅವಕಾಶ ಇರಬೇಕು ಎಂದು ನಾನು ಹೇಳುತ್ತೇನೆ.

ಎಲ್ಲ ಧಾರ್ಮಿಕ ಚಾನೆಲ್‌ಗಳಂತೆಯೇ ಝಾಕಿರ್ ನಾಯ್ಕ್ ಕೂಡ ತನ್ನದೇ ಆಗಿರುವ ‘ಪೀಸ್ ಟಿವಿ’ಯನ್ನು ಹೊಂದಿದ್ದಾರೆ. ವಿಶೇಷವೆಂದರೆ, ಇವರು ಸೂಟುಬೂಟು ಧರಿಸುತ್ತಾರೆ. ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಭಗವದ್ಗೀತೆಯನ್ನು, ಬೈಬಲ್‌ಗಳನ್ನು ಕಂಠಪಾಠ ಮಾಡಿಕೊಂಡಿರುವ ಇವರು, ತನ್ನ ವಾದಕ್ಕೆ ಪೂರಕವಾಗಿ ಅವುಗಳನ್ನು ನಿರರ್ಗಳವಾಗಿ, ಅಧ್ಯಾಯ, ಅಂಕಿ ಸಂಕಿಗಳ ಜೊತೆಗೆ ಮಂಡಿಸುತ್ತಾರೆ. ಈ ಹಿಂದೆ ರವಿಶಂಕರ್ ಸಹಿತ ಹತ್ತು ಹಲವು ಹಿಂದೂ ಧಾರ್ಮಿಕ ನಾಯಕರ ಜೊತೆಗೆ ವೇದಿಕೆ ಹಂಚಿಕೊಂಡು ಚರ್ಚೆ, ವಿಚಾರವಿನಿಮಯ ಮಾಡಿಕೊಂಡ ಖ್ಯಾತಿಯೂ ಇವರಿಗಿದೆ. ಧಾರ್ಮಿಕ ಚಾನೆಲ್‌ಗಳಿರುವುದೇ ತನ್ನ ಧರ್ಮ ಶ್ರೇಷ್ಟ ಎಂದು ನಂಬಿ,  ಅದರ ಕುರಿತಂತೆ ಪ್ರಚಾರ ಮಾಡುವುದಕ್ಕೆ. ಹೀಗಿರುವಾಗ, ಝಾಕಿರ್ ನಾಯ್ಕ್ ತನ್ನ ಧರ್ಮಕ್ಕೆ ಮೀಸಲಾಗಿರುವ ತನ್ನ ಟಿವಿಯಲ್ಲಿ  ಅದನ್ನೇ ಮಂಡಿಸುತ್ತಾ ಇದ್ದರೆ ಅದನ್ನು ಅತಿರೇಕ ಎಂದು ಹೇಳುವುದು ಹೇಗೆ?

ಹೀಗಿರುವಾಗ ನಮಗೆ ಎರಡು ಮಾರ್ಗಗಳು ಇವೆ. ಒಂದು, ಎಲ್ಲ ಧಾರ್ಮಿಕ ಚಾನೆಲ್‌ಗಳನ್ನು ನಿಷೇಧಿಸಲು ಒತ್ತಾಯಿಸೋದು. ಅಥವಾ ಝಾಕಿರ್ ಮಂಡಿಸುವ ಇಸ್ಲಾಂ ಹೇಗೆ ಸುಳ್ಳು ಎನ್ನುವುದನ್ನು ಸಾಬೀತು ಮಾಡುವುದು. ಅದರ ಬದಲಿಗೆ ನಾವು ಝಾಕಿರ್‌ನನ್ನೇ ನಿಷೇಧಿಸಿದರೆ, ಅದು ನಮ್ಮ ಸೋಲು ಮತ್ತು ಝಾಕಿರ್‌ನ ಗೆಲುವಾಗುತ್ತದೆ. ಝಾಕಿರ್ ನಾಯ್ಕ್ನ ಮಾತುಗಳಿಗೆ ಉತ್ತರಕೊಡಲು ಸಾಧ್ಯವಿಲ್ಲದೆ ಮಾಡಿದ ಹತಾಶೆಯ ಪ್ರಯತ್ನ ಎಂದೂ ಅವರ ಅಭಿಮಾನಿಗಳು ಹೇಳಬಹುದು. ಇದು ಝಾಕಿರ್‌ಗೆ ಇನ್ನಷ್ಟು ಅಭಿಮಾನಗಳನ್ನು ಸೃಷ್ಟಿಸುತ್ತದೆ. ಕಳೆದ ಒಂದು ವಾರಗಳಿಂದ ಝಾಕಿರ್ ಕುರಿತಂತೆ ನಡೆಯುತ್ತಿರುವ ಚರ್ಚೆಯ ಪರಿಣಾಮ ಏನೂ ಎಂದರೆ, ಅವನ ಬಗ್ಗೆ ಗೊತ್ತೇ ಇಲ್ಲದ ಯುವಕರೂ ‘ಪೀಸ್’ ಟಿವಿಯನ್ನು ನೋಡುತ್ತಿದ್ದಾರೆ. ಅಂದರೆ ಪೀಸ್ ಟಿವಿಯ ವೀಕ್ಷಕರು ಅಧಿಕಗೊಂಡಿದ್ದಾರೆ. 

ಝಾಕಿರ್ ನಾಯ್ಕ್ ಮೇಲಿರುವ ಬಹುದೊಡ್ಡ ಆರೋಪ ಅಂದರೆ, ಆತ ಸಾಮೂಹಿಕವಾಗಿ ಮತಾಂತರ ಮಾಡುತ್ತಾನೆ. ಅವರಲ್ಲಿ ಯುವಕರೇ ಅಧಿಕ. ಮತಾಂತರವನ್ನು ಆತ ಕೋವಿ ಹಿಡಿದೋ, ಬಲವಂತವಾಗಿಯೋ ಮಾಡುತ್ತಿಲ್ಲ. ಅಥವಾ ಹಣದ ಆಮಿಷಗಳಿಂದಲೂ ಈತ ಮತಾಂತರ ಮಾಡುತ್ತಿಲ್ಲ. ತನ್ನ ಮಾತುಗಳಿಂದ ಅವರನ್ನು ಒಲಿಸಿ ಅಥವಾ ಮರುಳು ಮಾಡಿಯೇ ಮಾಡುತ್ತಾನೆ. ಮತಾಂತರ ಆಗುತ್ತಿರುವವರೆಲ್ಲ ವಿದ್ಯಾವಂತ ಯುವಕರೇ ಆಗಿದ್ದಾರೆ. ಒಬ್ಬನ ಮಾತು ಸರಿ ಅನ್ನಿಸಿದ ಬಳಿಕವೇ ಇನ್ನೊಬ್ಬ ಮತಾಂತರ ಆಗುತ್ತಾನೆ. ಹೀಗಿರುವಾಗ ಅದನ್ನು ನಾವು ತಪ್ಪು ಎನ್ನುವುದು ಹೇಗೆ? ಕೃಷ್ಣ ಮಠದಲ್ಲಿ ಶೂದ್ರರನ್ನು ತಮ್ಮ ಪಂಕ್ತಿಯಲ್ಲಿ ಸ್ವೀಕರಿಸದೇ ಇರುವುದನ್ನು ವ್ಯವಸ್ಥೆ ಧಾರ್ಮಿಕ ಅಭಿವ್ಯಕ್ತಿಯಾಗಿ ಸ್ವೀಕರಿಸಿಕೊಂಡಿರುವಾಗ, ಝಾಕಿರ್‌ನಾಯ್ಕ್ ತನ್ನ ಧರ್ಮಕ್ಕೆ ಬಂದವರನ್ನು ಸ್ವೀಕರಿಸುತ್ತಾನೆ ಎನ್ನುವುದು ಆಕ್ಷೇಪಾರ್ಹವಾಗುವುದು ಹೇಗೆ? ಝಾಕಿರ್ ನಾಯ್ಕ್ರನ್ನು ತೊಗಾಡಿಯಾ, ಪ್ರಮೋದ್ ಮುತಾಲಿಕ್ ಜೊತೆಗೆ ಸಮೀಕರಿಸುವುದನ್ನು ನಾನು ಒಪ್ಪುವುದಿಲ್ಲ. ಝಾಕಿರ್ ನಾಯ್ಕ್ನನ್ನು ನಾನು ಮಧ್ವ ಸಿದ್ಧಾಂತಗಳಿಗೆ ಮುಡಿಪಾಗಿರುವ ಪೇಜಾವರ ಶ್ರೀ, ಅಥವಾ ಇತರ ನೂರಾರು ಸತ್ಸಂಗಿಗಳ ಜೊತೆಗೆ ಸಮೀಕರಿಸಬಹುದು.

ಝಾಕಿರ್‌ನಾಯ್ಕ್ ಭಯೋತ್ಪಾದನೆಯನ್ನು ಸಮರ್ಥಿಸುತ್ತಾರೆ ಎನ್ನುವುದು ಬರೇ ಮಾಧ್ಯಮಗಳ ಆರೋಪ. ಆ ಕುರಿತಂತೆ ಯಾವುದೇ ದಾಖಲೆಗಳಿದ್ದಿದ್ದರೆ ಇಷ್ಟರಲ್ಲೇ ಅವರ ಮೇಲೆ ಪ್ರಕರಣ ದಾಖಲಾಗುತ್ತಿತ್ತು. ಇಸ್ಲಾಮಿಗೂ ಭಯೋತ್ಪಾದನೆಗೂ ಸಂಬಂಧವಿಲ್ಲ ಎನ್ನುವುದನ್ನು ಆತ ತನ್ನ ಭಾಷಣಗಳಲ್ಲಿ ಪದೇ ಪದೇ ಘೋಷಿಸುತ್ತಿರುತ್ತಾರೆ. ಇನ್ನೊಂದು ಧರ್ಮವನ್ನು ಝಾಕಿರ್ ತಮ್ಮ ಭಾಷಣದಲ್ಲಿ ವಿಮರ್ಶಿಸಿದ್ದನ್ನು, ಟೀಕಿಸಿದ್ದನ್ನು ಹಾಗೂ ಆ ಮೂಲಕ ತನ್ನ ಧರ್ಮವನ್ನು ಸಮರ್ಥಿಸಿಕೊಂಡಿದ್ದನ್ನು ನಾನು ಕೇಳಿದ್ದೇನೆ. ಆದರೆ ಇನ್ನೊಂದು ಧರ್ಮವನ್ನು ಯಾವತ್ತೂ ನಿಂದಿಸಿಲ್ಲ. ಬಹಿರಂಗವಾಗಿ ಇನ್ನೊಂದು ಧರ್ಮದ ಬಗ್ಗೆ ಪ್ರಚೋದನಕಾರಿ ಮಾತನಾಡಿಲ್ಲ. ಆದರೆ ತೊಗಾಡಿಯಾದಿಗಳು ಇದನ್ನು ಮಾಡುತ್ತಿದ್ದಾರಾದರೂ ಈವರೆಗೆ ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ. ಹೀಗಿರುವಾಗ ಝಾಕಿರ್ ನಾಯ್ಕ್ನ್ನು ನಿಷೇಧಿಸಲು ಹೊರಡುವ ಸರಕಾರದ ಪ್ರಯತ್ನ, ಆತನಿಗೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸಲು ಸಾಧ್ಯವಾಗದ ಕೆಲವು ಧಾರ್ಮಿಕ ಹಿತಾಸಕ್ತಿಗಳ ಹತಾಶೆಯ ಪ್ರಯತ್ನ ಎಂದೇ ನಾನು ಭಾವಿಸುತ್ತೇನೆ. 

ಧಾರ್ಮಿಕ ಚಾನೆಲ್‌ಗಳು ಇರಬಹುದು. ಅಥವಾ ಅದನ್ನು ಸಾಮೂಹಿಕವಾಗಿ ನಿಷೇಧಿಸಬಹುದು. ಧಾರ್ಮಿಕ ಚಾನೆಲ್‌ಗಳು ಪ್ರತ್ಯೇಕವಾಗಿರುವುದರಿಂದ ಅದರಲ್ಲಿ ಆಸಕ್ತಿಯಿದ್ದವರಷ್ಟೇ ಅದನ್ನು ನೋಡುತ್ತಾರೆ. ನಾನಂತೂ ಒಂದೆರಡು ಬಾರಿಯಷ್ಟೇ ಆ ಚಾನೆಲ್‌ನ್ನು ನೋಡಿದ್ದೇನೆ. ದೇವರನ್ನು ತಲುಪುವ ದಾರಿಯನ್ನು ಝಾಕಿರ್ ನಾಯ್ಕ್ ಮೂಲಕ ಕಲಿಯುವ ಅಗತ್ಯವಿಲ್ಲ ಎನ್ನುವುದು ನನಗೆ ಯಾವತ್ತೋ ಮನವರಿಕೆಯಾಗಿದೆ. ಆದರೆ ಇದೀಗ ನಡೆಯುತ್ತಿರುವ ಬೆಳವಣಿಗೆ ಝಾಕಿರ್‌ನಾಯ್ಕ್ಗೆ ಸಿಕ್ಕಿರುವ ಪುಕ್ಕಟೆ ಜಾಹೀರಾತುಗಳೇ ಹೊರತು ಇನ್ನೇನು ಅಲ್ಲ. ನನ್ನ ಸಮಸ್ಯೆ ಇಂತಹ ಧಾರ್ಮಿಕ ಚಾನೆಲ್‌ಗಳಲ್ಲ. ನಾವು ದಿನ ನಿತ್ಯ ನ್ಯೂಸ್ ಚಾನೆಲ್‌ಗಳು ಎಂದು ನಂಬಿಕೊಂಡು ಬಂದಿರುವ ಕನ್ನಡವೂ ಸೇರಿದಂತೆ ದೇಶದ ಚಾನೆಲ್‌ಗಳು ಧಾರ್ಮಿಕ ವಿಷಯಗಳನ್ನು, ಮೌಢ್ಯದ ವಿಷಯಗಳನ್ನು ಹರಡುತ್ತಿರುವುದು. ಎಲ್ಲ ವರ್ಗದ ಜನರೂ ನೋಡುವ ಚಾನೆಲ್‌ಗಳು ಬ್ರಾಹ್ಮಣ್ಯದ ಮೌಢ್ಯಗಳನ್ನು, ವಾಸ್ತುಗಳನ್ನು, ಜ್ಯೋತಿಷ್ಯಗಳನ್ನು ತೋರಿಸಿ ಜನರನ್ನು ಮೋಸ ಗೊಳಿಸುತ್ತಿರುವುದು. ಮೊದಲು ನ್ಯೂಸ್‌ಚಾನೆಲ್‌ಗಳಲ್ಲಿರುವ ಈ ಭಯೋತ್ಪಾದಕರಿಗೆ ತಡೆ ಬೀಳಬೇಕಾಗಿದೆ. ಹಾಗೆಯೇ ಝಾಕಿರ್ ನಾಯ್ಕ್ ತನ್ನ ಬೋಧನೆಯಲ್ಲಿ ಭಯೋತ್ಪಾದನೆಗೆ, ಉಗ್ರಗಾಮಿಗಳಿಗೆ ಬೆಂಬಲ ನೀಡಿದ್ದು ಹೌದು ಎಂದಾದರೆ ಆತನ ಮೇಲೆ ಮೊಕದ್ದಮೆ ಹೂಡಬಹುದು. ಬಂಧಿಸಬಹುದು. ಆದರೆ ಅಂತಹ ಯಾವ ಸಾಕ್ಷಿಯೂ ಇಲ್ಲದೆ, ಬರೇ ಮಾಧ್ಯಮಗಳ ವದಂತಿಗಳನ್ನು ಮುಂದಿಟ್ಟು ಝಾಕಿರ್ ನಾಯ್ಕ್ನ್ನು ನಿಷೇಧಿಸಿದರೆ ಅದರಿಂದ ಇನ್ನಷ್ಟು ಅಪಾಯವಿದೆ. ಝಾಕಿರ್ ತನ್ನ ಅಭಿಮಾನಿಗಳನ್ನು ಆ ಮೂಲಕ ಹೆಚ್ಚಿಸಿಕೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ ಅದು ನಡೆಯುತ್ತಿದೆ ಕೂಡ.

Friday, May 27, 2016

ಯು ಟರ್ನ್: ತಿರುಗಿ ಹೊಡೆವ ಕರ್ಮ ಫಲ!

‘ಯೂ ಟರ್ನ್’ ಚಿತ್ರ ನೋಡಿದೆ.
ಇದರ ಕುರಿತಂತೆ ಕೆಲವು ಮಾತುಗಳನ್ನು ಹಂಚಿಕೊಳ್ಳಲೇಬೇಕಾಗಿದೆ.
ಮೂರು ನಿಮಿಷದ ಒಂದು ಕಿರು ಚಿತ್ರವಾಗಬಹುದಾದ ವಸ್ತುವನ್ನು ಎರಡೂವರೆ ಗಂಟೆಯ ಥ್ರಿಲ್ಲರ್ ಚಿತ್ರವನ್ನಾಗಿಸಿದ ನಿರ್ದೇಶಕರ ಸಾಹಸಕ್ಕೆ ಭಲೇ ಎನ್ನಲೇ ಬೇಕು. ಹೌದು, ಚಿತ್ರದ ಉದ್ದೇಶವನ್ನು ಹೇಳಲು, ನಿಜವಾದ ಕತೆಯನ್ನು ಹೇಳಲು ಮೂರು ನಿಮಿಷ ಧಾರಾಳ ಸಾಕು. ಮೂರು ಪಾತ್ರಗಳನ್ನಷ್ಟೇ ಇಟ್ಟುಕೊಂಡು ಈ ಕಿರು ಚಿತ್ರವನ್ನು ಮುಗಿಸಿ ಬಿಡಬಹುದು. ಹಾಗೆಂದು ಚಿತ್ರವನ್ನು ನಿರ್ದೇಶಕ ಎಲ್ಲೂ ವಿನಾಕಾರಣ ಎಳೆದಿಲ್ಲ. ಚಿತ್ರದ ನಿರೂಪಣೆಯಲ್ಲಿ ಯಾವುದೂ ಅನಗತ್ಯ ಅನ್ನಿಸುವುದಿಲ್ಲ.
ಚಿತ್ರ ಆರಂಭದಿಂದ ಕೊನೆಯವರೆಗೂ ನಮ್ಮನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ.


ನಾವು ದಿನ ನಿತ್ಯ, ತೀರಾ ಸಣ್ಣ ತಪ್ಪು ಎಂದು ಭಾವಿಸಿ ಮಾಡುವ ಕೃತ್ಯವನ್ನು ಇಟ್ಟುಕೊಂಡು ನಿರ್ದೇಶಕ ಸಿನಿಮಾ ಮಾಡಿದ್ದು ಅಭಿನಂದನೀಯ. ಒಂದು ಥ್ರಿಲ್ಲರ್ ಚಿತ್ರದ ಮೂಲಕವೂ ಅದ್ಭುತವಾದ ಮಾನವೀಯ ಸಂದೇಶವನ್ನು ನೀಡಬಹುದು ಎಂದು ಯೋಚಿಸಿದ ಪವನ್ ಕುಮಾರ್ ಅವರಿಗೆ ಅಭಿನಂದನೆಗಳು. ಚಿತ್ರ ಆಮಿರ್ ಖಾನ್‌ನ ‘ತಲಾಶ್’ನ್ನು ಎಲ್ಲೋ ಹೋಲುತ್ತದೆ. ಆದರೆ ತಲಾಶ್ ಚಿತ್ರ ಥ್ರಿಲ್ಲರ್ ಚಿತ್ರದ ಬಿಗಿಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿತ್ತು. ‘ಯೂ ಟರ್ನ್’ ಚಿತ್ರ ಆಮಿರ್ ಖಾನ್‌ನ ತಲಾಶ್‌ಗಿಂತ ಹಲವು ಪಟ್ಟು ಚೆನ್ನಾಗಿದೆ. ಕ್ಲೆೃಮಾಕ್ಸ್‌ನ ರಹಸ್ಯವನ್ನು ಉಳಿಸಿಕೊಳ್ಳುವಲ್ಲಿಯೂ ನಿರ್ದೇಶಕ ಯಶಸ್ವಿಯಾಗಿದ್ದಾರೆ. ಕ್ಲೆೃಮಾಕ್ಸ್ ಬಹಿರಂಗವಾಗುವಾಗ ಅದು ಇನ್ನಷ್ಟು ತೀವ್ರವಾಗಿರಬೇಕಾಗಿತ್ತು. ಇಡೀ ಚಿತ್ರದಲ್ಲಿ ಗಮನಾರ್ಹವಾದುದು, ಸಬ್‌ಇನ್ಸ್‌ಪೆಕ್ಟರ್ ನಾಯಕ್ ಪಾತ್ರದಲ್ಲಿ ರೋಜರ್ ನಾರಾಯಣ್ ಅಭಿನಯ. ಒಬ್ಬ ಸಹೃದಯಿ ಯುವ ಪೊಲೀಸ್ ವ್ಯಕ್ತಿತ್ವವನ್ನು ಅವರು ಪರಿಣಾಮಕಾರಿಯಾಗಿ ತಮ್ಮ ನಟನೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಪತ್ರಕರ್ತೆ ರಚನಾ ಪಾತ್ರದಲ್ಲಿ ಶೃದ್ಧಾ ಶ್ರೀನಾಥ್ ಅಭಿನಯವೂ ಪರವಾಗಿಲ್ಲ. ರಾಧಿಕಾ ಚೇತನ್ ಅವರ ಮಾಯಾ ಪಾತ್ರ ಅಷ್ಟೇನೂ ತೀವ್ರವಾಗಿ ತಟ್ಟುವುದಿಲ್ಲ.


 ಪವನ್ ಕುಮಾರ್ ಅವರದು ಇದು ಮೂರನೇ ಚಿತ್ರ. ಲೈಫ್ ಇಷ್ಟೇನೆ...ಒಬ್ಬ ಯುವಕನ ಒಳಗಿನ ಪ್ರಾಯದ ತಳಮಳನ್ನು ವಿಭಿನ್ನವಾಗಿ ನಿರೂಪಿಸಿದ ಚಿತ್ರ. ಲೂಸಿಯಾ ಕುರಿತಂತೆ ಹೇಳಲೇ ಬೇಕಾಗಿಲ್ಲ. ರಾಜ್ಯದಾಚೆಗೂ ಚರ್ಚೆಗೊಳಗಾದ ಚಿತ್ರ. ಇದೀಗ ‘ಯೂ ಟರ್ನ್’ನಲ್ಲೂ ಅವರು ಯಶಸ್ವಿಯಾಗಿದ್ದಾರೆ. ಒಂದು ಚಿತ್ರದ ಗೆಲುವಿನ ಹ್ಯಾಂಗೋವರ್‌ನಲ್ಲಿ ಸಿಲುಕಿಕೊಳ್ಳದೇ ವಿಭಿನ್ನವಾಗಿ ಚಿತ್ರ ಮಾಡುತ್ತಾ ಹೋಗುವುದು ನಿರ್ದೇಶಕನ ಪಾಲಿಗೆ ಒಂದು ಸವಾಲೇ ಸರಿ. ಈ ಸವಾಲನ್ನು ಪವನ್ ಕುಮಾರ್ ಗೆದ್ದಿರುವುದು ನೆಮ್ಮದಿಯ ವಿಷಯ. ಇವರಿಂದ ಕನ್ನಡ ಚಿತ್ರರಂಗ ಇನ್ನಷ್ಟು ನಿರೀಕ್ಷಿಸುತ್ತಿದೆ.